Tuesday, November 17, 2009

ಒಂದು ಸೂಜಿಯ ಕಣ್ಣು

‘ಈ ಸರ್ತಿ ತಪ್ಸ್ದೆ ಬಾ. ರಥ-ಪ್ರತಿಷ್ಠೆ ಮತ್ತೆ ಮತ್ತೆ ಆಗಲ್ಲ. ಮಕ್ಕಳಿಗೆ ರಜ ಹಾಕ್ಸು ಆ ಚಿಕ್ಕ್-ಚಿಕ್ಕ ಕ್ಲಾಸುಗಳಿಗೆ ಏನಾಗತ್ತೆ? ನಾ ಅಳಿಯಂದ್ರಿಗೂ ಫೋನ್ ಮಾಡಿ ಹೇಳ್ತಿನಿ’ ಅಂತ ಅಪ್ಪ ಸ್ವಲ್ಪ ಗದರಿಸಿಯೇ ಹೇಳಿದ್ದರು. ಅಲ್ಲದೆ ನನಗೂ ಹೋಗಬೇಕು ಅನ್ನಿಸಿದ್ದರಿಂದ ಬ್ಯಾಂಕಿಗೆ ರಜ ಹಾಕಿ ಮಕ್ಕಳಿಬ್ಬರನ್ನೂ ಕರದುಕೊಂಡು ಊರಿಗೆ ಬಂದಿದ್ದೆ.
ಇವನು ‘ಅವತ್ತೊಂದು ದಿನ ಬಂದು ಹೋಗ್ತಿನಿ ಮೊದ್ಲೇ ಬರೋಕ್ಕೆ ಕಷ್ಟ’ ಅಂದಿದ್ದ. ನನಗಂತೂ ಯಾಕೋ ಊರಿಗೆ ಹೋದರೆ ಸಾಕು ಅನ್ನಿಸಿಬಿಟ್ಟಿತ್ತು. ಹಾಗೆ ಅನ್ನಿಸಿದ್ದು ಅಪ್ಪ ಫೋನು ಮಾಡಿ ಕರೆದಮೇಲೆ, ಅದಕ್ಕೆ ಮೊದಲೇ ಎಲ್ಲಾದರೂ ದೂರ ಹೋಗಬೇಕು ಅನ್ನಿಸುತ್ತಿತ್ತು. ಭಾನುವಾರದ ಔಟಿಂಗ್ಗಳು, ಆಗೀಗ ಚಿಕ್ಕ ಪುಟ್ಟ ಟೂರುಗಳು, ಸಿನೆಮಾ, ಪುಸ್ತಕಗಳು, ಸ್ನೇಹಿತರು, ಬ್ಯಾಂಕಿನ ಕೆಲಸ ಎಲ್ಲವೂ ಏಕತಾನತೆ. ಖುಷಿ ಸಂತೋಷಗಳೂ ಏಕತಾನತೆಯನ್ನ ತರಬಹುದಾ? ಬಿ.ಎಯಲ್ಲಿ ನಿಯೋಕ್ಲಾಸಿಕ್ ಕಾಲದ ಪದ್ಯಗಳನ್ನು ಮಾಡುತ್ತಾ ‘ಎಲಿಜಬಬತಿಯನ್ ಏಜ್ ನಲ್ಲಿ ಎಲ್ಲೆಲ್ಲೂ ಸುಖ, ಸಂತೋಷ, ಸ್ವೇಚ್ಚೆ ಎಷ್ಟು ಹೆಚ್ಚಾಯಿತೆಂದರೆ ಕೊನೆಕೊನೆಗೆ ಜನಕ್ಕೆ ಇದೆಲ್ಲಾ ಸಾಕು ಜೀವನದಲ್ಲಿ ಏನಾದರೂ ಕಟ್ಟುಪಾಡುಗಳಿರಬೇಕು ಅಂದುಕೊಂಡು ಪ್ಯೂರಿಟನ್ ಆಗಲು ಹೊರಟರು, ತಮ್ಮ ಜೀವನದಲ್ಲಿ ಒಂದಷ್ಟು ನೀತಿ ನಿಯಮಗಳಿರಬೇಕು ಅಂದುಕೊಂಡವರಿಗೆ ಕಾವ್ಯದಲ್ಲೂ ನೀತಿನಿಯಮಗಳಿರಬೇಕು ಅನ್ನಿಸಿತು, ಅದಕ್ಕೆ ಆಗಿನ ಕಾವ್ಯದಲ್ಲಿ ಕಲ್ಪನೆಗಿಂತ ಬುದ್ದಿವಂತಿಕೆಗೆ, ಭಾವನೆಗಳಿಗಿಂತ ಪದಪುಂಜಗಳಿಗೆ, ವಿಷಯಕ್ಕಿಂತ ಬರೆಯುವ ರೀತಿಗೆ ಹೆಚ್ಚು ಪ್ರಾಧಾನ್ಯತೆ..’ ಎಂದು ಪಾಟೀಲ್ ಸರ್ ಹೇಳುತ್ತಿದ್ದ ಮಾತುಗಳು ನೆನಪಾಗುತ್ತಿವೆ.
ಊರಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ನನ್ನ ಚಿಕ್ಕ ವಯಸ್ಸಿನ ಬುದ್ದಿ ಮತ್ತೆ ಜಾಗೃತವಾಯಿತು. ಊರು ತಿರುಗಲು ಹೊರಟೆ, ಎಂದಿನಂತೆ ಗಂಡುಬೀರಿ ಥರ. ಮಕ್ಕಳು ನನಗಿಂತಾ ಮೊದಲೇ ಎಲ್ಲೋ ಆಡಲು ಹೋಗಾಗಿತ್ತು. ತೇರು ಮನೆಯ ಅಂಗಡಿಯ ಬಳಿ ನನ್ನ ಜೊತೆಯವರು, ನನಗಿಂತಾ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾದ ಅಣ್ಣಂದಿರೆಲ್ಲ ಕಗ್ಗ ಹಾಕುತ್ತಾ ಕೂತಿದ್ದರು. ಅವರು ನಗುತ್ತಿರುವುದು, ಬೀದಿಯ ಈಚೆ ಬದಿಗೂ ಕೇಳಿಸುತ್ತಿತ್ತು.
‘ಓ.. ಶ್ರೀದೇವಿ! ಆಗ್ಲೇ ಬಂದ ಆಟೋ ನಿಮ್ ಮನೆ ಕಡೆ ಹೋಗೋದನ್ನ ನೋಡ್ದೆ. ನೀನೇ ಇರ್ಬೇಕು ಅನ್ಸಿತ್ತು. ಇಷ್ಟ್ ಲೇಟಾಗ್ ಬರದಾ? ಬಾ ಕೂತ್ಕೊ’ ಒಳಗೆ ಕರೆದೆ ಕೇಶವ. ಎಲ್ಲರನ್ನೂ ಮಾತಾಡಿಸುತ್ತಾ ಒಳಗೆ ಹೋದೆ. ಕೇಶವನ ಹೆಂಡತಿ ವೈದೇಹಿ ಮತ್ತು ನಾನು ಒಳಗಿಂದಲೇ ಈ ಗಂಡಸರ ಮಾತುಗಳನ್ನು ಕೇಳಿಸಿಕೊಂಡು ನಗುತ್ತಿದ್ದೆವು. ಮೊದಲಿನ ಹಾಗೆ ಅವರುಗಳ ಮಧ್ಯೆ ಹೋಗಿ ಕೂರೋದಕ್ಕೆ ಆಗೋದೇ ಇಲ್ಲವಲ್ಲ ಅನ್ನಿಸಿತು. ‘ಮೂರ್ತಿ, ಜನ್ನ, ನಾಣಿ ಎಲ್ಲಾ ಎಲ್ಲಿ ಕಾಣಿಸ್ತಾ ಇಲ್ಲ’ ಕೇಳಿದೆ. ನಾಣಿ ಇಲ್ಲೇ ಕೂತಿದ್ದ ಮೂರ್ತಿ ಬಂದಮೇಲೆ ಅವರಿಬ್ಬರೂ ಏನೇನೋ ಫಿಲಾಸಫಿಕಲ್ ಚರ್ಚೆಗಳಲ್ಲಿ ಮುಳುಗಿ ಹೋಗಿ, ಹಾಗೇ ಮಾತಾಡಿಕೊಂಡು ಎದ್ದು ಹೋದರು ಎಂದ ಕೇಶವ, ನಿನ್ನ ಬೆಸ್ಟ್ ಫ್ರೆಂಡ್ ಜನ್ನಂಗೆ ಸ್ಕೂಲಲ್ಲಿ ತುಂಬಾ ಕೆಲ್ಸ ಅಂತೆ, “ಅಯ್ಯೋ ನಿಂಗೊತ್ತಿಲ್ಲ ವೆಂಕಿ, ಈ ಸಲ ಗಾಂಧಿ ಜಯಂತಿಗೆ ವಿಶೇಷ ಕಾರ್ಯಕ್ರಮಗಳನ್ನೆಲ್ಲಾ ಹಮ್ಮಿಕೊಂಡಿದೀವಿ, ಅದ್ರ ಎಲ್ಲಾ ಜವಬ್ದಾರಿನೂ ನಂಗೇ ವಹಿಸಿದಾರೆ ಹೆಡ್ಮಾಷ್ಟ್ರು. ಅಕ್ಟೋಬರ್ ಎರಡಕ್ಕೆ ಇನ್ನು ಎರಡೇ ವಾರ ಉಳ್ದಿರೋದು. ನಾನು ರಥಪ್ರತಿಷ್ಠೆ ದಿವ್ಸ ರಜ ಹಾಕಿಬರ್ತಿನಿ, ನೀವು ಆರಾಮಾಗಿ ಇದ್ದೋಗಿ” ಜನ್ನನ ಮಾತುಗಳನ್ನ ಅದೇ ದಾಟಿಯಲ್ಲಿ ಅನುಕರಿಸುತ್ತಾ ಹೇಳಿದ ವೆಂಕಿಯ ಮಾತಿಗೆ ಎಲ್ಲರೂ ನಕ್ಕರು.
ಕೇಶವ ವ್ಯಾಪಾರ ಮಾಡುವುದನ್ನೇ ನಾನು ಗಮನಿಸುತ್ತಿದ್ದೆ, ಅಂಗಡಿಗೆ ಬಂದವರಿಗೆ ತಕ್ಕಡಿಗೆ ತೊಗರಿಬೇಳೆ, ಬೆಲ್ಲ, ಅಕ್ಕಿ, ರವೆ ಇಂಥವನ್ನು ಹಾಕುವಾಗ ಎಷ್ಟು ಜೋರಾಗಿ ಹಾಕುತ್ತಿದ್ದ ಎಂದರೆ ಅವನು ಹಾಕಿದ ರಭಸಕ್ಕೆ ಬೊಟ್ಟಿರುವ ಭಾಗಕ್ಕಿಂತಾ ಸಾಮಾನಿರುವ ಭಾಗವೇ ಕೆಳಗೆ ಹೋಗಿ ವ್ಯಾಪಾರ ಮಾಡಲು ಬಂದವರಲ್ಲಿ ಆ ಕ್ಷಣಕ್ಕೆ ಕೇಶವನೇ ಮೋಸಹೋಗುತ್ತಿದ್ದಾನೆಂಬ ಭ್ರಮೆ ಹುಟ್ಟುವಂತೆ ಮಾಡಿ, ತಕ್ಷಣವೇ ಆ ಸಾಮಾನನ್ನು ಪ್ಲಾಸ್ಟಿಕ್ ಕವರಿಗೆ ಸುರಿದು ಮುಗ್ದವಾದ ಮುಖಭಾವದಲ್ಲಿ ನಿಲ್ಲುತ್ತಿದ್ದ. ಹೀಗೆ ಪ್ರತಿ ಬಾರಿಯೂ ಅಷ್ಟೋ ಇಷ್ಟೋ ಉಳಿಸುತ್ತಿದ್ದ ಹಾಗೂ ಒಟ್ಟು ಮೊತ್ತಕ್ಕಿಂತ ಕೊಂಚ ಕಡಿಮೆಯೇ ತೆಗೆದುಕೊಂಡು ಒಳ್ಳೆಯವನಂತೆ ಎಲ್ಲರಿಗೂ ಕಾಣಿಸುತ್ತಿದ್ದ.
