Sunday, April 25, 2010

ಅವನು ಪರ-ಪುರುಷ

ನಾನ್ಯಾವತ್ತೂ ಸಾವಿಗಾಗಿ ಕಾಯಲಿಲ್ಲ, ಸಾವು ‘ಹಾಗಿರತ್ತೆ, ಹೀಗಿರತ್ತೆ’ ಅಂತ ಕಲ್ಪಿಸಿಕೊಳ್ಳಲಿಲ್ಲ, ಭಯ ಪಡಲಿಲ್ಲ, ಉಲ್ಲಾಸಗೊಳ್ಳಲಿಲ್ಲ, ‘ಹೇಗೆ ಬರಬಹುದು?’ ಅಂತ ಯೋಚಿಸುತ್ತಾ ಕೂರಲಿಲ್ಲ.

ಸಾವಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅವನ ಬರವನ್ನು ಆದಷ್ಟು ಮುಂದೆ ಹಾಕಲು ಪ್ರಯತ್ನಿಸಿದೆ, ಏನೇನೋ ನಾಟಕ ಆಡಿದೆ, ಬರುವವರು ಬರದೇ ಇರುತ್ತಾರೆಯೆ? ಬಂದೇ ಬಂದ. ನಾನವನಿಗೆ ಕಾಯುತ್ತಿರಲ್ಲಿಲ್ಲ ಎಂದು ತಿಳಿದಿತ್ತೇನೋ ಎನ್ನುವಂತೆ ಹುಡುಕಿಕೊಂಡು ನನಗಾಗಿಯೇ ಬಂದ, ನನ್ನ ಹೊತ್ತೊಯ್ಯುವುದಕ್ಕೆ.

ಖುಶಿಯಾಗಿಯೇ ಇದ್ದವನು ಇದ್ದಕ್ಕಿದ್ದಂತೆ ಕೋಪಿಸಿಕೊಂಡವನಂತೆ ಒಬ್ಬನೇ ಹೊರಟು ನಿಂತ, ಯಾರೋ ಕಾಶಿಗೆ ಅಂದರು. ಖುಶಿಯಾಯಿತು ನನಗೆ. ಆದರೆ ಅಪ್ಪನೇ ಅವನ ಬಳಿ ಹೋಗಿ ರಮಿಸಿ ಕಾಲು ತೊಳೆದು ಮತ್ತೆ ಕರೆತಂದರು. ಆಮೇಲೆ ತಿಳಿಯಿತು ಅದೆಲ್ಲಾ ಸುಮ್ಮನೆಯಂತೆ ನಾಟಕವಂತೆ, ಆಟವಂತೆ. ‘ಸಾಯೋಆಟ’ದಲ್ಲಿ ಇನ್ನ್ಯಾವ ಆಟ? ಇನ್ನ್ಯಾಕೆ ಆಟ? ಯೋಚಿಸಿದೆ.

ನನಗೆ ಪುನರ್ಜನ್ಮದಲ್ಲಿ ನಂಬಿಕೆಯಿರಲಿಲ್ಲ. ರುಗ್ಣಶಯ್ಯೆಯಲ್ಲಿ ಮಲಗಿಸಿಕೊಂಡು ಇದು ಸಾವಲ್ಲ ಹೊಸ ಜನ್ಮ ಅಂತ ನಂಬಿಕೆ ಹುಟ್ಟಿಸಲು ಪ್ರಯತ್ನಿಸಿದ. ಎಲ್ಲಿಗೋ ಹೊರಟು ನಿಂತೆವು. ಎಲ್ಲಿಗೆ ಎಂದು ನಾನು ಕೇಳಲಿಲ್ಲ. ಪ್ರಶ್ನೆಗಳು ಆವಿಯಾಗಿ ಹೋಗಿದ್ದವು. ಉತ್ತರಗಳು ಯಾವ ವ್ಯತ್ಯಾಸವನ್ನೂ ಸೃಷ್ಟಿಸುತ್ತಿರಲಿಲ್ಲ. ಅಪ್ಪ ಅಮ್ಮ ಎಲ್ಲರೂ ಅಳುತ್ತಿದ್ದರು. ನನಗೆ ಗೊತ್ತಾಗುತ್ತಿತ್ತು "ಪುತ್ರ ಶೋಕಂ ನಿರಂತರಂ". ಮನೆಯವರಿಗೆಲ್ಲಾ ಸೂತಕ.


ಸಾವಿನ ಮನೆಯಲ್ಲಿ ನಿಶ್ಚಲ ನಿದ್ದೆ . Grave is a fine safe place but none do there embrace ಅಂದಿದ್ದ ಕವಿಮಾತು ಸುಳ್ಳಾಗಿದ್ದು ಯೋಚಿಸಿ ನಕ್ಕೆ. ನಾನು ನಕ್ಕಿದ್ದು ಇನ್ನೇನೋ ಅರ್ಥ ಕೊಟ್ಟಿರಬೇಕು ಸಾವಿನ ನಂತರದ ಯೋಚನೆಗಳೂ ‘ಬಾಹುಬಂಧನ ಚುಂಬನ’.

ಈಗೆಲ್ಲಾ ಬದಲಾಗಿ ಹೋಗಿದೆ. ಇಂಥ ಸಾವಿನಿಂದಾಗುವ ಮತ್ತೊಂದು ಹುಟ್ಟಿನ ಬಗ್ಗೆ ಅದು ಹುಟ್ಟಿದ ಕ್ಷಣದಿಂದ ಸಾವಿಗೆ ವಿವಿಧ ರೀತಿಯಲ್ಲಿ ತಯಾರಾಗುವುದರ ಬಗ್ಗೆ ಆಶ್ಚರ್ಯ ಪಡುತ್ತೇನೆ.ನಿಧಾನಕ್ಕೆ ಈ ಬದುಕು ಇಷ್ಟವಾಗುತ್ತಿದೆ. ಬದುಕು ಎಂದಾಕ್ಷಣ ಸಾವು ಆತ್ಮಹತ್ಯೆ ಮಾಡಿಕೊಂಡಿದೆ. ಈಗೆಲ್ಲಾ ಅಯೋಮಯ ‘ಹುಟ್ಟಿನಿಂದ ಸಾವಿನೆಡೆಗೆ’ ಎಂಬುದು ಸುಳ್ಳಾಗಿ, ಸಾವಿಗೆ ತಯಾರಾಗುತ್ತಿರುವ ಹೊಸಹುಟ್ಟು ನನ್ನಲ್ಲಿ ಜೀವ ಕಳೆ ತುಂಬಿದೆ. ಹುಟ್ಟುಸಾವುಗಳ ವಿಷಯಕ್ಕೇ ಹೋಗದೆ ನಿರಾತಂಕವಾಗಿದೆ. ನನ್ನ ಪ್ರತಿ ಕ್ಷಣವೂ ಜೀವಂತವಾಗಿಸುತ್ತಿದೆ. ಸಾವೆಂದುಕೊಂಡವನು ಪ್ರೀತಿಯಿಂದ ಜೀವಹಿಂಡುತ್ತಾನೆ.

ನನಗೀಗ ಪುನರ್ಜನ್ಮದಲ್ಲಿ ನಂಬಿಕೆ ಇದೆ.

