Wednesday, September 17, 2008
ನಾನೂ ಬರೆಯುತ್ತೇನೆಂಬ ಸ್ವಗತ
ನಾನೂ ಬರೆಯುತ್ತೇನೆ
ಕೇಳಿಕೊಂಡೆ ನನಗೆ ನಾನೇ..
ಏನನ್ನ?
ಕವನವನ್ನೇ ಕಾವ್ಯವನ್ನೇ
ಇಲ್ಲ ಇಲ್ಲ
ಗುರು ಲಘು ಮಾತ್ರಾಗಣ ಏನನ್ನೂ ನಾ ಅರಿಯೆ
ಚಂದಸ್ಸು-ಈ ಪದ ಕೇಳಿರುವೆ ಅದೇನೆಂದರಿಯೆ
ಗೇಯತೆ, ಶ್ಲೇಷೆ,ಉಪಮೆ ಇದ್ಯಾವುದರ ತಿಳಿವಿಲ್ಲ ಎನಗೆ
ನ ಬರೆಯಲಾರೆ ಕಾವ್ಯ ಕವನವನ್ನ
ಮತ್ತೆನು ಕಥೆಯೋ
ಇಲ್ಲ ಇಲ್ಲ
ನ ಬರೆಯುವುದರಲ್ಲಿ ಯಾವ ಕಥೆಯೂ ಇಲ್ಲ
ಓದಿದ್ದೇನೆ ಮಾಸ್ತಿಯವರ ಕಥೆಗಳನ್ನ
ಕಾರಂತ ಅನಂತಮೂರ್ತಿ
ಲಿಯೋ ಟಾಲ್ಸ್ ಟಾಯ್ ಅವರ ಕಥೆಗಳನ್ನ
ನ ಬರೆಯುವುದರಲ್ಲಿ ಅಂಥ ವಸ್ತುಗಳೇ ಇಲ್ಲ
ಮತ್ತೇನು ಬರೆಯುವೆ?
ಪ್ರಭಂದವನ್ನೆ? ಇಲ್ಲ ಇಲ್ಲ
ಮೂರ್ತಿರಾಯರ ಪ್ರಭಂಧ ಒದಿದ್ದೇನೆ
ಪಾವೆಂ ಅಂತೆಯೇ ಅನೇಕರದ್ದು
ಯಾವುದೋ ವಸ್ತು ಹಿಡಿದು
ಏನೆಲ್ಲಾ ಬರೆಯುತ್ತಾರವರು
ವಿಷಯ ಜ್ನಾನವಿಲ್ಲ ಎನಗೆ
ನಾ ಬರೆಯುವುದು ಪ್ರಬಂಧವಲ್ಲ.
ನನಗೆ ನಾನೇ ಮತ್ತೆ ಕೇಳಿಕೊಂಡೆ,
ನಾ ಬರೆಯುವುದೇನು?
ಅಡ್ಡಲಾಗಿ ಬರೆಯುತ್ತಾ ಹೋಗುವ
ಗದ್ಯವ ಕತ್ತರಿಸಿ ಕತ್ತರಿಸಿ
ಉದ್ದಕೆ ಬರೆಯುತ್ತೇನೆ
ನವ್ಯ, ನವೋದಯ ಇದ್ಯಾವುದರ
ಅರ್ಥ ಅರಿಯದ ನಾನು
ನನ್ನದು ನವೀನ ಎಂದುಕೊಳ್ಳುತ್ತೇನೆ
ಪ್ರಥಮ ಶ್ರೋತ್ರುವಾದ ನನ್ನಾಕೆ
'ಇನ್ನೆಷ್ಟು ದಿನ ಈ ಶಿಕ್ಷೆ' ಎಂದು
ಕೇಳಿದಾಗ ಸಿಟ್ಟು ಸಿಡಿಮಿಡಿಗೊಂಡು
ಬರೆದಿದ್ದ ಪರಪರನೆ ಹರಿದು ಎಸೆಯುತ್ತೇನೆ
ನಾನು ಬರೆದ್ದಿದ್ದೇನೆಂಬುದಕ್ಕೆ
ಸಾಕ್ಷಿಯೇ ಉಳಿಸುವುದಿಲ್ಲ ನಾನು.
