Friday, July 18, 2008

ನಿನ್ನ ಚಾರ್ಲೀ ಸೆಂಟೂ ಅವನ ಪಿಜ್ಜಾ ಬರ್ಗರ್ರೂ


ನಿನ್ನ ಪತ್ರ ಓದಿದೆ. ಹುಡುಗ ಇಷ್ಟ ಆಯ್ತು ಬಹಳ ಗಂಭೀರವಾಗಿ, ಚೊಕ್ಕವಾಗಿ ನಿಂಗೇನನ್ನಿಸುತ್ತೋ ಅದನ್ನು ಹೇಳಿದ್ದೀಯ. ಈಗಿನ ಕನ್ನಡ ಸಾಹಿತ್ಯದ ಬಗ್ಗೆ ನೀನು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದೀಯ ಅಂತ ಗೊತ್ತಾದಾಗ ಸುಮ್ಮನೆ ಖುಷಿಯಾಯಿತು. It was witty and sarcastic.

ಮೊದಲು ನಾನು ನಿಂಗೆ ಕೊಟ್ಟ ಪುಸ್ತಕದ ಬಗ್ಗೆ ಮಾತಾಡೋಣ. ನಾನು ನಿಂಗೆ ಆ ಪುಸ್ತಕ ಕೊಡುವಾಗ ಹೇಳಿದ್ದು ‘ಚೆನ್ನಾಗಿದೆ ಓದು’ ಅಂತಲ್ಲ. ನಂಗೆ ಇಷ್ಟ ಆಯ್ತು ಓದು ಅಂತ. ಈಗ ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಅನ್ನೋದಿದೆಯಲ್ಲ it's a generalised comment. ಇಂಥ ಕಾಮೆಂಟುಗಳು ನನಗೆ ಅರ್ಥ ಆಗಲ್ಲ. ನನಗೆ ಗೊತ್ತಾಗೋದು “ನಂಗೆ ಇಷ್ಟ ಆಯ್ತು" ಅಥವ ‘ಇಷ್ಟ ಆಗ್ಲಿಲ್ಲ’ ಅನ್ನೋದು. ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಒಳ್ಳೆಯವನು ಅಥವ ಕೆಟ್ಟವನು ಅನ್ನೋದು ಎಷ್ಟೊಂದು ಸಾಪೇಕ್ಷವಾದದ್ದು ಅಲ್ಲವೆ? ಕೆಲವರಿಗೆ ಇಷ್ಟವಾದದ್ದು ಇನ್ನು ಕೆಲವರಿಗೆ ಇಷ್ಟವಾಗದೆ ಇರಬಹುದು. ಕೆಲವರಿಗೆ ಒಳ್ಳೆಯವನು ಅನಿಸಿದ್ದವನು ಇನ್ನೊಬ್ಬರಿಗೆ ಕೆಟ್ಟವನಾಗಿರಬಹುದು.