ಅವನನ್ನೇ ಗಮನಿಸುತ್ತಾ ಕೂತಿದ್ದಾಗ, ದೂರದಲ್ಲಿ ಹೆಂಗಸೊಬ್ಬಳು ಬರುವುದು ಕಣಿಸಿತು, “ಅಲ್ಲಿ ಬರ್ತಿರೋದು ದೇಜಿ ಹೆಂಡ್ತಿ ತಾನೆ?” ಕೇಳಿದೆ. “ಅಯ್ಯೋ ಮತ್ತೆ ಬಂದ್ಲೇನೇ? ಈ ದೇಜಿದು ಎಂಟುನೂರು ರುಪಾಯ್ ಸಾಲ ಆಗಿದೆ ಒಂದು ದಮ್ಮಡಿ ವಾಪಸ್ ಬಂದಿಲ್ಲ. ಅವ್ನು ಬಂದ್ರೆ ಸಾಲ ಕೊಡಲ್ಲ ಅಂತ ಈಗ ಹೆಂಡ್ತಿನ ಕಳ್ಸಕ್ ಶುರು ಮಾಡಿದಾನೆ. ಈ ಮುದ್ಕಿ ಹ್ಯಾಪ್ ಮೋರೆ ಹಾಕ್ಕಂಡ್ ಅಂಗ್ಡಿ ಮುಂದೆ ನಿಂತಿದ್ರೆ ನೋಡಕ್ಕಾಗಲ್ಲ. ವೈದೇಹಿ ನೀನೇ ಅವ್ಳನ್ನ ಕಳ್ಸು ನಾ ಒಳ್ಗೆ ಹೋಗ್ತಿನಿ” ಅನ್ನುತ್ತಾ ಎದ್ದ. ನನಗೂ ಇದನ್ನೆಲ್ಲಾ ನೋಡುತ್ತಾ ಸಣ್ಣದಾಗಿ ಹಿಂಸೆ ಆಗುತ್ತಿತ್ತು. “ನಾ ತೋಟದ್ ಕಡೆ ಹೋಗ್ ಬರ್ತಿನಿ”ಅಂತ ಎದ್ದೆ. “ಸಂಜೆ ಮನೆಕಡೆ ಬಾರೆ, ಅಪ್ಪ ಹೇಳ್ತಿದ್ರು, ಅದೇನೋ ಬ್ಯಾಂಕಿನ ವ್ಯವಹಾರದ ಮಾತು ಆಡ್ಬೇಕಂತೆ” ಅಂದ ವೆಂಕಿಗೆ ಸರಿ ಎನುತ್ತಾ ತೋಟಗಳ ದಾರಿಯ ಕಡೆ ಹೊರಟೆ.

ತೋಟಗಳ ದಾರಿಯಲ್ಲಿ ಒಬ್ಬಳೇ ನಡೆಯುತ್ತಾ ಹೋಗುತ್ತಿದ್ದರೆ ಮನಸ್ಸು ಯಾಕೋ ಆಹಾ ಅನ್ನುವಷ್ಟು ಹಗುರಾಗಿದೆ ಅನ್ನಿಸುತ್ತಿತ್ತು. ಮೈಸೂರಿನಲ್ಲಿ ಬಿ.ಎ ಓದುತ್ತಿರುವ ಸಮಯದಲ್ಲಿ, ರಜೆಯಲ್ಲಿ ಊರಿಗೆ ಬಂದಾಗ ತೋಟಕ್ಕೆ ಹೋಗಿ ವರ್ಡ್ಸ್ ವರ್ಥ್ನ ‘ರೆಸಲ್ಯೂಶನ್ ಅಂಡ್ ಇಂಡಿಪೆಂಡೆನ್ಸ್’, ‘ಶಿ ಡ್ವೆಲ್ಟ್ ಅಮಂಗ್ ದಿ ಅನ್ಟ್ರಾಡನ್ ವೇಸ್’, ಕೀಟ್ಸಿನ ‘ಓಡ್ ಟು ಅ ನೈಟಿಂಗೇಲ್’ ಪದ್ಯಗಳನ್ನ ಕನ್ನಡಕ್ಕೆ ಅನುವಾದ ಮಾಡುತ್ತಿದ್ದ ದಿನಗಳು ನೆನಪಾದವು. ಮದುವೆಯಾದಮೇಲೆ ಬರೆಯುವುದನ್ನೇ ಬಿಟ್ಟುಬಿಟ್ಟೆನಲ್ಲಾ. ಮತ್ತೆ ಬರೆಯಲು ಶುರು ಮಾಡಬೇಕು. ಅಂದುಕೊಂಡೆ