Thursday, September 11, 2008
ಸಾವಿನ ಹುಟ್ಟು......
ಮೊದಲನೆ ಹುಟ್ಟುಹಬ್ಬವಂತೆ. ಚಿರಾಯುವಾಗು ಎಂದು ಹಿರಿಯರು ಹರಸಿದರು. ಮುಖವಾಡಕ್ಕಲ್ಲ ತನಗೇ ಹರಸಿದ್ದು ಎಂಬ ಅರಿವಿನಿಂದ ಸಾವು ಹಿರಿಹಿರಿ ಹಿಗ್ಗಿತು.
ತೊದಲು ನುಡಿಯಿತು, ಮಾತಾಯಿತು, ಸಾವು ಬೆಳೆಯಿತು. ಅಕ್ಷರ ಕಲಿಯಿತು, ಲೋಕವ ತಿಳಿದುಕೊಂಡೆ ಎಂದು ಮುಖವಾಡ ಬೀಗಿತು. ಅದೇ ಅಹಂಕಾರದಲ್ಲಿ ಏನೇನೋ ಮಾಡಿತು. ಕೂಡಿತು, ಕಳೆಯಿತು, ಅಳೆಯಿತು, ಸುರಿಯಿತು.
ಮುಖವಾಡಕ್ಕೆ ಮತ್ತೊಂದು ಮುಖವಾಡವನ್ನು ತಂದು ಕಟ್ಟಿದರು. ಮುಖವಾಡಗಳೆರಡೂ ಸೇರಿ ಮತ್ತೊಂದಷ್ಟು ಮುಖವಾಡಗಳಿಗೆ ಜನ್ಮ ನೀಡಿದವು.ಒಮ್ಮೆ ಗಹಗಹಿಸಿ ನಕ್ಕು ಮತ್ತೊಮ್ಮೆ ಬಿಕ್ಕಳಿಸಿ ಅತ್ತಿತು. ಒಮ್ಮೆ ರೋಷಾವೇಷದಿಂದ ಯಾರಮೇಲೋ ಏರಿಹೋಗಿ ಇನ್ನೊಮ್ಮೆ ಅಟ್ಟಿಸಿಕೊಂಡು ಬಂದವರಿಂದ ದೂರ ಓಡಿ ಬಳಲಿತು ಬಲಿಯಿತು.
ಮುಖವಾಡಕ್ಕೆ ತಾನು ಮುಖವಾಡವೆಂಬುತು ಮರತೇ ಹೋದಂತಿತ್ತು. ಮುಖವಾಡ ಕಳಚಿಕೊಂಡವರ ಕಂಡು ಮರುಗಿತು. ತಾನು ಶಾಶ್ವತವೆಂದುಕೊಂಡಿತು.
ಸಾವು ಹುಟ್ಟಿ ಬಹಳಷ್ಟು ವರ್ಷಗಳಾಯಿತು. ಯಾರಿಗೂ ಅದು ಮುಖವಾಡವೆಂದು ಗೊತ್ತಾಗಲೇ ಇಲ್ಲ. ಮುಖವಾಡವನ್ನೇ ನಿಜವೆಂದುಕೊಂಡು ಸುತ್ತ ಸಂಸಾರ ಹೂಡಿದರು, ಸುಖಿಸಿದರು. ತನ್ನ ಮುಖವಾಡದ ಪ್ರತಿಯೊಂದು ಕೃಯೆಗೂ ಎಲ್ಲರೂ ಅಷ್ಟು ಹರ್ಷಿಸುವುದು ನೋಡಿ ಸಾವಿಗೆ ಮುಖವಾಡದ ಮೇಲೆ ಹೊಟ್ಟೆಕಿಚ್ಚಾಯಿತು. ನಿಜವಾಗಿ ಇದೆಲ್ಲಾ ತನ್ನ ಹಕ್ಕು ಎಂದುಕೊಂಡಿತು. ಮುಖವಾಡವನ್ನು ಕಿತ್ತೊಗೆಯಿತು!