ವಿಷಯಕ್ಕೆ ಬರೋಣ. ನಾ ಕೊಟ್ಟ ಪುಸ್ತಕವಿದೆಯಲ್ಲ ಅದು ನಾನು ಹುಟ್ಟಿ ಬೆಳೆದ ಪರಿಸರಕ್ಕಿಂತ ಬಹಳ ಭಿನ್ನವಾದ ಬೇರೆಯದೇ ಆದ ಪರಿಸರದಲ್ಲಿ ನಡೆಯುತ್ತೆ. ಎಲ್ಲೆಲ್ಲೂ ನಡೆಯುವುದು ಅಂಥದೇ ಕಥೆಗಳು. ಅದನ್ನು ಹೇಳುವ ರೀತಿ, ಅದು ನಡೆಯುವ ಪರಿಸರ, ಅದು ನಡೆದ ಕಾಲಘಟ್ಟ ಪ್ರತಿಯೊಂದು ಕಾಲಘಟ್ಟದಲ್ಲೂ ಅಂಥ ಘಟನೆಗಳಿಗೆ ಅನುಭವಗಳಿಗೆ ಜನ ಹೇಗೆ ಸ್ಪಂದಿಸುತ್ತಿದ್ದರು ಎಂಬುದು ಮುಖ್ಯ ಆಗತ್ತೆ. ಅವರು ಬರೆದಿದ್ದು ಮೂವತ್ತು ವರ್ಷದ ಹಿಂದೆ ನಡೆದಿರಬಹುದಾದ ಕಥೆಯನ್ನು. ಅಲ್ಲಿ ಪರಿಸ್ಥಿತಿಗಳು ಆಗ ಹೇಗಿದ್ದವು ಎಂಬುದನ್ನು. ಅವರು ಎಷ್ಟು ಸಹಜವಾಗಿ ಬಿಂಬಿಸುತ್ತಾರೆಂದರೆ ಸುಮ್ಮನೆ ಇಷ್ಟ ಆಗುತ್ತಾ ಹೋಯಿತು. ಹೊಸದೇನಿದೆ ಅಂದೆಯಲ್ಲ ಹುಡುಗ, ಹೊಸತು ಪದವನ್ನು ಹೇಗೆ ಡಿಫೈನ್ ಮಾಡ್ತಿಯ ನೀನು? ನನಗೆ ಆ ಲೇಖಕರು ತೋರಿಸಿದ ಜಗತ್ತಿದೆಯಲ್ಲ ತುಂಬ ಹೊಸತದು.
ಆ ಕಾದಂಬರಿಯ ಮೂಲಕ ಅದೇ ಜಾಗದ ಬಗ್ಗೆ ಜ್ಞಾನಪೀಠಿಯೊಬ್ಬರು ಬರೆಯುತ್ತಿದ್ದಾಗ ಇದ್ದ ಪರಿಸರಕ್ಕೂ ಇವರು ಬರೆದು ಕೈಗಿತ್ತಾಗ ನಾನು ಕಂಡ ಪರಿಸರಕ್ಕೂ ಎಷ್ಟೊಂದು ವ್ಯತ್ಯಾಸವಾಗಿದೆ ಅನಿಸಿತು ಗೊತ್ತಾ? ನಾವು ಈಗ ಹೋಗಿ ನೋಡಿದರೆ ನಮಗೆ ಅಲ್ಲಿ ಇನ್ಯಾವುದೋ ಪರಿಸರ ಕಾಣಿಸೀತು. ಬದಲಾದ ಕಾಲಘಟ್ಟಗಳಲ್ಲಿ ಅಲ್ಲಿನ ಸಮಾಜ ಪರಿಸರ ಹೇಗಿದ್ದವು ಎಂಬುದು ಹೀಗೇ ದಾಖಲಾಗಬೇಕು. ಅಲ್ವಾ

