Saturday, September 12, 2009

ಒಬ್ಬರು ಇಷ್ಟವಾಗುವ ಹಾಗೆ ಮತ್ತೊಬ್ಬರು ಇಷ್ಟವಾಗುತ್ತಾರಾ?

ಅವನಿಗೆ ಹೇಳ್ಬಿಡ್ಲಾ? ಪ್ರಶ್ನೆಯಾದಳು ಮಗಳು. ಹದಿನೆಂಟು ವರ್ಷದ ಬೆರಗು ಕಣ್ಗಳ ತುಂಬಾ ಅದೊಂದೇ ಪ್ರಶ್ನೆ. ಅವಳು ಹೇಳುವ ಮೊದಲೇ ಇಂಥದ್ದೇನೋ ಆಗಿದೆ ಅನ್ನಿಸಿತ್ತು. ಅವಳ ಚಡಪಡಿಕೆ, ಖುಶಿ, ತನ್ನೊಳಗೆಲ್ಲಾ ಕನಸುಗಳನ್ನು ತುಂಬಿಕೊಂಡ ಮನಸ್ಸು, ಕೊನೆಗೆ ಅವಳಾಗೇ ಬಂದು ಹೇಳಿದಳು. ಅವನ್ಯಾಕೆ ಇಷ್ಟ ಅಂತ ಕೇಳಿಕೊಂಡಿದ್ದೀಯ ಕೇಳಿದೆ. ಹೂಂ ಅಂದಳು ಅನುಮಾನಿಸುತ್ತಾ. ಹೇಳು ಅಂದರೆ ‘ಉಹು ಹೀಗೆ ಅಂತ ಹೇಳಲು ಗೊತ್ತಾಗುತ್ತಿಲ್ಲ’ ಅಂತ ಒಪ್ಪಿಕೊಂಡಳು. ಇಷ್ಟಪಡಲು ನಿಜವಾಗಲೂ ಅಂಥದ್ದೊಂದು ಕಾರಣವೇನು ಬೇಕಿಲ್ಲ. ಅಂಥ ಕಾರಣಗಳು ಕಳೆದುಹೋದರೂ ಪ್ರೀತಿಸಲು ಸಾಧ್ಯವಾ ಅನ್ನುವುದು ಮುಖ್ಯ. ನಿನ್ನದು ಪ್ರೀತಿಯಾ? ಆಕರ್ಷಣೆಯಾ? ಅಂತೆಲ್ಲಾ ಕೇಳುವುದಿಲ್ಲ. ಮಗಳು ಮೋಸ ಹೋಗಿಬಿಟ್ಟರೆ ಅಂತ ತಾಯಿ ಮನಸ್ಸು ಭಯ ಪಡುವುದು ಸಹಜ. ನಿನ್ನ ತಡೆಯೋಲ್ಲ. ಯಾರಿಗೂ ಉದಾಹರಣೆಗಳನ್ನು ಕೊಟ್ಟು ಹೆದರಿಸಿದರೆ ಉಪಯೋಗವಿಲ್ಲ ಅನ್ನುವುದು ಗೊತ್ತು. ಎಲ್ಲರಿಗೂ ಅವರವರದೇ ಅನುಭವಗಳಾಗಬೇಕು, ಅನುಭವಗಳಿಂದ ಕಲಿಯಬೇಕು. ಏನೂ ಆಗೋಲ್ಲ ನಿನಗೆ. ಜಾಗ್ರತೆಯಿಂದ ಇರು. ಏನಾದರೂ ಆದರೂ ಅಮ್ಮ ಯಾವತ್ತೂ ಇರುತ್ತಾಳೆ. ಅವನಿಗೆ ಹೇಳುತ್ತೀಯೋ ಬಿಡುತ್ತೀಯೋ ಅದು ನಿನಗೆ ಬಿಟ್ಟಿದ್ದು. ನೀನು ಹೇಳದೇ ಅದು ಅವನಿಗೆ ಅರ್ಥವಾದರೆ ಇನ್ನೂ ಖುಷಿ. ಹೇಳಿದರೆ ಮನೆಗೆ ಕರೆದುಕೊಂಡು ಬಾ ಅವನಿಗಿಷ್ಟವಾದ ತಿಂಡಿ ಮಾಡಿಕೊಡ್ತೀನಿ ಎಂದು ಹೇಳಿ ಎದ್ದು ಬಂದೆ.
* * *
‘ನನ್ನ ಕಷ್ಟಗಳನ್ನ ಹೇಳಿಕೊಳ್ಳೋದರಲ್ಲಿ ನನಗೆ ನಂಬಿಕೆ ಇಲ್ಲ. ಹೇಳಿಕೊಳ್ಳೋದರಲ್ಲಿ ಮಾತ್ರವಲ್ಲ ಕೇಳೋದರಲ್ಲೂ. ಅವರ ಮಗ ಪಿ. ಯು. ಸಿ. ಯಲ್ಲಿ ಫೇಲಾದನಂತೆ, ಇವಳನ್ನು ನೋಡಿಕೊಂಡು ಹೋದ ಗಂಡು ಮೊದಲು ಒಪ್ಪಿದವನು ಆಮೇಲೆ ಬೇಡ ಅಂದ. ಉಹು ನನಗೆ ಅದರಲ್ಲೆಲ್ಲಾ ಆಸಕ್ತಿಯಿಲ್ಲ. ಹಾಗೆ ಕೇಳಿಸಿಕೊಳ್ಳುತ್ತಾ ಇದ್ದರೆ ಹೇಳಿಕೊಳ್ಳುವುದು ಅವರಿಗೆ ಒಂದು ತರಹದ ಪ್ಲೆಶರ್ ಕೊಡುತ್ತದೆ. ಅಂಥಾ ವಿಷಯಗಳಿಂದ ಏನೂ ಉಪಯೋಗವಿಲ್ಲ ಮಾತ್ರವಲ್ಲ ಆ ತರಹದಲ್ಲದಿದ್ದರೆ ಮತ್ತೊಂದು ತರಹದ ಕಷ್ಟ ಎಲ್ಲರಿಗೂ ಇದ್ದೇ ಇರುತ್ತೆ. ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿಗಳ ಕಷ್ಟವೇ ಅದು. ಅವರಿಗೆ ಯಾರ ಕಷ್ಟಗಳನ್ನು ಕೇಳಲಾಗುವುದಿಲ್ಲ ಮಾತ್ರವಲ್ಲ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದೂ ಅವರಿಗೆ ಹಿಂಸೆ. ನನ್ನ ಕಷ್ಟಗಳನ್ನು ಹೇಳಿಕೊಂಡರೆ ನಾನು ಎಲ್ಲರ ಮುಂದೆ ಪೆಥೆಟಿಕ್ ಆಗಿಬಿಡುತ್ತೇನೇನೋ ಎಂದನಿಸುತ್ತೆ. ತೇಜಸ್ವಿ ಕಾದಂಬರಿಗಳನ್ನೋ ಟಾಲ್ಸಟಾಯ್ ಕಥೆಗಳನ್ನೋ ತೆಗೆದುಕೋ ಯಾವುದೇ ಪರ್ಸನಲ್ ವಿಷಯದ ಬಗ್ಗೆ ಅಲ್ಲಿನ ಎರೆಡು ಪಾತ್ರಗಳು ತುಂಬಾ ಇಂಟಿಮೇಟಾಗಿ ಮಾತಾಡಿಕೊಳ್ಳುವುದಿಲ್ಲ. ತೇಜಸ್ವಿಯ ಜುಗಾರಿ ಕ್ರಾಸಿನಲ್ಲಿಯಾಗಲೀ, ಚಿದಂಬರ ರಹಸ್ಯದಲ್ಲಾಗಲೀ ಯಾವ ಪಾತ್ರವೂ ತಮ್ಮ ಅತ್ಯಂತ ಇಂಟಿಮೇಟ್ ತುಂಬಾ ಪರ್ಸನಲ್ ಅನ್ನುವಂತಹ ಸಂಗತಿಗಳನ್ನ ಗೆಳೆಯನೊಡನೆ ಹೇಳಿಕೊಂಡು ಗೋಳಿಡುವುದಿಲ್ಲ. ಆದರೆ ಕುವೆಂಪು ಹಾಗೆ ಬರೆಯುತ್ತಿದ್ದರು, ಡಿಕನ್ಸ್ ಬರೆಯುವ ಅಂಥ ಕ್ಷಣಗಳನ್ನ ಆಸಕ್ತಿಯಿಂದ ಕಣ್ಣು ಒದ್ದೆ ಮಾಡಿಕೊಂಡು ಓದುತ್ತೇವೆ. ನಾನು ಆ ಲೇಖಕರ ಅಥವ ಅವರ ಪಾತ್ರಗಳ ಥರ ಎಂದು ಹೇಳುತ್ತಿಲ್ಲ. ನಿನಗೆ ಆ ತರಹದ ಎ಼ಕ್ಸಾಂಪಲ್ಸ್ ಕೊಟ್ಟರೆ ಅರ್ಥವಾಗುತ್ತೆ ಅನ್ನೋದಕ್ಕೆ ಹೇಳಿದೆ’ ಅಂದ ಅವನು. ಹೌದು ಇಷ್ಟು ದಿನವಾದರೂ ಒಮ್ಮೆಯೂ ತನ್ನ ಕಷ್ಟಗಳ ಬಗ್ಗೆ ಹೇಳಿಕೊಂಡಿಲ್ಲ ಅವನು. ಬರೀ ಕಷ್ಟಗಳ ಬಗ್ಗೆ ಅಲ್ಲ ಯಾವುದರ ಬಗ್ಗೆಯೂ ಏನನ್ನೂ ಅಷ್ಟು ಹತ್ತಿರವಾಗಿ ನನಗೊಬ್ಬಳಿಗೇ ಹೇಳುತ್ತಿರುವಂತೆ ಹೇಳಿಕೊಂಡಿಲ್ಲ. ನಾನು ಕೇಳಿ ಕೇಳಿ ಹಿಂಸೆ ಮಾಡುವುದರಿಂದ ಏನನ್ನಾದರೂ ಹೇಳುತ್ತಾನೇನೋ, ಹಾಗೆ ಹೇಳುವಾಗಲೂ ತನಗೊದಗಿರುವ ಕಷ್ಟ ಕಷ್ಟವೇ ಅಲ್ಲವೆನ್ನುವ ಥರ ಲೇವಡಿ ಮಾಡುತ್ತಾ ಹೇಳಿಕೊಳ್ಳುತ್ತಾನೆ. ‘ಇನ್ನು ಮುಂದಾದರೂ, ನನ್ನ ಬಳಿಯಾದರೂ ಹೇಳಿಕೊಳ್ಳೋ’ ಎನ್ನೋಣ ಎಂದುಕೊಂಡೆ. ನನ್ನ ಬಳಿಯಾದರೂ ಅಂದರೇನು? ‘ನನ್ನ ಬಳಿಯಾದರೂ ಹೇಳಿಕೊಳ್ಳೋ’ ಅನ್ನುವ ವಾಕ್ಯದಲ್ಲಿ ನಾನು ಅವನ ಜೀವನದಲ್ಲಿ ಪ್ರಾಮುಖ್ಯತೆಯನ್ನ ಪಡಿಯಬೇಕೆಂಬ ದೂರದ ಆಸೆಯೇನಾದರೂ ಇದೆಯೇ ಎಂದು ನನ್ನ ಮೇಲೆ ನನಗೇ ಅನುಮಾನವಾಗಿ ಹೇಳಲಾರದೇ ಹೋದೆ.

ಏನೂ ಸರಿ ಇಲ್ಲದಿದ್ದಾಗಲೂ ಎಲ್ಲವೂ ಸರಿಯಿರುವಂತೆ ನಕ್ಕು ಆ ಕ್ಷಣಕ್ಕೆ ಅದೊಂದು ಕಷ್ಟವೇ ಅಲ್ಲವೆಂಬಂತೆ ನಟಿಸುವ ಕಲೆ ಅವನಿಗೆ ಸಿದ್ದಿಸಿಬಿಟ್ಟಿದೆ ಅನ್ನಿಸಿತು. ಅಥವಾ ತನ್ನ ಸ್ವಂತ ಭಾವನೆಗಳನ್ನು ವಿಮರ್ಷಿಸಲು ಎಡೆ ಕೊಡದೆ ಎಲ್ಲದನ್ನೂ ನಿರಾಕರಿಸುತ್ತಾ ಏನೂ ಆಗಿಲ್ಲವೆಂಬಂತೆ ನಟಿಸುವುದರಿಂದ ತನ್ನೊಳಗೆ, ತನ್ನ ಎದೆಯಲ್ಲಿ ನಡೆಯುತ್ತಿರುವ ಕೋಲಾಹಲಗಳನ್ನು ಮರೆಯಬಹುದು ಅನ್ನೋ ಭ್ರಮೆಯೋ? ಹಾಗಿರುವುದರಿಂದಲೇ ಯಾರೂ ಅವನ ಬಳಿ ಏನನ್ನೂ ಹೇಳಿಕೊಳ್ಳಲು ಬರುವುದಿಲ್ಲ ಹೇಳಿಕೊಳ್ಳಹೋದವರಿಗೆ ಭಾವನೆಗಳನ್ನ ಅರ್ಥಮಾಡಿಕೊಳ್ಳಲಾಗದ, ಭಾವನೆಗಳೇ ಇಲ್ಲದ ‘ಕೋಲ್ಡ್ ಮ್ಯಾನ್’ ಥರ ಕಾಣುತ್ತಾನಾ? ಆದರೆ ಅವನು ಹಾಗಲ್ಲ ಎಂದು ನನಗೆ ಗೊತ್ತು.

“ನನಗೆ ಗೊತ್ತು” ಅನ್ನುವುದು ಅಹಂಕಾರ, ನನ್ನನ್ನೇ ನಾನು, ಅವನನ್ನು ಬೇರೆಯವರಿಗಿಂತ ಚನ್ನಾಗಿ ಅರ್ಥ ಮಾಡಿಕೊಂಡಿರೋಳು ಎಂದು ಹೇಳಿಕೊಳ್ಳುವುದರ ಇನ್ನೊಂದು ರೂಪ. ಆದರೆ ಇಂಥ ಅಹಂಕಾರಕ್ಕೆ ಅರ್ಥವಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮಗೆ ತೀರ ಇಷ್ಟವಾದವರನ್ನ ಹೀಗೇ ಅರ್ಥ ಮಾಡಿಕೊಂಡಿರುತ್ತಾರಲ್ಲವ? ಅಂಥವರಲ್ಲಿ ನಾನೂ ಒಬ್ಬಳು. ಅದರಲ್ಲಿ ವಿಶೇಷವಾದರೂ ಏನು? ಆದರೆ ನಾನೇಕೆ ಅವನಿಗಾಗಿ ಇಷ್ಟೊಂದು ಹಾತೊರೆಯುತ್ತೇನೆ? ಹಂಬಲಿಸುತ್ತೇನೆ? ನನಗೇಕೆ ಅವನ ಬಗ್ಗೆ ಧಾವಂತವಾಗುತ್ತಿದೆ? ನಾನವನನ್ನು ಪ್ರೀತಿಸುತ್ತಿದ್ದೇನಾ? ಅವನಿಗೆ ನನ್ನ ಪ್ರೀತಿಸಲು ಸಾಧ್ಯವಾ? ಅವನು ಯಾರನ್ನಾದರೂ ಯಾವತ್ತಾದರೂ ಪ್ರೀತಿಸುತ್ತಾನ? ಪ್ರೀತಿಸಿದ್ದಾನ? ಪ್ರೀತಿ ಹೀಗೆ ಏಕಾಎಕಿ ಜಾಗೃತವಾಗಿಬಿಡುತ್ತದ? ಅವನಿಗೆ ಹೇಳಿಬಿಡಲಾ? ಇಷ್ಟಕ್ಕೂ ಅದು ಹೇಳಿಕೊಳ್ಳುವುದಾ? ಅರ್ಥಮಾಡಿಕೊಳ್ಳುವುದಲ್ಲವ? ಅವನು ಯಾವತ್ತಾದರೂ ಅರ್ಥ ಮಾಡಿಕೊಳ್ಳುತ್ತಾನ? ನನಗ್ಯಾಕೆ ಹೀಗೆ ಸಂಕಟವಾಗುತ್ತಿದೆ? ಅಳು ಬರುತ್ತಿದೆ? ನಾನು ಹೇಳಿಕೊಳ್ಳುವುದಿಲ್ಲ. ಪ್ರೀತಿಗೆ ಬದಲು ಪ್ರೀತಿ ಸಿಗಬೇಕಾಗಿಲ್ಲ.

ಈ ದಿನಗಳಲ್ಲಿ ಅನುಭವಿಸಿದಷ್ಟು ಸಿಟ್ಟು, ಆತಂಕ, ಅನಿಶ್ಚಿತತೆ, ಅನುಮಾನ, ನಾನು ಅವನಿಗೆ ಬೇಡವಾಗಿರುವೆನೆಂದೆನಿಸುವ ಭಾವ. ಥು.. ಯಾಕಷ್ಟು ಗೋಳು ಹೊಯ್ದುಕೊಂಡೆ? ನಿಜಕ್ಕೂ ಅಡಿಕ್ಟಾಗೋಗಿದೀನಿ. ಯಾಕ್ ಹಾಗೆ ಆಡಿದೆ? ಬೇಕಿತ್ತಾ ನನಗೆ? ನನಗವನು ಯಾವತ್ತೂ ಸಿಗೋದಿಲ್ಲ ಅಂತ ಗೊತ್ತಲ್ಲವ? ಸಿಗೋದು ಅಂದರೇನು ಎಲ್ಲಾ ಸಮಯವೂ ನನ್ನ ಜೊತೆಗೇ ಇರುವುದು, ನಾನು ಕಣ್ಣು ಬಿಟ್ಟಾಗಲೆಲ್ಲಾ ನಾನವನನ್ನು ನೋಡುವಂತಾಗುವುದು, ಯಾರ ಹೆದರಿಕೆ ಭಯಗಳಿಲ್ಲದೆ ನನ್ನ ಉಸಿರನ್ನು ಅವನ ಉಸಿರಾಗಿಸುವಂತಾಗುವುದಾ? ನಾನು ಕೂಗಿದಾಗಲೆಲ್ಲ ಬರುವನೆನ್ನ ಹುಡುಗ.. ಅಂತಿದ್ದರೆ ಅವನು ನನ್ನವನಾ? ಪ್ರೀತಿ ಅನ್ನುವುದು ‘ಹೀಗೇ’ ಅಂತ ಅದಕ್ಕೊಂದು ಭಾಷ್ಯ ಕೊಡುವುದು ಎಷ್ಟು ಕಷ್ಟ? ಹೀಗೇ ಅಂತ ವಿಶ್ಲೇಶಿಸಿ ಹೇಳಬೇಕಾದದ್ದಾದರೂ ಯಾತಕ್ಕೆ? ನನಗೆ ಜೀವನ ಪೂರ್ತಿ ‘ಪ್ರೀತಿ’ ಇಡಿಯಾಗಿ ಸಿಕ್ಕುವುದಿಲ್ಲವಾ? ಹುಚ್ಚು...

ಧಸಕ್ ಎಂದು ಎದ್ದು ಕೂತೆ. ಯಾರೋ ಹೊರಗೆಳೆದುಕೊಂಡು ಬಂದಂತೆ. ಇಷ್ಟು ವಿವರವಾಗಿ ಇಪ್ಪತ್ನಾಲ್ಕು ವರ್ಷದ ಹಿಂದೆ ನೆಡೆದ ಘಟನೆ ಯಾಕೆ ನೆನಪಾಗಬೇಕು. ಅದೆಲ್ಲಾ ಅನುಭವಗಳಿಂದ ಮತ್ತೆ ಹಾದು ಹೋದ ಹಾಗೆ? ಮಗಳು ಅವನಿಗೆ ಹೇಳಿಬಿಡುತ್ತಾಳ? ಯಾಕೋ ಮಲಗಿಯೇ ಇರೋಣ ಅನ್ನಿಸಿತು. ಓದಲು ತೆರೆದ ಪುಸ್ತಕದ ಒಂದು ಸಾಲೂ ಓದಲಾಗುತ್ತಿಲ್ಲ.