Monday, April 5, 2010

ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ

ಇಷ್ಟು ಬೆಳಬೆಳಗ್ಗೆ ಕಾಲ್ ಮಾಡುತ್ತಿರೋದು ಯಾರು ಅನ್ನುವುದಕ್ಕಿಂತ, ಏನು ಸುದ್ದಿಯೊ ಅನ್ನೋ ಗಾಬರಿ ಚಕ್ರಪಾಣಿಯ ಮನಸ್ಸನ್ನು ಹೊಕ್ಕಿತು. ರೂಮಿನಲ್ಲಿ ಮಲಗಿರುವ ಹೆಂಡತಿಯನ್ನು ಏಳಿಸಲು ಮನಸಾಗಲಿಲ್ಲ, ಇನ್ನೊಂದು ರೂಮಿನಲ್ಲಿ ರಾತ್ರಿಯೆಲ್ಲಾ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಿದ್ದ ಮಗಳು ಈಗಿನ್ನೂ ಮಲಗಿದ್ದಾಳೆ, ಮತ್ತೆ ಮಗುವಿಗೆ ಎಚ್ಚರವಾದರೆ ಏನು ಗತಿ ಎಂದುಕೊಂಡು ಮಾಡುತ್ತಿದ್ದ ಟ್ಯೂಶನ್ನನ್ನು ನಿಲ್ಲಿಸಿ ಸ್ವಲ್ಪ ಭಯದಿಂದಲೇ ಫೋನ್ ಎತ್ತಿಕೊಂಡವರಿಗೆ ಕೇಳಿಸಿದ್ದು ರಂಗರಾಯರ ಪತ್ನಿ ಸೀತಮ್ಮನ ಧ್ವನಿ! ‘ಟ್ಯೂಷನ್ ಮುಗಿದಮೇಲೆ ಮನೆ ಕಡೆ ಬಂದು ಹೋಗ್ತಿರಾ, ಸ್ವಲ್ಪ ಮಾತಾಡೋದಿತ್ತು’ ಎಂದಾಗ ಚಕ್ರಪಾಣಿಗೆ ವಿಚಿತ್ರ ಅನ್ನಿಸಿದ್ದು ಮಾತ್ರವಲ್ಲ ಅವರು ಏನು ಹೇಳುತ್ತಿದ್ದಾರೆ ಎಂದೂ ಅರ್ಥ ಆಗಲಿಲ್ಲ. ‘ರಂಗರಾಯರ ಆರೋಗ್ಯ ಸರಿ ಇದೆ ತಾನೆ?’ ಎಂದು ಕೇಳಿ ಇಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಿದೆ ಎಂದುಕೊಂಡು, ಸರಿ ಬರುತ್ತೇನೆ ಎಂದು ಫೋನ್ ಇಟ್ಟು ಮತ್ತೆ ಮನೆ ಪಾಠದ ಕೋಣೆಗೆ ಬಂದರು.
‘ವೇವ್ಸ್’ ಪಾಠವನ್ನ ಅದೆಷ್ಟು ವರ್ಷಗಳಿಂದ, ಸುಮಾರು ೨೭ ಅಲ್ಲ ಅಲ್ಲ ೨೯ ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ ಮೊದಮೊದಲು ಪ್ರತೀ ನಾಲ್ಕೈದು ವರ್ಷಗಳಿಗೊಮ್ಮೆ ಸಿಲಬಸ್ ಅಪ್ಡೇಟ್ ಆಗುತ್ತಿತ್ತು. ಈ ಸಿ.ಇ.ಟಿ ಭರಾಟೆಯೆಲ್ಲ ಶುರುವಾದಮೇಲೆ ತಾವೇ ಪ್ರತೀ ವರ್ಷವೂ ಪ್ರತಿಯೊಂದು ವಿಷಯದಲ್ಲೂ ಹೊಸಾ ಬದಲಾವಣೆಗಳಾಗಿವೆಯೇ ಎಂದು ನೋಡಿ ತಿಳಿದುಕೊಳ್ಳುತ್ತಿದ್ದರು. ಪಾಠದ ಮಕ್ಕಳಿಗೆ ಸಹಾಯವಾಗಲೆಂದು. ವಿನಿತಾ ನೆನಪಾದಳು, ‘ಶುದ್ದ ಸೋಮಾರಿ, ಯಾವತ್ತೂ ಏನನ್ನೂ ಅಪ್ಡೇಟ್ ಮಾಡಿಕೊಳ್ಳೋಲ್ಲ, ನಾನೇ ಆಗಾಗ ಫೋನು ಮಾಡಿ ಹೊಸ ವಿಷಯಗಳನ್ನು ಓದು ಎಂದು ಹೇಳಿಕೊಡಬೇಕು.’ ಎಂದು ಮಗಳ ಮೇಲೆ ಹುಸಿ ಮುನಿಸು. ತಮ್ಮ ಮಗಳು ತಮ್ಮಂತೆಯೇ ಫಿಸಿಕ್ಸ್‌ನಲ್ಲಿ ಎಂ.ಎಸ್.ಸಿ ಮಾಡಿ ಅದೂ ಗೋಲ್ಡ್ ಮೆಡಲ್ ತೆಗೆದುಕೊಂಡು ಪಾಸಾದಾಗ ಉಂಟಾದ ಹೆಮ್ಮೆ ಆ ಸಂಗತಿ ಇವತ್ತಿಗೂ ತರುವ ನೆಮ್ಮದಿ ನೆನೆದು ಎದೆ ತಂತಾನೇ ಉಬ್ಬಿತು. ಇವರ ಮನಸ್ಸಿನಲ್ಲಿ ನಡೆಯುತ್ತಿರುವುದಕ್ಕೂ ಪಾಠ ಮಾಡುತ್ತಿರುವುದಕ್ಕೂ ಏನೂ ಸಂಭಂದವಿಲ್ಲವೆಂಬಂತೆ ಫ್ರೀಕ್ವೆನ್ಸಿ ವೇವ್ಲೆಂತ್ ವೆಲಾಸಿಟಿಗಳ ಬಗ್ಗೆ ಅಡೆತಡೆ ಇಲ್ಲದೆ ಹೇಳುತ್ತಾ ಅವತ್ತಿನ ಪಾಠ ಮುಗಿಸಿದರು. ಮತ್ತು ಹಾಗೆ ಮಾಡಿದ್ದಕ್ಕೆ ಅಚ್ಚರಿ ಪಟ್ಟುಕೊಂಡರು. ಮಕ್ಕಳು ಎಂದಿನಂತೆ ಅರ್ದಂಬರ್ದ ಕೇಳಿಸಿಕೊಂಡು ಅರ್ದಂಬರ್ಧ ಮಲಗಿ ಎದ್ದು ಹೋದರು, ಅವರ ನಂತರ ಇನ್ನೊಂದು ಬ್ಯಾಚು. ಆ ಬ್ಯಾಚಿನ ಮಕ್ಕಳು ಬರೋದರೊಳಗೆ ಹೆಂಡತಿ ಮಾಡಿಟ್ಟ ಹೊಸ ಹಾಲಿನ ಹಬೆಯಾಡುತ್ತಿರುವ ಕಾಫಿ ಹೀರುತ್ತಾ ‘ರಾಧಾ, ವಿನಿತಾಗೆ ಫೋನ್ ಮಾಡಿ ಒಂದೆರೆಡು ದಿನಕ್ಕೆ ಬಂದು ಹೋಗು ಅಂತ ಹೇಳು, ನೋಡಬೇಕು ಅನ್ನಿಸ್ತಿದೆ. ನಾಳೆ ಶುಕ್ರವಾರ, ಶನಿವಾರ ಹಾಫ್ ಲೀವ್ ಹಾಕಿ ಬರೋಕ್ಕೆ ಹೇಳು.’ ಅಂದು ಕಾಫಿಯ ಕೊನೆಯ ಸಿಪ್ ಹೀರಿ ಇನ್ನೊಂದು ಬ್ಯಾಚಿನ ಮಕ್ಕಳಿಗೆ ಪಾಠ ಮಾಡಲು ಹೋದರು.

ಟ್ಯೂಷನ್ ಮುಗಿಸಿ ಎಂದಿನಂತೆ ಆರಾಮಾಗಿ ಕಾಲೇಜಿಗೆ ಹೋಗಿ ಮಧ್ಯಾನ ಊಟಕ್ಕೆ ಬಂದರೆ ಸೀತಮ್ಮ ಕೂತಿದ್ದರು. ‘ಓ ಸಾರಿ ಮರೆತುಬಿಟ್ಟಿದ್ದೆ, ಕಾಲೇಜಿನಲ್ಲಿ ನೆನಪಾಯ್ತು ಸಂಜೆ ಬರೋಣ ಅಂತಿದ್ದೆ...ಊಟ ಮಾಡೋಣ ಬನ್ನಿ-’ ಎನ್ನುತ್ತಿರುವಾಗಲೇ ಅವರು ‘ನೀವು ಊಟ ಮುಗಿಸಿ’ ಎಂದಾಗ ಅವರ ಧ್ವನಿಯಿಂದಲೇ ಏನೋ ಗಂಭೀರವಾದದ್ದೇ ಆಗಿದೆ ಎಂದು ಕಸಿವಿಸಿಯಾಯಿತು. ಬಿಸಿಬೇಳೆ ಬಾತು ಮೊಸರನ್ನವನ್ನ ಹಾಕಿಕೊಡುತ್ತಾ ‘ಬೆಳಗ್ಗೇನೇ ಹೋಗೋದಲ್ವ ಏನ್ ಮರ್ವೋ ನಿಮ್ಗೆ, ಅವಾಗ್ಲಿಂದ ಕಣ್ಣಲ್ ನೀರ್ ಬಿಟ್ಕೊತಿದಾರೆ, ಮಗ್ಳಿಂದೇನೋ ತೊಂದ್ರೆ ಆಗಿದೆ ಏನು ಅಂತ ವಿವರವಾಗಿ ತಿಳ್ಕೊಳಿ’ ಎಂದು ಸಿಡುಕಿದರು ರಾಧಾ.