ಇದ್ದಕ್ಕಿದ್ದ ಹಾಗೆ ದೇಜಿ ನೆನಪಾದ. ಅವನು ಹುಲಿಕೆರೆಗೆ ಬಂದಿದ್ದು ನಾನು ಸ್ಕೂಲಿನಲ್ಲಿದ್ದಾಗ. ಎಂಟನೇ ಕ್ಲಾಸೋ ಒಂಭತ್ತನೇಕ್ಲಾಸೋ ಇರಬೇಕು. ಒಂದು ಬೆಳಿಗ್ಗೆ ಅವನು ಅವನ ಹೆಂಡತಿ, ಅವನ ಮಗ ಹಾಲಿನಂಗಡಿಯ ಪಕ್ಕದ ಪುಟ್ಟ ಮನೆಯಲ್ಲಿ ಸ್ಥಾಪಿತರಾಗಿದ್ದರು. ಅವನಿಲ್ಲಿಗೆ ಯಾಕೆ ಬಂದ ಅಲ್ಯಾಕೆ ಠಿಕಾಣಿ ಹೂಡಿದ್ದಾನೆ ಎಂಬ ಕುತೂಹಲಕ್ಕೆ ಉತ್ತರವಾಗಿ ಎರಡೇ ದಿನದಲ್ಲಿ ಒಂದು ಟೇಲರ್ ಅಂಗಡಿ ತೆರೆದು ತನ್ನ ನಗು ಮತ್ತು ಹೊಲಿಗೆ ಮಿಷನ್ನೊಂದಿಗೆ ಪ್ರತ್ಯಕ್ಷವಾಗಿದ್ದ. ನಮ್ಮೂರಲ್ಲೂ ಟೇಲರ್ ಅಂಗಡಿ ತೆಗೆದ ಅವನ ಹುಚ್ಚುತನ ನೋಡಿ ಅವನುದ್ಧಾರ ಆಗಲ್ಲ ಏಂದು ರಘುಮಾವ ತೀರ್ಪುಕೊಟ್ಟುಬಿಟ್ಟಿದ್ದರು.
ನಮ್ಮೂರಲ್ಲೂ ಒಬ್ಬ ಟೇಲರ್ ಇದ್ದಾನೆ ಎಂದು ಹೇಳಿಕೊಳ್ಳೋದಕ್ಕೇ ನಮಗೆಲ್ಲ ಹೆಮ್ಮೆಯಾಗುತ್ತಿತ್ತು. ಅಷ್ಟುದಿನ ಹುಲಿಕೆರೆ, ಕಣಿಯಾರು, ಅಗ್ರಹಾರ, ಕ್ಯಾತ್ನಳ್ಳಿ, ಕೊರಟಿಕೆರೆ, ಬರಗೂರು ಮುಂತಾದ ಊರಿನವರೂ ಬಟ್ಟೆ ಹೊಲಿಸಿಕೊಳ್ಳಲು ಅರಕಲಗೂಡಿನವರೆಗೂ ಹೋಗಬೇಕಾಗಿತ್ತು. ಇವನು ಬಂದದ್ದೇ ಅವರೆಲ್ಲರಿಗೂ ‘ನಾವೂ ಮುಂದುವರೀತಿದಿವಿ’ ಅನ್ನೋ ಲಾಂಛನವನ್ನ ಹಾಕಿಕೊಂಡ ಹಾಗೆ ಅನ್ನಿಸಿತೇನೊ. ಅಲ್ಲಿವರೆಗೂ ಅಮ್ಮಂದಿರೆಲ್ಲಾ ಬ್ಲೌಸನ್ನು ತಾವೇ ಕೈಯಲ್ಲಿ ಹೊಲಿದುಕೊಂಡು ಹಾಕಿಕೊಳ್ಳುತ್ತಿದ್ದರು. ಅಪ್ಪ, ಯುಗಾದಿಗೆ, ದೀಪಾವಳಿಗೆ, ನವರಾತ್ರಿಗೆ ಅಂತ ವರ್ಷದಲ್ಲಿ ಮೂರು ಸರ್ತಿ ಅರಕಲಗೂಡಿಗೆ ಕರೆದುಕೊಂಡು ಹೋಗಿ ತಾವೂ ಶರ್ಟು ಹೊಲಿಯೋಕ್ಕೆ ಕೊಟ್ಟು ನಮಗೂ ಲಂಗ ಬ್ಲೌಸು ಹೊಲಿಸಿಕೊಡುತ್ತಿದ್ದರು. ಅದೇ ದೊಡ್ಡ ಸಂಭ್ರಮ ನಮಗೆ. ಹಬ್ಬಕ್ಕೆ ಇನ್ನೆರೆಡು ತಿಂಗಳಿದೆ ಅನ್ನುವಾಗಲೇ, ಅಮ್ಮ ಅರಕಲಗೂಡಿಗೆ ಯಾವಾಗ ಹೋಗೋದು ಎಂದು ಅಪ್ಪನಿಗೆ ದುಂಬಾಲು ಬೀಳುತ್ತಿದ್ದಳು. ಅಪ್ಪ ಇವತ್ತು ಕರಕೊಂಡ್ ಹೋಗ್ತಿನಿ ನಾಳೆ ಕರ್ಕೊಂಡ್ ಹೋಗ್ತಿನಿ ಅಂತ ಮುಂದೆ ತಳ್ಳುತ್ತಾ ಹಬ್ಬಕ್ಕೆ ಹದಿನೈದು ದಿನ ಇದೆ ಅನ್ನುವಾಗ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಅಮ್ಮನಿಗೆ ಈ ಬಟ್ಟೆ ಹೊಲಿಸುವ ಕಾರ್ಯಕ್ರಮದಿಂದ ಸಾಕುಬೇಕಾಗಿ ಹೋಗುತ್ತಿತ್ತು.
ಅರಕಲಗೂಡಿನ ವೈಶಾಲಿ ಟೇಲರಿಂಗ್ ಹಾಲಿನ ರಾಜಶಟ್ಟಿ ಒಂದು ರಾಶಿ ಬಟ್ಟೆಗಳ ನಡುವೆ ದುಶ್ಯಾಸನನ ಥರ ಕೂತಿರುತ್ತಿದ್ದ. ನಾವು ಬಟ್ಟೆ ತೆಗೆದುಕೊಂಡು ಹೋಗಿ ಕೊಟ್ಟೆರೆ ನಮ್ಮನ್ನೊಮ್ಮೆ ಕಣ್ಣೆತ್ತಿ ನೋಡಿ ಹಳೇ ಪುಸ್ತಕದಲ್ಲಿ ಏನನ್ನೋ ಗೀಚಿಕೊಂಡು ಮುಂದಿನವಾರ ಶಂಕರ್ ಮೋಟಾರ್ಸ್ ನಲ್ಲಿ ಕಳ್ಸ್ಕೊಡ್ತಿನಿ ಹೋಗಿ ಅಂದು ನಮ್ಮ ಬಟ್ಟೆಯನ್ನೂ ಆ ರಾಷಿಯೊಳಗೆ ಮಾಯ ಮಾಡುತ್ತಿದ್ದ. ಅವನಿಗೆ ಅದರಲ್ಲಿ ನಮ್ಮ ಬಟ್ಟೆ ಹ್ಯಾಗೆ ಗೊತ್ತಾಗುತ್ತೆ ಅಂತ ನನಗೆ ಯಾವಾಗಲೂ ಆಶ್ಚರ್ಯವಾಗುತ್ತಿತ್ತು. ನಾನು ನನ್ನ ಬಟ್ಟೆಯಮೇಲೆ ಮೂಲೆಯೊಂದರಲ್ಲಿ ಸಣ್ಣದಾಗಿ ಎಸ್.ಡಿ ಎಂದು ಬರೆದಿಡುತ್ತಿದ್ದೆ. ಆದರೆ ಅವನು ಹೊಲಿದುಕೊಟ್ಟ ಬಟ್ಟೆಯಲ್ಲಿ ಎಷ್ಟು ಹುಡುಕಿದರೂ ಆ ಹಸ್ತಾಕ್ಷರ ನನಗೆ ಸಿಗುತ್ತಲೇ ಇರಲಿಲ್ಲ.