ಮುಖವಾಡವನ್ನು ಅದು ಕಿತ್ತೊಗೆದ ರಭಸಕ್ಕೆ, ಸುತ್ತಲಿನವರೆಲ್ಲಾ ಸ್ಥಬ್ಧರಾದರು. ಮೂಕರಾದರು.
ಮುಖವಾಡಕ್ಕೇ ಬೆಲೆಕೊಡುವ ಈ ಲೋಕವ ಕಂಡು ಸಾವು ಅಚ್ಚರಿಪಟ್ಟಿತು. ಮತ್ತೆಲ್ಲೊ ಮುಖವಾಡವನ್ನು ಧರಿಸಿ ಮತ್ತೆ ಹುಟ್ಟಿತು!!
Sunday, August 31, 2008
ನಿನ್ನ ಕುರಿತು
ಉಕ್ಕಿ ಹರಿಯಲು
ತನಗೆ ಮಾತ್ರ ಸಾಧ್ಯ
ಎಂದು ಅಹಂಕಾರ ಪಡುವ
ನನ್ನ ನಲ್ಲ
ಸದಾ ಭೊರ್ಗರೆಯುವ ನದಿಯನ್ನು
ಹೆಣ್ಣೆಂದು ಕರೆದು
ಪ್ರೀತಿಸಿದ
೨
ಅವನ ಹಾದಿ ಕಾಯುವಾಗ
ಒಂದೊಂದು ಕ್ಷಣವೂ ಒಂದು
ಯುಗದಂತೆ ಅಂದುಕೊಳ್ಳುತ್ತಿರುವಾಗಲೇ
ಕೆಲವೇ ಕ್ಷಣಗಳ
ಭೇಟಿಗಾಗಿ ಯುಗಗಟ್ಟಲೆ ಕಾದ
ಶಬರಿಯ ನೆನಪಾಗಿ
ನಾಚಿಕೆಯಿಂದ ತಲೆ ತಗ್ಗಿಸಿದೆ..
೩
ಶಬರಿಯ ಸಂಯಮವಿಲ್ಲ
ಅಹಲ್ಯೆಯ ಆಸೆಗಳಿಲ್ಲ
ನನಗೆ
ಅವನ ಹಾದಿ ಕಾಯುವ
ಸುಖ ಸುಕ್ಕುಗಟ್ಟುತ್ತಿದೆ
ಕಾದ ಹಾದಿಯಲ್ಲಿ ಮಿಂಚಿದ ಕನಸುಗಳು
ಮತ್ತೆ ಕರೆಯುತ್ತಿವೆ
ತಿರುಗಿ ಹೋಗಲಾರದ
ನನ್ನ ಅಸಹಾಯಕತೆಗೆ
ಪಾತಿವ್ರತ್ಯದ ಹೊದಿಕೆ
Wednesday, August 13, 2008
ಕುಂತಿಯ ನೆನೆಯುತ್ತಾ ಕುಂತು..
-1-ಹಾದು ಹೋದರು ಎನ್ನುವುದು ಶುದ್ಧ ಕಲ್ಪನೆ.
ಅವಳೂ.
ಹೋದದ್ದೇಕೆಂದು
ಕಾರಣವೆಂದು ಆಡಿಕೊಂಡರು.