ಮದುವೆಯಾಗುತ್ತೀಯ ಅಂದ ಪ್ರೀತಿಯ ಮಾತೇ ಇಲ್ಲ. ಹಿಂಗೆಲ್ಲಾ ಕೇಳುತ್ತಾರ ಆಶ್ಚರ್ಯವಾಯಿತು. ಇಲ್ಲ ಎಂದು ಹೇಳುವುದಕ್ಕೂ ಹುಂ.. ಎಂದು ಹೇಳುವುದಕ್ಕೂ ಎರಡಕ್ಕೂ ಕಾರಣಗಳಿರಲಿಲ್ಲ. ಅಮ್ಮನನ್ನು ಕೇಳು ಅಂದೆ, ನಕ್ಕ. ಕಷ್ಟಗಳನ್ನೇನು ಕೊಡಲಿಲ್ಲ ಹುಡುಗ, ಸುಖ ಪಟ್ಟೆ ಅನ್ನಲಾ? ಸುಖ ಅಂದರೇನು? ಅದನ್ನು ಅರ್ಥೈಸುವುದಾದರೂ ಹೇಗೆ? ಹೊಟ್ಟೆ, ಬಟ್ಟೆ, ಲಗ್ಜುರಿಗಳಿಗೆ ಚಿಂತೆಯಿಲ್ಲದೆ ನೆಮ್ಮದಿಯಾಗಿರುವುದೇ ಸುಖವಾ? ಬರೀ ಅಷ್ಟಿದ್ದರೆ ನೆಮ್ಮದಿ ಬಂದು ಬಿಡುತ್ತಾ? ಹೋಗಲಿ ಅದೆಲ್ಲಿಂದಾದರೂ ಬರುವಂಥದಾ? ನಾನೇ ಕಂಡುಕೊಳ್ಳಬೇಕದದ್ದಲ್ಲವಾ? ಎಲ್ಲಾ ಇದ್ದರೂ ಏನೋ ಇಲ್ಲದಂತೆ ನನ್ನನ್ನು ಕಾಡುತ್ತಿದ್ದುದು ಕಾಡುತ್ತಿರುವುದಾದರೂ ಯಾವುದು? ಇಷ್ಟು ದಿನಗಳಾದರೂ ಮದುವೆಯಾದವನೊಂದಿಗೆ ಹಾಗಿರಲಾಗಲೇ ಇಲ್ಲವಲ್ಲ. ಇವನೊಡನೆ ಯಾವುದೇ ಭಿಡೆಗಳಿಲ್ಲದೆ ಬದುಕಲು ಬರಲೇ ಇಲ್ಲ. ಮೊದಲು ‘ಮುದ್ದಾಗಿದ್ದಾಳೆ’ ಎಂದು ನನ್ನ ಇಷ್ಟಪಟ್ಟು ಕಟ್ಟಿಕೊಂಡವನಿಗೆ, ಅವನ ವ್ಯಾವಹಾರಿಕ ಸ್ಪಂದನೆಗಳಿಗೆ ಸರಿಯಾಗಿ ಸ್ಪಂದಿಸದೆ, ನನ್ನ ಭಾವಲೋಕದಲ್ಲೇ, ಕಥೆ-ಕಾದಂಬರಿ ಆರ್ಟ್ ಸಿನೆಮಾಗಳಂಥಹ ಸಂಗತಿಗಳಲ್ಲಿ ಅವನ ಮಾತಿನಲ್ಲಿ ಹೇಳೋದಾದರೆ ‘ಕೆಲಸಕ್ಕೆ ಬಾರದ’ ವಿಷಯಗಳಲ್ಲೇ ಮುಳುಗಿ ಹೋಗಿರುತ್ತಿದ್ದ ನನ್ನನ್ನು ಕಂಡು ಮೊದ್ದು-ಮೊದ್ದು ಅನ್ನಿಸಿ, ತಪ್ಪು ಮಾಡಿದೆ ಅನ್ನಿಸಿರಬೇಕು. ಆಮೇಲಾಮೇಲೆ ದೈಹಿಕ ಅಗತ್ಯತೆಗಳು ಕಡಿಮೆಯಾಗುತ್ತಾ ಹೋದ ಹಾಗೆ ದೂರವಾಗುತ್ತಾ ಹೋದೆವು. ‘ಬೇರೆಯಾವುದಾದರೂ ಸಂಭಂದದಲ್ಲಿ ತೊಡಗುತ್ತಾನ?’ ಎಂದು ಆಸಕ್ತಿಯಿಂದ ಕಾದೆ. ಹಾಗವನು ಮಾಡಿದ್ದರೆ, ಅವನಿಗೆ ‘ನಿನ್ನ ಇನ್ನೊಂದು ಸಂಭಂದದ ಬಗ್ಗೆ ನನಗೆ ಗೊತ್ತು ಆದರೆ ನಾನು ಅದಕ್ಕೆ ಅಡ್ಡಿಯಾಗುವುದಿಲ್ಲ, ಅದಕ್ಕೂ ನನಗೂ ಸಂಭಂಧವಿಲ್ಲ, ಬೇಕಾದರೆ, ನಿನಗೆ ಸಹಾಯವಾಗುವುದಾದರೆ, ನಿನ್ನಿಂದ ದೂರ ಸರಿಯುತ್ತೇನೆ.’ ಎಂದು ಹೇಳಿ ಅವನ ಮುಂದೆ ಉದಾತ್ತವಾಗುವ ಕನಸು ಕಂಡಿದ್ದೆ. ಕೆಲವರಿಗಾದರೂ ತಮಗೆ ಯಾರಾದರೂ ಹತ್ತಿರದವರು ಮೋಸ ಮಾಡಲಿ ಎಂದು ಕಾಯ್ದು (ಅದಕ್ಕೆ ಮೋಸ ಅನ್ನಬೇಕ?) ಮೋಸ ಹೋಗುತ್ತಿದ್ದೇವೆಂದು ಗೊತ್ತಾದಾಗ ದೊಡ್ದ ರಂಪಾಟ ಮಾಡದೆ ದೊಡ್ಡ ಮಾತಿನಲ್ಲಿ ಹೇಳೋದಾದರೆ ಕ್ಷಮಿಸಿ, ಎಲ್ಲರಿಂದ ಸಿಂಪತಿಯನ್ನ ಪಡೆಯಬೇಕೆಂಬ ಸುಪ್ತ ಆಸೆಯಿರುತ್ತದೇನೋ? ನನ್ನ ದೊಡ್ಡವಳಾಗಲು ಅವನು ಬಿಡಲಿಲ್ಲ.

ಕಥೆಯಾಗಿದ್ದರೆ ಓದಿದ ಜನ ಕ್ಲೀಷೆ ಎನ್ನುತ್ತಿದ್ದರೇನೋ.. ಹಾಗೆನ್ನುವಂತೆ ಎಷ್ಟೋ ವರ್ಷಗಳ ಮೇಲೆ ಎದುರು ಸಿಕ್ಕ, ಹುಡುಗಿಯಂತೆ ತಲೆ ತಗ್ಗಿಸಿದ. ಮನೆಗೆ ಬರಲಾ ಮಾತಾಡಬೇಕು ಅಂದ. ಮನಸಿನಲ್ಲಿ ನೆಲೆಯಾದವನು ಮನೆಗೆ ಬರಲಾ ಎಂದರೆ ಬೇಡವೆನ್ನಲಾಗಲಿಲ್ಲ.. ನಾ ಕೊಟ್ಟ ಕಾಫಿಯನ್ನ ತೊಟ್ಟು ತೊಟ್ಟಾಗಿ ಹೀರುತ್ತಿದ್ದವನನ್ನು ಸರಿಯಾಗಿ ಗಮನಿಸಿದೆ.. ಕಬ್ಬಿಣದಂತಿದ್ದ ತೋಳುಗಳು, ಆಗ ಅದರಲ್ಲಿ ಕರಗಿಹೋಗಬೇಕೆನಿಸುತ್ತಿತ್ತು, ಇನ್ನೂ ಒಂದಷ್ಟು ಕೊಬ್ಬನ್ನು ಸೇರಿಸಿ ಪುಷ್ಟಿಯಾಗಿದ್ದವು. ನನಗೆ ನಿನ್ನ ಮನಸ್ಸು ಅರ್ಥ ಆಗುತ್ತಿತ್ತು, ನನ್ನ ಮನಸ್ಸೂ ಅದೇ ಆಗಿತ್ತು. ಆದರೆ ನಿನ್ನಂಥ ಹುಡುಗಿ ನನ್ನ ಜೊತೆ ಕಷ್ಟ ಪಡಬಾರದು ಎಂದು ನಿರ್ಧರಿಸಿದ್ದೆ. ಅಮ್ಮನನ್ನು ನೋಡಿದ್ದೆನಲ್ಲ, ಅಮ್ಮನಂಥವಳಿಗೆ ಅಪ್ಪನಿಗಿಂತ ಚನ್ನಾಗಿ ನೋಡಿಕೊಳ್ಳುವವರು ಸುಖದಲ್ಲಿ ಸಾಕುವವರು, ಅವಳನ್ನು ಕಷ್ಟಕ್ಕೆ ನೂಕದವರು ಸಿಗಬೇಕಿತ್ತು ಅನ್ನಿಸುತ್ತಿತ್ತು. ನಾವೇನಾದರೂ ಮದುವೆಯಾಗಿದ್ದರೆ ನನ್ನ ಮಗನಿಗೂ ಹಾಗೇ ಅನ್ನಿಸುತ್ತಿತ್ತು. ಹಾಗಾಗುವುದು ನನಗೆ ಬೇಕಿರಲಿಲ್ಲ. ಮದುವೆಯಾಗಿದ್ದರೆ ನಿನ್ನ ಕಣ್ಣಲ್ಲಿ ಈಗ ಕಾಣುವ ಪ್ರೀತಿ ಕಾಣುತ್ತಿರಲಿಲ್ಲ ಅಂದ. ಬೇರೆ ದಾರಿಯಲ್ಲಿ ಹೋಗಲು ನಿರ್ಧರಿಸಿ ಇನ್ನೆಲ್ಲೋ ಸೇರಿದ ಮೇಲೆ, ನಾವು ತುಳಿಯದ ದಾರಿಯಲ್ಲಿ ಮುಳ್ಳೇ ಇತ್ತೆಂದು ಅಂದುಕೊಳ್ಳುವುದಕ್ಕೆ ಏನನ್ನುತ್ತಾರೆ? (ಬುದ್ದಿವಂತಿಕೆ?) ಕೇಳೋಣವೆಂದುಕೊಂಡೆ, ವ್ಯರ್ಥ ಅನ್ನಿಸಿತು, ಸುಮ್ಮನಾದೆ. ಅದ್ಯಾಕೋ ಎಷ್ಟೋ ವರ್ಷಗಳಿಂದ ಹಿಡಿದಿಟ್ಟಿದ್ದನೇನೋ ಎನ್ನುವಂತೆ ನಿರುಮ್ಮಳವಾಗಿ, ಎದುರು ಕೂತ ಅವನಿಗೂ ನಿಚ್ಛಳವಾಗಿ ತಿಳಿಯುವಂತೆ ನಿಟ್ಟುಸಿರಿಟ್ಟೆ. ನನ್ನ ಇನ್ಯಾವುದೂ ಕಾಡಲು ಸಾಧ್ಯವಿಲ್ಲ ಅನ್ನಿಸಿತು. ಯಾಕೋ ಮಗಳು ನೆನಪಾದಳು. ಅಷ್ಟು ದಿನಗಳಿಂದ ‘ಇವತ್ತು ಹೇಳುತ್ತೇನೆ, ನಾಳೆ ಹೇಳುತ್ತೇನೆ’ ಅನ್ನುತ್ತಿದ್ದವಳು ಇವತ್ತು ಏನಾದರಾಗಲಿ ಹೇಳಿಯೇ ಬಿಡ್ತಿನಿ ಅಮ್ಮಾ ಅಂದಿದ್ದಳು. ಅವನು ಒಪ್ಪಿಕೊಂಡಿರುತ್ತಾನಾ? ಪ್ರಶ್ನೆಯಾಯಿತು ಮನಸ್ಸು. ಅವನು ಕಾಫಿ ಕಪ್ಪನ್ನು ಸದ್ದು ಮಾಡುತ್ತಾ ಟೇಬಲ್ಲಿನ ಮೇಲೆ ಇಟ್ಟ. ಅವನ ಮಾತುಗಳಿಗೆ ನಾನು ಉತ್ತರವನ್ನೇ ಕೊಡದೆ ಎಲ್ಲೋ ಕಳೆದು ಹೋಗಿದ್ದೆ. ನಾನೇನಾದರೂ ಅಂದಿದ್ದರೆ ಮಾತು ಬೆಳೆಯುತ್ತಿತ್ತು. ಮಾತುಗಳು ಬೆಳೆದರೆ ಏನಾಗುತ್ತದೆಂದು ಗೊತ್ತಿತ್ತು. ನನ್ನ ಗಂಡನನ್ನು ಸುಮ್ಮನೆ ಉದಾತ್ತನನ್ನಾಗಿಸುವುದು ನನಗೆ ಬೇಕಿರಲಿಲ್ಲ. ವಾದಗಳಿಂದ ಏನೂ ಪ್ರಯೋಜನವಿಲ್ಲ ವಾದ ಮಾಡುವವರು ಇಬ್ಬರೂ ಮಾತಾಡುತ್ತಾ ಹೋಗುತ್ತಾರಷ್ಟೇ ನಮ್ಮ ಅನಿಸಿಕೆ ನಂಬಿಕೆಗಳು ಯಾವರೀತಿಯಾದರೂ ಎದುರಿನವರ ಭಾವಕ್ಕೆ ತಟ್ಟಬೇಕಷ್ಟೇ. ಅದು ಮಾತಿನಿಂದಾಗುವಂಥದಲ್ಲ. ಅದೂ ಯಾವುದೋ ವಿಷಯದಲ್ಲಿ ಎದುರಿನವರು ನಮಗಿಂತಾ ಸಂಪೂರ್ಣ ಭಿನ್ನವಾದ ಅಭಿಪ್ರಾಯ ಹೊಂದಿದ್ದರೆ ಎಷ್ಟೇ ವಾದ ಮಾಡಿದರೂ ಆಗುವುದು ಪದಗಳ ವ್ಯರ್ಥ ವೆಚ್ಚ. ಹೊರಟು ನಿಂತವನು ಮನೆಗೆ ಬಾ ಅಂದ. ಸುಮ್ಮನೆ ನಕ್ಕೆ. ಅವನಿಗೆ ನಾನು ಹೋಗುವುದಿಲ್ಲವೆಂದು ಗೊತ್ತು.

ಮಗಳು ಮನೆಗೆ ಬಂದಳು ಖುಶಿಯಾಗಿದ್ದಳು. ‘ನಿನ್ನ ಹುಡುಗನಿಗೇನು ಇಷ್ಟ? ಯಾವತ್ತು ಮನೆಗೆ ಬರುತ್ತಾನೆ?’ ಕೇಳಿದೆ. ಇಲ್ಲಮ್ಮ ಅವನಿಗೆ ಈಗಾಗಲೇ ಗರ್ಲ್ ಫ್ರೆಂಡ್ ಇದಾಳಂತೆ ಅಂದಳು. ಅತ್ತಿದ್ದಾಳ ಕಣ್ನನ್ನು ಹುಡುಕಿದೆ. ಅದಕ್ಕೆಲ್ಲಾ ಅಳೋದಿಲ್ಲಮ್ಮಾ.. ಇನ್ಯಾರಾದರೂ ಅವನಷ್ಟೇ ಇಷ್ಟವಾಗುವವನನ್ನು ಹುಡುಕಿಕೊಳ್ಳುತ್ತೇನೆ ಅಂದಳು. ಒಬ್ಬರು ಇಷ್ಟವಾಗುವ ಹಾಗೆ ಮತ್ತೊಬ್ಬರು ಇಷ್ಟವಾಗುತ್ತಾರ? ಪ್ರಶ್ನೆ ನನ್ನಲ್ಲಿಯೇ ಉಳಿಯಿತು.

Saturday, July 18, 2009

ಸಾಹಿತ್ಯ ಯಾಕೆ ಬೇಕು ಎಂದು ಹೇಳಲು ಯತ್ನಿಸುತ್ತಾ...

‘ಸಾಹಿತ್ಯ ಯಾಕೆ ಬೇಕು?’ ಅನ್ನೋ ಸಾಲು ನೋಡುತ್ತಲೇ ಈ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲವಲ್ಲ ಅಂತ ನನ್ನ ಬಗ್ಗೆ ನನಗೇ ಆಶ್ಚರ್ಯವಾಯಿತು. ಸ್ಕೂಲಿಗೆ ಹೋಗುತ್ತಿದ್ದ ವಯಸ್ಸಿನಿಂದಲೂ ಸ್ಕೂಲಿಗೆ ಯಾಕೆ ಹೋಗಬೇಕು ಅಂತ ಗೊತ್ತಿತ್ತು. ಯಾಕೆ ಓದಬೇಕು ಅಂತ ಗೊತ್ತಿತ್ತು. ಅಪ್ಪ ‘ಡಾಕ್ಟರಾಗಬೇಕು ನೀನು, ಚನ್ನಾಗಿ ಓದು’ ಅನ್ನುತ್ತಿದ್ದರು. ಇವತ್ತು ಸ್ಕೂಲಿಗೆ ಹೋಗುವುದು ನಾಳೆ ಡಾಕ್ಟ್ರಾಗುವುದಕ್ಕೆ ಅಂದುಕೊಂಡಿದ್ದೆ. ಅಮ್ಮನಿಗೆ ಮನೆಕೆಲಸದಲ್ಲಿ, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದರೆ, ಈಗಲೇ ಎಲ್ಲಾ ಕಲಿತುಬಿಡು ಮುಂದೆ ನಿನಗೆ ಕಷ್ಟವಾಗುವುದಿಲ್ಲ ಅನ್ನುತ್ತಿದ್ದಳು. ಸ್ನಾನ ಮಾಡುವುದು ಕ್ಲೀನಾಗಿರುವುದಕ್ಕೆ, ಕ್ರೀಮು, ಪೌಡ್ರು ಹಚ್ಚಿಕೊಳ್ಳುವುದು ಚನ್ನಾಗಿ ಕಾಣೋದಕ್ಕೆ, ವಾಕಿಂಗು ಸೈಕ್ಲಿಂಗು ಆರೋಗ್ಯವಾಗಿರೋಕ್ಕೆ ಅಂತೆಲ್ಲಾ ಹೇಳಿಕೊಟ್ಟರು. ಆದರೆ ಮನೆಯಲ್ಲಿ ಅಷ್ಟೊಂದು ಪುಸ್ತಕಗಳನ್ನ ಅಪ್ಪ ಯಾಕೆ ಇಟ್ಟಿದ್ದರು ಅಂತ ಯಾವತ್ತೂ ಹೇಳಲಿಲ್ಲ. ಅಪ್ಪ ಅಂದ ತಕ್ಷಣ ನೆನಪಾಗುವುದು ಅವರು ಪುಸ್ತಕವೊಂದನ್ನು ಕಯ್ಯಲ್ಲಿ ಹಿಡಿದುಕೊಂಡು ಮಂಚದಮೇಲೆ ಆರಾಮಾಗಿ ಕೂತು ಓದುತ್ತಿದ್ದುದು. ಅಪ್ಪ ಯಾಕೆ ಹಾಗೆ ಓದುತ್ತಿದ್ದರು? ನಾನು ಹುಚ್ಚು ಹಿಡಿದವಳಂತೆ, ಪರೀಕ್ಷೆ ಹತ್ತಿರ ಬಂದರೂ ಬಯಾಲಜಿ, ಫ್ಹಿಸಿಕ್ಸ್ ಪುಸ್ತಕಗಳೊಳಗೆ ವೈದೇಹಿ, ಅನಂತಮೂರ್ತಿ, ಕುವೆಂಪು, ಬೈರಪ್ಪನವರ ಕಥೆ ಕಾದಂಬರಿಗಳನ್ನು ಕದ್ದಿಟ್ಟುಕೊಂಡು ಓದುತ್ತಿದ್ದುದು ಯಾಕೆ? ಲೈಬ್ರರಿಯಿಂದ ಎಲ್ಲರೂ ಸೈಕಾಲಜಿ ಪುಸ್ತಕವನ್ನೋ ಜರ್ನಲಿಸಂ ಪುಸ್ತಕವನ್ನೋ ತೆಗೆದು ಓದಿದರೆ ನಾನ್ಯಾಕೆ ಲಂಕೇಷರ ನಾಟಕಗಳನ್ನು, ಚಾರ್ಲ್ಸ್ ಡಿಕನ್ಸಿನ, ಟಾಲ್ಸ್‌ಟಾಯ್‌ನ ಕಾದಂಬರಿಗಳನ್ನು ಆರಿಸಿಕೊಂಡು ಓದುತ್ತೇನೆ? ಹೀಗೆ ನಾನ್ಯಾವತ್ತೂ ಕೇಳಿಕೊಂಡಿರಲಿಲ್ಲ.