ಅಂಕಣಕಾರರೊಬ್ಬರು ಅಡಿಗರು ಹೀಗಂದರು ಬೇಂದ್ರೆ ಹಾಗಂದರು ಟೆನಿಸನ್ ಹೀಗೆ ಹೇಳುತ್ತಾನೆ, ವರ್ಡ್ಸ್ ವರ್ಥ್ ಹಾಗನ್ನುತ್ತಾನೆ ಎಂದು ಹೇಳಬೇಕಾದರೆ ಅವರು ಎಷ್ಟು ಓದಿಕೊಂಡಿರಬೇಕು ಎಂಬ ಕಲ್ಪನೆ ಇರುತ್ತೆ ಅಲ್ಲವ ನಿನಗೆ. ಬಹಳಷ್ಟು ಜನಕ್ಕೆ ಅಷ್ಟು ಅಗಾಧವಾಗಿ ಓದಲು ಸಮಯವಿರುವುದಿಲ್ಲ ಅಥವ ಇರುವ ಸಾಹಿತ್ಯ ಸಾಗರದಲ್ಲಿ ಯಾವ ನದಿಯ ನೀರು ಕುಡಿಯಬೇಕೆಂದು ತಿಳಿದಿರುವುದಿಲ್ಲ. ಎಲ್ಲರೂ ಸಾಹಿತ್ಯದ ವಿದ್ಯಾರ್ಥಿಗಳಾಗಿರುವುದಿಲ್ಲ. ಓದಿದವರು, ಇಂಥವರು ಹೀಗೆ ಬರೆದಿದ್ದರು ಅದನ್ನು ಓದಿದ ನನಗೆ ಹೀಗನಿಸಿತು, ಬೇರೊಂದು ಭಾಷೆಯ ಲೇಖಕ ಇದೇ ಕಾಂಟೆಕ್ಟಿನಲ್ಲಿ ಇನ್ನೆಂಥದೋ ಬರೆದಿದ್ದಾನೆ ಎಂದು ಹೇಳಿ ಆ ಹಿರಿಯ ಜೀವಿಗಳು, ಲೇಖಕರು ಬರೆದಿದ್ದ ಕವನದ, ಲೇಖನದ ಅಥವ ಕಥೆಯ ಕೆಲವು ಸಾಲುಗಳನ್ನು ಕೋಟ್ ಮಾಡಿದರೆ, ನಿಜವಾಗಿ ಸಾಹಿತ್ಯದಲ್ಲಿ ಆಸಕ್ತಿ ಕಾಳಜಿ ಇರುವವರು ಅದನ್ನು ಹುಡುಕಿಯಾದರೂ ಓದೋಲ್ಲವೆ...? ಬೇಂದ್ರೆಯವರ “ಇಳಿದು ಬಾ ತಾಯೆ, ಇಳಿದು ?...." ಅಂಥ ಪ್ರಸಿದ್ಧ ಕವನವೂ ಗೊತ್ತಿಲ್ಲದ ಸಾಹಿತ್ಯಾಸಕ್ತರಿಗೆ ಇಂಥ ಅಂಕಣಕಾರರಿಂದ ಸಹಾಯವಾಗೋಲ್ಲವಾ ಹೇಳು?

ಇನ್ನು? “ಡಿಫರೆಂಟಾಗಿ ಬರೆಯುವವರು..." ಎಂಬುದರ ಬಗ್ಗೆ ನಾನು ಏನೇ ಹೇಳಿದರೂ ಅದು “ಶುದ್ಧ ಸಮರ್ಥನೆ" ಅನಿಸಿಕೊಳ್ಳುತ್ತೆ ಅಲ್ಲವೆ?

ನಿನ್ನ ಚಾರ್ಲಿ ಸೆಂಟಿನ ಉದಾಹರಣೆಗೂ ಪಿಜ್ಜಾ ಬರ್ಗರ್ ಉದಾಹರಣೆಗೂ ಏನು ವ್ಯತ್ಯಾಸ ಹುಡುಗ ? ಈಗಲೂ ಮಲ್ಲಿಗೆ ಹೂವು ಮುಡಿಯುತ್ತಾರೆ. ಬದಲಾದ ಕಾಲಕ್ಕೆ ತಕ್ಕಂತೆ ನಿನ್ನ ಚಾರ್ಲಿ ಸೆಂಟಿನಲ್ಲಿ ಜಾಸ್ಮಿನ್ ಪರಿಮಳ ಇರುತ್ತದೆ.
Five point someoneನ ಲೇಖನವನ್ನೇ ತೆಗೆದುಕೋ. ಅವನು ಬೆಳೆದ ವಾತಾವರಣವನ್ನು ಅವನ ಕಾಲೇಜ್ ದಿನಗಳನ್ನು ವರ್ಣಿಸುವ five point someone ಇಷ್ಟವಾಗುತ್ತದೆ. one night at call centre ಮನಸ್ಸಿಗೆ ತಟ್ಟುವುದೇ ಇಲ್ಲ.... ಬದಲಾದ ರಾಮಾಯಣಗಳು ಬಹಳಷ್ಟಿವೆ... ನಿನಗೆ ಯಾವುದು ತುಂಬ ಇಷ್ಟವಾಯಿತು?