Friday, July 18, 2008
ನಿನ್ನ ಚಾರ್ಲೀ ಸೆಂಟೂ ಅವನ ಪಿಜ್ಜಾ ಬರ್ಗರ್ರೂ
ನಿನ್ನ ಪತ್ರ ಓದಿದೆ. ಹುಡುಗ ಇಷ್ಟ ಆಯ್ತು ಬಹಳ ಗಂಭೀರವಾಗಿ, ಚೊಕ್ಕವಾಗಿ ನಿಂಗೇನನ್ನಿಸುತ್ತೋ ಅದನ್ನು ಹೇಳಿದ್ದೀಯ. ಈಗಿನ ಕನ್ನಡ ಸಾಹಿತ್ಯದ ಬಗ್ಗೆ ನೀನು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದೀಯ ಅಂತ ಗೊತ್ತಾದಾಗ ಸುಮ್ಮನೆ ಖುಷಿಯಾಯಿತು. It was witty and sarcastic.
ಮೊದಲು ನಾನು ನಿಂಗೆ ಕೊಟ್ಟ ಪುಸ್ತಕದ ಬಗ್ಗೆ ಮಾತಾಡೋಣ. ನಾನು ನಿಂಗೆ ಆ ಪುಸ್ತಕ ಕೊಡುವಾಗ ಹೇಳಿದ್ದು ‘ಚೆನ್ನಾಗಿದೆ ಓದು’ ಅಂತಲ್ಲ. ನಂಗೆ ಇಷ್ಟ ಆಯ್ತು ಓದು ಅಂತ. ಈಗ ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಅನ್ನೋದಿದೆಯಲ್ಲ it's a generalised comment. ಇಂಥ ಕಾಮೆಂಟುಗಳು ನನಗೆ ಅರ್ಥ ಆಗಲ್ಲ. ನನಗೆ ಗೊತ್ತಾಗೋದು “ನಂಗೆ ಇಷ್ಟ ಆಯ್ತು" ಅಥವ ‘ಇಷ್ಟ ಆಗ್ಲಿಲ್ಲ’ ಅನ್ನೋದು. ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಒಳ್ಳೆಯವನು ಅಥವ ಕೆಟ್ಟವನು ಅನ್ನೋದು ಎಷ್ಟೊಂದು ಸಾಪೇಕ್ಷವಾದದ್ದು ಅಲ್ಲವೆ? ಕೆಲವರಿಗೆ ಇಷ್ಟವಾದದ್ದು ಇನ್ನು ಕೆಲವರಿಗೆ ಇಷ್ಟವಾಗದೆ ಇರಬಹುದು. ಕೆಲವರಿಗೆ ಒಳ್ಳೆಯವನು ಅನಿಸಿದ್ದವನು ಇನ್ನೊಬ್ಬರಿಗೆ ಕೆಟ್ಟವನಾಗಿರಬಹುದು.
ವಿಷಯಕ್ಕೆ ಬರೋಣ. ನಾ ಕೊಟ್ಟ ಪುಸ್ತಕವಿದೆಯಲ್ಲ ಅದು ನಾನು ಹುಟ್ಟಿ ಬೆಳೆದ ಪರಿಸರಕ್ಕಿಂತ ಬಹಳ ಭಿನ್ನವಾದ ಬೇರೆಯದೇ ಆದ ಪರಿಸರದಲ್ಲಿ ನಡೆಯುತ್ತೆ. ಎಲ್ಲೆಲ್ಲೂ ನಡೆಯುವುದು ಅಂಥದೇ ಕಥೆಗಳು. ಅದನ್ನು ಹೇಳುವ ರೀತಿ, ಅದು ನಡೆಯುವ ಪರಿಸರ, ಅದು ನಡೆದ ಕಾಲಘಟ್ಟ ಪ್ರತಿಯೊಂದು ಕಾಲಘಟ್ಟದಲ್ಲೂ ಅಂಥ ಘಟನೆಗಳಿಗೆ ಅನುಭವಗಳಿಗೆ ಜನ ಹೇಗೆ ಸ್ಪಂದಿಸುತ್ತಿದ್ದರು ಎಂಬುದು ಮುಖ್ಯ ಆಗತ್ತೆ. ಅವರು ಬರೆದಿದ್ದು ಮೂವತ್ತು ವರ್ಷದ ಹಿಂದೆ ನಡೆದಿರಬಹುದಾದ ಕಥೆಯನ್ನು. ಅಲ್ಲಿ ಪರಿಸ್ಥಿತಿಗಳು ಆಗ ಹೇಗಿದ್ದವು ಎಂಬುದನ್ನು. ಅವರು ಎಷ್ಟು ಸಹಜವಾಗಿ ಬಿಂಬಿಸುತ್ತಾರೆಂದರೆ ಸುಮ್ಮನೆ ಇಷ್ಟ ಆಗುತ್ತಾ ಹೋಯಿತು. ಹೊಸದೇನಿದೆ ಅಂದೆಯಲ್ಲ ಹುಡುಗ, ಹೊಸತು ಪದವನ್ನು ಹೇಗೆ ಡಿಫೈನ್ ಮಾಡ್ತಿಯ ನೀನು? ನನಗೆ ಆ ಲೇಖಕರು ತೋರಿಸಿದ ಜಗತ್ತಿದೆಯಲ್ಲ ತುಂಬ ಹೊಸತದು.
ಆ ಕಾದಂಬರಿಯ ಮೂಲಕ ಅದೇ ಜಾಗದ ಬಗ್ಗೆ ಜ್ಞಾನಪೀಠಿಯೊಬ್ಬರು ಬರೆಯುತ್ತಿದ್ದಾಗ ಇದ್ದ ಪರಿಸರಕ್ಕೂ ಇವರು ಬರೆದು ಕೈಗಿತ್ತಾಗ ನಾನು ಕಂಡ ಪರಿಸರಕ್ಕೂ ಎಷ್ಟೊಂದು ವ್ಯತ್ಯಾಸವಾಗಿದೆ ಅನಿಸಿತು ಗೊತ್ತಾ? ನಾವು ಈಗ ಹೋಗಿ ನೋಡಿದರೆ ನಮಗೆ ಅಲ್ಲಿ ಇನ್ಯಾವುದೋ ಪರಿಸರ ಕಾಣಿಸೀತು. ಬದಲಾದ ಕಾಲಘಟ್ಟಗಳಲ್ಲಿ ಅಲ್ಲಿನ ಸಮಾಜ ಪರಿಸರ ಹೇಗಿದ್ದವು ಎಂಬುದು ಹೀಗೇ ದಾಖಲಾಗಬೇಕು. ಅಲ್ವಾ
ಅಂಕಣಕಾರರೊಬ್ಬರು ಅಡಿಗರು ಹೀಗಂದರು ಬೇಂದ್ರೆ ಹಾಗಂದರು ಟೆನಿಸನ್ ಹೀಗೆ ಹೇಳುತ್ತಾನೆ, ವರ್ಡ್ಸ್ ವರ್ಥ್ ಹಾಗನ್ನುತ್ತಾನೆ ಎಂದು ಹೇಳಬೇಕಾದರೆ ಅವರು ಎಷ್ಟು ಓದಿಕೊಂಡಿರಬೇಕು ಎಂಬ ಕಲ್ಪನೆ ಇರುತ್ತೆ ಅಲ್ಲವ ನಿನಗೆ. ಬಹಳಷ್ಟು ಜನಕ್ಕೆ ಅಷ್ಟು ಅಗಾಧವಾಗಿ ಓದಲು ಸಮಯವಿರುವುದಿಲ್ಲ ಅಥವ ಇರುವ ಸಾಹಿತ್ಯ ಸಾಗರದಲ್ಲಿ ಯಾವ ನದಿಯ ನೀರು ಕುಡಿಯಬೇಕೆಂದು ತಿಳಿದಿರುವುದಿಲ್ಲ. ಎಲ್ಲರೂ ಸಾಹಿತ್ಯದ ವಿದ್ಯಾರ್ಥಿಗಳಾಗಿರುವುದಿಲ್ಲ. ಓದಿದವರು, ಇಂಥವರು ಹೀಗೆ ಬರೆದಿದ್ದರು ಅದನ್ನು ಓದಿದ ನನಗೆ ಹೀಗನಿಸಿತು, ಬೇರೊಂದು ಭಾಷೆಯ ಲೇಖಕ ಇದೇ ಕಾಂಟೆಕ್ಟಿನಲ್ಲಿ ಇನ್ನೆಂಥದೋ ಬರೆದಿದ್ದಾನೆ ಎಂದು ಹೇಳಿ ಆ ಹಿರಿಯ ಜೀವಿಗಳು, ಲೇಖಕರು