* *
ಆಟೋ ಸದ್ದಾಗಿದ್ದು ಕೇಳುತ್ತಲೇ ವಿನಿ ಬಂದಳು ಅಂತ ದೊಡ್ಡ ಮಗಳು ಸುನಿತಾ ಬಾಗಿಲು ತೆರೆಯಲು ಹೋದಳು. ‘ಹಸೀ ಬಾಣಂತಿ ಹಿಂಗೆ ಗಾಳಿಗೆ ಹೋಗ್ತಿಯಲ್ಲ ಚೂರು ಭಯ ಇಲ್ಲ’ ಬೈದರು ಅಮ್ಮ. ಚಕ್ರಪಾಣಿ ಮಗಳನ್ನು ನೋಡಿದರು ‘ಸ್ವಲ್ಪ ದಪ್ಪಗಾಗಿದಾಳೆ’. ಬೆಂಗಳೂರು ಪ್ರಭಾವ ಅಂದುಕೊಂಡು ಕೆಲಸ ಹೇಗೆ ಆಗುತ್ತಿದೆ, ಕಾಲೇಜಿನಲ್ಲಿ ಏನು ತೊಂದರೆ ಇಲ್ಲವಲ್ಲ? ಎಷ್ಟು ಪಾಠ ಮುಗಿಸಿದ್ದಾಳೆ? ಮಕ್ಕಳು ಚುರುಕಿದ್ದಾರ? ಎಂದೆಲ್ಲಾ ವಿಚಾರಿಸಿಕೊಂಡರು. ಫೋನಿನಲ್ಲೇ ಎಲ್ಲಾ ಹೇಳಿ-ಕೇಳಿಯಾಗಿದ್ದರೂ ಮತ್ತೆ ಮತ್ತೆ ‘ಇನ್ನೇನು ವಿಷಯ’ ‘ಇನ್ನೇನು ವಿಷಯ’ ಅಂತ ಅಮ್ಮ ಮಗಳು ಮಾತಾಡಿಕೊಂಡರು. ರಾತ್ರಿ ಪಕ್ಕ ಮಲಗಿದ ಹೆಂಡತಿಯನ್ನು ಇನ್ನೇನಂತೆ ಎಂದು ಕೇಳಿದಾಗ ಮಗಳನ್ನು ಐ.ಎ.ಎಸ್ ಹುಡುಗನೊಬ್ಬ ಇಷ್ಟಪಟ್ಟು ಮದುವೆಗೆ ಪ್ರಪೋಸ್ ಮಾಡಿದ್ದಾನೆ ಇವಳು ಮನೆಯಲ್ಲಿ ಕೇಳಬೇಕು ಅವರು ಒಪ್ಪಿದರೆ ಪರವಾಗಿಲ್ಲ ಎಂದು ಹೇಳಿ ಬಂದಿದ್ದಾಳೆ ಎಂಬ ಸಂಗತಿಯನ್ನ ಹೆಂಡತಿ ಹೀಗೆ ನಿರುಮ್ಮಳವಾಗಿ ಹೇಳಿ ನಿದ್ದೆ ಹೋಗಿಬಿಡುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ... ನಿದ್ದೆ ಹಾರಿ ಹೋಯಿತು.

ಬೆಳಗ್ಗೆ ರಂಗರಾಯರ ಮನೆಯಲ್ಲಿ ಮಾತಾಡಿದ್ದನ್ನು ಮನಸ್ಸಿನಲ್ಲೇ ಮೆಲಕು ಹಾಕುತ್ತಾ, ಅವರ ಮಗಳು ಶ್ವೇತಾಳಿಗೆ ಗಂಡು ಹುಡುಕಲು ಶುರು ಮಾಡಿದ ಸಂಧರ್ಭವನ್ನು ನೆನಪಿಸಿಕೊಂಡರು. ಮುದ್ದಾಗಿ ಬೆಳೆದ ಹುಡುಗಿಯ ಚರ್ಮದ ಮೇಲೆ ಅಲ್ಲಲ್ಲಿ, ಬೆರಳ ತುದಿ, ತುಟಿಯ ಕೊನೆ, ಪಾದದ ಮಧ್ಯೆ ಸಣ್ಣದಾಗಿ ಚರ್ಮ ಬಿಳಿಯಾಗಲು ಶುರುವಾದಾಗ ಸೀತಮ್ಮ ಘಾಬರಿಯಾಗಿ ಔಶಧಿಗಳನ್ನ ಮಾಡಲು ಶುರು ಮಾಡಿದ್ದು, ಸ್ಪೆಶಲಿಷ್ಟುಗಳಿಗೆ ತೋರಿಸಿದ್ದು, ಧರ್ಮಸ್ಥಳದ ಶಾಂತಿವನದಲ್ಲಿ ತಿಂಗಳುಗಟ್ಟಲೆ ಪ್ರಕೃತಿ ಚಿಕಿತ್ಸೆ ಕೊಡಿಸಿದ್ದು ನಿರೀಕ್ಷಿಸಿದಷ್ಟು ಫಲ ಕೊಡಲಿಲ್ಲ. ವಯಸ್ಸು ೨೭ ಆದರೂ ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ಸಾಕಾಗಿಹೋಗಿದ್ದ ರಂಗರಾಯರು ಕೊನೆಯ ಪ್ರಯತ್ನವೆಂಬಂತೆ ‘ಟೈಮ್ಸ್ ಆಫ್ ಇಂಡಿಯಾ’ ‘ಇಂಡಿಯನ್ ಎಕ್ಸಪ್ರೆಸ್ಸ್’ ಪೇಪರುಗಳ ಮ್ಯಾಟ್ರಿಮೋನಿಯಮ್ ಕಾಲಮ್ಮಿನಲ್ಲಿ ಮಗಳ ಹೆಸರನ್ನು ಸೇರಿಸಿದರು, ಏನನ್ನೂ ಮುಚ್ಚಿಡಲಿಲ್ಲ. ಮಗಳಿಗೆ ಹೀಗಾಗಿದೆ ಆದರೆ ಒಳ್ಳೆಯ ಕೆಲಸದಲ್ಲಿದ್ದಾಳೆ, ಸ್ಟೇಟ್ ಬ್ಯಾಂಕಿನಲ್ಲಿ ಆಫೀಸರ್, ಚನ್ನಾಗಿ ಓದಿಕೊಂಡಿದ್ದಾಳೆ, ಅದ್ಭುತವಾಗಿ ಅಡುಗೆ ಮಾಡುತ್ತಾಳೆ ಇತ್ಯಾದಿ ಇತ್ಯಾದಿ. ಯಾರಿಂದಾದರೂ ಉತ್ತರ ಬರುತ್ತೆ ಅಂತ ಉಹುಂ ಸತ್ಯವಾಗಲೂ ಅಂದುಕೊಂಡಿರಲಿಲ್ಲ... ಕೆಲವರಿಗೆ ಎಷ್ಟು ಹುಡುಕಿದರೂ ಸಿಗೋದಿಲ್ಲ, ಕೆಲವು ಮಕ್ಕಳು ತಾವೇ ಹುಡುಕಿಕೊಂಡುಬಿಡುತ್ತವೆ...