ಉಹುಂ ನೀನು ಹೇಳಿದ್ದು ತಪ್ಪು ಅನ್ನುತ್ತಿಲ್ಲ ನಾನು. ನಿಜ ಕನ್ನಡದಲ್ಲಿ ಫ್ಯಾಂಟಸಿ, ರೋಮಾನ್ಸ್, ಫಿಕ್ಷನ್ ,ಪರಮಾಣು, ನಕ್ಷತ್ರ ,ಕೃಷಿ ಎಲ್ಲದರ ಬಗ್ಗೆ ಬರೆಯಬೇಕು. ಆದರೆ ಈಗ ಇರುವ, ಬರುತ್ತಿರುವ ಸಾಹಿತ್ಯವನ್ನು ಬರೀ ಕೋಸಂಬರಿ ಎಂದರೆ ಅರ್ಥಹೀನ. ನಿನಗೆ ಇಷ್ಟ ಆಗುತ್ತಿಲ್ಲ ಅಂತ ಹೇಳು ಬೇಕಾದರೆ. ನಿನಗೆ ಇಷ್ಟವಾದದ್ದನ್ನು ಆರಿಸಿಕೊಂಡು ಓದು. ಎಲ್ಲರೂ ತೇಜಸ್ವಿ, ಕಾರಂತ, ಬಿ.ಜಿ.ಎಲ್. ಸ್ವಾಮಿ ಆಗಲು ಸಾಧ್ಯವಿಲ್ಲ. ಅಂಥ ಪ್ರತಿಭಾವಂತರಿದ್ದರೆ ಏನೇ ತಿಪ್ಪರಲಾಗ ಹಾಕಿದರೂ ಅವರ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. survival of the fittest!

ಹೆಚ್ಚು ಹೇಳೋಲ್ಲ ನಾನು. ಇದಕ್ಕೆ ನೀನು ಉತ್ತರ ಬರೆಯಬಹುದು. ನಾನು ಉತ್ತರಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ವಾದ ಮಾಡಿಕೊಂಡು ಹೋದರೆ ನನಗೆ ಅಂಥ ವಾದಗಳಲ್ಲಿ ನಂಬಿಕೆ ಇಲ್ಲ. ಭೈರಪ್ಪನವರ ವಂಶವೃಕ್ಷದಲ್ಲಿ ಶ್ರೀನಿವಾಸ ಶ್ರೋತ್ರಿಗಳು ಹೇಳುವಂತೆ “ಮೂಲ ದೃಷ್ಟಿಯಲ್ಲೇ ಭಿನ್ನತೆ ಇರುವಾಗ ಚರ್ಚೆಯಿಂದ ಯಾವ ಪ್ರಯೋಜನವೂ ಇಲ್ಲ".

Thursday, July 10, 2008

ನಿನಗಿದು ಅರ್ಥವಾಗುವುದಿಲ್ಲ ಎಂದು ಗೊತ್ತಿದ್ದೂ..