ಆದ್ಯತೆಗಳು ಬದಲಾಗಿವೆ ಹೌದು, ಆದ್ಯತೆಗೆಳು ಬದಲಾಗಿರುವುದು ಈಗ ಮಾತ್ರವಾ? ಪ್ರತಿಯೊಂದು ತಲೆಮಾರಿನ ಆದ್ಯತೆಯೂ ತನ್ನ ಹಿಂದಿನ ತೆಲೆಮಾರಿನ ಆದ್ಯತೆಗಿಂತ ಭಿನ್ನವಾಗಿರುತ್ತದೆ. ಹಾಗಂತ ಸಾಹಿತ್ಯಕ್ಕೆ ಅದರಿಂದ ಹೊಡೆತ ಬಿದ್ದಿದೆಯಾ? ಬೆಂಗಳೂರಿನ ಜನ ಟ್ರಾಫಿಕ್ಕಿನಲ್ಲೇ ದಿನದ ಅರ್ಧ ಕಳೆದುಕೊಳ್ಳುತ್ತಾರೆ, ನನ್ನ ಕೆಲವು ಸ್ನೇಹಿತರಿಗೆ ಏನನ್ನದರೂ ಓದುವುದಕ್ಕಿಂತ ಇಂಟರ್ನೆಟ್ಟಲ್ಲಿ ಚಾಟ್ ಮಾಡುವುದು, ಸ್ನೇಹಿತರ ಜೊತೆ ಸುತ್ತಾಡುವುದು, ಬೀಚಿಗೆ ಹೋಗೋದು, ಸಿನಿಮಾಗಳಿಗೆ ಹೋಗೋದು ಇಷ್ಟ ಆಗುತ್ತೆ. ಅದು ಅವರವರ ಇಷ್ಟ, ನನಗೆ ಓದುವುದು ಹೇಗೆ ಪ್ರೀತಿಯೋ ಹಾಗೆ ಅವರಿಗೆ ಇಂಟರ್ನೆಟ್ಟು ಪ್ರೀತಿ. ನಾನು ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ಹಿಡಿದುಕೊಂಡು ಕೂತಿದ್ದರೆ ನನ್ನ ಸ್ನೇಹಿತೆ ಎಮ್ ಟಿ.ವಿ ರೋಡೀಸ್‌ನಲ್ಲಿ ಯಾರು ಗೆಲ್ಲುತ್ತಾರೆ ಅಂತ ತಲೆಕೆಡಿಸಿಕೊಳ್ಳುತ್ತಾಳೆ. ಆಗ ಎಮ್ ಟಿ.ವಿ, ಇಂಟರ್ನೆಟ್ಟು, ಇಷ್ಟೊಂದು ಟ್ರಾಫಿಕ್ಕು ಇರಲಿಲ್ಲ ಆದರೂ ಎಷ್ಟೋ ಜನ ಏನನ್ನೂ ಓದುತ್ತಿರಲಿಲ್ಲ. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇರಲಿಲ್ಲ ಅಷ್ಟೆ. ಈಗಲೂ ಅದೇ ರೀತಿ ಸಾಹಿತ್ಯದಲ್ಲಿ ಆಸಕ್ತಿ ಇರುವವರು ಓದುತ್ತಾರೆ ಇಲ್ಲದವರು ತಮ್ಮ ಆಸಕ್ತಿಗಳೆಡೆಗೆ ಹೊರಳಿಕೊಳ್ಳುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಆ ವಿಶಯಕ್ಕೆ ಜನರು ಹೆಚ್ಚಿನ ಆದ್ಯತೆ ಕೊಟ್ಟರು, ಆಗ ಅಂಥ ಸಾಹಿತ್ಯ ಬಂತು. ಕೆಲವು ದಿನಗಳ ನಂತರ, ಪ್ರಕ್ರುತಿಗೆ ಆದ್ಯತೆ ಕೊಟ್ಟರು, ಮುಂದಿನವರು ಸಮಾನತೆ ಅಂದರು, ಸ್ತ್ರೀ ಶೋಶಿಸಲ್ಪಡುತ್ತಿದ್ದಾಳೆ ಅಂತ ಗೊತ್ತಾಯಿತು, ಹೀಗೆ ಜನರ ಗಮನ ಒಂದರಿಂದ ಇನ್ನೊಂದಕ್ಕೆ ಬದಲಾಗುತ್ತಾ ಹೋಯಿತು. ಪ್ರತೀ ಬಾರಿ ಹೀಗೆ ಆದಾಗಲೂ ಅದಕ್ಕೆ ಸಮಾನಾಂತರವಾಗಿ ಸಾಹಿತ್ಯವೂ ಬದಲಾಗಿದೆ. ಈಗಿನ ಆದ್ಯತೆಗಳಿಗೆ ತಕ್ಕಂತೆ, ರಿಯಲಿಸ್ಟಿಕ್ಕಾಗಿ, ಉತ್ಪ್ರೇಕ್ಷೆಗಳಿಲ್ಲದೆ, ಇಷ್ಟವಾಗುವಂತೆ, ಪೂ ಚಂ ತೆ ಬರೆದರಲ್ಲ. ವಸುದೇಂದ್ರ, ಜೋಗಿ, ವಿವೇಕ್ ಶಾನಭಾಗ ಬರೆದುದನ್ನು ಇಷ್ಟಪಟ್ಟು ಓದುತ್ತೇವಲ್ಲ. ಚೇತನ್ ಭಗತ್ ಕಾದಂಬರಿಗಳಲ್ಲಿ ಏನೂ ಇಲ್ಲ ಅನ್ನುವವರು ಕೂಡಾ ಅದನ್ನು ಓದುತ್ತಾರೆ, ಅರವಿಂದ್ ಅಡಿಗ ‘ಹೀಗೆಲ್ಲಾ ಭಾರತದ ಸ್ಥಿತಿ ಇದೆ’ ಅಂತ ಹೇಳಿ ನಮ್ಮನ್ನು ಆಶ್ಚರ್ಯ ಪಡಿಸುತ್ತಾನೆ. ಕೋಲ್‌ರಿಜ್‌ನ ‘ಕುಬ್ಲಾ ಖಾನ್’ ಆಶ್ಚರ್ಯ್ ಪಡಿಸುವಂತೆ ಈ ಥರ ಅದೆಲ್ಲೋ ಅದ್ಯಾವತ್ತೋ ನಡೆದಿರಬಹುದು ಅಂತ ಅಂದುಕೊಳ್ಳುವಂತೆ ‘ವೈಟ್ ಟೈಗರ್’ನಲ್ಲಿ ಅವನು ಹೇಳಿರುವ ಸ್ಥಿತಿ ಭಾರತದ ಕೆಲವು ಕಡೆಗಳಲ್ಲಾದರೂ ಇದೆ ಎಂದು ಅನಿಸುತ್ತದೆ.

‘ಸಾಹಿತ್ಯದಿಂದ ಹೊಟ್ಟೆ ತುಂಬುವುದಿಲ್ಲ’ ಅಂತ ನಾನು ಸಣ್ಣವಳಿದ್ದಾಗ ಹೇಳಿದ್ದರೆ, ಬೇಡ ಒಂದು ಐದಾರು ವರ್ಷದ ಹಿಂದೆ ಹೇಳಿದ್ದರೂ ಸಹ ನನಗೆ ಈ ಸಾಲಿನ ಅರ್ಥ ತಿಳಿಯುತ್ತಿರಲಿಲ್ಲ. ನಾನು ಅಷ್ಟು ಆಸೆಯಿಂದ ಕಾದಂಬರಿ, ಕಥೆಗಳು, ಸಿಕ್ಕ ಸಿಕ್ಕ ಮ್ಯಾಗ್ಜೈನುಗಳನ್ನ ಓದುತ್ತಿರುವಾಗ, ಮುಂದೆ ನಾನೇನಾದ್ರೂ ಬರೀತಿನಿ, ಅದರಿಂದ ದುಡ್ಡು ಬರುತ್ತೆ ಅಂತ ಗೊತ್ತಿರಲಿಲ್ಲ. ಸಾಹಿತ್ಯ ಯಾಕೆ ಬೇಕು ಅಂತ ಯೋಚಿಸುವಾಗ ಕಥೆಯೋ ಕಾದಂಬರಿಯೋ ಪ್ರಭಂದವೋ ಬರೆದರೆ ಅದರಿಂದ ದುಡ್ಡು ಬರುತ್ತೆ ಅದಕ್ಕೆ ಬರೆಯುತ್ತೀನಿ ಅಂತ ಯಾರಾದರೂ ಯೋಚಿಸುತ್ತಾರ? ಸಾಹಿತ್ಯ ಸ್ರಷ್ಠಿಯಾಗುವುದು ಇನ್ನು ಬರೆಯದೇ ಇರಲು ಸಾಧ್ಯವಿಲ್ಲ ಅನ್ನೋ ಒತ್ತಡದಿಂದಲ್ಲವ, ಅದರಮೇಲಿನ ಪ್ರೀತಿ ಆಸಕ್ತಿಯಿಂದಲ್ಲವ? ಹಾಗೆ ಬರೆದದ್ದು ಮಾತ್ರ ಗೆಲ್ಲುತ್ತದೆ ಅನ್ನುವುದು ನನ್ನ ನಂಬಿಕೆ. ‘ಎನಿಥಿಂಗ್ ರಿಟನ್ ವಿದೌಟ್ ಇಂಟ್ರೆಸ್ಟ್ ಇಸ್ ಇನ್ ಜನರಲ್ ರೆಡ್ ವಿದೌಟ್ ಪ್ಲೆಶರ್’ ಅಂತ ಎಲ್ಲೋ ಓದಿದ ನೆನಪು. ಅದಲ್ಲದೆ ‘ಸಾಹಿತ್ಯ’ ಎನ್ನುವುದು ಬರೀ ಬರೆಯುವುದಕ್ಕಲ್ಲ ಓದುವುದಕ್ಕೂ ಸಂಭಂದ ಪಟ್ಟಿದೆ, ಹಾಗೆ ಓದುವುದಕ್ಕೆ ಯಾರಾದರೂ ದುಡ್ಡುಕೊಡುತ್ತಾರ? ಉಳ್ಟಾ ನಾವೇ ದುಡ್ಡು ಕೊಟ್ಟು ಖರೀದಿಸಿ ಓದಬೇಕು. ಅದಲ್ಲದೇ ಸಾಮಾನ್ಯವಾಗಿ ಈಗಿನ ಯಾವ ಸಾಹಿತಿಯೂ ಸಾಹಿತ್ಯ ತನ್ನ ಹೊಟ್ಟೆ ಹೊರೆಯುತ್ತೆ ಅಂತ ನಂಬಿಕೊಂಡಿಲ್ಲ. ಪ್ರತಿಯೊಬ್ಬರೂ ಬೇರ್ಯಾವುದೋ ಕೆಲಸದಲ್ಲಿದ್ದುಕೊಂಡು ಸಾಹಿತ್ಯವನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಈಗಲೂ ಮತ್ತೆ ಸಾಹಿತ್ಯ ಯಾಕೆ ಬೇಕು ಅಂತ ಕೇಳಿಕೊಂಡಾಗ, ಸಾಹಿತ್ಯದಿಂದ ನಮ್ಮ ತಿಳುವಳಿಕೆ ಹೆಚ್ಚುತ್ತದೆ, ಎಷ್ಟೋ ವಿಷಯಗಳು ಗೊತ್ತಾಗುತ್ತದೆ, ಜನರನ್ನ ಅವರ ಮನಸ್ಸನ್ನ ಇನ್ನೂ ಚನ್ನಾಗಿ ಅರ್ಥ ಮಾಡಿಕೊಳ್ಳಬಹುದು, ರಸಾನುಭವಕ್ಕೆ, ಸಾಮಾಜಿಕ ಉನ್ನತಿಗೆ, ಹೀಗೇ ಯೋಚಿಸುತ್ತಾ ಏನೇನನ್ನೋ ಪಟ್ಟಿ ಮಾಡುತ್ತಾ ಹೋದರೂ, ಇಂಥಾ ಯಾವ ಕಾರಣಗಳು ಗೊತ್ತಿಲ್ಲದಿದ್ದಾಗಲೂ ಪ್ರೀತಿಯಿಂದ ಆಸೆಯಿಂದ ಓದುತ್ತಿದ್ದೆನಲ್ಲಾ ಅನ್ನುವುದು ಜ್ನಾಪಕವಗುತ್ತದೆ. ಬರೆಯದೆ ಇರಲು ಸಾಧ್ಯವಿಲ್ಲ ಅನ್ನಿಸಿದಾಗ ಬರೆದೆನಲ್ಲಾ ಅನ್ನುವುದು ಹೊಳೆಯುತ್ತದೆ. ಓದಿನ ಪ್ರೀತಿಗೆ, ಓದದೇ ಇರಲಾರದ ಕಾತರತೆಗೆ, ಬರೆಯದೇ ಇರಲಾರದಂತೆ ಹೊರಳಿಸುವ ಸಂಕಟಕ್ಕೆ ನನಗೆ ಸಾಹಿತ್ಯ ಬೇಕು.

Friday, May 15, 2009

ಸಂಜಯದೃಷ್ಟಿ

ಇದ್ದಕ್ಕಿದ್ದಹಾಗೆ ನಾನು ಧೃತರಾಷ್ಟ್ರ ಅನಿಸತೊಡಗಿತು ನನಗೆ. ಸಂಜಯ ನನ್ನ ಮುಂದೆ ನನಗೆ ಬೇಕಾದ ಕಣ್ಣುಗಳನ್ನು ತೆರೆದುಕೊಳ್ಳಲು ಸಿದ್ಧನಾಗಿ ಕೂತಿದ್ದ. ಹೀಗೆ ಅನ್ನಿಸಿದ ತಕ್ಷಣ ಟೀವಿ ಹಾಕಲು ಮನಸಾಗಲೇ ಇಲ್ಲ. ಮಗಳ ಬಳಿ ಹೋದೆ ಸಂಜಯನ ಹತ್ತಾರು ಕಣ್ಣುಗಳನ್ನು ತೆರೆದುಕೊಂಡು ಧೃತರಾಷ್ಟ್ರಳಾಗಿ ಮಗಳು ಬ್ರೌಸ್ ಮಾಡುತ್ತಾ ಕೂತಿದ್ದಳು. ಭಯವಾಯಿತು.
‘ಕಿಮಕುರ್ವತ ಸಂಜಯ?’ ಅಂತ ಕುರುಡ(ದೃಷ್ಟಿಹೀನ ಇನ್ನೂ ಒಳ್ಳೆಯ ಪದವಾ?) ಧೃತರಾಷ್ಟ್ರ ಅಂದಾಗಲೆಲ್ಲಾ ಸಂಜಯನು ಯಥಾವತ್ತಾಗಿ ರೋಬೋಟಿನ ಥರ ಯುದ್ದದ ಸ್ಥಿತಿಗತಿಗಳನ್ನು ವಿವರಿಸಿದ್ದನಾ? ಅಥವಾ ಒಂದೊಂದು ಪಕ್ಷವನ್ನು ಸಮರ್ಥಿಸುವ ಪತ್ರಿಕೆಯ ಥರ, ಟೀವಿ ಚಾನಲ್ಲಿನ ಥರ ತನ್ನೆಲ್ಲಾ ಪೂರ್ವಾಗ್ರಹಗಳು, ಅನುಮಾನ, ಆತಂಕ, ಅಭೀಪ್ಸೆ, ಸಮಯಸಾಧಕತನಗಳೊಡನೆ ನೋಡಿ ಹೇಳುತ್ತಿದ್ದನಾ? ಧೃತರಾಷ್ಟ್ರನ ಮಕ್ಕಳು ಸಾಯುತ್ತಾ ಬಂದಹಾಗೆಲ್ಲಾ ಹೇಳುವುದು ಎಷ್ಟು ಕಷ್ಟವಾಗಿರಬೇಕು? ಹಾಗೆ ನೋಡಿದರೆ ಮಹಾಭಾರತವನ್ನ ಯಾರ ಕಣ್ಣಿನಿಂದ ನೋಡಬೇಕು? ಹೊರಗಿನವನಾದ ಕೃಷ್ಣನ ಚಾಣಾಕ್ಷತನದಿಂದ? ಕೊನೆಗೂ ತಣಿಯದ ದ್ರೌಪದಿಯ ರೋಷದಿಂದ? ಯಾವಾಗಲೂ ಕಡೆಗಣಿಸಲ್ಪಟ್ಟ ದುರ್ಯೋಧನನ ಅತೃಪ್ತಿಯಿಂದ? ಅಥವಾ ಯಾವುದೋ ಪೂರ್ವ ಜನ್ಮದ ಶಾಪದಂತೆ ಯಾವ ಗಂಡಸಿನ ಪ್ರೀತಿಯನ್ನೂ ಅವಳದನ್ನಾಗಿಸಿಕೊಳ್ಳಾಗದ ಅತೃಪ್ತೆ ಕುಂತಿಯ ಕಣ್ಣಿನಿಂದಲೋ? ಇಲ್ಲಾ ನಲ್ಲಪಿಳ್ಳೈ? ರನ್ನ? ಪಂಪ? ಕುಮಾರವ್ಯಾಸ? ಯಾರಿಗಾದರೂ ನನಗೂ ಅದಕ್ಕೂ ಸಂಬಂಧವಿಲ್ಲ ಹಾಗೆ ಸುಮ್ಮನೆ ನೋಡ್ತಿದಿನಿ ಅಂತ ನೋಡೋದಕ್ಕೆ ಸಾಧ್ಯವಾ? ಯಾರಿಗೆ ಹಾಗೆ ಎಲ್ಲವನ್ನೂ ನಿರ್ವಿಕಾರವಾಗಿ ಯಾರ ಪಕ್ಷವನ್ನೂ ವಹಿಸದೆ, ಬಿಟ್ಟುಕೊಡದೆ, ವೈಭವೀಕರಿಸದೆ, ಹೀಗಳೆಯದೆ ಸುಮ್ಮನೆ ನೋಡಲು ಸಾಧ್ಯವಿದೆ?


ಹಿಂಗೆಲ್ಲಾ ಕೇಳಿಕೊಂಡಮೇಲೆ ಹಾಗೆ ನೋಡಬೇಕಾದದ್ದಾದರೂ ಏನಕ್ಕೆ ಪ್ರಶ್ನೆ ಮುಡುತ್ತೆ. ಅನುಮಾನವಾಗುತ್ತಿದೆ, ನಾನೇ ಎಲ್ಲವನ್ನೂ ನೋಡಬೇಕು ಅನ್ನಿಸುತ್ತಿದೆ.ಇಷ್ಟು ವರ್ಶವೂ ಬೇರೆಯವರ ಕಣ್ಣುಗಳಿಂದ ಲೋಕವನ್ನು ನೋಡುವುದೇ ಅಭ್ಯಾಸವಾಗಿಹೋಗಿದೆ. ಅಪ್ಪ ಅಮ್ಮ ಟೀಚರಿನಿಂದ ಮೊದಲುಗೊಂಡು ಪ್ರತಿಯೊಬ್ಬರೂ ಕಣ್ಣು ತೆರೆಯಲು ಬಿಡಲೇ ಇಲ್ಲ. ಮದುವೆಯಾದಮೇಲಂತೂ ಆ ಲೋಕವೆ ಬೇರೆ. ಅವನ ಕಣ್ಗಳಿಂದ ನೋಡಲು ಖುಶಿಯಾಗುತ್ತಿತ್ತು. ಅವನು ತನ್ನ ಕಣ್ಣುಗಳಿಂದ ತೋರಿಸಿದ್ದನ್ನು ನಾನೇ ನೋಡಿದಂತೆ ನನ್ನ ಸ್ನೇಹಿತೆಯರಿಗೆಲ್ಲಾ ಹೇಳುತ್ತಿದ್ದೆ. ಅವನಾದರೂ ತನ್ನ ಕಣ್ಣುಗಳಿಂದ ನೋಡುತ್ತಾನಾ ಅಥವಾ ಅವನಿಗೂ ಧೃತರಾಷ್ಟ್ರನ ಕುರುಡುಗಣ್ಣು, ಸಂಜಯನ ಸಹಾಯವೋ? ಹಾಗೆ ನೋಡಿದರೆ ಯಾರು ಸಂಜಯ ಯಾರು ಧೃತರಾಷ್ಟ್ರ? ಪ್ರತಿಯೊಬ್ಬ ಧೃತರಾಷ್ಟ್ರನಿಗೂ ಲಕ್ಷಾಂತರ ಸಂಜಯರು. ನಿಜವಾಗಲೂ ಎಲ್ಲದನ್ನೂ ನೋಡುವವರ್ಯಾರು? ನನಗೆ ಹಾಗೆ ಎಲ್ಲದನ್ನೂ ಮೇಲಿನಿಂದ ನೋಡಲು, ನಿರ್ಧರಿಸಲು ಸಾಧ್ಯವಾ? ಬೇರೆಯವರೆಲ್ಲರ ಕಣ್ಣುಗಳಿಂದ ನೋಡಿದುದರಿಂದ ದೃಷ್ಟಿ ಮಂಜಾಗಿದೆ ಕಣ್ಣುಗಳಿಗೆ ಪೊರೆ ಬಂದಿವೆ. ಸತ್ಯ ಯಾವುದು ಸುಳ್ಳ್ಯಾವುದು ತಿಳಿಯುತ್ತಿಲ್ಲ. ಹೋಗಲಿ ನನಗೇನನ್ನಿಸುತ್ತಿದೆ ಎಂದೂ ಗೊತ್ತಾಗುತ್ತಿಲ್ಲ. ಗಾಂಧಾರಿ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಕಳಚಬೇಕು. ಧೃತರಾಷ್ಟ್ರ ಕಾಡಿನಲ್ಲಿ ಧೀರ್ಘ ತಪಸ್ಸು ಮಾಡಿಯಾದರೂ ದೃಷ್ಟಿ ಪಡೆಯಬೇಕು.


ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡು ಕೂತೆ. ಕಣ್ಣುಮುಚ್ಚಿಕೊಂಡಾಗ ಹೇಗೆ ಕಾಣುತ್ತೀನಿ ನೋಡಬೇಕೆನ್ನಿಸಿತು. ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ನೋಡಿದೆ. ಫೋಟೋ ಯಾಕೋ ನೀನು ಕಣ್ಣು ಮುಚ್ಚಿಕೊಂಡರೂ ಅಷ್ಟೇ ಕಣ್ಣುಬಿಟ್ಟಿದ್ದರೂ ಅಷ್ಟೆ ಎರೆಡೂ ಒಂದೇ! ಅಣಗಿಸಿದ ಹಾಗಾಯಿತು. ಮಗ ಕಾಲೇಜಿನಿಂದ ಬಂದ, ಬಾಗಿಲು ತೆರೆದೆ ಥೇಟ್ ಸಂಜಯನಂತೆ ಕಂಡ. ಅತ್ತೆಯ ಕಣ್ಣಲ್ಲಿ ಸಂಜಯನ ನೆರಳು. ಆಫೀಸಿನಿಂದ ಬರುತ್ತಲೇ ಇವರು ಅಂದಿದ್ದೇನು ‘ಸೇನಯೋರುಭಯೋರ್ ಮಧ್ಯೇ ರಥಂ ಸ್ಥಾಪಯಮೇಚ್ಚ್ಯುತಾ’ ಅಂತಲಾ?

{ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು :-)}

Wednesday, March 18, 2009

ನದಿಯ ಕಣ್ಣಿನಲ್ಲಿ ಕಡಲು

ನವೆಂಬರ್ 20, 2008, ಭಾನುವಾರ.
ಪ್ರದ್ಯುಮ್ನ ಬೆಳಗ್ಗೆ ಏಳುವ ಹೊತ್ತಿಗೆ ಅಮ್ಮ, ತಂಗಿ ಲಲಿತಳನ್ನು ಪೈಪಿನಲ್ಲಿ ಹೊಡೆಯುತ್ತಿದ್ದರು.

ಭಾನುವಾರವೆಂದರೆ ದ್ವೇಷಿಸುವ ಹಾಗೆ ಆಗೋಗಿದೆ ನನಗೆ. ಥೂ... ಇವರಿಬ್ಬರ ಅಬ್ಬರವನ್ನು ಸಹಿಸುವುದಾದರೂ ಹೇಗೆ? ಮನೆಯಿಂದ ಯಾವಾಗ ಹೊರಬಂದೆನೋ ಗೊತ್ತಿಲ್ಲ ಮನಸ್ಸು ತುಡಿಯುತ್ತಿದೆ. ಅಣ್ಣನಾದರೂ ಹೇಗೆ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದ? ಎರೆಡು ವರ್ಷದಿಂದ ಇದನ್ನೆಲ್ಲಾ ನೋಡಿ ನೋಡಿ ಸಹಿಸಿಕೊಳ್ಳುವುದನ್ನು ಕಲಿತಿಕೊಂಡುಬಿಟ್ಟಿದ್ದನಾ? ಇಲ್ಲ ಅಣ್ಣನ ಸ್ವಭಾವವೇ ಅಂಥದ್ದು. ಸುಮ್ಮನಿದ್ದುಬಿಡುತ್ತಾನೆ, ಎಲ್ಲವನ್ನು ನೋಡಿಕೊಂಡೂ!
ನನಗೇಕೆ ಹಾಗೆ ಸಾಧ್ಯವಾಗುವುದಿಲ್ಲ? ಆವತ್ತು ಮನೆಯಲ್ಲಿ ನೆಡೆದ ಘಟನೆಗಳು ಬೇಡವೆಂದರೂ ಕಣ್ಣಮುಂದೆ ಬರತೊಡಗಿದವು.
ಬೆಳಗ್ಗೆ ಏಳುತ್ತಲೇ ಕೇಳಿದ್ದು ಲಲಿತಾಳ ಕಿರುಚಾಟ ‘ನಾನಿದನ್ನ ತಿನ್ನಲ್ಲ ಒಂದ್ ಕೇಜಿ ಎಣ್ಣೆ ಸುರ್ದಿದಿಯ, ಇದನ್ನ ತಿಂದ್ರೆ ಆನೆ ಥರ ಊದ್ಕೊತಿನಿ. ಇಷ್ಟ್ ವರ್ಶ ಆದ್ರೂ ನಿಂಗೊಂದ್ ಉಪ್ಪಿಟ್ ಮಾಡಕ್ ಬರಲ್ಲ. ಎಲ್ಲಾ ಅಜ್ಜಿ ಕೈಲೇ ಮಾಡ್ಸಿದ್ರೆ ಹೇಗ್ ಬರತ್ತೆ ಹೇಳು? ಅಪ್ಪ ಅದ್ ಹೇಗೆ ನಿನ್ ಜೊತೆ ಸಂಸಾರ ಮಾಡ್ತಿದಾರೋ? ಅಜ್ಜಿಗೆ ಹುಶಾರ್ ತಪ್ಪಿದ್ರೆ ನೀನು ಮಾಡಿದ್ ಅಡುಗೆ ತಿನ್ನೋ ಖರ್ಮ ನಮ್ಗೆ...’
ನಿಲ್ಲುವುದೇ ಇಲ್ಲವೆನೋ ಅನ್ನಿಸಿತ್ತು. ಬಾತ್ ರೂಮಿನಿಂದ ಪೈಪ್ ತಂದ ಅಮ್ಮ ಅದರಲ್ಲೇ ಬಾರಿಸಿದ್ಧಳು. ಒಬ್ಳೇ ಮಗ್ಳು ಅಂತ ಮುದ್ದು ಮಾಡಿ ಬೆಳ್ಸಿದ್ದಕ್ಕೆ ತಲೆ ಎಲ್ಲಾ ಮಾತಾಡ್ತೀಯ ರಾಸ್ಕಲ್’
ಅಮ್ಮನ ಪೈಪಿನ ಏಟುಗಳನ್ನು ತಾಳಲಾರದೆ ತಟ್ತೆ ಬಿಸಾಡಿ ಎದ್ದು ಓಡಿದಳು ಲಲಿತ. ಯಾರಾದರೂ ಹೊರಗಿನವರು ನೋಡಿದರೆ ಅಮ್ಮ ಮಗಳೆಂದು ಯಾರೂ ನಂಬುತ್ತಿರಲಿಲ್ಲ. ನೆಡೆಯುತ್ತಿರುವುದೆಲ್ಲಾ ಯಾವುದೋ ಟಿ ವಿ ಸೀರಿಯಲ್ಲೊಂದರಲ್ಲಿ ಎಂಬಂತೆ ನೋಡುತ್ತಾ ಕುಳಿತಿದ್ದರು ಅಪ್ಪ. ಅಪ್ಪನ ನಿರ್ಭಾವುಕ ಮುಖ ಕಂಡಿತು. ನಿರ್ಭಾವುಕ ಮುಖವೂ ಅಷ್ಟೊಂದು ಸಿಟ್ಟು ತರಿಸಬಹುದೆಂಬ ಕಲ್ಪನೆಯಲ್ಲೂ ಇರಲಿಲ್ಲ.
ಕೈಗೆ ಸಿಕ್ಕಿದ ಬ್ಯಾಟ್‌ನಲ್ಲೇ ಶೋಕೇಸ್ ಗ್ಲಾಸಿಗೆ ಬೀಸಿದೆ. ಇಡೀ ಮನೆ ಒಂದು ನಿಮಿಷ ನಿಶ್ಯಬ್ಧವಾಯಿತು. ಅದುಮಿಕೊಂಡಿದ್ದ ಸಂಕಟವನ್ನ ಕಾರಿಕೊಂಡೆ. ‘ಥು ನಿಮ್ದಿಷ್ಟೇ ಆಗೋಯ್ತು ನಾನು ಮನೆ ಬಿಟ್ಟು ಹೋಗ್ತಿನಿ.’ ಬ್ಯಾಟ್ ಎಸೆದು ಹೊರಟೆ. ‘ಹೋಗು ಹೋಗು ನಾನೊಬ್ಳೇ ಸಾಯ್ತೀನಿ ಇಲ್ಲಿ. ನಂಗೆ ಇನ್ನು ಬದ್ಕೊಕ್ಕಾಗಲ್ಲ ವಿಷ ಕುಡ್ದು ಸತ್ತೋಗ್ತಿನಿ. ಎಲ್ಲಾದುಕ್ಕೂ ನಾನೇ ತಲೆಕೆಡ್ಸ್ಕೊಬೇಕು.
ಅಮ್ಮ ಕೂಗಿಕೊಳ್ಳುತ್ತಿದ್ದಳೋ ಅಳುತ್ತಿದ್ದಳೋ ಗೊತ್ತಾಗಲಿಲ್ಲ. ತಿರುಗಿಯೂ ನೋಡಬೇಕೆನ್ನಿಸದೆ ನೆಡೆದು ಬಂದೆನಲ್ಲಾ.. ಹಾಗೆ ಮಾಡಬಾರದಿತ್ತು ಅನ್ನಿಸಿತು.

ನವೆಂಬರ್ 23, 2008. ಬುಧವಾರ, ಹನುಮಜಯಂತಿ
ತಲೆಗೆ ಶಾಂಪು ಹಚ್ಚುತ್ತಿರುವಾಗ ಪ್ರದ್ಯುಮ್ನನಿಗೆ ‘ಇವತ್ತು ಸಂಜೆ ಅವಳನ್ನು ಭೇಟಿ ಮಾಡಬೇಕು.’ ಎನ್ನುವುದು ಮತ್ತೆ ನೆನಪಾಗಿ ಅಕಾರಣವಾದೊಂದು ಸುಸ್ಥು ಅವನ ಮೈಯನ್ನು ಆವರಿಸಿಕೊಂಡಿತು.
ಇಂಟರ್ನೆಟ್ಟಲ್ಲಿ ಸಿಕ್ಕಿ, ಗಾಂಧಿ ಬಜಾರಿನ ಐಸ್ ಥಂಡರಿನಲ್ಲಿ ಭೇಟಿಯಾದ ಹುಡುಗಿಯ ಮೇಲೆ ಸಣ್ಣದಾಗಿ ಶುರುವಾಗಿದ್ದ ಸೆಳೆತ ಬರೀ ಸೆಳೆತವಲ್ಲ ಅಂತ ಗೊತ್ತಾಗುತ್ತಿದ್ದ ಹಾಗೆ ನನಗೆ ಭಯವಾಯಿತು. ಹೀಗೇ ಭೇಟಿಯಾಗಿ ಮರೆತು ಬಿಡಬಹುದಾದ ಹುಡುಗಿಯಲ್ಲ ಅನ್ನುವ ಕಾರಣ ಮಾತ್ರವಲ್ಲದೆ ಆ ಹುಡುಗಿಯೂ ತನ್ನಲ್ಲಿ ಆಸಕ್ತಿ ತೋರಿಸುತ್ತಿದ್ದುದು ನೆನೆಸಿಕೊಳ್ಳುವ ಹೊತ್ತಿಗೇ ನಾನು ಅವಳಿಗೆ ಹೇಳಿದ ಸುಳ್ಳುಗಳು ನೆನಪಾಗುತ್ತಿವೆ.
ನನಗೆ ಸುಳ್ಳು ಹೇಳುವುದರಲ್ಲೇನೂ ಆಸಕ್ತಿ ಇಲ್ಲ. ಆದರೆ ಎಲ್ಲರಿಗೂ ನಿಜ ಹೇಳಿಕೊಂಡು ಬರಬೇಕಾದ ಜರೂರತ್ತಾದರೂ ಏನು? ನೀವೇನಾದರೂ ಐವತ್ತು ವಯಸ್ಸಿಗಿಂತ ಮೇಲ್ಪಟ್ಟವರಾದರೆ ಮತ್ತು ಇಂಟರ್ನೆಟ್ಟಿನ ದ್ವೇಶಿಗಳಾದರೆ ನಾ ಹೇಳಿದ ಮಾತು ಅರ್ಥವಾಗುವುದು ಕಷ್ಟ. ನೀವೇನೋ ಇಂಟರ್ನೆಟ್ಟಲ್ಲಿ ನೋಡುತ್ತಾ ಇರುತ್ತೀರಿ ಹೀಗೇ ಯಾರಾದರೂ ಮಧ್ಯದಲ್ಲಿ ಸುಮ್ಮನೆ ಬಂದು ಮಾತಾಡಿಸುತ್ತಾರೆ, ನೀವೂ ಮಾತಾಡುತ್ತೀರಿ. ಅವರು ಕೇಳುವ ಪ್ರಶ್ನೆಗಳಿಗೆಲ್ಲಾ ನಿಜವನ್ನೇ ಹೇಳಬೇಕೆಂದಿದೆಯೇನು? ಅದೂ ನನಗೇನು ಕೆಲಸ ಇಲ್ಲ ಅನ್ನೋದನ್ನ ಹೇಳಿಕೊಳ್ಳಬೇಕ? ಸುಳ್ಳು ಹೇಳಿದ್ದೆ. ಆದರೆ ಈಗ? ಈ ಬುಧವಾರ ಸಂಜೆ ಭೇಟಿಯಾಗು ನಿಂಗೇನೋ ಹೇಳಬೇಕು ಅಂದಿದ್ದಳು.
ಇವತ್ತು ಬುಧವಾರ. ಭಯವಾಗುತ್ತಿದೆ. ನಿಜ ಗೊತ್ತಾದರೆ ಅವಳಾಗಿಯೇ ದೂರ ಸರಿಯುತ್ತಾಳೆ ಅಂತ ಸಮಾಧಾನ ಪಟ್ಟುಕೊಂಡರೂ ಆ ಸಮಾಧಾನದಲ್ಲಿರುವ ಅವಳು ಬಿಟ್ಟು ಹೋಗುವಳೆಂಬ ಯೋಚನೆಯೇ ನೋವನ್ನುಂಟುಮಾಡಿ, ಸಮಾಧಾನವೇ ನೋವಾಗಿ ಮಾರ್ಪಡುವುದು ನನ್ನ ವಿಹ್ವಲಗೊಳಿಸುತ್ತಿದೆ. ಇವತ್ತು ಹೇಳಿಬಿಡುತ್ತೆನೆ ಅವಳು ನೀನು ಹೇಗಾದರೂ ಇರು ನಿನ್ನ ಜೊತೆ ಕೊಡುತ್ತೇನೆಂದರೆ ಸರಿಯಾದವಳನ್ನು ಪ್ರೀತಿಸಿದೆ ಎಂದರ್ಥ.

ನೀನು ಹೇಗಾದರೂ ಇರು ನಿನ್ನ ನಾನು ಪ್ರೀತಿಸಿದ್ದು ನಿಜ ಅದಕ್ಕೆ ನಿನ್ನ ಜೊತೇಲಿರ್ತಿನಿ ಅಂತ ಹೇಳಿ ಬಿಡಬಹುದು ಹುಡ್ಗ, ಆದರೆ ಈ ಮೊದಲೇ ನಾನು ಈ ಥರ ತಪ್ಪು ಮಾಡಿದೀನಿ. ಮದುವೆಯಾದವನನ್ನು ಪ್ರೀತಿಸಿದಾಗ ಅವನು ಮದುವೆಯಾದವನೆಂದು ಗೊತ್ತಿರಲಿಲ್ಲ, ಗೊತ್ತಾದ ಮೇಲೂ ಯಾವ ಬದಲಾವಣೆಯಿಲ್ಲದೆಯೇ ಅವನನ್ನು ಪ್ರೀತಿಸುತ್ತಿದ್ದೆ. ನನ್ನ ದೇವತೆ ನೀನು, ಲಕ್ಷಕ್ಕೊಬ್ಬಳು ನಿನ್ನಂಥವಳು, ಎಂಥಾ ತ್ಯಾಗ ನಿನ್ನದು ಅಂತೆಲ್ಲಾ ಹಾಡಿ ಹೊಗಳಿದ್ದ. ಆದರೆ ನನಗೆ ಯಾವ ಹುಡುಗಿಯಾದರೂ ಪ್ರೀತಿಸಿದವನನ್ನು ಬಿಟ್ಟು ಹೋಗಬೇಕಾದದ್ದಾದರೂ ಏಕೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿರಲಿಲ್ಲ. ಅವನು ನನಗೆ ರಾತ್ರಿಗಳಲ್ಲಿ ಸಿಗುತ್ತಿರಲಿಲ್ಲ, ಮಾತಾಡಲೂ ಕೂಡ. ಅವನನ್ನು ನಾನು ಅರ್ಥ ಮಾಡಿಕೊಂಡಂತೆ ಅವನಿಗೆ ನ್ಮನ್ನ ಅರ್ಥ ಮಾಡಿಕೊಳ್ಳಲಾಗಲಿಲ್ಲ, ನಾನು ಬೇರೆಯವರೊಡನೆ ಮಾತಾಡಿದರೂ ಸಹಿಸುತ್ತಿರಲಿಲ್ಲ. ಅವನಿಗೆ ನಾನು ಕೋಪಗೊಂಡಾಗ ಅಥವಾ ಕೋಪಗೊಳ್ಳದಿದ್ದರೂ ಹೆಂಡತಿಯಿದ್ದಳು ನನಗೆ ಉಹು.. ನಾನೊಬ್ಬಳೇ. ಬರಬರುತ್ತಾ ಅವನೇ ನನ್ನ ಉಸಿರುಉಕಟ್ಟಿಸ, ತೊಡಗಿದ ಹೆದರಿಸತೊಡಗಿದ. ನನ್ನ ಎಳೇ ಹುಡುಗಿಯ ಮನಸ್ಸು ಘಾಸಿಗೊಂಡಿತ್ತು. ನನ್ನ ಮುಗ್ಧತೆ ಜಾರಿ ಹೋಗಿತ್ತು. ಮುಗ್ಧತೆಯನ್ನು ಕಳೆದುಕೊಂಡು ಹೊರಬಂದ ಹುಡುಗಿ ಆ ಹಳೇ ಮುಗ್ಧ ಹುಡುಗಿಯ ಬಗ್ಗೆ ಮರುಕ ಪಟ್ಟುಕೊಳ್ಳುತ್ತಾಳೆ, ಅವಳನ್ನು ಪದೇ ಪದೇ ನೋಡಿ ಎಚ್ಚೆತ್ತುಕೊಳ್ಳುತ್ತಾಳೆ.
ನಾನು ಅವನಿಂದ ದೂರವಾದ ಮೇಲೆ ನಿರ್ಧರಿಸಿದ್ದು ಒಂದು. ಪ್ರೀತಿ ಇಡಿಯಾಗಿ ಸಿಕ್ಕಬೇಕು, ಮತ್ತು ಪ್ರೀತಿಸುವವನ ಯಾವುದೇ ನ್ಯೂನ್ಯತೆಯನ್ನ ಒಪ್ಪಿಕೆsಂಡು ಪ್ರೀತಿಸಬಾರದು. ಅಂಥಾ ಪ್ರೀತಿ ಹೆಚ್ಚು ದಿನ ಬದುಕುವುದಿಲ್ಲ. ನೀನು ಕೆಲಸದಲ್ಲಿಲ್ಲದಿದ್ದರೂ ನಿನ್ನ ಪ್ರೀತಿಸುತ್ತೀನಿ ಅಂತ ಇವತ್ತು ನಾನು ನಿನ್ನ ಜೊತೆ ಬಂದು ಬಿಡಬಹುದು ಆದರೆ ಸ್ವಲ್ಪ ದಿನದ ನಂತರ ಪ್ರೀತಿಯ ಮೊದಲ ಆವೇಷಗಳು ಮುಗಿದ ಮೇಲೆ ನಿನ್ನ ಆರ್ಥಿಕ ಅಸಹಾಯಕತೆ ನಿನ್ನನ್ನು ದ್ವೇಷಿಸುವಂತೆ ಮಾಡುತ್ತದೆ ನಾವಿಬ್ಬರೂ ಒಟ್ಟಿಗೆ ಇರಲಾರದಂಥಹ ಅಂಚಿಗೆ ತಂದು ನಿಲ್ಲಿಸುತ್ತದೆ. ನಿನ್ನ ಈಗ ಪ್ರೀತಿಸಿ ಮುಂದೆ ದ್ವೇಶಿಸುವ ಬದಲು ಈಗಲೇ ಕಷ್ಟಪಟ್ಟಾದರೂ ಆ ಭಾವನೆಯನ್ನ ಚಿವುಟಿಹಾಕುತ್ತೇನೆಂದು ಹೇಳಿ ಎದ್ದು ಹೋದಳು. ಇಂಥಾ ಹುಡುಗಿಯನ್ನ ನನ್ನವಳಾಗಿಸಿಕೊಳ್ಳದ ಅಸಹಾಯಕತೆ ನನ್ನದು. ಪ್ರತೀ ದಿನ ಮನೆಯಲ್ಲಿ ಹೊರಗಡೆ ಇಂಥ ಘಾಸಿಗೊಳಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಬದುಕಲು ಕಾರಣಗಳೇ ಇಲ್ಲ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ. ಸಾವಿನ ಬಾಗಿಲು ತಟ್ಟಲು ಧೈರ್ಯ ಬೇಕು.