ಇತ್ತ ವಿನಿತಾಗೂ ನಿದ್ದೆ ಬರಲಿಲ್ಲ ಅಮ್ಮ ಹೇಳಿದ ವಿಷಯ ಮನಸ್ಸು ಕೆಡೆಸಿತ್ತು. ಅವನು ಬಂದು ಹೋದ ದಿನ ಶ್ವೇತ ಎಷ್ಟು ಖುಶಿಯಾಗಿದ್ದಳು ಎಂದುಕೊಳ್ಳುತ್ತಾ ವಿನಿತಾ ಅವತ್ತಿನ ಘಟನೆಗಳನ್ನು ನೆನಪಿಸಿಕೊಳ್ಳತೊಡಗಿದಳು. ಶ್ವೇತಾ ಖುಷಿಯಲ್ಲಿ ಒಂದು ಹೆಜ್ಜೆಗೆ ನಾಲ್ಕು ಹೆಜ್ಜೆ ಹಾರುತ್ತಾ ಮನೆಯೊಳಗೆ ಬರುತ್ತಲೇ “ಇವತ್ತು ಒಬ್ಬ ಬಂದಿದ್ದ ಕಣೇ ‘ಚಿರಾಗ್’ ಅಂತ ಹೆಸರು ‘ಚಿರಾಗ್ ವಸಿಷ್ಠ’ ” ಅನ್ನುತ್ತಾ ಸಂಭ್ರಮಿಸಿದ್ದು ನೆನಪಾಯಿತು. ಶ್ವೇತಾಳ ಅಪ್ಪ ಅಮ್ಮ ಅವತ್ತು ಯಾವುದೋ ಮದುವೆಗೆ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಇವಳೊಬ್ಬಳೇ. ಯಾವುದೋ ಹಳೇ ಸಿನೆಮಾ ನೋಡುತ್ತಾ ಕೂತಿದ್ದಳಂತೆ. ಆಗ ಕಾಲಿಂಗ್ ಬೆಲ್ ಸದ್ದಾಗಿದ್ದು ಕೇಳಿಸಿತು. ಬಾಗಿಲು ಹೋಗಿ ತೆರೆದರೆ ಇವಳನ್ನು ಗುರುತಿಸಿದ್ದು ಅವನು. ‘ಪೇಪರಿನಲ್ಲಿ ಮ್ಯಾಟ್ರಿಮೋನಿಯಲ್ ಆಡ್ ನೋಡಿದೆ ನನ್ನ ಹೆಸರು ಚಿರಾಗ್ ಅಂತ.’ ಎಂದು ಅವನು ಪರಿಚಯ ಮಡಿಕೊಂಡ ತಕ್ಷಣ ಇವಳಿಗೆ ಛೆ! ನಾನು ನೈಟಿಲಿರಬಾರದಿತ್ತು ಅನ್ನಿಸಿತ್ತು. ಹಾಗೆ ಬಂದವನು ಇವಳಿಗೆ ಇಷ್ಟವಾಗಿ ಹೋಗಿದ್ದ. ಮೊದಲ ದಿನವೇ ಬಹಳಷ್ಟು ಮಾತಾಡಿಕೊಂಡಿದ್ದರು. ಚನ್ನೈನಿಂದ ಮತ್ತೆ ಬರೋದು ಕಷ್ಟ, ಫೋಟೋ ಮೈಲ್ ಮಾಡ್ತಿನಿ. ನಿಮ್ಮ ಅಪ್ಪ ಅಮ್ಮ ಒಪ್ಪಿಗೆ ಕೊಟ್ರೆ ಫೋನ್‌ನಲ್ಲಿ ಮಾತಾಡೋಣ ಅಂತ ಹೇಳಿ ಹೋಗಿದ್ದ. ‘ಅಷ್ಟು ಚನ್ನಾಗಿದಾನೆ. ಸಬ್ ಇನ್ಸ್‌ಪೆಕ್ಟರ್ ಬೇರೆ. ಹೇಗಿದಾನೆ ಗೊತ್ತಾ ಮ್ಯಾನ್ಲಿ ಆಗಿ. ನನ್ನ ಇಷ್ಟ ಪಟ್ಟು ಹುಡುಕೊಂಡು ಬಂದಿದಾನೆ ನೋಡು. ನನ್ನ ಕ್ವಾಲಿಟೀಸ್ ಎಲ್ಲಾ ಇಷ್ಟ ಆಯ್ತಂತೆ’ ಅಂತವಳು ಖುಷಿ ಪಡುತ್ತಿದ್ದರೆ ವಿನಿತಾಗ್ಯಾಕೋ ಅನುಮಾನವಾಗುತ್ತಿತ್ತು. ‘ಎನೇ ಇರ್ಲಿ ಶ್ವೇತಾ ಯಾರನ್ನೂ ಹಾಗೆ ನಂಬಬೇಡ ಅವನ ಬಗ್ಗೆ ಎಲ್ಲಾ ವಿಚಾರಿಸೋಕ್ಕೆ ಹೇಳು,’ ಅನ್ನುವ ವಿನಿತಾಳ ಎಚ್ಚರಿಕೆಯ ಮಾತುಗಳಿಗೆ, ‘ಇಲ್ಲ ಕಣೇ, ಅವನು ಖಂಡಿತ ಸುಳ್ಳು ಹೇಳ್ತಿಲ್ಲ ನಂಗೊತ್ತು. ನಾಳೆ ಫೊಟೋ ಮೈಲ್ ಮಾಡ್ತಾನಲ್ಲ ನೋಡು ಬೇಕಾದ್ರೆ. ಅಷ್ಟಕ್ಕೂ ಅವ್ನ ಬಗ್ಗೆ ಎಲ್ಲಾ ಪ್ರೂಫ್ ಕೊಟ್ಟು ಹೋಗಿದಾನೆ ಕಣೇ. ನಾನೇ ಅವ್ನು ಕೆಲ್ಸ ಮಾಡೋ ಪೋಲಿಸ್ ಡಿಪಾರ್ಟ್ಮೆಂಟ್‌ಗೆ ಫೋನ್ ಮಾಡಿ ಯಾರೋ ಬೇರೆಯವರು ವಿಚಾರಿಸೋ ಥರ ವಿಚಾರಿಸಿ ನೋಡ್ದೆ. ಅವ್ನು ಹೇಳಿರೋ ಇನ್ಫರ್ಮೇಷನ್ ಎಲ್ಲಾ ಕರೆಕ್ಟು.’ ಅಂದ್ಲು. ಆದರೂ ವಿನಿತಾಗೆ ಸಮಾಧಾನವಿರಲಿಲ್ಲ. ‘ಯಾವುದಕ್ಕೂ ಜೋಪಾನ ಅಪ್ಪ ಅಮ್ಮ ಏನಂದ್ರು’ ಕೇಳಿದಳು. ಅವರಪ್ಪ ಅಮ್ಮನಿಗೂ ಸ್ವಲ್ಪ ಅನುಮಾನ ಇದ್ದೇ ಇತ್ತು. ಇವಳು ಫೋಟೋ ತೋರಿಸಿದ್ದಳು. ವಿನಿತಾಗಂತೂ ಫೋಟೋ ನೋಡಿದ ಕೂಡಲೇ ಇವನನ್ನೆಲ್ಲೋ ನೋಡಿದೀನಿ ಅನ್ನಿಸಿತು. ಆದರೆ ಯಾರಿರಬಹುದು ಎಂದು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಮಾರನೇ ದಿನ ಇವಳು ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ಬಂದಾಗ ಇವಳಮ್ಮ ಇವಳನ್ನು ತಬ್ಬಿಕೊಂಡು ಕಣ್ಣಿನಲ್ಲಿ ನೀರು ತುಂಬಿಕೊಂಡಿದರು. ಚಿರಾಗ್ ವಸಿಷ್ಠ ಶ್ವೇತಾಳ ತಾಯಿ ತಂದೆಯ ಜೊತೆ ಫೋನ್‌ನಲ್ಲಿ ಮಾತಾಡಿದ್ದ. ‘ನನಗೆ ಪರಿಚಯ ಮಾಡಿಸಿಕೊಡೇ..’ ಅಂತ ವಿನಿ ಅವಳನ್ನು ಗೋಳುಹುಯ್ದುಕೊಂಡ ಮರುದಿನವೇ ವಿನಿತಾಗೂ ಅವನಿಂದ ಕಾಲು ಬಂದಿತ್ತು. ಯಾಕೋ ಧ್ವನಿ ಸ್ವಲ್ಪ ಕೀರಲು ಅನ್ನಿಸುತ್ತಿದ್ದರೂ ಅವನು ಮಾತಾಡುತ್ತಿದ್ದ ಧಾಟಿ ಖುಷಿ ಕೊಡುತ್ತದೆ ಅಂದುಕೊಂಡಳು.