'ಅವನು ಬಂದು ಇನ್ನೂ ಮೂರು ಗಳಿಗೆಗಳಾಗಿವೆ ಅಷ್ಟೇ..... ' ಎಂದು ನನ್ನ ಸಖಿಯರೊಂದಿಗೆ ನಾನು ಇಲ್ಲಿ ಉಸುರುತ್ತಿರುವಾಗಲೇ, ನೀನು ಅಲ್ಲಿ ನಿನ್ನ ಸ್ನೇಹಿತರ ಸಮ್ಮುಖದಲ್ಲಿ ನಾನು ಬಂದು ಮೂರು ವರುಷವಾಯಿತು ಎಂದು ಹೇಳುತ್ತಾ ಮೂರು ಪದವನ್ನು ಮೂರು ರಹದಾರಿ ಉದ್ದಕ್ಕೆ ಎಳೆದು ನಿಟ್ಟುಸಿರಿಟ್ಟೆ ಎಂಬ ಸುದ್ದಿ ಬಂದಿದೆ.
'ನನ್ನ ಹೆಂಡತಿಯನ್ನು ನೀಚನೊಬ್ಬ ಹೊತ್ತುಕೊಂಡು ಹೋಗಿದ್ದಾನೆ, ದಯವಿಟ್ಟು ಸಹಾಯ ಮಾಡಿ.' ಎಂದು ಕರೆದವನ ಕರೆಗೆ ತಕ್ಷಣ ಹೊರಟು ನಿಂತೆ. ಎಷ್ಟಾದರೂ ನೀ ಬಯಸಿದ ಹುಡುಗಿಯಲ್ಲವೇ ಅವಳು. ಯುದ್ಧಕ್ಕೆ ಸನ್ನದ್ಧನಾಗಿರುವ ಗಂಡನನ್ನು ತಡೆಯುವ ರಾಣಿ ರಾಣಿಯೇ? ಆದರೆ ಯುದ್ಧದ ಕಾರಣವೇ ನನ್ನ ಎದೆಯಲ್ಲಿ ಮತ್ಸರದ ಬೆಂಕಿಯನ್ನು ಹೊತ್ತಿಸಿತ್ತು. ಆದರೂ, ಚರಿತ್ರೆಯ ಅನೇಕ ನತದೃಷ್ಟ ರಾಣಿಯರಂತೆ ಎದೆಯುರಿಯನ್ನು ನಿರ್ಲಿಪ್ತ ಮುಖಭಾವದಲ್ಲೂ, ರಾಣೀತನದ ಗಾಂಭೀರ್ಯದಲ್ಲೂ ಬಚ್ಚಿಟ್ಟು ದೂರದೇಶಕ್ಕೆ ನಿನ್ನನ್ನು ಕಳುಹಿಸಿಕೊಟ್ಟೆ. ನಾನು ಹೋಗಬೇಡ ಎಂದಿದ್ದರೂ ನೀನು ಹೋಗದೇ ಉಳಿಯುತ್ತಿರಲಿಲ್ಲ ಅನ್ನುವದೂ ನನಗೆ ಗೊತ್ತಿತ್ತು.
ಸೇವಕ ಸೇವಕಿಯರು, ಸುರಿದುಕೊಳ್ಳುವಷ್ಟು ಸುಖ, ಸೌಕರ್ಯ, ಸಾಮ್ರಾಜ್ಯ, ಆದರೆ ಸಖನಿಲ್ಲ ಎಂದು ಮನಸ್ಸು ಯಾವುದೋ ಮೂಲೆಯಲ್ಲಿ ಕೊರಗುತ್ತಿದ್ದರೂ, ಎಲ್ಲರೂ ಹಾಗೇ ಕೊರಗುತ್ತಾರೆ, ನಾನು ಹಾಗಲ್ಲ ಎಂದು ನನ್ನನ್ನೇ ನಂಬಿಸಿಕೊಂಡೆ. ದೃಢವಾಗಿ ನಿಂತೆ. ಮಳೆಗಾಲದ ಹನಿಗಳು ಅಕ್ಷತೆಯಂತೆ ಎರಚಾಡುತ್ತಿದ್ದರೆ, ನನ್ನೊಳಗೆ ಕಡಲ ಆವೇಗ. ಅದಕ್ಕೆ ಕಾಳ್ಗಿಚ್ಚಿನಂತೆ ಹಬ್ಬುವ ವಿರಹದುರಿ. ನೀನು ನನ್ನನ್ನು ಅಪ್ಪಿ ಮುದ್ದಿಸಿದ ಸುಖದ ಹೊದಿಕೆ ನನ್ನನ್ನು ಸಂತೈಸುತ್ತಿತ್ತು.