ನವೆಂಬರ್ 25, 2008. ಶುಕ್ರವಾರ
ಕಾಫಿ ಕಪ್ಪನ್ನು ಕೈಯ್ಯಲ್ಲಿ ಹಿಡಿದು ಕೂತ ಪ್ರದ್ಯುಮ್ನ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಕಾಫಿ ಕುಡಿಯುವುದನ್ನೇ ಮರೆತ.

ಏಳು ತಿಂಗಳ ಹಿಂದೆ ಹೀಗಿರಲಿಲ್ಲ. ಅಥವ ಎಲ್ಲವೂ ಹೀಗೇ ಇದ್ದು ನನಗೆ ಗೊತ್ತಾಗುತ್ತಿರಲಿಲ್ಲವೋ? ಬೆಳಗ್ಗೆದ್ದರೆ ಕಾಲೇಜಿಗೆ, ಪ್ರಾಜೆಕ್ಟ್ ವರ್ಕಿಗೆ ಓಡುವ ತರಾತುರಿ, ಸಂಜೆ ಕಾಲೇಜು ಮುಗಿಸಿ ಅಲ್ಲಿಲ್ಲಿ ಅಲೆಯಬೇಕಾದ ಕಡೆಗಳಲ್ಲೆಲ್ಲಾ ಅಲೆದು ಮನೆ ತಲುಪುತ್ತಿದ್ದುದು ಯಾವಾಗಲೋ. ಭಾನುವಾರವೆಂದರೆ ಬರಗೆಟ್ಟವನಂತೆ ಕಾಯುತ್ತಿದ್ದೆ. ಬೆಳಗೇಳುತ್ತಲೇ ಅಜ್ಜಿಯನ್ನು ಗೋಳುಹೊಯ್ದುಕೊಳ್ಳುತ್ತಾ, ತಂಗಿಯನ್ನು ಕೀಟಲೆ ಮಾಡುತ್ತಿದ್ದವನ ಕೈಗೆ ಅಮ್ಮ ಅಶ್ವತ್ಥಾಮ, ಬಲಿರ್ವ್ಯಾಸ..... ಎನ್ನುತ್ತಾ ಹರಳೆಣ್ಣೆಯ ಬೊಟ್ಟುಗಳನ್ನು ಇಟ್ಟು ತಿಕ್ಕಿ, ಅವಳಿಗೆ ತೃಪ್ತಿಯಾಗುವಷ್ಟು ತಲೆಗೆ ಮಯ್ಯಿಗೆ ಎಣ್ಣೆ ಬಳಿದು ‘ನೋಡು ಹೆಂಗಾಗೋಗಿದೆ ತಲೆ ಕೂದ್ಲು ಕದಬೆ ಜುಂಗು’ ಎಂದು ಆತಂಕಪಟ್ಟುಕೊಂಡು ಮಧ್ಯಾನದವರೆಗೂ ‘ಎಣ್ಣೆ ಇಳೀಲಿ’ ಅಂತ ರೂಮಿನ ಟೀ.ವಿ ಮುಂದೆ ಕೂರಿಸಿ ನನ್ನ ಜೊತೆ ಮಾತಾಡುತ್ತಾ ಕಾಲ ಕಳೆದು, ಮಧ್ಯಾನ ಸುಡು ಸುಡು ನೀರಿನಲ್ಲಿ ಸ್ನಾನ ಮಾಡಿಸಿ, ‘ಹೋಗು ನಾನು ಸ್ನಾನ ಮಾಡ್ಕೊಂಡ್ ಬರ್ತಿನಿ’ ಅಂತ ಕಳುಹಿಸಿದರೆ ಮಲ್ಲಿಗೆಯಂಥಹ ಅನ್ನ, ಬಿಸಿ-ಬಿಸಿ ತಿಳಿಸಾರು ಪಲ್ಯ ಹಪ್ಪಳಗಳನ್ನ ಟೆಬಲ್ಲಿನ ಮೇಲಿಡುತ್ತಿರುವ ಅಜ್ಜಿ. ಅನ್ನ ತಿಳಿಸಾರು ಕಲಸಿಕೊಂಡು ತಿನ್ನುತ್ತಿದ್ದರೆ ಆಹಾ... ಮಧ್ಯಾನ ಗಡದ್ದಾದ ನಿದ್ದೆ, ಸಂಜೆ ಕ್ರಿಕೇಟೋ, ಶಟಲ್ ಕಾಕೋ ಆಡಲು ಗೆಳೆಯರು.
ಇಳಿ ಸಂಜೆಯ ಹೊತ್ತಿಗೆ ಮನೆಗೆ ಬಂದರೆ ಯಾವುದಾದರೂ ಇಂಗ್ಲೀಷ್ ಮೂವಿಯನ್ನು ತಂದಿರುತ್ತಿದ್ದ ಅಣ್ಣ. ಈಗ ಭಾನುವಾರಗಳೆಂದರೆ ಅಗಾಧ ಹಿಂಸೆ. ಅಪ್ಪ ತಂಗಿ ಇರುತ್ತಾರಲ್ಲ.. ಅಪ್ಪ ಎದುರಿಗಿದ್ದರೆ ಇನ್ನೂ ಅಪ್ಪನ ಅನ್ನ ತಿನ್ನುತ್ತಿದ್ದೇನೆ ಅಂತ ಮನಸ್ಸು ಚುಚ್ಚುತ್ತಿರುತ್ತೆ, ಇದರ ಜೊತೆಗೆ ತಂಗಿಯ, ಅಮ್ಮನ ಕಿತ್ತಾಟ. ಇವಳು ಮೆಡಿಕಲ್ ಸೇರೋ ಮೊದಲು ಹೀಗಿರಲಿಲ್ಲ. ಅದ್ಯಾಕೆ ಹೀಗಾದಳೋ?’
ತನ್ನ ಕಾಲೇಜಿನ ದಿನಗಳು ನೆನಪಾಗುತ್ತಿವೆ. ‘ನೀನು ಇಷ್ಟು ಚನ್ನಾಗಿರೋದನ್ನ ನೋಡೇ ನಿನ್ನ ಸೆಲೆಕ್ಟ್ ಮಾಡ್ಕೊಂಡ್ ಹೋಗ್ತಾರೆ ಅಂತಿದ್ದ ಹುಡುಗರೆಲ್ಲಾ ಸೆಲೆಕ್ಟಾಗಿ ಹೋದರೂ ನಾನು ಯಾವ ಇಂಟರ್ವ್ಯೂವಿನಲ್ಲೂ ಸೆಲೆಕ್ಟಾಗಲಿಲ್ಲ. ಬಂದವರೆಲ್ಲಾ ೭೦ ಎಂಡ್ ಅಬವ್ ಇದ್ದವರನ್ನು ಮಾತ್ರ ಆರಿಸಿಕೊಂಡು ಹೋದರು. ನಾನು ಇನ್ನಷ್ಟು ಗಮನವಿಟ್ಟು ಓದಬೇಕಿತ್ತು. ಈಗ ಎಷ್ಟು ಯೋಚಿಸಿದರೂ ಪ್ರಯೋಜನವಿಲ್ಲ. ನಾನು ಮಾಡಿರುವ ನಿರ್ಧಾರವೇ ಸರಿ.


ನವೆಂಬರ್ 27, 2008, ಭಾನುವಾರ
ಮಧ್ಯಾನ ಮೂರು ಘಂಟೆ. ಸ್ನೇಹಿತನ ಮನೆಯ ಬಾತ್ರೂಮಿನಲ್ಲಿ ವಿಷದ ಬಾಟಲಿಯನ್ನು ಮುಂದಿಟ್ಟುಕೊಂಡು ಕೂತ ಪ್ರದ್ಯುಮ್ನ ತನ್ನನ್ನು ಸಾಯಲೇಬೇಕಾದಂಥ ಪರಿಸ್ಥಿತಿಗೆ ನೂಕಿದ ಕಾರಣಗಳನ್ನೂ. ತಾನು ಸತ್ತ ನಂತರ ಆಗಬಹುದಾದ ಘಟನೆಗಳನ್ನು ಪಟ್ಟಿಮಾಡುತ್ತಾ ಪೋಲೀಸರಿಗೊಂದು ಪತ್ರ ಬರೆಯತೊಡಗಿದ.
ಈ ಪತ್ರವನ್ನು ಮೊದಲು ಓದುವ ಪೊಲೀಸರೇ, ಆನಂತರ ಓದುವ ತೀರ್ಥರೂಪರೇ, ಓದೋಲ್ಲ ಎಂದು ನಿರಾಕರಿಸಬಹುದಾದ ಅಮ್ಮ,, ಓದಲು ಬೋರಾಗಿ ಮುದುರಿ ಎಸೆಯುವ ಅಣ್ಣ..

ಈ ಪತ್ರವನ್ನ ನಾನು ನನ್ನ ಸಾವಿಗೆ ಯಾರೂ ಕಾರಣರಲ್ಲ ಯಾರಿಗೂ ಹಿಂಸೆ ಕೊಡಬೇಡಿ. ನನ್ನ ಸ್ವ ಇಚ್ಛೆಯಿಂದ ನಾನು ಸಾಯುತ್ತಿದ್ದೇನೆ ಎಂದು ತಿಳಿಸುವುದಕ್ಕೆ ಬರೆಯುತ್ತಿಲ್ಲ. ಆತ್ಮ ಹತ್ಯೆ ಅನ್ನುವುದು ಆಕ್ಷಣದ ನಿರ್ಧಾರವಲ್ಲ ಅದು ಆ ಕ್ಷಣದ ಧೈರ್ಯ ಮಾತ್ರ ನಿರ್ಧಾರ ರೂಪುಗೊಳ್ಳಲು ದೊಡ್ಡ ದೊಡ್ಡಕಾರಣಗಳು ಬೇಕಾದರೆ ಅದು ಕಾರ್ಯರೂಪಕ್ಕೆ ಬರಲು ಅತ್ಯಂತ ಕ್ಷುಲ್ಲಕ ಕಾರಣ ಸಾಕು. ಇದೆಲ್ಲಾ ಆಗುವ ಹೊತ್ತಿಗೆ ಸಾಯಬೇಕೆಂದು ನಿರ್ಧರಿಸಿರುವವನ ಮನಸಿನಲ್ಲಿ ವ್ಯಕ್ತಿತ್ವದಲ್ಲ ಆಗುವ ಮಾರ್ಪಾಡುಗಳು ಅನೇಕ. ಇದೆಲ್ಲಾ ನಿಮಗೆ ಗೊತ್ತಿರುವಂಥದ್ದೇ ಆದರೂ ಹೇಳಬೇಕೆನ್ನಿಸಿತು. ನಿಮಗೆ ನಾನು ನನ್ನ ಕಥೆಯನ್ನ ಹೇಳಿ ತಲೆ ಚಿಟ್ಟು ಹಿಡಿಸುವುದಿಲ್ಲ. ನನ್ನ ಸಾವಿಗೆ ಕಾರಣವಾದವರ ಪಟ್ಟಿಯನ್ನ ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಸಾಧ್ಯವಾದರೆ ಅವರನ್ನೆಲ್ಲಾ ಶಿಕ್ಷೆಗೆ ಒಳಪಡಿಸಿ.

ಸಿಕ್ಕಸಿಕ್ಕವರಿಗೆಲ್ಲಾ ಮನಬಂದಂತೆ ಸಾಲಕೊಟ್ಟು ವಾಪಸ್ಸು ಪಡೆಯಲಾರದೆ ದಿವಾಳಿಯಾಗಿ, ಶೇರು ಹಣದಲ್ಲಿ ನಮ್ಮದೇಶದ ಲಕ್ಷಾಂತ ಜನರ ಕೋಟಿಗಟ್ಟಲೆ ಹಣವನ್ನ ಮುಳುಗಿಸಿ, ಸಾವಿರಾರು ಇಂಜಿನಿಯರುಗಳನ್ನು ಕೆಲ್ಸದಿಂದ ತೆಗೆದುಹಾಕುವಂತೆ ಮಾಡಿ, ನಿರುದ್ಯೋಗಿಗಳನ್ನಾಗಿಸಿದ ಅಮೇರಿಕಾದ ಪ್ರೈವೇಟ್ ಬ್ಯಾಂಕುಗಳನ್ನ, ಪ್ರತಿಯೊಂದಕ್ಕೂ ಅಮೇರಿಕಾ ಅಮೇರಿಕಾ ಎಂದು ಭಾರತವನ್ನ ಭಾರತದ ಆರ್ಥಿಕತೆಯನ್ನ ಅಮೇರಿಕಾದ ಬಾಲಂಗೋಚಿಯಾಗಿಸಿರುವ ಭಾರತದ ಆರ್ಥಿಕ ನೀತಿಯನ್ನ, ಬೆಳಗ್ಗೆ ಮನೆಯಿಂದ ಹೊರಹೋದರೆ ಸಂಜೆ ಮನೆಗೆ ಬರುತ್ತೇವೋ ಇಲ್ಲವೋ ಎಂದು ತಿಳಿಯದೆ ದಿನವೂ ಭಯದಲ್ಲಿ ಸಾಯುವಂತೆ ಮಾಡಿರುವ ಟೆರೆರಿಸ್ಟಗಳನ್ನ, ಅವರನ್ನು ಮಟ್ಟಹಾಕದೆ ಮೊಸಳೆ ಕಣ್ಣೀರು ಸುರಿಸುವ ನಮ್ಮ ಸರಕಾರವನ್ನ, ಇವರಲ್ಲಿ ಯಾರನ್ನಾದರೂ ಶಿಕ್ಷಿಸಲು ಸಾಧ್ಯವ ಹೇಳಿ? ಹ್ಮ್.. ಮ್‌ಮ್‌ಮ್.. ಖಂಡಿತ ಸಾಧ್ಯವಿಲ್ಲ ನನಗೆ ಗೊತ್ತು.

ಬರೀ ಇದಿಷ್ಟೇ ಅಲ್ಲ ಇನ್ನೂ ಹೇಳುತ್ತೇನೆ ಕೇಳಿ. ಇಷ್ಟು ದಿನ ಬ್ಯಾಂಕುಗಳ ಸರದಿಯಾಯಿತು ಇನ್ನು ಕ್ರೆಡಿಟ್ ಕಾರ್ಡುಗಳ ಸರದಿ. ಎಲ್ಲರೂ ಸಿಕ್ಕಿಸಿಕ್ಕ್ದಂಗೆ ಕ್ರೆಡಿಟ್ ಕಾರ್ಡುಗಳನ್ನ ಉಜ್ಜಿ ಬೇಕಾದಷ್ಟು ತೀರಿಸಲಾರದಷ್ಟು ಸಾಲ ಮಾಡಿದ್ದಾರೆ. ಅವರೆಲ್ಲರೂ ಕೈಯೆತ್ತಿದರೆ ಭಾರತ ಮುಳುಗಿದಂತೆಯೇ. ಆಮೇಲೆ ಮತ್ತೊಂದಷ್ಟು ಜನ ನಿಮಗೆ ಈ ರೀತಿಯ ಪತ್ರಗಳನ್ನ ಬರೆದಿಟ್ಟು ಸಾಯುತ್ತಾರೆ.

ನಮ್ಮಣ್ಣನಂಥವರಿಗಾದರೆ ಏನೂ ತೊಂದರೆ ಇಲ್ಲ ಚನ್ನಾಗಿ ಓದಿಕೊಂಡಿದ್ದರೂ ಮೊದಲೇ ಬುದ್ದಿ ಓಡಿಸಿ ಕೊಡಗಿನ ಬಳಿಯಲ್ಲಿ ಒಂದಿಷ್ಟು ತೋಟವನ್ನ ತೆಗೆದುಕೊಂಡು ನೆಮ್ಮದಿಯಾಗಿದ್ದಾನೆ. ಅವನಂತೆ ಆಗಲೇ ಬುದ್ದಿ ಓಡಿಸಿದ್ದರೆ ನನಗೀ ಸ್ಥಿತಿ ಬರುತ್ತಲೇ ಇರಲಿಲ್ಲವೇನೋ..

ನನ್ನ ಫ಼್ರಸ್ಟ್ರೇಷನ್‌ಗೆ ನನ್ನದೇ ಆದ ಚಿಕ್ಕ ಚಿಕ್ಕ ಕಾರಣಗಳಿರಬಹುದು. ಬರೀ ಅದಷ್ಟೇ ಕಾರಣಗಳಾಗಿದ್ದರೆ ನಾನಿವತ್ತು ಸಾಯುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ಅವನದೇ ಆದ ಸಣ್ಣ ಪುಟ್ಟ ತೊಂದರೆಗಳು ಕಷ್ಟಗಳು ಇರುತ್ತವೆ ಆದರೆ ಎಲ್ಲರೂ ಯಾಕೆ ಸಾಯುವುದಿಲ್ಲ ಹೇಳಿ? ಯಾಕೆಂದರೆ ಅವರಿಗೆ ಅವರವರ ಚಿಕ್ಕ ಪುಟ್ಟ ಕಷ್ಟಗಳನ್ನ ನಿವಾರಿಸಿಕೊಳ್ಳಲು ತೊಂದರೆಗಳಿಂದ ಹೊರಬರಲು ತಿಳಿದಿರುತ್ತದೆ. ಆದರೆ ಈ ತೊಂದರೆಗಳನ್ನು ನನ್ನಿಂದ ಸರಿಪಡಿಸಲು ಸಾಧ್ಯವಿಲ್ಲ ನನ್ನ ಅಳವನ್ನ ಮಿರಿದ ಕಷ್ತಗಳು ಇವು ಎಂದು ತಿಳಿದಾಗ ಅದನ್ನು ಸರಿಪಡಿಸಬೆಕಾದವರ ಮೇಲೆ ಭರವಸೆ ಇಟ್ಟು ಸುಮ್ಮನಾಗುತ್ತಾನೆ. ನನ್ನ ನಂಬಿಕೆ ಭರವಸೆಗಳು ನುಚ್ಚುನೂರಾಗಿವೆ. ನಮ್ಮಂಥ ಲಕ್ಷಾಂತರ ಜನರ ನಂಬಿಕೆಗಳ ಗೋರಿಯಮೇಲೆ ಸರಕಾರಗಳು ಎನೂ ಆಗಿಲ್ಲವೆಂಬಂತೆ ನೆಮ್ಮದಿಯಾಗಿ ಸೀಟು ಭದ್ರಪಡಿಸಿಕೊಳ್ಳುತ್ತಿವೆ. ಯಾರನ್ನ ನಂಬುವುದು ಯಾರಲ್ಲಿ ಭರವಸೆ ಇಡುವುದು ಗೊತ್ತಾಗುತ್ತಿಲ್ಲ.

ನವೆಂಬರ್ 27, 2008, ಭಾನುವಾರ. ಮುಸ್ಸಂಜೆ.
ತ್ರವನ್ನು ಬರೆದು ಮುಗಿಸಿದ ಪ್ರದ್ಯುಮ್ನ ತನ್ನ ಮೊಬೈಲ್ ಕಡೆ ಗಮನ ಹರಿಸಿದಾಗ ಅಲ್ಲಿ ಹದಿನೈದು ಮೆಸೇಜು ಮೂವತ್ತು ಮಿಸ್ ಕಾಲುಗಳಿದ್ದವು. ಮೆಸೇಜುಗಳನ್ನ ಒಂದೊಂದಾಗಿ ಓದತೊಡಗಿದ
ಯಾಕೋ ಫೋನ್ ತೆಗೀತಿಲ್ಲ. ಸುರೇಶಣ್ಣ ಸತ್ತೋಗಿದ್ದಾನೆ ಕಣೋ.. ಫೋನ್ ತಗೊಳ್ಳೋ
ಅಮ್ಮ ಆಳ್ತಿದ್ದಾಳೆ, ಬೇಗ ಬಾರೋ
ಯುವರ್ ಬ್ರದರ್ ಕಮಿಟೆಡ್ ಸೂಸೈಡ್ ಇನ್ ಕಾಫಿ ಎಸ್ಟೇಟ್ ಹೌಸ್.

ಎಲ್ಲಿದ್ದೀಯೋ
..

ವೇರ್ ಆರ್ ಯು? ಸ್ಟಾರ್ಟ್ ಇಮ್ಮಿಡಿಯೆಟ್ಲಿ..