ಬರೆದಿದ್ದ ಕವನದ, ಲೇಖನದ ಅಥವ ಕಥೆಯ ಕೆಲವು ಸಾಲುಗಳನ್ನು ಕೋಟ್ ಮಾಡಿದರೆ, ನಿಜವಾಗಿ ಸಾಹಿತ್ಯದಲ್ಲಿ ಆಸಕ್ತಿ ಕಾಳಜಿ ಇರುವವರು ಅದನ್ನು ಹುಡುಕಿಯಾದರೂ ಓದೋಲ್ಲವೆ...? ಬೇಂದ್ರೆಯವರ “ಇಳಿದು ಬಾ ತಾಯೆ, ಇಳಿದು ?...." ಅಂಥ ಪ್ರಸಿದ್ಧ ಕವನವೂ ಗೊತ್ತಿಲ್ಲದ ಸಾಹಿತ್ಯಾಸಕ್ತರಿಗೆ ಇಂಥ ಅಂಕಣಕಾರರಿಂದ ಸಹಾಯವಾಗೋಲ್ಲವಾ ಹೇಳು?
ಇನ್ನು? “ಡಿಫರೆಂಟಾಗಿ ಬರೆಯುವವರು..." ಎಂಬುದರ ಬಗ್ಗೆ ನಾನು ಏನೇ ಹೇಳಿದರೂ ಅದು “ಶುದ್ಧ ಸಮರ್ಥನೆ" ಅನಿಸಿಕೊಳ್ಳುತ್ತೆ ಅಲ್ಲವೆ?
ನಿನ್ನ ಚಾರ್ಲಿ ಸೆಂಟಿನ ಉದಾಹರಣೆಗೂ ಪಿಜ್ಜಾ ಬರ್ಗರ್ ಉದಾಹರಣೆಗೂ ಏನು ವ್ಯತ್ಯಾಸ ಹುಡುಗ ? ಈಗಲೂ ಮಲ್ಲಿಗೆ ಹೂವು ಮುಡಿಯುತ್ತಾರೆ. ಬದಲಾದ ಕಾಲಕ್ಕೆ ತಕ್ಕಂತೆ ನಿನ್ನ ಚಾರ್ಲಿ ಸೆಂಟಿನಲ್ಲಿ ಜಾಸ್ಮಿನ್ ಪರಿಮಳ ಇರುತ್ತದೆ.
Five point someoneನ ಲೇಖನವನ್ನೇ ತೆಗೆದುಕೋ. ಅವನು ಬೆಳೆದ ವಾತಾವರಣವನ್ನು ಅವನ ಕಾಲೇಜ್ ದಿನಗಳನ್ನು ವರ್ಣಿಸುವ five point someone ಇಷ್ಟವಾಗುತ್ತದೆ. one night at call centre ಮನಸ್ಸಿಗೆ ತಟ್ಟುವುದೇ ಇಲ್ಲ.... ಬದಲಾದ ರಾಮಾಯಣಗಳು ಬಹಳಷ್ಟಿವೆ... ನಿನಗೆ ಯಾವುದು ತುಂಬ ಇಷ್ಟವಾಯಿತು?