ಶ್ವೇತಾಳಿಗೆ ತಿಂಗಳಿಗೊಂದು ಗಿಫ್ಟು ಬರಲು ಶುರುವಾಯಿತು. ಚಿನ್ನದ ಸರ, ಬಳೆ ಹೀಗೇ.. ಇಷ್ಟು ದಿನವಾದರೂ ಚಿರಾಗ್‌ನನ್ನು ಬಿಟ್ಟರೆ ಅವರ ಮನೆಯವರ್ಯಾರೂ ಶ್ವೇತಾಳ ಮನೆಯವರ ಬಳಿ ಮಾತಾಡಿರಲಿಲ್ಲ. ಅವನಿಗೆ ತಂದೆ ತಾಯಿ ಇಲ್ಲ. ಇರುವ ಸಂಭಂದಿಕರಾದ ಚಿಕ್ಕಪ್ಪ ಚಿಕ್ಕಮ್ಮ ಅಮೇರಿಕಾದಲ್ಲಿದ್ದರು. ಆರು ತಿಂಗಳಾದಮೇಲೆ ಬರ್ತಾರೆ ಆಗ ಮನೆಗೇ ಬಂದು ಮಾತಾಡ್ತಾರೆ ಅಂದಿದ್ದ. ಅದ್ಯಾಕೋ ಏನೇನೋ ಕಾರಣಗಳಿಂದ ಶ್ವೇತಾಳ ಅಪ್ಪ ಅಮ್ಮನಿಗೆ ಅವನನ್ನು ಮುಖತಹ ಭೇಟಿ ಮಾಡಲಾಗಿರಲೇ ಇಲ್ಲ. ಇವಳೇ ಬ್ಯಾಂಕಿನ ಕೆಲಸದ ಮೇಲೆ ಬೆಂಗಳೂರಿಗೆ ಹೋದಾಗ ಅವನೂ ಚನ್ನೈಯಿಂದ ಬರುತ್ತಿದ್ದ ಹೀಗೆ ಆಗಾಗ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಎಂಟು ತಿಂಗಳಾದರೂ ಅವನ ಚಿಕ್ಕಪ್ಪ ಚಿಕ್ಕಮ್ಮ ಬರುವ ಸುದ್ದಿಯೇ ಇರಲಿಲ್ಲ. ರಂಗರಾಯರಿಗೆ ಅನುಮಾನವಾಗಿ, ಶ್ವೆತಾಳಿಗೆ ಗೊತ್ತಾಗದಂತೆ ಚಿನ್ನದಂಗಡಿಗೆ ಹೋಗಿ ಅಸಲಿ ಒಡವೆಯೋ ನಕಲಿಯೋ ಎಂದು ತೊರಿಸಿಕೊಂಡು ಬಂದರು. ಚಿನ್ನದ ಒಡವೆಗಳೇ. ಮೋಸಮಾಡುವ ಪೈಕಿಯಾದರೆ ಹಾಗೆ ಚಿನ್ನದ ಒಡವೆಗಳನ್ನ ದುಬಾರಿ ವಸ್ತುಗಳನ್ನ ಯಾಕೆ ಕಳುಹಿಸುತ್ತಾರೆ ಅಂದುಕೊಂಡು ಸುಮ್ಮನಾದರು. ಅದಲ್ಲದೇ ಅವನು ಇವರಿಗೆ ಹದಿನೈದು ದಿನಕ್ಕೊಂಮ್ಮೆ ತಪ್ಪದೇ ಮಾತಾಡುತ್ತಿದ್ದ. ಹೀಗೆ ಎಷ್ಟು ದಿನಗಳಾದರೂ ಅವರ ಮನೆಯವರು ಮದುವೆಯ ಬಗ್ಗೆ ಸುದ್ದಿಯೇ ಎತ್ತಿರಲಿಲ್ಲ.

ಮೊನ್ನೆ ಅನುಮಾನವಾಗಿ ಏನಾದರಾಗಲಿ ಹೋಗಿ ಮಾತಾಡಿಸಿಕೊಂಡು ಬರೋಣ ಅಂತ ರಂಗರಾಯರು ಯಾರಿಗೂ ಹೇಳದೇ ಅವನಿರುವ ಊರಿಗೆ, ಅಲ್ಲಿನ ಪೋಲೀಸ್ ಸ್ಟೇಶನ್‌ಗೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಚಿರಾಗ್ ಎನ್ನುವ ಹೆಸರಿನವರು ಯಾರೂ ಇಲ್ಲ. ಬೇರೆ ಯಾವುದೋ ಮನುಷ್ಯ ಕೂತಿದ್ದಾನೆ. ಫೋಟೋಲಿ ನೋಡಿದ ಮನುಷ್ಯನಿಗೂ ಇವನಿಗೂ ಯಾವುದೇ ಸಂಭಂಧ ಇಲ್ಲ. ರಂಗರಾಯರಿಗೆ ನಾವು ಮೋಸ ಹೋದೆವು ಎಂದು ತಿಳಿದುಹೋಯಿತು. ಘಾಬರಿಗೊಂಡು ಅಲ್ಲೆಲ್ಲಾ ವಿಚಾರಿಸಿ ಸುತ್ತಾಡಿ ಹುಡುಕಾಡಿದ್ದಾರೆ ಆ ಮುಖದ ಮನುಷ್ಯನ ಸುಳಿವೇ ಇಲ್ಲ ಎಂದು ತಿಳಿದ ಮೇಲೆ ರಾತ್ರಿ ಹೆಂಡತಿಗೆ ಕಾಲ್ ಮಾಡಿದ್ದಾರೆ. ಮಗಳಿಗೆ ಈ ವಿಷಯವನ್ನು ತಿಳಿಸುವುದು ಹೇಗೆ ಎಂದು ತಲೆಕೆಡಸಿಕೊಂಡು ಬೆಳಗಿನವರೆಗೂ ನಿದ್ದೆಗೆಟ್ಟ ಸೀತಮ್ಮ ಬೆಳಗಾಗುತ್ತಲೇ ಚಕ್ರಪಾಣಿಯವರಿಗೆ ಫೋನ್ ಮಾಡಿದ್ದಾರೆ.

ಸೀತಮ್ಮನನ್ನು ಮಾತಾಡಿಸಲು ಬಂದ ಚಕ್ರಪಾಣಿಗೆ ಇವರು ಮೋಸ ಹೋಗಿದ್ದಾರೆ ಎಂದು ಮನಸ್ಸಿನಲ್ಲಿ ಧೃಢವಾಗುತ್ತಿರುವಾಗಲೇ ಶ್ವೇತಾ ಬ್ಯಾಂಕಿನಿಂದ ಮನೆಗೆ ಬಂದಿದ್ದಾಳೆ. ಅವನ ಜೊತೆ ಮಾತಾಡಿಕೊಂಡು ಬಂದವಳು, ಇವರನ್ನು ನೋಡಿದ ತಕ್ಷಣ ‘ಇನ್ನೊಂದ್ ಸ್ವಲ್ಪ ಹೊತ್ತು ಬಿಟ್ಟು ಮಾತಾಡ್ತಿನಿ ಕಣೋ, ಎಂದು ಫೋನಿನಲ್ಲಿ ಹೇಳಿ. ‘ಹೇಗಿದೀರಾ ಅಂಕಲ್? ವಿನಿತಾ ಬಂದಿದಾಳ?’ ಎಂದು ವಿಚಾರಿಸಿಕೊಂಡು ‘ಚಿರಾಗ್ ಫೋನ್ ಮಾಡಿದ್ದ ಅಮ್ಮ, ಯಾವ್ದೋ ಹೊಸಾ ಮಾಡಲ್ ಮೊಬೈಲ್ ಬಂದಿದಿಯಂತೆ ೧೭ಸಾವರದ್ದು ನಿಂಗೆ ಕೊಡ್‌ಸ್ತಿನಿ ಅಂದ’ ಎಂದು ಹೇಳುತ್ತಿದ್ದರೆ ಸೀತಮ್ಮನೂ ಚಕ್ರಪಾಣಿಯೂ ಘಾಬರಿಯಿಂದ ಕಕ್ಕಾಬಿಕ್ಕಿಯಾಗಿ ಕೂತಿದ್ದರು.

ವಿನಿತಾಗೆ ತಲೆ ಚಿಟ್ಟುಹಿಡಿಯುವಷ್ಟು ಹಿಂಸೆಯಾಗುತ್ತಿತ್ತು. ಶ್ವೇತಾಳ ಕಷ್ಟಗಳನ್ನ, ಅವಳು ತನ್ನ ಚರ್ಮದ ಖಾಯಿಲೆಯಿಂದ ಅನುಭವಿಸುತ್ತಿದ್ದ ಅವಮಾನವನ್ನ ಹತ್ತಿರದಿಂದ ನೊಡಿದ್ದ ಅವಳಿಗೆ ಶ್ವೇತಾ ಈಗ ಇನ್ನೊಂದು ಆಘಾತವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನಿಸಿತು. ನಾಳೆ ರಂಗರಾಯರ ಮನೆಗೆ ಅಪ್ಪನ ಜೊತೆ ತಾನೂ ಹೋಗಬೇಕು ಅಂತ ನಿಶ್ಚಯಿಸಿಕೊಂಡಳು.
* * *