ಯುದ್ಧ ಮುಗಿಯಿತು ಎಂಬ ಸುದ್ದಿ ಅಲ್ಲೆಲ್ಲಿಂದಲೋ ಬಂತು. ಉಳಿದ ಚೂರುಪಾರು ಕೌಮಾರ್ಯವನ್ನೇ ದಿಂಬಿನ ಕೆಳಗಿಟ್ಟು ಗರಿಗರಿಯಾಗಿಸಿಕೊಂಡು ಅಣಿಯಾದೆ. ಕ್ಷಣಕ್ಷಣವೂ ಕಾದೆ. ಬಳಸದೆ ಹೋದ ಲೋಹಕ್ಕೆ ಬೇಗ ತುಕ್ಕು ಹಿಡಿಯುವುದಂತೆ. ಬಳಸದೇ ಹೋದ ದೇಹ?
ತಡವಾಗಿ ಬಂದವನಿಗೆ ಸಾವಿರ ಕಾರಣಗಳಿದ್ದವು. ಮುಗಿಯದ ಯುದ್ಧ, ತಪ್ಪಿಹೋದ ದಾರಿ, ಗೆದ್ದ ಸಂಭ್ರಮ. ಕೊನೆಗೂ ಬಂದೆ; ಕೋಪದೊಳಗೂ ಖುಷಿಯಿತ್ತು. ಬಂದವನಿಗೆ ತನ್ನ ಸಾಹಸಗಳನ್ನು ವರ್ಣಿಸುವ ಹುರುಪು. ನಮಗೆ ಕೇಳಿಸಿಕೊಳ್ಳಲೇ ಬೇಕಾದ ಉತ್ಸಾಹ. ಹತ್ತು ವರ್ಷ ಅಹೋರಾತ್ರಿ ಹೇಳಿದರೂ ಮುಗಿಯದಷ್ಟು ಕತೆಯಿತ್ತು. ಕೇಳಿ ನಮಗೆ ಬೇಸರ ಆಗಲಿಲ್ಲ. ಹೇಳಿ ನಿನಗೆ ಬೇಸರವಾಯ್ತು. ಮತ್ತೆ ಹೊರಟು ನಿಂತಿರುವೆ.
ನನ್ನಲ್ಲೂ ಕತೆಗಳಿವೆ. ನನ್ನ ಯೌವನದುದ್ದಕ್ಕೂ ಅವು ಚಾಚಿಕೊಂಡಿವೆ. ಸವರದೇ ಉಳಿದ ನನ್ನ ದೇಹದ ಒಂದೊಂದು ಸುಕ್ಕೂ ಸಾವಿರ ಕತೆ ಹೇಳೀತು. ನೀನು ಬಿಟ್ಟು ಹೋದದ್ದನ್ನು ಆಳಿದ ಕತೆ, ಕೊಟ್ಟು ಹೋದದ್ದನ್ನು ಬೆಳೆಸಿದ ಕತೆ, ಬಿಟ್ಟು ಹೋದವನ ನೆನಪಲ್ಲಿ ಬೆಂದ ಕತೆ, ಅವನಿಗಾಗಿ ಕಾದ ಕತೆ. ಸಾವಿರ ಆಮಿಷಗಳ ಎದುರು ಅವನವಳಾಗಿಯೇ ಉಳಿದ ಕತೆ.
ಕೇಳುವುದಕ್ಕೆ ನಿನಗೆ ಆಸಕ್ತಿಯಿಲ್ಲ. ಬಿಡುವಿಲ್ಲ. ಏಕಾಂತದಲ್ಲಿ ನಂಬಿಕೆಯಿಲ್ಲ. ನಾಯಕನಾದವನಿಗೆ ಜೊತೆಗೆ ಸಮೂಹ ಇರಬೇಕು. ಸಾಮೂಹಿಕವಾದದ್ದು ಪ್ರೀತಿ ಆಗಿರುವುದಿಲ್ಲ.
ವರ್ಷಗಳ ಕಾಲ ಹೋರಾಡಿ, ಹಲವಾರು ಅನುಭವಗಳನ್ನು ಮೈಗೂಡಿಸಿಕೊಂಡ ಮನಸ್ಸು ಜಡ್ಡುಗಟ್ಟಿರುತ್ತದೆ. ಅದಕ್ಕೇ ನಿನಗೆ ನನ್ನ ದೇಹದ ಸುಕ್ಕು ಮಾತ್ರ ಕಾಣಿಸಿತು.
ನನ್ನ ಯೌವನದಲ್ಲಿ ನೀನೆಲ್ಲಿದ್ದೆ?
-ಪೆನಲೋಪೆ
ಟಿಪ್ಪಣಿ- ಟೆನಿಸನ್ ಬರೆದ ಯೂಲಿಸಿಸ್ ಕವಿತೆ ಓದಿದ ತಕ್ಷಣ ಅನ್ನಿಸಿದ್ದು.