ಒಂದು ವಾರದಲ್ಲಿ ಕಳಿಸಿಕೊಡುತ್ತೇನೆ ಎಂದರೂ ಬಟ್ಟೆ ಬರುತ್ತಿದ್ದದ್ದು ಮಾತ್ರ ಹಬ್ಬದ ಹಿಂದಿನ ದಿನವೇ. ನಾವು ದಿನಾ ಸಂಜೆ ಶಂಕರ್ ಮೋಟರ್ಸ್ ಡ್ರೈವರ್ ಹತ್ತಿರ ಹೋಗಿ ವಿಚಾರಿಸಿ ನಿರಾಶರಾಗಿ ಅದೇ ಸುತ್ತಿಗೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳುತ್ತಿದ್ದೆವು.
ಹಾಲಿನ ಸೊಸೈಟಿ ಪಕ್ಕದಲ್ಲಿ ಟೇಲರ್ ಒಬ್ಬ ಬಂದಿದಾನೆ ಅಂದಾಗ ನನಗೆ ಖುಷಿಯಾದದ್ದು, ಇನ್ನುಮೇಲೆ ಈ ರಗಳೆಗಳೆಲ್ಲಾ ಇರೋಲ್ಲ ಅನ್ನೋ ಕಾರಣಕ್ಕೆ. ಆವತ್ತು ಸ್ಕೂಲಿಂದ ವಾಪಸ್ಸು ಬರುವಾಗ ಅವನ ಅಂಗಡಿಯ ಮುಂದೆ ಸ್ವಲ್ಪ ಹೊತ್ತು ನಿಂತು ಎಲ್ಲವನ್ನು ಗಮನಿಸಿ ಮನೆಗೆ ಬಂದವಳೇ ಅಮ್ಮನ ಹತ್ತಿರ ಖುಶಿ ಖುಶಿಯಾಗಿ ಅವನ ಬಗ್ಗೆ, ಅವನು ಇಂಗ್ಲೀಷಿನಲ್ಲಿ ಪರ್ಫೆಕ್ಟ್ ಟೇಲರ್ಸ್ ಅಂತ ಬರೆಸಿರುವ ಬೋರ್ಡಿನ ಬಗ್ಗೆ, ಅವನ ಚಂದದ ಗುಂಗುರು ಕೂದಲಿನ ಹೆಂಡತಿಯ ಬಗ್ಗೆ ಸ್ವಲ್ಪ ಉತ್ಪ್ರೇಕ್ಷೆ ಮಾಡೇ ಹೇಳಿದ್ದೆ. ಅಮ್ಮ ನಗುತ್ತಾ ಗಂಡು ಬೀರಿ ಅಂದಿದ್ದಳು. ನಾನು ಹೇಳಿದ್ದರಲ್ಲಿ ಗಂಡುಬೀರಿತನದ್ದು ಏನಿತ್ತು ಎಂದು ಇವತ್ತಿಗೂ ಗೊತ್ತಾಗಿಲ್ಲ. ಅಮ್ಮನಿಗೆ ನನ್ನನ್ನು ಹಾಗೆ ಅಂದು ಅಂದು ಅಭ್ಯಾಸವಾಗಿಹೋಗಿತ್ತೇನೋ.