ರಂಗರಾಯರು ಮನೆಗೆ ಬಂದಮೇಲೆ ಅವನ ಬಗ್ಗೆ ಇನ್ಯಾವುದಾದರೂ ಇನ್ಫರ್ಮೇಶನ್ ಸಿಗಬಹುದಾ ಎಂದು ತಿಳಿಯಲು ಶ್ವೇತಾ ಮನೆಯಲ್ಲಿಲ್ಲದಿರುವ ಹೊತ್ತಿನಲ್ಲಿ ಅವಳ ಬೀರುವನ್ನ ಜಾಲಾಡಿದ್ದಾರೆ ಅಲ್ಲಿ ಅವರಿಗೆ ಸಿಕ್ಕಿದ್ದು ಕ್ರೆಡಿಟ್ ಕಾರ್ಡಿನ ಬಿಲ್ಲುಗಳು, ಆ ಬಿಲ್ಲುಗಳಲ್ಲಿ ಅವನು ಇವಳಿಗೆ ಕಳಿಸಿದ ಒಡವೆಗಳ ವಿವರಗಳಿವೆ ಎಲ್ಲಿ, ಯಾವತ್ತು ತೆಗೆದುಕೊಂಡಿದ್ದು? ಎಷ್ಟು ಬೆಲೆ ಇತ್ಯಾದಿ. ಎಲ್ಲವೂ ಶಿವಮೊಗ್ಗದ ಅಡ್ರಸ್ಸುಗಳೇ ಇವಳ ಕ್ರೆಡಿಟ್ ಕಾರ್ಡಿನಿಂದಲೇ ಪೇ ಆಗಿದೆ. ಇವಳಿವಳಿಗೇ ಇವಳು ಆ ಒಡವೆಗಳನ್ನು ಕೊರಿಯರ್ ಮಾಡಿರುವ ಚೀಟಿಗಳು. ಹುಡುಗರು ಹಾಕಿಕೊಳ್ಳುವಂಥಾ ಪ್ಯಾಂಟು ಶರ್ಟುಗಳು. ರಂಗರಾಯರಿಗೆ ಶಾಕ್ ಆಗಿ ಹೋಯಿತು ಮಗಳು ಮೋಸ ಮಾಡುತ್ತಿದ್ದಾಳ? ಅಥವ ಮಗಳಿಗೆ ಹುಚ್ಚು ಹಿಡಿದಿದೆಯಾ? ಏನೂಂದೂ ಅರ್ಥವಾಗಲಿಲ್ಲ. ವಿನಿತಾ ಮತ್ತು ಚಕ್ರಪಾಣಿ ರಂಗರಾಯರ ಮನೆಗೆ ಬರುವ ಹೊತ್ತಿಗೆ ರಂಗರಾಯರು ಟೇಬಲ್ಲಿನ ಮೇಲೆ ಕೊರಿಯರ್ ಚೀಟಿಗಳು ಕ್ರೆಡಿಟ್ ಕಾರ್ಡಿನ ಬಿಲ್ಲುಗಳನ್ನು ಹರಡಿಕೊಂಡು ಕೂತಿದ್ದರು.

ನಡೆದದ್ದನ್ನು ವಿವರಿಸಿದಾಗ ಚಕ್ರಪಾಣಿಗೂ ತಲೆನೋವು ಶುರುವಾಯಿತು. ‘ಚಿರಾಗ್‌ನನ್ನು ಎಲ್ಲೋ ನೋಡಿದ್ದೆ ಅಂತ ನೆನಪು ಎಲ್ಲಿ ಅಂತ ಎಷ್ಟು ಯೋಚಿಸಿದರೂ ಗೊತ್ತಾಗುತ್ತಿಲ್ಲ’ ಅಂದಳು ವಿನಿತಾ. ಹಾಗಾದರೆ ಚಿರಾಗ್ ಇರುವುದು ನಿಜ ಆದರೆ ಅವನು ಪೋಲೀಸ್ ಅಲ್ಲ. ನಮ್ಮ ಹುಡುಗಿಯ ತಲೆಕೆಡಸಿದ್ದಾನೆ ಇವತ್ತು ಎಲ್ಲದಕ್ಕೂ ಒಂದು ಅಂತ್ಯ ಕಾಣಿಸಬೇಕು ಶ್ವೇತಾಳನ್ನ ನೇರವಾಗಿ ಕೇಳಿಬಿಡೋಣ ಏನಾದರಾಗಲಿ ಅಂತ ನಿಶ್ಚಯಿಸಿದರು. ಅವಳು ಮನೆಗೆ ಬರುವವರೆಗೂ ಏನಾಗಿರಬಹುದು? ಹೇಗೆ ಪಾಪದ ಹುಡುಗಿ ಮೋಸ ಹೋಗಿರಬಹುದು? ಅಂತ ಮಾತಾಡಿಕೊಂಡರು. ಸೀತಮ್ಮ ಸದ್ದಿಲ್ಲದೆ ಬಿಕ್ಕುತ್ತಿದ್ದರು. ಸಮಯ ಸಾಗುತ್ತಲೇ ಇಲ್ಲವೇನೋ ಅನ್ನಿಸುತ್ತಿತ್ತು. ಕೊನೆಗೆ ಆರುಗಂಟೆಯ ವೇಳೆಗೆ ಶ್ವೇತಾ ಎಂದಿನಂತೆ ಫೋನಿನಲ್ಲಿ ಚಿರಾಗ್ ಜೊತೆ ಮಾತಾಡಿಕೊಂಡು ಬಂದಳು, ವಿನಿತಾಳ ಮುಖ ನೋಡಿ ಅವಳ ಕಣ್ಣರಳಿತು ವಿನಿತಾ ಪೇಲವವಾಗಿ ನಕ್ಕಳು, ಅಲ್ಲಿಯವರೆಗೂ ಒಂದೂ ಮಾತಾಡದೆ ಕುಳಿತಿದ್ದ ಸೀತಮ್ಮ ಬಿಕ್ಕುತ್ತಾ ‘ಏನೇ ಶ್ವೇತಾ ಇದು ನಿನಗೆ ನೀನೇ ಒಡವೆಗಳನ್ನು ಕಳಿಸಿಕೊಂಡಿದ್ದೀಯಾ..’ ಎಂದು ಅವಳ ಮುಂದೆ ಆ ಎಲ್ಲಾ ಚೀಟಿಗಳನ್ನು ಹಿಡಿದರು ಶ್ವೇತಾಳ ಮುಖದಲ್ಲಿ ಆಶ್ಚರ್ಯ. ಅವಳ ರೂಮಿನಿಂದ ಹುಡುಗರು ಹಾಕಿಕೊಳ್ಳೋ ಪ್ಯಾಂಟ್, ಟಿ ಷರ್ಟ್, ಕ್ಯಾಪ್‌ಗಳನ್ನು ತಂದ ರಂಗರಾಯರು ಅವುಗಳನ್ನು ಶ್ವೆತಾಳ ಮುಂದೆ ಹಿಡಿದರು. ಶ್ವೇತಾಳ ಚಹರೆ ಬದಲಾಯಿತು ರಂಗರಾಯರ ಕುತ್ತಿಗೆ ಹಿಸುಕುತ್ತಾ ‘ಶ್ವೇತಂಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ’ ‘ಶ್ವೇತಾಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ’ ಅಂತ Pರುಚಿಕೊಂಡಳು. ಅವಳ ಕೈಯಿಂದ ರಂಗರಾಯರನ್ನು ಬಿಡಿಸುವ ಹೊತ್ತಿಗೆ ವಿನಿತಾ ಚಕ್ರಪಾಣಿ ಸೀತಮ್ಮ ಸೋತು ಹೋಗಿದ್ದರು. ಚಕ್ರಪಾಣಿ ಕೊಟ್ಟ ಹೊಡೆತಕ್ಕೆ ಶ್ವೇತ ತಲೆತಿರುಗಿ ಬಿದ್ದಿದ್ದಳು. ಸೀತಮ್ಮ ಆದ ಘಾಬರಿಗೆ ಬಿಕ್ಕುವುದನ್ನು ನಿಲ್ಲಿಸಿದ್ದರು. ಶ್ವೇತಾಳ ವರ್ತನೆ ಅರ್ಥವೇ ಆಗದೆ ರಂಗರಾಯರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಭೂತ ಪ್ರೇತಗಳು ಇರೋದು ನಿಜವಿರಬಹುದಾ ಎಂಬ ಅನುಮಾನಕ್ಕೆ ತುತ್ತಾದರು. ಚಕ್ರಪಾಣಿ, ಶ್ವೇತಾಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ ಅಂತ ಅವಳೇ ಅವಳ ಬಗ್ಗೆ ಹೇಳುತ್ತಿದ್ದರ ಅರ್ಥವೇನು? ಪ್ರಶ್ನೆಯಾಗುತ್ತಿದ್ದರೆ ವಿನಿತಾಗೆ ನೆನಪಾದದ್ದು ಡಾ.ಕೌಶಿಕ್. ಪಿ.ಯು.ಸಿ ಯಲ್ಲಿ ಚಕ್ರಪಾಣಿಯವರ ಟ್ಯೂಶನ್ನಿಗೆ ಬರುತ್ತಿದ್ದ ಹುಡುಗ ಎಂ.ಬಿ.ಬಿ.ಎಸ್ ಮುಗಿಸಿ ಸೈಕ್ಯಾಟ್ರಿಯಲ್ಲಿ ಪಿಜಿ ಮುಗಿಸಿ ಶಿವಮೊಗ್ಗದ ಮಾನಸಾದಲ್ಲಿ ಸೈಕ್ಯಾಟ್ರಿಸ್ಟ್ ಆಗಿದ್ದ. ಅವನು ಪಿ.ಯು.ಸಿ ಯಲ್ಲಿ ವಿನಿತಾಳ ಕ್ಲಾಸ್ ಮೇಟ್ ಕೂಡಾ ಆಗಿದ್ದ. ಅವನಿಗೆ ಫೋನ್ ಮಾಡಿ ನೆಡದದ್ದನ್ನು ತಿಳಿಸಿದರು. ಕೌಶಿಕ್ ಅಲ್ಲಿನ ಡಾಕ್ಟರ್ ಒಬ್ಬರಿಗೆ ಫೋನ್ ಮಾಡಿ ಮತ್ತು ಬರುವ ಇಂಜೆಕ್ಷನ್ ಕೊಡಲು ಹೇಳಿ ತಕ್ಷಣ ಶ್ವೇತಾಳನ್ನು ಮಾನಸಾಕ್ಕೆ ಕರೆದುಕೊಂಡು ಬರಲು ಹೇಳಿದ.