ಪ್ರದ್ಯುಮ್ನ ತಾನು ಬರೆದಿಟ್ಟ ಪತ್ರವನ್ನು ಸುಮ್ಮನೆ ನೋಡಿದ. ಪತ್ರದ ಕೊನೆಯಲ್ಲಿ ತಾನು ಮಾಡಿದ ಸಹಿ ಯಾಕೋ ಅಣ್ಣನ ಸಹಿಯಂತೆ ಕಾಣುತ್ತಿದೆಯಲ್ಲ ಅನ್ನಿಸಿತು.
ಮತ್ತೆ ಫೋನ್ ಹೊಡಕೊಳ್ಳತೊಡಗಿತು. ಎತ್ತಿಕೊಂಡು ಬಂದೆ ಅಂತಷ್ಟೇ ಹೇಳಿ ಪೋನ್ ಕಟ್ ಮಾಡಿದ.
(ಕನ್ನಡಪ್ರಭದಲ್ಲಿ ಪ್ರಿಂಟಾಗಿತ್ತು ಕಣ್ರೀ)

Monday, February 16, 2009

ಲವ್ ಅಟ್ ಫಸ್ಟ್ ರೀಡ್..

Soft eyes ಶಿಶಿರನಿಗೆ,

ಲವ್ ಅಟ್ ಫಸ್ಟ್ ಸೈಟ್ ನಲ್ಲಿ ನಂಬಿಕೆಯಿದೆಯಾ ಅಂತ ನಿನ್ನಂಥವನನ್ನು ಕೇಳಿದರೆ ಅದಕ್ಕಿಂತ ಹುಚ್ಚುತನ ಬೇರೊಂದಿಲ್ಲ ಹುಡುಗಾ. ಅದರಲ್ಲೂ ಹಾಗೆ ನಿನ್ನ ಬಯಸಿ ಬಯಸಿ ಅರ್ಥ ಮಾಡಿಕೊಂಡ ನಾನಂತೂ ಅಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಲೇ ಬಾರದು. ಆದರೆ ಲವ್ ಅಟ್ ಫಸ್ಟ್ ರೀಡ್ ನಲ್ಲಿ ನಂಬಿಕೆ ಇದೆಯೇನೋ ಅಂತ ಕೇಳಿದರೆ ನಗಬಹುದು ನೀನು. ಆದರೂ ನಂಬು ನನ್ನ.

ತೀರಾ ಹತ್ತಿರಾಗುವ ಮೊದಲೇ ನಾನೆಷ್ಟು ಜನರನ್ನು ದೂರ ಮಾಡಿಲ್ಲ. ಫೋನಿನಲ್ಲಿ ಮಾತಾಡುತ್ತಾ ಬುದ್ದಿವಂತನೆನಿಸುತ್ತಿದ್ದ ಕರೀ ಹುಡುಗನನ್ನು ಭೇಟಿಯಾದಾಗ ಎಲ್ಲದಕ್ಕೂ ನೀ ಹೇಳಿದಂತೆ ಅನ್ನತೊಡಗಿದಾಗ ಈ ಹುಡುಗ ಭೈರಪ್ಪನವರ ಸಾಕ್ಷಿಯ ಅಪ್ಪಾಜಪ್ಪನ ಥರದವನಿರಬಹುದು ಎನ್ನಿಸಿ, 'ಐ ಕಾಂಟ್ ಲವ್ ಯು' ಎಂದು ನನ್ನಿಂದ ಹೇಳಿಸಿಕೊಂಡವನಿಂದ ಹಿಡಿದು ಮೊನ್ನೆ ಮೊನ್ನೆ ಅವನಿಗೆ ಭಾವನೆಗಳೇ ಅರ್ಥ ಆಗಲ್ಲ ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿ, ತಾನು ಹೇಳಿದ್ದೇ ನೆಡೆಯಬೇಕೆನ್ನುವ ದಾಟು ಕಾದಂಬರಿಯ ವೆಂಕಟೇಶನ ಥರ, ಬುದ್ದಿವಂತ ಸರಿ ಆದರೆ ನನಗೆ ಹತ್ತಿರವಾಗಲಾರ ಎಂದು ಬಿಟ್ಟುಬಂದ ಹುಡುಗನವರೆಗೂ, ಅದೆಷ್ಟು ಜನ! ತುಂಬ ಮೊದ್ದ ಆಲನ ಹಳ್ಳಿಯವರ ಪರಸಂಗದ ಗೆಂಡೆ ತಿಮ್ಮನ ಥರ, ಇನ್ನೊಬ್ಬನ ಮಡಿ, ದೇವರು, ದಿಂಡರು, ಪೂಜೆ, ಪುನಸ್ಕಾರ, ಸಂಸ್ಕಾರದ ಪ್ರಾಣೆಷಾಚಾರ್ಯರ ರೀತಿ, ಚಾಕ್ಲೇಟ್ ಕಂಪನಿಯೊಂದರ ಸಿ. ಯಿ. ಓದು ಉದರಿಂಗ್ ಹೈಟ್ಸ್‌ನ ಹೀತ್ ಕ್ಲಿಫ್ ಥರಹದ ಪೈಶಾಚಿಕ ಪ್ರೀತಿಯ ನೆನಪು ತರಿಸಿದರೆ, ಇಷ್ಟವಾದ ಹುಡುಗನ ಅಲೌಕಿಕ ಆಸಕ್ತಿಯು ಮುಕ್ತದ ಸ್ವಾಮಿಜಿಯ ನೆನಪು ತರಿಸಿ ಹೆದರಿಸಿತ್ತು. ಇಂಗ್ಲಾಂಡಿನಿಂದ ಬಂದ ಹುಡುಗ ನೋಟದಲ್ಲಿ 'ದಿ ಕಂಪನಿ ಆಫ್ ವುಮೆನ್'ನ ಮೋಹನ್‌ನನ ಛಾಯೆ ಕಂಡು ಬೇಡವೆನಿಸಿ ಯಾವ ಹುಡುಗನೂ ಯಾವುದೇ ರೀತಿಯಲ್ಲೂ ನಿನ್ನ ಥರ ಅನ್ನಿಸದೆ ಹೊಂದಿಕೆಯಾಗಲಾರದೆ ಹೋದರು. 'ಮುಚ್ಚಿದ ಬಾಗಿಲ ಮುಂದೆ ಭಿಕ್ಷೆ ಬೇಡಿದರು'. ಹೋಗಲಿ ಪರವಾಗಿಲ್ಲ ಇವನು ಸರಿಯಾಗಬಹುದು ಪ್ರಪೋಸು ಮಾಡಲಾ ಅಂದುಕೊಳ್ಳುತ್ತಿರುವಾಗಲೇ ಕೆಲವರು ಅವರೇ ಪ್ರಪೋಸ್ ಮಾಡಿ ನನ್ನ ನಿರೀಕ್ಷೆಯನ್ನ ಹುಸಿ ಮಾಡಿದ್ದರು. ನದಿಯ ಕಾಲುಬುಡದೆಡೆಗೆ ತೆವಳಿಕೊಂಡು ಬರುವ ಸಮುದ್ರವನ್ನ ಪ್ರೀತಿಸುವುದಾದರೂ ಹೇಗೆ?'ಎಷ್ಟೇ ದೂರದಿಂದಲಾದರೂ ಸರಿ ಮಹಾನದಿ ತನ್ನೆಡೆಗೆ ಧುಮ್ಮಿಕ್ಕಿ ಹರಿದು ಬರಬೇಕೇ ಹೊರತು, ಸಮುದ್ರವೇ ತೆವಳಿಕೊಂಡು ನದಿಯ ಮನೆಬಾಗಿಲಿಗೆ ಹೋಗಲೊಲ್ಲದು.'ಈ ನಿನ್ನ ಮಾತುಗಳು ಪ್ರತಿಯೊಬ್ಬ ಹುಡುಗ ಬಂದು ಪ್ರಪೋಸ್ ಮಾಡಿದಾಗಲೂ ನೆನಪಾಗುತ್ತಿತ್ತೋ. ಇಲ್ಲಿಯವರೆಗೂ ಬರೋಬ್ಬರಿ ಹದಿನಾಲ್ಕು ಜನರನ್ನ ನಿನ್ನ ಕಾರಣದಿಂದಾಗಿ ರಿಜೆಕ್ಟ್ ಮಾಡಿದೀನಿ.

ಒಮ್ಮೆಯಾದರೂ ನಿನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ ನೀನು, ಅವಡುಗಚ್ಚಿಕೊಂಡು ಎಂಥಾ ಪರಿಸ್ಥಿತಿಯಲ್ಲೂ ಸರಿಯಾಗಿ ಯೋಚಿಸುತ್ತೀಯ. ಹಾಗಿರಲು ಹೇಗೆ ಸಾಧ್ಯ ನಿಂಗೆ. ಯಾರ ಬಳಿಯಾದರೂ ನಿನ್ನ ಸಂಕಟಗಳನ್ನು ಹಂಚಿಕೊಳ್ಳಬೇಕು ಅನಿಸುತ್ತಿರಲಿಲ್ಲವೇನೋ? ನಿನ್ನ ಆತಂಕ ಸಂಕಟಗಳಿಗೆಲ್ಲಾ ಕಿವಿಯಾಗಬೇಕು ಅನ್ನಿಸುತ್ತಿತ್ತು ನನಗೆ. ಯಾರನ್ನಾದರೂ ಹಾಗೇ ಅವರಿರುವಂತೆಯೇ ಒಪ್ಪಿಕೊಳ್ಳುವುದನ್ನ, ಏನನ್ನಾದರೂ ಸಾಧಿಸಬೇಕಾದರೆ ರೂಢಿಸಿಕೊಳ್ಳಬೇಕಾದ ಧೃಡತೆಯನ್ನ ಸಂಕಲ್ಪವನ್ನ ಕಲಿಸಿಕೊಟ್ಟವನೇ ನೀನು. ನನ್ನ ವ್ಯಕ್ತಿತ್ವವದಲ್ಲಿ ನಿನ್ನ ಪ್ರಭಾವ ಎಷ್ಟಿದೆಯೆಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನಿನಗೆ. ನೀನೇ ಹೇಳಿದ ಮಾತು- ಸ್ಪರ್ಧೆಯಲ್ಲಿ ಪ್ರೀತಿ ಇರಬೇಕು. ಗೆದ್ದ ಗೆಲುವಿನಲ್ಲಿ ದುಷ್ಟ ಸಂತೋಷ ಇರಬಾರದು.

ಕೇಳು ಹುಡ್ಗಾ, 'ಮಹಾನದಿ ಸಮುದ್ರದೆಡೆಗೆ ಹರಿಯಬೇಕು, ಸಮುದ್ರ ನದಿಯೆಡೆಗೆ ತೆವಳಿಕೊಂಡು ಹೋಗಬಾರದು' ಎಲ್ಲಾ ಸರಿ. ಆದರೆ ನದಿ ಕೂಡಾ ಸಮುದ್ರವನ್ನ ನಿನ್ನೊಳಗೆ ಇಳಿಯಲಾ ಎಂದು ಕೇಳುವುದಿಲ್ಲ. ಸಮುದ್ರ ಬಾ ಅನ್ನುವುದೂ ಇಲ್ಲ ಆದರೆ ನದಿಯನ್ನ ತನ್ನೊಳಗೆ ಕರಗಿಸಿಕೊಳ್ಳಲು ಎಲ್ಲಾ ಸಿಧ್ದತೆ ಮಾಡಿಕೊಂಡು ಕಾಯುತ್ತದಲ್ಲಾ, ಹಾಗೆ ಅವನು ಅರಳಿಕೊಳ್ಳಬೇಕು, ನಾನು ಅವನೆಡೆಗೆ ಹರಿದ ಸದ್ದಿಗೆ ಅವನು ಮಯ್ಯೆಲ್ಲಾ ಕಿವಿಯಾಗಿಸಿಕೊಂಡು ಕಾಯಬೇಕು. ಹುಡುಗ ಮಾತ್ರ ಅಲ್ಲ ಹುಡುಗಿಯೂ ನಿನ್ನ ಪ್ರೀತಿಸುತ್ತೇನೆ ಎಂದು ಇಷ್ಟವಾದ ಹುಡುಗನ ಬಳಿ ಹೇಳಿಕೊಳ್ಳಬಾರದು.ಇಷ್ಟಕ್ಕೂ ಪ್ರೀತಿ ಹೇಳಿಕೊಳ್ಳುವುದಲ್ಲ. ಅರ್ಥ ಮಾಡಿಕೊಳ್ಳುವುದು. ನಾನು ನನ್ನ ವ್ಯಕ್ತಿತ್ವವನ್ನು ಮಡಿಚಿಟ್ಟು ಯಾರಿಗೂ ಶರಣಾಗತಳಾಗುವುದಿಲ್ಲ. .`ಯಾವ ಮನುಷ್ಯ ಯಾವ ಸ್ತರದಲ್ಲಿ ನಿಂತು ಯಾರನ್ನು ಪ್ರೀತಿಸಬಾರದು' ಅನ್ನೋದನ್ನು ತಿಳ್ಕೋಬೇಕು ಅಂದಿದ್ದೆ. ತಿಳ್ಕೊಂಡಿದ್ದೀನಿ ಅಂದ್ಕೊಂಡಿದ್ದೀನಿ. ಅರ್ಥ ಮಾಡಿಕೊಳ್ಳುತ್ತೀಯಾ ಹುಡುಗಾ? ಅರ್ಥ ಮಾಡಿಕೊಳ್ಳಲಾಗದಿದ್ದರೂ ನೀ ಹಿಂಗ ನನ್ನ ನೋಡಬ್ಯಾಡ ನನ್ನ.

(ರವಿ ಬೆಳೆಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯ ನಾಯಕ ಶಿಶಿರ ಇಷ್ಟ ನಂಗೆ. ಅವನಿಗೆ ಬರೆದ ಪತ್ರ ಇದು, ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು)

Wednesday, October 29, 2008

ಯಾರೂ.....??

ಟೆರೇಸಿನ ಮೂಲೆಯೊಂದರಲ್ಲಿ ಜಾಗ ಹಿಡಿದು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದ ಬಬ್ಲಿಯ ಬಳಿಗೆ ಹೋಗಿ ಕೂತೆ. ಅವಳಿಗೆ ಏನೋ ಹೇಳಬೇಕಿತ್ತು ನಾನು. ಹೇಗೆ ಹೇಳುವುದೆಂದು ತಿಳಿಯುತ್ತಿರಲಿಲ್ಲ, ಹೇಳುವುದು ಹೇಗೆಂದು ಯೋಚಿಸುತ್ತಾ ಟೆರೇಸಿನ ಗೋಡೆಯ ಒರಟು ಚರ್ಮಕ್ಕೆ ನನ್ನ ಬೆನ್ನೊರಗಿಸಿ ಕೂತು ನಿಟ್ಟುಸಿರಿಟ್ಟೆ.

ಇದೆಲ್ಲಾ ಶುರುವಾಗಿದ್ದು ಮೂರುದಿನದ ಹಿಂದೆ, ನಾನು ಮಧು ರೂಮಿಗೆ ಹೋಗಿಬಂದಾಗಿನಿಂದ. ಮಾರನೇ ದಿನ ಸೈಕಾಲಜಿ ಇಂಟರ್ನಲ್ಸ್ ಇತ್ತು ನನ್ನ ಬಳಿ ಒಂದು ಪಾಠದ ನೋಟ್ಸ್ ಇರಲಿಲ್ಲ. ಇಡೀ ಹಾಸ್ಟಲ್ಲಿನ ಏಳ್ನೂರುಜನರಲ್ಲಿರುವ ನನ್ನ ಏಕೈಕ ಕ್ಲಾಸ್ ಮೇಟ್ ಎಂದರೆ ಮಧು. ಸರಿ ಈಗ ಮಲಗಿಬಿಡೋಣ ರಾತ್ರಿ ಒಂದು ಗಂಟೆಗೆ ಎದ್ದು ಮಧು ನೋಟ್ಸ್ ಓದಿದರಾಯ್ತು ಎಂದುಕೊಂಡು ಅವಳಿಗೆ ಮೆಸೇಜ್ ಮಾಡ್ದೆ. ಅವಳು ಸರಿ ನಾನು ರೂಮ್ ಬಾಗ್ಲ್ಲುತೆಗ್ದೇ ಇಟ್ಟಿರ್ತೀನಿ ನಾ ಮಲ್ಗಿದ್ರೂ ಫೋಟೋ ಕಾಪೀಸು ಟೇಬಲ್ ಮೇಲಿರುತ್ತೆ ತೊಗೊಂಡು ಹೋಗು ಎಂಬ ಉತ್ತರ ನೋಡಿ ಒಂದು ಗಂಟೆಗೆ ಅಲರಾಮ್ ಇಟ್ಟು ಮಲಗಿದೆ.

ಒಂದು ಗಂಟೆಗೆ ಅಲರಾಮ್ ಹೊಡೀತು ಎದ್ದು ದಡಬಡಿಸಿ ಆರಿಸಿದೆ. ಲಾಲಿ ಪ್ಚ್… ಎಂದು ಸದ್ದು ಮಾಡುತ್ತಾ ಮಗ್ಗಲು ಬದಲಿಸಿದಳು. ಕತ್ತಲಲ್ಲಿ ಚಪ್ಪಲಿ ಹುಡುಕಿ ಹಾಕಿಕೊಂಡು ರೂಮ್ ಹೊರಗೆ ಬಂದು ಲಿಫ್ಟ್ ಮುಂದೆ ಹೋಗಿ ನಿಂತು ಅದರ ಸ್ವಿಚ್ ಒತ್ತಿದೆ. ಎರಡು ನಿಮಿಷದ ನಂತರ ಅದು ಕೆಟ್ಟು ಹೋಗಿರುವುದು ನೆನಪಿಗೆ ಬಂತು. ಗ್ರೌಂಡ್ ಫ್ಲೋರ್ನಲ್ಲಿರುವ ನನ್ನ ರೂಮಿನಿಂದ ಐದನೇ ಮಹಡಿಯಲ್ಲಿರುವ ಮಧು ರೂಮಿಗೆ ಹೋಗುತ್ತಾ ಕೆಟ್ಟು ನಿಂತಿರುವ ಲಿಫ್ಟನ್ನೂ ಕೆಟ್ಟು ನಿಂತು ನಾಲ್ಕು ದಿನವಾದರೂ ಸರಿಮಾಡಿಸುವ ಗೋಜಿಗೆ ಹೋಗದ ವಾರ್ಡನ್ನನ್ನೂ ಶಪಿಸುತ್ತಾ ಸೆಕೆಂಡ್ ಫ್ಲೋರ್ ತಲುಪಿದೆ.ಅಲ್ಲಿನ ಟ್ಯೂಬ್ ಲೈಟ್ ಬೆಳಕು ಎಲ್ಲಾ ಫ್ಲೋರುಗಳ ಬೆಳಕಿಗಿಂತ ಪ್ರಕಾಶಮಾನವಾಗಿದೆಯಾ ಎಂಬ ಅನುಮಾನವು ಬಗೆಹರಿಯುವ ಮೊದಲೇ ಮೂರನೇ ಮಹಡಿಯಲ್ಲಿ ಲೈಟೇ ಇಲ್ಲ ಎಂಬ ವಾಸ್ತವ ಲೈಟ್ ಆರಿಸಿದವರ ಮೇಲೆ ಸಿಟ್ಟು ತರಿಸಿತು. ಅದೇ ಸಿಟ್ಟಿನಲ್ಲಿ ಮೂರನೇ ಮಹಡಿ ತಲುಪಿ ಲೈಟ್ ಆನ್ ಮಾಡಲು ಸ್ವಿಚ್ ಬೋರ್ಡ್ ಬಳಿ ಹೋದರೆ ನನ್ನ ತಡೆದಿದ್ದು ಆಹ್… ಎಂದು ವಿಚಿತ್ರವಾಗಿ ನರಳುತ್ತಿರುವ ಸದ್ದು ಒಂದು ನಿಮಿಷ ಪ್ರೇತಾತ್ಮಗಳ ಕಲ್ಪನೆ ಬಂದು ಭಯವಾಗಿ ಸಹವಾಸ ಅಲ್ಲ ಎಂದುಕೊಂಡು ಲೈಟ್ ಹಾಕುವ ಸಾಹಸಕ್ಕೆ ಹೋಗದೆ ಅತ್ತಿತ್ತ ನೋಡದೆ ಮೆಟ್ಟಿಲುಗಳನ್ನು ತುಳಿದು ಮಧು ರೂಮ್ ಮುಟ್ಟಿ ಸಮಾಧಾನದ ಉಸಿರು ತೆಗೆದುಕೊಂಡೆ.

ಆದರೆ ತಕ್ಷಣ ನನ್ನ ಕಲ್ಪನೆಗಳ ಬಗ್ಗೆ ನನಗೇ ನಗು ಬಂತು. ಕೆಳಗೆ ಹೋಗುವಾಗಲಾದರೂ ಆ ಏನಿರಬಹುದೆಂದು ನೋಡಿಕೊಂಡೇ ಹೋಗಬೇಕೆಂಬ ಧೃಡ ನಿರ್ಧಾರ ಮಾಡಿ ಫೋಟೋಕಾಪಿಗಳನ್ನು ತೆಗೆದುಕೊಂದು ಮೂರನೇ ಫ್ಲೋರ್ ತಲುಪಿದೆ. ಆದರೆ ಅಲ್ಯಾವ ಸದ್ದೂ ಇರಲಿಲ್ಲ ಆದರೂ ಅಲ್ಲೆಲ್ಲಾ ಅಡ್ದಾಡಿದೆ. ಎನೂ ಕಾಣಲಿಲ್ಲ. ನಿರಾಸೆಗೊಂಡು ರೂಮ್ ತಲುಪಿ ಓದುತ್ತಾ ಕೂತೆ.