ಉಹುಂ ನೀನು ಹೇಳಿದ್ದು ತಪ್ಪು ಅನ್ನುತ್ತಿಲ್ಲ ನಾನು. ನಿಜ ಕನ್ನಡದಲ್ಲಿ ಫ್ಯಾಂಟಸಿ, ರೋಮಾನ್ಸ್, ಫಿಕ್ಷನ್ ,ಪರಮಾಣು, ನಕ್ಷತ್ರ ,ಕೃಷಿ ಎಲ್ಲದರ ಬಗ್ಗೆ ಬರೆಯಬೇಕು. ಆದರೆ ಈಗ ಇರುವ, ಬರುತ್ತಿರುವ ಸಾಹಿತ್ಯವನ್ನು ಬರೀ ಕೋಸಂಬರಿ ಎಂದರೆ ಅರ್ಥಹೀನ. ನಿನಗೆ ಇಷ್ಟ ಆಗುತ್ತಿಲ್ಲ ಅಂತ ಹೇಳು ಬೇಕಾದರೆ. ನಿನಗೆ ಇಷ್ಟವಾದದ್ದನ್ನು ಆರಿಸಿಕೊಂಡು ಓದು. ಎಲ್ಲರೂ ತೇಜಸ್ವಿ, ಕಾರಂತ, ಬಿ.ಜಿ.ಎಲ್. ಸ್ವಾಮಿ ಆಗಲು ಸಾಧ್ಯವಿಲ್ಲ. ಅಂಥ ಪ್ರತಿಭಾವಂತರಿದ್ದರೆ ಏನೇ ತಿಪ್ಪರಲಾಗ ಹಾಕಿದರೂ ಅವರ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. survival of the fittest!
ಹೆಚ್ಚು ಹೇಳೋಲ್ಲ ನಾನು. ಇದಕ್ಕೆ ನೀನು ಉತ್ತರ ಬರೆಯಬಹುದು. ನಾನು ಉತ್ತರಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ವಾದ ಮಾಡಿಕೊಂಡು ಹೋದರೆ ನನಗೆ ಅಂಥ ವಾದಗಳಲ್ಲಿ ನಂಬಿಕೆ ಇಲ್ಲ. ಭೈರಪ್ಪನವರ ವಂಶವೃಕ್ಷದಲ್ಲಿ ಶ್ರೀನಿವಾಸ ಶ್ರೋತ್ರಿಗಳು ಹೇಳುವಂತೆ “ಮೂಲ ದೃಷ್ಟಿಯಲ್ಲೇ ಭಿನ್ನತೆ ಇರುವಾಗ ಚರ್ಚೆಯಿಂದ ಯಾವ ಪ್ರಯೋಜನವೂ ಇಲ್ಲ".
Thursday, July 10, 2008
ನಿನಗಿದು ಅರ್ಥವಾಗುವುದಿಲ್ಲ ಎಂದು ಗೊತ್ತಿದ್ದೂ..
ಕೇಳುವುದಕ್ಕೆ ನಿನಗೆ ಆಸಕ್ತಿಯಿಲ್ಲ. ಬಿಡುವಿಲ್ಲ. ಏಕಾಂತದಲ್ಲಿ ನಂಬಿಕೆಯಿಲ್ಲ. ನಾಯಕನಾದವನಿಗೆ ಜೊತೆಗೆ ಸಮೂಹ ಇರಬೇಕು. ಸಾಮೂಹಿಕವಾದದ್ದು ಪ್ರೀತಿ ಆಗಿರುವುದಿಲ್ಲ.
ವರ್ಷಗಳ ಕಾಲ ಹೋರಾಡಿ, ಹಲವಾರು ಅನುಭವಗಳನ್ನು ಮೈಗೂಡಿಸಿಕೊಂಡ ಮನಸ್ಸು ಜಡ್ಡುಗಟ್ಟಿರುತ್ತದೆ. ಅದಕ್ಕೇ ನಿನಗೆ ನನ್ನ ದೇಹದ ಸುಕ್ಕು ಮಾತ್ರ ಕಾಣಿಸಿತು.
ನನ್ನ ಯೌವನದಲ್ಲಿ ನೀನೆಲ್ಲಿದ್ದೆ?
-ಪೆನಲೋಪೆ