* * *
ಚಕ್ರಪಾಣಿ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಬಗ್ಗೆ ಕೇಳದೆ ಏನೂ ಇಲ್ಲ, ಅದರ ಬಗ್ಗೆ ಬಂದಿದ್ದ ಅನ್ನಿಯನ್ ಸಿನಿಮಾವನ್ನ ವಿನಿ ಬಲವಂತ ಮಾಡಿ ತೋರಿಸಿದ್ದಳು, ಅದಲ್ಲದೆ ಸಿಡ್ನಿ ಶಲ್ಡನ್ ಎಂಬ ಲೇಖಕನ ‘ಟೆಲ್ ಮೆ ಯುವರ್ ಡ್ರೀಮ್ಸ್’ ಕಾದಂಬರಿಯೂ ಇದಕ್ಕೆ ಕುರಿತಾದದ್ದೇ.. ಆದರೆ? ‘ಆದರೆ ಇದೆಂತಾ ರೀತಿಯದ್ದು, ನಾನು ಇಂಥಾ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಬಗ್ಗೆ ಕೇಳೇ ಇಲ್ಲವಲ್ಲ? ಪ್ರಶ್ನೆಯಾದರು. ಸರ್ ಇದು ಡಿಸೋಸಿಯೇಟಿವ್ ಡಿಸಾರ್ಡಗಳ ರೀತಿಯಲ್ಲಿ ಒಂದು ಬಗೆ.. ವಿವರಿಸಲು ತೊಡಗಿದ ಕೌಶಿಕ್.. ಡಿಸೋಸಿಯೇಟಿವ್ ಡಿಸಾರ್ಡರ್ ಅಂದ್ರೆ ಇದರಲ್ಲಿ ಮೂರು ವಿಧ ಅಮ್ನೇಶ್ಯ ಫ್ಯೂಗ್ ಮತ್ತು ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್. ಯಾವುದೋ ಆಘಾತದಿಂದಲೋ, ಇನ್ನು ತಡಿಯಲಿಕ್ಕೆ ಆಗೋಲ್ಲ ಅನ್ನೋವಂಥ ಸ್ಟ್ರೆಸ್ ಆದಾಗ, ಈಗಿರೋ ಸ್ಥಿತಿಯನ್ನ ಭರಿಸಲು ಸಾಧ್ಯವಿಲ್ಲ ಅನ್ನೋವಂಥ ಸ್ಥಿತಿ ತಲುಪಿದಾಗ ಇರೋಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೆ ಮನಸ್ಸು, ಈ ಪ್ರಯತ್ನಗಳೇ ಅಮ್ನೇಶ್ಯ (ಅಂದರೆ ಮರೆವು, ಆಟೋ ಬಯಾಗ್ರಾಫಿಕಲ್ ಅಥವಾ ಸಿಟುಯೇಶನಲ್ ಇತ್ಯದಿ) ಫ್ಯೂ ಗ್,(ಇರೋ ಸ್ಥಿತಿಯಿಂದ ಇರೋ ಜಾಗದಿಂದ ಓಡಿಹೋಗಿಬಿಡುವುದು, ಮತ್ತೆ ಹೀಗೆ ಓಡಿ ಹೋದವರಿಗೆ ತಮ್ಮ ಜೀವನದ ಬಗ್ಗೆ ಪೂರ್ತಿ ಮರೆತು ಹೋಗಿ ಬಿಟ್ಟಿರುತ್ತದೆ) ಹಾಗೂ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಆಗಿ ಪರಿವರ್ತನೆ ಗೊಳ್ಳುತ್ತದೆ. ಈಗ ಶ್ವೇತಾಳಿಗೆ ಆಗಿರುವುದೂ ಇದೇ. ಅಷ್ಟು ದಿನದಿಂದ ಗಂಡು ಹುಡುಕುತ್ತಿರುವ ನಿಮ್ಮ ಚಟುವಟಿಕೆಗಳು, ಅವರ ಸ್ನೇಹಿತೆಯರಿಗೆಲ್ಲಾ ಮಕ್ಕಳಾಗಿ ಮದುವೆಯಾಗಿದ್ದರೂ ತನಗೆ ಆಗದಿರುವುದು, ಇವೆಲ್ಲಾ ಅವಳ ಅನ್‌ಕಾನ್‌ಶಸ್ ಮೈಂಡಿನ ಮೇಲೆ ಸಾಕಷ್ಟು ಪರಿಣಾಮ ಬೀರಿವೆ, ಇಂಥಾ ಯಾವುದೋ ಸನ್ನಿವೇಶದಲ್ಲೇ ಅವಳಲ್ಲಿ ‘ಅವನು’ ಹುಟ್ಟಿಕೊಂಡಿದ್ದಾನೆ. ಆವನಿಗೊಂದು ಚಂದದ ಅವಳಿಗೆ ಇಷ್ಟವಾಗೋ ಹೆಸರಿದೆ, ಅವನ ಸ್ವಭಾವಗಳೆಲ್ಲವೂ ಖುಷಿಕೊಡುವಂಥದ್ದೇ ಯಾಕೆಂದರೆ ನನ್ನ ಹುಡುಗ ಹಿಂಗಿರಬೇಕು ಅನ್ನುತ್ತಿದ್ದ ಅವಳ ಒಳ ಮನಸ್ಸು, ‘ದಿ ಅನ್ ಕಾನ್‌ಶಸ್ ಮೈಂಡ್’ ಅವನನ್ನು ಸೃಷ್ಟಿಸಿದೆ, ಚಿರಾಗ್ ಅನ್ನುವ ಹುಡುಗ ಸೃಷ್ಟಿಯಾಗಿರೋದೇ ಹೀಗೆ. ಅವನು ನೋಡೋಕ್ಕೆ ಅವಳಿಗೆ ಇಷ್ಟವಾಗುವ ಆಕ್ಟರ್ ಥರ ಇದಾನೆ, ನೋಡಿದ ತಕ್ಷಣ ನನಗೂ ಅವನನ್ನು ಎಲ್ಲೋ ನೋಡಿದ್ದೇನೆ ಅನ್ನಿಸಿತು ಅವನು ಹಿಂದಿ ಸೀರಿಯಲ್ ಒಂದರಲ್ಲಿ ಆಕ್ಟ್ ಮಾಡುತ್ತಾನೆ. ಅವನ ಫೋಟೋವನ್ನ ತನಗೆ ತಾನೇ ಮೈಲ್ ಮಾಡಿಕೊಂಡಿದ್ದಾಳೆ ತನ್ನ ಹುಡುಗ ಹೀಗೇ ಇದಾನೆ ಅಂತ ನಿಮ್ಮ ಮಗಳು ಕಲ್ಪಿಸಿಕೊಂಡಿದ್ದಾಳೆ. ಅದನ್ನೇ ನಂಬಿದ್ದಾಳೆ. ಅಶ್ಟೇ ಕೇರ್ಫುಲ್ ಆಗಿ ನಿಮಗೂ ಅವಳಿಗೂ ಗೊತ್ತಾಗದಂತೆ ಅವನು ಇನ್ನೊಬ್ಬ ಹುಡುಗನೇ ಎಂಬಂತೆ ಸನ್ನಿವೇಶಗಳನ್ನ ಅವಳ ಒಳ ಮನಸ್ಸು ಸೃಷ್ಟಿಸಿದೆ, ಅವರಿಬ್ಬರೂ ಗಂಟೆಗಟ್ಟಲೆ ಮಾತಾಡಿಕೊಂಡಿದ್ದಾರೆ. ಅವನು ಇವಳಿಗೆ ಗಿಫ್ಟ್ ಕಳಿಸಿದ್ದಾನೆ. ಅವಳ ಪಾಲಿಗೆ ನಮ್ಮ ನಿಮ್ಮಶ್ಟೇ ಅವನೂ ಜೀವಂತ. ಈ ಎರೆಡು ಪರ್ಸನಾಲಿಟೀಸ್‌ಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಚನ್ನಾಗಿ ಗೊತ್ತು-’ ತಾನು ಹೇಳುತ್ತಿರುವುದು ಮುಂದೆ ಕೂತಿರುವವರಿಗೆ ಅರ್ಥವಾಗುತ್ತಿದೆಯೋ ಇಲ್ಲವೂ ಅನುಮಾನದಲ್ಲಿ ಮಾತು ನಿಲ್ಲಿಸಿದ ಕೌಶಿಕ್. ಒಬ್ಬಳು ಹುಡುಗಿಯಲ್ಲಿ ಹುಡುಗನ ಪರ್ಸನಾಲಿಟಿ ಹುಟ್ಟಿಕೊಳ್ಳೋಕ್ಕೆ ಹೇಗೆ ಸಾಧ್ಯ? ತಮ್ಮ ಪ್ರಶ್ನೆ ಮುಂದಿಟ್ಟರು ಚಕ್ರಪಾಣಿ. ಒಂದು ಹುಡುಗಿಯಲ್ಲಿ, ಇನ್ನೊಂದು ಹುಡುಗಿ ಹುಟ್ಟಿಕೊಳ್ಳೋದು, ಅಥವಾ ಐದು ವರ್ಶದ ಮಗುವಿನ ವ್ಯಕ್ತಿತ್ವ ಹುಟ್ಟಿಕೊಳ್ಳೋದು ಎಷ್ಟು ಸಹಜವೋ ಇದೂ ಅಷ್ಟೇ ಸಹಜ. ಹುಡುಗ ಹುಡುಗಿ ಅನ್ನೋ ಲಿಂಗ ವ್ಯತ್ಯಾಸವನ್ನಾಗಾಲಿ ದೊಡ್ಡವರು ಚಿಕ್ಕವರು ಎಂಬ ವಯಸ್ಸಿನ ವ್ಯತ್ಯಾಸವನ್ನಿಟ್ಟುಕೊಂಡಾಗಲೀ ನಮ್ಮ ಒಳ ಮನಸ್ಸು ಇನ್ನೊಂದು ವ್ಯಕ್ತಿತ್ವವನ್ನ ಸೃಷ್ಟಿಸೋಲ್ಲ. ತನ್ನನ್ನು ಕಾಡುತ್ತಿರುವ ಸಮಸ್ಯೆಗಳಿಗೆ, ಅದಕ್ಕೆ ಸರಿಹೋಗುವಂಥ ಅದನ್ನು ನಿವಾರಿಸುವಂಥ ವ್ಯಕ್ತಿತ್ವಗಳು ಹುಟ್ಟಿಕೊಳ್ಳುತ್ತವೆ. ಅಲ್ಲಿ ಒಬ್ಬ ಹುಡುಗ ಮಾತ್ರ ಇಲ್ಲ ಇನ್ನೊಂದು ಹುಡುಗಿಯೂ ಇದ್ದಾಳೆ, ಶ್ವೆತಾಳಿಗಿಂತ ಪವರ್‌ಫುಲ್ ಆದ ಪರ್ಸನಾಲಿಟಿ ಅವಳದು ಅವಳೇ ರಂಗರಾಯರನ್ನು ಆಗ ಕೊಲ್ಲಲು ಹೊರಟಿದ್ದು. ಇದಕ್ಕೆ ಡಿಫೆನ್ಸ್ ಮೆಕ್ಯಾನಿಸಮ್ ಅನ್ನುತ್ತಾರೆ. ಇವಳ ಒಳಗೆ ಇನ್ನೆಷ್ತು ಪರ್ಸನಾಲಿಟಿಗಾಳು ಅಡಗಿ ಕುಳಿತಿವೆಯೋ ಗೊತ್ತಿಲ್ಲಾ. ಅವನ್ನೆಲ್ಲಾ ಒಂದೊಂದಾಗಿ ಹೊರತೆಗೆಯಬೇಕು. ‘ಈಗ ಹುಟ್ಟಿಕೊಂಡಿರೋ ಇನ್ನೆರೆಡು ಪರ್ಸನಾಲಿಟಿಗಳೂ ನಿನ್ನವೇ. ಅದನ್ನು ನೀನೇ ಸೃಷ್ಟಿಸಿಕೊಂಡಿದ್ದೀಯ’ ಅಂತ ನಿಮ್ಮ ಮಗಳಿಗೆ ಅರ್ಥ ಮಾಡಿಸಬೇಕು, ಅವಳ ಸುತ್ತ ಇರುವ ಸ್ಟ್ರೆಸ್ ಕಮ್ಮಿ ಮಾಡಬೇಕು ಇದಕ್ಕೆಲ್ಲಾ ತುಂಬ ಸಮಯವಾಗಬಹುದು.. ಕೌಶಿಕ್ ಹೇಳುತ್ತಾ ಹೋದ, ಅವನು ಹೇಳಿದ್ದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದ ಚಕ್ರಪಾಣಿ, ರಂಗರಾಯರ ಮಧ್ಯೆ ಮೌನ ಹರಡಿತ್ತು.