ಸುಮಾರು ಮೂರು ಗಂಟೆಯ ಹೊತ್ತಿಗೆ ಪಕ್ಕದ ರೂಮಿನಲ್ಲಿ ಯಾರೋ ಎದ್ದ ಸದ್ದಾಯಿತು. ಹೊರಬಂದು ನೋಡಿದೆ. ಬಬ್ಲಿ ಬ್ರಷು ಪೇಸ್ಟು ಹಿಡಿದುಕೊಂಡು ನಿದ್ದೆಗಣ್ಣಲ್ಲಿ ಬಾತ್ರೂಮ್ ಕಡೆಗೆ ಹೊರಟಿದ್ದಳು. ಅವಳಿಗೆ ನಾಳೆ ಬಿಸ್ನೆಸ್ ಎಕನಾಮಿಕ್ಸ್ ಪರೀಕ್ಷೆ ಇತ್ತು. ನಾನೂ ಅವಳೂ ಬೇರೆ ಬೇರೆ ಕೋರ್ಸ್ ತೆಗೆದುಕೊಂಡಿದ್ದರೂ ಚಿಕ್ಕಂದಿನಿಂದ ಒಳ್ಳೆಯ ಸ್ನೇಹಿತರು. ಅವಳಿಗೆ ದೇವರು ದೆವ್ವ ಎಲ್ಲದರಲ್ಲಿ ಅತ್ಯಂತ ನಂಬಿಕೆ. ನಾನು ನಂಬಿಕೆ ಇದೆಯೋ ಇಲ್ಲವೋ ಎಂದು ನನಗೇ ಗೊತ್ತಿಲ್ಲದ ಎಡಬಿಡಂಗಿ. ಅವಳನ್ನು ಸುಮ್ಮನೆ ಹೆದರಿಸೋಣವೆನ್ನಿಸಿತು. ‘ಬಬ್ಲಿ ಪ್ಲೀಸ್ ಕಣೇ ಈಗ ಮಾತ್ರ ಬಾತ್ರೂಮ್ಗಳ ಕಡೆ ಹೋಗ್ಬೇಡ ಎಂದೆ.’ ಇವಳಿಗೇನಾಗಿತು ಎನ್ನುವಂತೆ ವಿಚಿತ್ರವಾಗಿ ನೋಡಿದಳು. ‘ಹೋಗಬೇಡ ಅಷ್ಟೇ ನಾ ಹೇಳಿದ್ದನ್ನ ಕೇಳು.’ ಎಂದು ನನ್ನ ರೂಮಿಗೆ ಎಳೆದುಕೊಂಡು ಹೋಗಿ ನನಗಾದ ಅನುಭವವನ್ನ ವಿತ್ ಆಡಿಯೋ ವೀಡಿಯೋ ಎಫೆಕ್ಟ್ ವಿವರಿಸಿ ಹೇಳಿದೆ.

ಆಮೇಲೆ ನಮ್ಮ ಸಂವಾದ ಹೀಗಿತ್ತು
ಬಬ್ಲಿ: ಎಷ್ಟ್ ಗಂಟೆಗೆ ನೆಡೆದಿದ್ದು ಹೇಳು?
ನಾನು: ಒಂದು ಗಂಟೆಗೆ!
ಬಬ್ಲಿ: ಹಂಗಾದ್ರೆ ಆ ಸದ್ದು ಖಂಡಿತ ದೆವ್ವದ್ದೇ..
ನಾನು: ಆಂ.. ಯಾಕೆ? (ನನಗೆ ನಗು ಬರುತ್ತಿತ್ತು)
ಬಬ್ಲಿ: ಮಂಗನ್ ಥರ ಆಡ್ಬೇಡ ಸ್ವಲ್ಪ ಸೀರಿಯಸ್ಸಾಗಿರೋದು ಕಲಿ ರಾತ್ರಿ ಒಂದು ಗಂಟೆಗೆ ಈವಿಲ್ ಸ್ಪಿರಿಟ್ಸ್ ಇವೋಕ್ ಆಗುತ್ತೆ ಅಂತಾರೆ
ನಾನು: ಯಾರು ಅಂತಾರೆ?
ಬಬ್ಲಿ: ನಾನು ದಿ ಎಕ್ಸಾರ್ಸಿಸ್ಟ್ ಮೂವಿಲಿ ನೋಡಿದ್ದೆ (ನನಗೆ ನಗು ತಡೆಯಲಾಗಲಿಲ್ಲ) ನಗ್ಬೇಡ ಆ ಸಿನೆಮಾನ ನೈಜ ಘಟನೆ ಆಧರಿಸಿ ಮಾಡಿರೋದು.
ನಾನು: ಸರಿ ಹಂಗಾದ್ರೆ ನಾಳೆನೂ ಒಂದ್ ಗಂಟೆಗೆ ಹೋಗಿ ನೋಡಣ ಬರ್ತೀಯಾ. ನಿನ್ ದೆವ್ವ ಕಾಣ್ಸುತ್ತಾ ಅಂತ? ಬಬ್ಲಿ: ಬೇಕಾದ್ರೆ ನಿಂಗ್ ತಲೆ ಕೆಟ್ಟಿದ್ರೆ ನೀ ಹೋಗು ನಾನು ಬರಲ್ಲ!
ನಾನು: ಏ ಹೆದ್ರ್ಬೇಡ ಕಣೇ ಈ ಹುಡ್ಗೀರು ಹೊತ್ತಲದ್ ಹೊತ್ನಲ್ ಫೋನಲ್ ಮಾತಾಡ್ತಿರಲ್ವ? ಆ ಸೌಂಡೇ ಇರ್ಬೇಕು ಅದು. ದೆವ್ವ ಅಲ್ಲ ಅಂತ ನಾ ಪ್ರೂವ್ ಮಾಡ್ತಿನಿ ಬಾ ನನ್ಜೊತೆ.
ಬಬ್ಲಿ: ನಾ ಬರಲ್ಲ! ನೀನೂ ಹೋಗಬಾರದು . ಸಾಕು ಆ ವಿಷ್ಯ ಮಾತಾಡಿದ್ದು ಓದ್ಕ. ಎಂದು ಎದ್ದು ಹೋಗಿ ಮತ್ತೆ ಮಲಗಿಕೊಂಡಳು!

ಆ ಸದ್ದು ಹೇಗೆ ಬರುತ್ತಿತ್ತೆಂದು ಕಂಡುಹಿಡಿಯಲೇಬೇಕೆನ್ನಿಸಿತು ನನಗೆ. ಈ ಗೂಬೆ ಬರ್ದೇ ಹೋದ್ರೆ ಪರವಾಗಿಲ್ಲ ನಾನಂತೂ ಹೋಗಿ ನೋಡೋದೇ ಎಂದು ನಿರ್ಧರಿಸಿದೆ. ಇಂಟರ್ನಲ್ಸ್ ಮುಗಿದ ರಾತ್ರಿ ‘ಮೊಗ್ಗಿನ ಮನಸು’ ಸಿನೆಮಾ ನೋಡಿ ಬಂದು ಸುಮಾರು ಹತ್ತು ಗಂಟೆಯ ಹೊತ್ತಿಗೆ ಮಲಗಿದೆವು.

ರಾತ್ರಿ ಒಂದು ಗಂಟೆಗೆ ಅಲರಾಮ್ ಹೊಡೀತು. ಎದ್ದು ರೂಮಿನಿಂದ ಹೊರಬರುವ ಹೊತ್ತಿಗೆ ಬಬ್ಲಿಯೂ ನಿಂತಿದ್ದಳು. ‘ನೀನೂ ಬರ್ತೀಯಾ? ‘ ನನಗೆ ಆಶ್ಚರ್ಯವಾಯಿತು. ‘ನಿನ್ ಫ್ರೆಂಡಾದ್ಮೇಲೆ ಇನ್ನೇನ್ ಮಾಡಕ್ಕಾಗತ್ತೆ ನನ್ ಕರ್ಮ!’ ಬೈದುಕೊಂಡಳು. ಇಬ್ಬರೂ ಸದ್ದು ಮಾಡದೆ ಮೂರನೇ ಫ್ಲೋರ್ಗೆ ಹೋದೆವು. ಅದೇ ರೀತಿಯ ಸದ್ದು ಬಬ್ಲಿ ನನ್ನ ಮುಖ ನೋಡಿ ಬಾರೆ ಹೋಗಣ ಇದು ಖಂಡಿತಾ ದೆವ್ವಾನೇ ಪಿಸುಗುಟ್ಟಿದಳು. ನೀನು ಬೇಕಾದ್ರೆ ಹೋಗು ನಂಗೆ ಡಿಸ್ಟರ್ಬ್ ಮಾಡ್ಬೇಡ ಬೈದೆ. ಅಲ್ಲೇ ನಿಂತಳು.

ನೀ ಇಲ್ಲೇ ನಿಂತಿರು ನಾನು ಆ ಕಾರಿಡಾರಿನ ಕಡೆಯಲ್ಲಿ ನೋಡ್ಕೊಂಡ್ ಬರ್ತೀನಿ ಎಂದು ನಾನು ಹೇಳುವ ಹೊತ್ತಿಗೆ, ಸರಿ ನಾನು ಇಲ್ಲಿ ಬಾತ್ ರೂಮ್ಗಳ ಕಡೆ ನೋಡಿ ಬರ್ತೀನಿ ಅಂದ್ಲು. ಕೆಟ್ಟ ಧೈರ್ಯದಿಂದ ಉದ್ದದ ಕತ್ತಲೆ ಕಾರಿಡಾರಿನ ತುಂಬ ಅಲೆದಾಡಿದೆ. ಉದ್ದಕೆ ಚಾಚಿಕೊಂಡಿರುವ ಕಾರಿಡಾರು, ಕಾರಿಡಾರಿನ ಎರಡೂ ಬದಿಗೆ ರೂಮುಗಳು. ಅಲ್ಲಿ ಯಾರೂ ಇರಲ್ಲಿಲ್ಲ! ಬಾತ್ರೂಮ್ನ ಕಡೆಯಿಂದ ಬಬ್ಲಿ ಜೋರಾಗಿ ಕಿರುಚಿಕೊಂಡಳು! ಆ ದಿಕ್ಕಿಗೆ ಓಡಿದೆ. ಅಲ್ಲಿಂದ ಹೊರಬಂದ ಬಬ್ಲಿ ನನ್ನ ಕೈಹಿಡಿದುಕೊಂಡು ದಡ ದಡ ಕೆಳಗಿಳಿಯತೊಡಗಿದಳು! ‘ಏನಾಯ್ತು ಏನಿತ್ತು ಅಲ್ಲಿ..?’ ‘ಹೌದು ನೀ ಹೇಳಿದ್ದೇ ಸರಿ ಯಾವ್ದೋ ಹುಡ್ಗಿ ಫೋನ್ನಲ್ಲಿ ಮಾತಾಡ್ತಿದ್ಲು. ನಾನು ಅವ್ಳನ್ನೇ ಕಾನ್ಸಂಟ್ರೇಷನ್ನಿಂದ ನೋಡ್ತಾ ಏನ್ ಮಾತಾಡ್ತಿದಾಳೆ ಅಂತ ಕೇಳ್ತಿದ್ನಾ ಅಷ್ಟರೊಳಗೆ-’ ‘ಅಷ್ಟರೊಳಗೆ ದೆವ್ವಾ ಬಂದ್ಬಿಡ್ತಾ?’ ನನ್ನ ಪ್ರಶ್ನೆ. ‘ಥೂ ನಿನ್ನ! ಜಿರಳೆ .. ಜಿರಳೆ ಬಿತ್ತು ನನ್ ಮೇಲೆ! ಅದ್ಕೆ ಕಿರಿಚ್ಕೊಂಡೆ.’ ಅಂದ್ಲು.

ಥೂ ಈ ಜಿರಳೆ ಹಲ್ಲಿಗಳಿಗೆಲ್ಲಾ ಹೆದ್ರುಕೊತೀಯಲ್ಲ ಎಂದು ಬೈದುಕೊಂಡರೂ ನಾನೂ ಅಂಥವಳೇ ಆದ್ದರಿಂದ ಸುಮ್ಮನಾದೆ.

+++

ಈ ಘಟನೆ ನೆಡೆದ ಮರುದಿನ ಸಂಜೆ ಕಾಲೇಜು ಮುಗಿದಮೇಲೆ ಕಾಲೇಜು ಬಸ್ಸಿಗೆ ಎಂದಿನಂತೆ ಕಾಯುತ್ತಾ ನಿಂತಿದ್ದೆ. ಬಸ್ಸು, ಬಾಧೂಳಿಯನ್ನು(ಗೋಧೂಳಿ ಥರ-ಬಸ್ಸು ಸೃಷ್ಟಿಸುವ ಧೂಳು) ಅಲ್ಲಿ ನಿಂತವರಿಗೆಲ್ಲಾ ಅಭಿಷೇಕ ಮಾಡಿಸುತ್ತಾ ಬಂದು ನಮ್ಮೆಲ್ಲರ ಮುಂದೆ ನಿಂತಿತು. ಹತ್ತಲು ಹೋದೆ ಯಾರೋ ಬ್ಯಾಗ್ ಹಿಡಿದು ಎಳೆಯುತ್ತಿದ್ದಾರೆ ಹತ್ತಲು ಬಿಡುತ್ತಿಲ್ಲ ಅನ್ನಿಸಿತು, ತಿರುಗಿ ನೋಡಿದೆ ಯಾರೂ ಇಲ್ಲ. ಆದರೆ ಹತ್ತಲು ಮಾತ್ರ ಆಗುತ್ತಿಲ್ಲ ‘ಎಂತದಾ ಬೇಗ ಬೇಗ ಹತ್ತಿ ಲೇಟ್ ಮಾಡದ್ ಎಂತಕ್ಕೆ’ ಅಂದರು ಡ್ರೈವರ್ ಅಣ್ಣ. ಅಣ್ಣಾ ಯಾರೋ ಬ್ಯಾಗ್ ಎಳೀತಿದಾರೆ ಹತ್ತಕ್ ಬಿಡ್ತಿಲ್ಲ ಅಂತ ಹೇಳಕ್ ಹೋದೋಳು ಹುಚ್ಚು ಅಂದುಕೊಂಡಾರೆಂದು, ಅಣ್ಣಾ ಹತ್ತಕ್ ಆಗ್ತಿಲ್ಲ ಅಂದೆ. ಅಲ್ಲಿಂದ ಧಡಾರೆಂದು ಎದ್ದ ಅಣ್ಣ ಮೇಲೆಳೆದು ಹತ್ತಿಸಿಕೊಂಡು ನನ್ನ ಕೈಗೆ ಬಸ್ ಕೀ ಕೊಟ್ಟು, ನೀರು ಬೇಕಾ? ಸುಸ್ತಾಗ್ತಿದೆಯಾ? ಅಂದರು ನನಗೆ ಒಂದೂ ಅರ್ಥವಾಗಲಿಲ್ಲ. ಪಾಪ ಎಷ್ಟು ವರ್ಷದಿಂದ ಫಿಟ್ಸ್ ಇದೆ ಅಂತ ಪರಿತಾಪ ಬೇರೆ. ನಾನು ತಲೆ ಚಚ್ಚಿಕೊಳ್ಳುವುದೊಂದು ಬಾಕಿ!

ಹಾಸ್ಟಲ್ಲಿಗೆ ಬಂದು ಅಟೆಂಡೆನ್ಸ್ ಕೊಡಲು ಹೋದೆ ವಾರ್ಡನ್ನು ‘ನಯ್ನಿ ನಿನ್ ಫ್ರೆಂಡ್ ಬಬ್ಲಿಗ್ಯಾರೋ ಸಿ.ಡಿ ಕೊಟ್ಟೋಗಿದಾರೆ ಕೊಟ್ಬಿಡು ಅವ್ಳಿಗೆ. ಅವ್ಳಿನ್ನು ಕಾಲೇಜಿನಿಂದ ಬಂದಿಲ್ಲ ಅಲ್ವ?’ ಎನ್ನುತಾ ಸಿಡಿಯೊಂದನ್ನು ನನ್ನ ಕೈಗಿತ್ತರು. ಮ್ಯಾಮ್ ಯಾರ್ ಕೊಟ್ಟಿದ್ದು ಕೇಳಿದೆ. ಗೊತ್ತಿಲ್ಲ ನಾನು ಮೆಸ್ ಬಿಲ್ಲ್ ಬರೀತಿದ್ದೆ ಈ ಸಿ ಡಿನ ಬಬ್ಲಿಗೆ ಕೊಟ್ಬಿಡಿ ಅಂದ್ರು ಸರಿ ಅಂದೆ. ನಿಮ್ಮ್ ಹೆಸ್ರೇನು ಅಂತ ಕೇಳಬೇಕು ಅನ್ಕೊಳೋ ಹೊತ್ತಿಗೆ ಅವ್ರು ಹೋಗ್ಬಿಟ್ಟಿದ್ರು. ಯಾವ್ದೋ ಹುಡ್ಗಿ ಅಂದ್ರು. ಸಿಡಿ ಮೇಲೂ ಯಾವ ಹೆಸರೂ ಇರಲಿಲ್ಲ. ಥ್ಯಾಂಕ್ ಯೂ ಹೇಳಿ ತೆಗೆದುಕೊಂಡು ಬಂದೆ. ಬಬ್ಲಿ ಬಂದ ಮೇಲೆ ಅವಳಿಗೆ ಸಿ ಡಿ ಕೊಟ್ಟು ವಾರ್ಡನ್ ಹೇಳಿದ್ದನ್ನೇ ಹೇಳಿ, ಯಾವ ಸಿ ಡಿ ಹಾಕಿ ನೋಡು ಅಂದೆ ಅದಕ್ಕವಳು ನಾನು ಲ್ಯಾಪ್ ಟಾಪ್ ತಂದು ಒಂದು ವಾರನೂ ಆಗಿಲ್ಲ ನನ್ ಹತ್ರ ಲ್ಯಾಪ್ ಟಾಪ್ ಇದೆ ಅಂತ ನಿನ್ಗೆ ಲಾಲಿಗೆ ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಾಲಿಗೆ ಏನಾದ್ರೂ ಕೊಡಕ್ಕಿದ್ರೆ ನಂಗೇ ಡೈರೆಕ್ಟಾಗಿ ಕೊಟ್ಟಿರೋಳು ಮತ್ತ್ಯಾರು ನಂಗೆ ಕೊಡ್ತಾರೆ ಇದನ್ನ ಅಂತ ತಲೆಕೆಡೆಸಿಕೊಂಡಳು. ಯಾರಾದ್ರೂ ತಂದು ಕೊಟ್ಟಿರಲಿ ಏನಿದೆ ನೋಡಣ ಹಾಕು ಅಂದೆ. ಬೇಡ ಕಣೇ ಪ್ಲೀಸ್. ಆಮೇಲ್ ನೋಡಣ ಈಗ ಬೇಡ ಅಂದಳು. ಇವಳಿಗೇನೋ ಆಗಿದೆ ಅನ್ನಿಸಿತು. ಸಂಜೆ ಬಸ್ ಹತ್ತುವಾಗ ನಡೆದ ಘಟನೆಯನ್ನು ಹೇಳಬೇಕೆನಿಸಿದರೂ, ಇದಕ್ಕೂ ದೆವ್ವದ ಕೈವಾಡವೇ ಕಾರಣ ಎಂದಾಳೆಂದೆನ್ನಿಸಿ ಏನೂ ಹೇಳದೇ ಸುಮ್ಮನಾದೆ.

ಅವತ್ತು ರಾತ್ರಿ ಒಂದು ಗಂಟೆಗೆ ಮತ್ತೆ ಎಚ್ಚರವಾಯಿತು, ಅಲರಾಮ್ ಇಟ್ಟಿರಲಿಲ್ಲ. ಎದ್ದು ಕೂತೆ ಮತ್ತೆ ಆ ಸದ್ದು ಥೇಟ್ ಅದೇ ರೀತಿ. ಲಾಲಿಗೂ ರಾತ್ರಿಯೆಲ್ಲಾ ಫೋನಲ್ಲಿ ಮಾತಾಡುತ್ತಾ ನರಳುವ ಬುದ್ದಿ ಅಂಟಿಕೊಂಡಿತಾ ಎಂದು ಅನುಮಾನವಾಗಿ ಲೈಟ್ ಆನ್ ಮಾಡಿದೆ, ಸದ್ದು ನಿಂತಿತು. ನೋಡಿದರೆ ಲಾಲಿ ಹೊದ್ದು ಮಲಗಿದ್ದಳು. ಬೆಡ್ಶೀಟ್ ಒಳಗೆ ನುಸುಳಿಕೊಂಡೇ ಮಾತಾಡುತ್ತಿರಬಹುದಾ ಎಂದು ಮತ್ತೊಂದು ಅನುಮಾನವಾಯಿತು. ಲಾಲಿ ನಿನ್ ಮೊಬೈಲ್ ಕೊಡು ಅಂದೆ. ಅದಕ್ಕೆ ಲಾಲಿ ಏನೇ ನಿಂದು ಹಿಂಸೆ ಈ ರಾತ್ರಿ ಹೊತ್ನಲ್ಲಿ ಮೊಬೈಲ್ ಅಲ್ಲೇ ಟೇಬಲ್ ಮೇಲಿದೆ ನೋಡು ಚಾರ್ಜ್ ಗೆ ಹಾಕಿದೀನಿ ಅಂದಳು. ನನಗೆ ನಿದ್ದೆ ಬರಲಿಲ್ಲ.