ಆ ರೂಮಿನಿಂದ ಹೊರಬಂದ ಮೇಲೆ ರಂಗರಾಯರು ಏನನ್ನೋ ನಿಶ್ಚಯಿಸಿದವರಂತೆ ‘ನಾನಿದನ್ನ ಅವ್ಳಿಗೆ ಹೇಳ್ಬಾರ್ದು ಅನ್ಕೊಂಡಿದಿನಿ. ಅವ್ಳು ಈ ಸ್ಥಿತಿಲೇ ಖುಷಿಯಾಗಿದಾಳೆ ಹಾಗೇ ಭ್ರಮೇಲೇ ಇದ್ದು ಬಿಡ್ಲಿ’ ಅಂದರು. ಚಕ್ರಪಾಣಿಗೆ ಯಾಕೋ ತಮ್ಮ ಮಗಳು ಹೆಂಡತಿಯ ನೆನಪಾಯಿತು ಅವರು ಸುಖವಾಗಿದ್ದಾರ? ಅವರಿಗೇನು ಚಿಂತೆಯಿಲ್ಲವಾ? ಮಗ ನಿಜಕ್ಕೂ ನೆಮ್ಮದಿಯಾಗಿದ್ದಾನ ಅವನನ್ನೇನು ಕಾಡುತ್ತಿಲ್ಲವಾ? ನಿಜಕ್ಕೂ ನಾನು ಬದುಕಿದ ರೀತಿ ನನ್ನಲ್ಲಿ ಉಲ್ಲಾಸ ತುಂಬಿದೆಯಾ? ಅಥವಾ ಎಲ್ಲವೂ ಸರಿ ಇದೆ ಎನ್ನುವ ನಂಬಿಕೆಯಲ್ಲಿ ಇಷ್ಟು ದಿನ ಬದುಕಿಬಿಟ್ಟೆನಾ? ಎಲ್ಲಾರೂ ಇಂಥಾ ಒಂದಲ್ಲಾ ಒಂದು ಭ್ರಮೆಯಲ್ಲಿ ಬದುಕುತ್ತಿದ್ದೇವೇನೋ ಎಂದು ಯೋಚಿಸುತ್ತಾ ಏನನ್ನೂ ಉತ್ತರಿಸದೆ ಸುಮ್ಮನಾದರು. ನಾನು ನಿಜವಾಗಲೂ ನಾನೇನಾ ಅನ್ನುವ ಪ್ರಶ್ನೆ ಅವರ ಮೈಮನಸ್ಸುಗಳನ್ನು ತಾಗಿಯೂ ತಾಗದಂತೆ ಸವರಿಕೊಂಡು ಹೋಯಿತು.