+++

ಮಾರನೇ ದಿನ ಮತ್ತೆ ಬಸ್ ಹತ್ತುವಾಗ ಅದೇ ಅನುಭವವಾಯಿತು. ‘ದಿಸ್ ಈಸ್ ಟೂ ಮಚ್’ ನನಗೇನಾಗಿದೆ ಸೈಕಾಲಜಿಕಲ್ ಡಿಸಾರ್ಡರ್ ಏನಾದರೂ ಶುರುವಾಗಿದೆಯೇನೋ ಅನುಮಾನವಾಯಿತು. ಖಂಡಿತ ಅದೇ ಇಲ್ಲಾಂದ್ರೆ ಹಿಂಗೆಲ್ಲಾ ಆಗೋಕ್ಕೆ ಸಾಧ್ಯನೇ ಇಲ್ಲ. ಅವತ್ತು ಸೈಕಾಲಜಿ ಲೆಕ್ಚರರ್ ಹೇಳುತ್ತಿದ್ದು ಜ್ನಾಪಿಸಿಕೊಂಡೆ. ವಿಸ್ಯುಯಲ್ ಹಾಲೋಸಿನೇಷನ್, ಆಡಿಟರಿ ಹಾಲೊಸಿನೇಷನ್, ಗಸ್ಟೇಟರೀ ಹಾಲೋಸಿನೇಷನ್… ಥೂ ನನಗೇ ಎಲ್ಲಾ ಕಷ್ಟಾ ಅಂತ ದುಃಖ ಬೇರೆ ಆಗುತ್ತಿತ್ತು… ಇದನ್ನೆಲ್ಲಾ ಹೇಳಿಕೊಳ್ಳೋಣವೆಂದೇ ಬಬ್ಲಿ ಬಳಿ ಕೂತಿದ್ದೆ. ಹೇಳೋದನ್ನು ಕೇಳಿ ನಕ್ಕುಬಿಟ್ಟರೆ ಅನುಮಾನವಾಯಿತು. ನಕ್ಕರೆ ನಗಲಿ ಎಂದುಕೊಂಡು ಹೇಳೂಬಿಟ್ಟೆ. ಬಾ ಎಂದು ರೂಮಿಗೆಳೆದುಕೊಂಡು ಹೋದಳು ಬಬ್ಲಿ. ಏನೆಂದು ಕೇಳಿದರೆ ಮಾತೇ ಆಡುತ್ತಿಲ್ಲ. ರೂಮ್ ಬಾಗಿಲ ಬೋಲ್ಟ್ ಜಡಿದು ಲ್ಯಾಪ್ ಟಾಪ್ ಆನ್ ಮಾಡಿದಳು. ಇದು ನೆನ್ನೆ ನೀನು ಕೊಟ್ಯಲ್ಲ, ನಂಗ್ಯಾರೋ ಕೊಟ್ಟುಹೋದರು ಅಂತ ಆ ಸಿಡಿ ಎನ್ನುತ್ತಾ ಅದನ್ನು ಹಾಕಿ ಪ್ಲೇ ಮಾಡಿದಳು. ಅಲ್ಲೂ ಅದೇ ಸದ್ದು ಅದೇ ನರಳುವ ಸದ್ದು. ನನ್ಗೆ ಚಿಟ್ಟು ಹಿಡಿಯುವುದೊಂದು ಬಾಕಿ.

ಅಷ್ಟರೊಳಗೆ ಬಾಗಿಲು ಬಡಿದರು. ಲ್ಯಾಪ್ ಟಾಪ್ ಆಫ್ ಮಾಡಿ ರೂಮ್ ಬಾಗಿಲು ತೆರೆದರೆ ಲಾಲಿ ‘ಗೊತ್ತಾಯ್ತೇನ್ರೇ ವಿಶ್ಯಾ.. ಆ ಮಲೆಯಾಳಿ ಹುಡುಗೀರಿದ್ರಲ್ಲಾ ಯಾವಾಗ್ಲೂ ಜೊತೆಗೇ ಓಡಾಡ್ಕೊಂಡಿದ್ರಲ್ಲಾ ನರ್ಸಿಂಗ್ ಕಾಲೇಜೋರು ಅವ್ರಿಬ್ಬರ ಡೆಡ್ ಬಾಡೀಸ್ ಫಾರ್ಮರ್ ಫುಡ್ ಬಾವೀಲಿ ಸಿಕ್ಕಿದ್ಯಂತೇ ಪೋಲೀಸೆಲ್ಲಾ ಬಂದಿದಾರಂತೆ ನೋಡ್ಕೊಂಡ್ ಬರಣಾ ಬನ್ರೇ’ ಎಂದಳು ಏದುಸಿರಿಡುತ್ತಾ.. ನಂಗೆ ಆಶ್ಚರ್ಯವಾಯಿತು. ಬಾರೆ ಬಬ್ಲಿ ಹೋಗಣ ಅಂದ್ರೆ ಇಲ್ಲ ಬೇಡ ನಾ ಬರಲ್ಲ ನೀನೂ ಹೋಗ್ಬೇಡ. ಲಾಲಿ ನೀನು ಹೋಗು ನಾವು ಬರಲ್ಲ ಅಂದ್ಲು. ಎಲ್ಲದಕ್ಕೂ ಬೇಡ ಬೇಡ ಅಂತೀಯಲ್ಲ ಏನಾಗಿದೆ ನಿಂಗೆ ಅಂದೆ. ಅವಳ ಕಣ್ಣಲ್ಲಿ ಜಲಪಾತ.

ನಯ್ನೀ ಎರೆಡು ದಿನದ ಹಿಂದೆ ಥರ್ಡ್ ಫ್ಲೋರ್ ಬಾತ್ ರೂಮಿನಿಂದ ಕಿರುಚಿಕೊಂಡು ಬಂದ್ನಲ್ಲ ಆವಾಗ ನಾನು ನೋಡಿದ್ದು ಜಿರಲೆನಲ್ಲ ಅಲ್ಲ್ಯಾರೂ ಫೋನ್ನಲ್ಲೂ ಮಾತಾಡುತ್ತಿರಲಿಲ್ಲ. ಈಗ ಲಾಲಿ ಹೇಳಿದ್ಲಲ್ಲ ಆ ಹುಡ್ಗೀರು ಬಾತ್ ರೂಮ್ನಲ್ಲಿ ಈ ಲೋಕದ ಪ್ರಗ್ನೇನೇ ಇಲ್ಲದೋರ ಥರ ಒಬ್ಬರ ಬೆತ್ತಲೆ ದೇಹನ ಇನ್ನೊಬ್ಬರು ತಬ್ಬಿಕೊಂಡು ಮಲ್ಗಿದ್ರು, ನಂಗೆ ಅಸಹ್ಯ ಆಗಿ ಕಿರುಚಿಕೊಂಡೆ. ನಾ ನೋಡಿದೆ ಅಂತಾನೇ ಅವ್ರು ಆತ್ಮಹತ್ಯೆ ಮಾಡ್ಕೊಂದಿರ್ಬೇಕು ಬಿಕ್ಕಳಿಸಿದಳು. ನನಗೆ ಆಘಾತ! ಹೇಗೆ ಪ್ರತಿಕ್ರಯಿಸಬೇಕೆಂದೇ ತಿಳಿಯಲಿಲ್ಲ.. ಇಬ್ಬರೂ ಆ ವಿಶಯವನ್ನು ಯಾರಿಗೂ ಹೇಳಬಾರದೆಂದು ನಿರ್ಧರಿಸಿದೆವು.

ಮಾರನೇ ದಿನ ಕಾಲೇಜಿಗೆ ಹೊರಟೆ ಹೊರಡುವ ಮೊದಲು ಇಂಟರ್ನಲ್ಸ್ ಮಾಕ್ಸಿಗೆ ಸೈನ್ ಹಾಕಿಸಿಕೊಳ್ಳೋಣವೆಂದು ವಾರ್ಡನ್ ರೂಮಿಗೆ ಹೋದೆ. ವಾರ್ಡನ್ ಜೊತೆ ಪೋಲೀಸ್ ಮಾತಾಡುತ್ತಾ ಕೂತಿದ್ದರು ಅವರು ಹೇಳೋದು ಕೇಳಿಸಿತು ‘ಪೊಸ್ಟ್ ಮಾರ್ಟಮ್ ರಿಪೋರ್ತ್ಸ್ ಬಂದಿದೆ ಈ ಹುಡುಗೀರು ಸತ್ತು ಆಗ್ಲೇ ಐದು ದಿನ ಆಗಿದೆ…. ಮುಂದಿನದೇನು ಕೇಳಿಸಲಿಲ್ಲ. ಬಬ್ಲಿ ಎರಡು ದಿನದ ಹಿಂದಷ್ಟೇ ಅವರನ್ನು ನೋಡಿದೆ ಎಂದಳಲ್ಲ ಅವಳು ನೋಡಿದ್ದಾದರೂ ಏನು! ಅವಳು ಹೇಳಿದ್ದು ನಿಜವಾ ಏನೂ ಅರ್ಥ ಆಗಲಿಲ್ಲ ನನಗೆ. ನಾನು ಕುಸಿದು ಕೂತೆ!

Friday, October 24, 2008

ಹಾಗೆ ಹಿಂಸೆಪಟ್ಟುಕೊಂಡು ಇರಬಾರದು ಹುಡುಗ...

ಮುಂಜಾವಿನ ಮುದ್ದು ಬಿಸಿಲೇ…

ಇಷ್ಟೆಲ್ಲಾ ದೂರ ಹೋಗ್ತೀವಿ ಅಂದ್ಕೊಂಡಿರಲಿಲ್ಲ ಅನ್ನೋದಕ್ಕೆ ಇಷ್ಟು ದೂರ ಹೋಗಲ್ಲ ಅಂದುಕೊಂಡಿರಲೂ ಇಲ್ಲ. ಸುಮ್ಮನೆ ಹಾಗೇ ಏನಾದರೂ ಘಟಿಸಲಿ ಎನ್ನುವಂತೆ ಇದ್ದುಬಿಟ್ಟೆವಲ್ಲ ಇಬ್ಬರೂ.

ನಾನು ನಿನ್ನ ಕೆನ್ನೆಗೆ ಮುತ್ತಿಟ್ಟು ಕಿವಿ ಕಚ್ಚಿದ್ದು, ನೀನು ಆಗತಾನೇ ಸಿಗರೇಟು ಸೇದಿದ ತುಟಿಯನ್ನೇ ನನ್ನ ತುಟಿಗೆ ಒತ್ತಿದ್ದು, ಅಂಥದ್ದು, ಅದಕ್ಕಿಂತ ಹೆಚ್ಚಿನದು ನೂರಾರು ಸಾರಿ ಆಗಿದ್ದು, ಉಹು ಅದನ್ನ ನೆನಪಿಸೋಕ್ಕೆ ಪತ್ರ ಬರೀತಿಲ್ಲ.

ನೀನು ಆಗಾಗ ಫೋನ್ನಲ್ಲಿ ಕದ್ದು ಮಾತಾಡುವ ನಿನ್ನ ಗರ್ಲ್ ಫ್ರೆಂಡುಗಳ ಬಗ್ಗೆ ಮಾತಾಡಿದರೆ ಬುದ್ಧಿ ಇಲ್ಲದವಳಾಗುತ್ತೇನೆ. ಗರ್ಲ್ ಫ್ರೆಂಡುಗಳು ಅಂತ ಹೇಳುವುದರಲ್ಲಿ ನನ್ನ ಸ್ವಂತದ್ದೊಂದು ಸಮಾಧಾನವಿದೆ. ಬಹಳಷ್ಟು ಜನ ಹುಡುಗಿಯರಿದ್ದಾರೆ ಯಾರನ್ನೂ ಹಚ್ಚಿಕೊಳ್ಳುವ ಜಾಯಮಾನವಲ್ಲ ಇವನದ್ದು ಅನ್ನೋ ನಂಬಿಕೆ. ಇಲ್ಲ ನಿನಗೆ ಒಬ್ಬಳೇ ಗರ್ಲ್ ಫ್ರೆಂಡ್ ಎಂದುಕೊಂಡುಬಿಟ್ಟರೆ ಈ ಪತ್ರಕ್ಕೂ ಅರ್ಥವಿರುವುದಿಲ್ಲ.

ಅವನ ಜೊತೆ ಅವತ್ತು ನಾನು ಮೊಬೈಲ್ನಲ್ಲಿ ಮಾತಾಡುತ್ತಿದ್ದಾಗ ನೀನು ನನ್ನ ಕೈಯಿಂದ ಮೊಬೈಲ್ ಕಿತ್ತುಕೊಂಡು ಎಸೆದೆಯಲ್ಲಾ, ಆವಾಗಲೇ ಅರ್ಥವಾಗಿದ್ದು you can be so furious ಅಂತ. ಆಮೇಲೆ ಇಬ್ಬರೂ ಅತ್ತೆವಲ್ಲಾ ಒಟ್ಟಿಗೇ ಕೂತು. ‘ನಾನು ಪೊಸೆಸ್ಸಿವ್ ಅನ್ನ್ಸ್ತೀನಾ ಚಿನ್ನ? ಹಿಂಸೆ ಮಾಡ್ತಿದೀನ ನಾನು ನಿಂಗೆ? ನಂಗೆ ಅವ್ನು ಇಷ್ಟ ಇಲ್ಲ ಕಣೇ, ನಂಗೆ ಕಷ್ಟ ಆಗುತ್ತೆ. ಸಾರಿ. ನನ್ನೆದುರಿಗೆ ಅವ್ನ ಜೊತೆ ಮಾತಾಡ್ಬೇಡ ಪ್ಲೀಸ್. ನಾನಿಲ್ದಿರೋವಾಗ ಎಷ್ಟ್ಬೇಕಾದ್ರೂ ಮಾತಾಡು ನಾನು ಬೇಡ ಅನ್ನಲ್ಲ.’ ಎನ್ನುತ್ತಿದ್ದ ನಿನ್ನ ಮುದ್ದುಗರೆಯಬೇಕೆನಿಸಿತ್ತು ನನಗೆ. ನಾವಿಬ್ಬರೂ ಜೊತೆಗಿರಲು ಶುರುವಾಗಿ ಏಳು ವರ್ಷದ ನಂತರ ಮೊದಲ ಸಾರಿ ಹೀಗಾಗಿದ್ದಲ್ಲವ? ನಿನ್ನ ಪೊಸೆಸಿವ್ ಎಂದು ಹೇಗೆ ಕರೆಯಲಿ ನಾನು?

ನಾನು ಇಲ್ಲಿಗೆ ಬಂದದ್ದು ಯಾಕೆ ಗೊತ್ತಾ? ಇಬ್ಬರೂ ಒಬ್ಬರಿಗೊಬ್ಬರು ಬೋರಾಗಿಬಿಡುತ್ತಿದ್ದೇವೇನೋ ಅಂತ ಭಯ ಕಾಡತೊಡಗಿತ್ತು. ಒಬ್ಬರಿಗೊಬ್ಬರು ಬೋರಾದಾಗಲೂ ಒಟ್ಟಿಗೇ ಇರುವ ಹಿಂಸೆಯನ್ನು ಪಡಬಾರದು ಎಂಬ ಕಾರಣಕ್ಕೆನೇ ಮದುವೆಯ ಗೋಜಿಗೆ ಹೋಗದೆ ಸುಮ್ಮನೆ ಜೊತೆಗಿರಲು ಶುರು ಮಾಡಿದವರಲ್ಲವೇ ನಾವು, ಈಗ ಇನ್ನೊಬ್ಬರಿಗೆ ಬೇಜಾರಾಗಬಾರದು, ಹರ್ಟ್ ಮಾಡಬಾರದು ಎಂಬ ಕಾರಣಕ್ಕೆ ಒಟ್ಟಿಗೆ ಇರಬಾರದು.
ನಿನಗೆ ನಾನು ಬೋರಾಗತೊಡಗಿದ್ದೇನೆ ಎಂದು ಸ್ಪಷ್ಟವಾಗತೊಡಗಿದ್ದು, ನೀನು ಅತ್ಯಂತ busy ಆಗಿ, ನನ್ನ ಜೊತೆ ಮಾತಾಡಿ ಕರ್ತವ್ಯವನ್ನು ಮುಗಿಸಬೇಕೆನ್ನುವಂತೆ ಎಣಿಸಿ ಐದು ನಿಮಿಷ ಎದುರು ಕೂತು ಎದ್ದು ಹೋಗತೊಡಗಿದೆಯಲ್ಲಾ ಆಗ. ಹಾಗೆ ಹಿಂಸೆಪಟ್ಟುಕೊಂಡು ಇರಬಾರದು ಹುಡುಗ. ನಿನಗೆ ಯಾವಾಗ ನನ್ನ ಜೊತೆ ಇರುವುದು ಕರ್ತವ್ಯವೆನಿಸತೊಡಗಿದೆ, ನಿನಗೆ ನನ್ನ ಸಾಂಗತ್ಯ ಯಾವ ರೀತಿಯ ಖುಷಿಯನ್ನೂ ಕೊಡುತ್ತಿಲ್ಲ ಎಂದು ತಿಳಿಯಿತೋ ನನಗೆ ಆ ಕ್ಷಣದಿಂದ ನಿನ್ನ ಜೊತೆಗೆ ಇರುವುದು ಉಸಿರು ಕಟ್ಟಿದ ಅನುಭವ.

ಅದಕ್ಕೇ ಇಲ್ಲಿಗೆ ಬಂದು ಬಿಟ್ಟೆ. ತಾತ ನನ್ನ ಹೆಸರಿಗೆ ಬರೆದ ಈ ಕಾಫಿ ಎಸ್ಟೇಟ್ ಮಾತ್ರ ಸಮಾಧಾನ ಕೊಡುತ್ತೆ ಅನ್ನಿಸಿತು. ನಿನಗೆ ನಾನು ಬೇಕೆನ್ನಿಸಿದರೆ ಇಲ್ಲಿಗೆ ಬಂದೇ ಬರುತ್ತೀಯ ಎಂದು ಗೊತ್ತಿತ್ತು. ನೀನು ಬರದೇ ಹೋಗಿದ್ದರೆ ಜೀವನ ಪೂರ್ತಿ ನಿನಗಾಗಿ ಕಾಯುತ್ತಾ ಕೂರುತ್ತಿದ್ದೆ ಎನ್ನುವುದು ಸುಳ್ಳು. ಆದರೆ ಅವತ್ತಿನಿಂದ, ನಾನು ಅಲ್ಲಿಂದ ಇಲ್ಲಿಗೆ ಹೊರಟು ಬಂದ ದಿನದಿಂದ ನೆನ್ನೆಯವರೆಗೂ ಅಂದರೆ ಐವತ್ತೇಳು ದಿನ ಒಂಭತ್ತು ಗಂಟೆಗಳು ಬೇರೆ ಯಾರೂ ಬೇಕೆನಿಸಲಿಲ್ಲ.
ನೆನ್ನೆ ನೀನು ಬಂದು ಎದುರು ಕೂತಾಗ ಅಳದೆ ಯಾವ ಭಾವನೆಗಳನ್ನೂ ತೋರಿಸದೆ ಸಹಜವಾಗಿರಲು ಎಷ್ಟು ಕಷ್ಟಪಟ್ಟೆ ಗೊತ್ತಾ? ನನ್ನ ನಾಟಕದ ಕಟ್ಟೆ ಒಡೆದು, ನಾನು ಭೋರ್ಗರೆದು ನೀರಾಗಿ ಸುರಿದದ್ದು ಕಾಫಿ ಬಟ್ಟಲ ಕೆಳಗೆ ಸಿಕ್ಕ ನಿನು ಬರೆದಿಟ್ಟು ಹೋದ ಚೀಟಿ ಓದಿದಾಗ.. ‘I can exist without you, but can’t live. I want to live please come’ ಹೌದು ಹುಡುಗ ನಾನೂ ಬದುಕಬೇಕು, ಬರುತ್ತೇನೆ.

ತೇರೇ ಬಿನ್ ಮೆ ಯು ಕೈಸೆ ಜಿಯಾ
ಕೈಸೆ ಜಿಯಾ ತೆರೆ ಬಿನ್

ನಿನ್ನ
ಬೆಚ್ಚಗಿನ ಉಸಿರು