ಅವನು ಮಂಗಳೂರಿಂದ ಬಂದಿದ್ದಾನೆ ಎನ್ನುವುದೂ ಅವನ ಹೆಂಡತಿಗೆ ಕನ್ನಡ ಬರಲ್ಲ ಎನ್ನುವುದು ಹಾಲು ಸೊಸೈಟಿಯ ಇನ್ನೊಂದು ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದ ವೆಂಕಮ್ಮನಿಂದ ಹುಲಿಕೆರೆಯ ಸಮಸ್ತ ಜನಕ್ಕೂ ವಿತರಣೆಯಾಗಿತ್ತು. ಸಿಕ್ಕಸಿಕ್ಕವರನ್ನು ಮಾತಾಡಿಸುವ ಅವರ ಎಂದಿನ ಚಾಳಿಯಂತೆ ದೇಜಿಯ ಹೆಂಡತಿಯನ್ನು ಮಾತಾಡಿಸಿದ್ದಕ್ಕೆ ಅಲ್ಲೇ ಏನೋ ಹೊಲೆಯುತ್ತಾ ಕೂತಿದ್ದ ದೇಜಿ, ‘ಅವಳಿಗೆ ಮಲಯಾಳಂ ಮತ್ತೆ ತುಳು ಮಾತ್ರ ಬರುವುದಾ, ಕನ್ನಡಮ್ ಗೊತ್ತಿಜ್ಜಿ.’ ಅಂದಿದ್ದನಂತೆ. ಇವನು ನನ್ನೇ ಪ್ರಶ್ನೆ ಕೇಳುತ್ತಿದ್ದಾನೋ ಇಲ್ಲಾ ಉತ್ತರಿಸುತ್ತಿದ್ದಾನ ಎಂದು ಗೊಂದಲಕ್ಕೆ ಬಿದ್ದ ವೆಂಕಮ್ಮ ಸುಮ್ಮನಾಗಿದ್ದರಂತೆ.


ತನ್ನ ಅಂಗಡಿಗೆ ಬಂದವರ ಹತ್ತಿರ ವಿಚಿತ್ರವಾದ ಅವನ ತುಳುಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾ ಅಲತೆ ತೆಗೆದುಕೊಳ್ಳುವಾಗ ‘ನೋಡಿ, ನಿಮಗೆ ಇಲ್ಲಿ ಸ್ವಲ್ಪ ಉದ್ದ ಇಟ್ರೆ ಆಗ್ತದೆ. ಓ.. ಅವರ ರೀತಿ ಹೊಲಿಸಿಕೊಂಡರೆ ಚಂದ ಕಾಣೋದಿಲ್ಲ. ನಿಮ್ಮ ಶೇಪಿಗೆ ಹೀಗೇ ಹೊಲಿಯಬೇಕು’ ಎನ್ನುತ್ತಲೋ ‘ನೋಡಿ ಇಷ್ಟು ಜಾಸ್ತಿ ಬಟ್ಟೆ ಬೇಡ ನಿಮಗೆ. ನೀವು ಸುಮ್ನೆ ಬಟ್ಟೆಗೆ ದುಡ್ಡು ಹಾಕುವುದು ಎಂತಕ್ಕೆ? ನಿಮ್ಮ ಚಿಕ್ಕ ಮಗನಿಗೂ ಇದರಲ್ಲೇ ಒಂದು ಶರ್ಟ್ ಹೊಲಿದುಕೊಡುವಾ’ ಎನ್ನುತ್ತಾ ತನ್ನ ಟೇಲರಿಂಗ್ ಪ್ರತಿಭೆಯನ್ನ ತೋರಿಸುವುದರ ಜೊತೆಗೇ, ಅವರ ವಿಶ್ವಾಸವನ್ನೂ ಸಂಪಾದಿಸುತ್ತಿದ್ದ. ತಾನು ಹೇಳಿದಂತೆ ಹೊಲಿಸಿಕೊಳ್ಳುವ ಹಾಗೆ ಮಾಡಿ ಅಲ್ಲಿನ ಟ್ರೆಂಡ್ ಸೆಟ್ಟರ್ ಆಗಿಬಿಟ್ಟಿದ್ದ.
‘ಏನೇ ಸುಂದ್ರಿ ಇಷ್ಟ್ ಚನ್ನಾಗ್ ಕಾಣ್ಸ್ತಿದಿಯಾ?’ ಅಂತ ಮನೆಯಿಂದ ಹೊರ ಬಂದ ತಕ್ಷಣ ಮೇಷ್ಟ್ರುಮನೆ ಶ್ರೀಧರ ಅಂದಾಗ ನನ್ನೆದೆ ಢಗ್ ಅಂದಿತ್ತು. ಅಯ್ಯೋ ಇವನು ಆಡ್ಕೊತಿದನ? ನಾನು ಮೈ ಅಳತೆ ಕೊಟ್ಟು ಲಂಗ ಬ್ಲೌಸು ಹೊಲಿಸಿಕೊಂಡಿದ್ದು ಗೊತ್ತಾಗ್ ಹೋಯ್ತಾ? ಇನ್ನು ಅಪ್ಪನಿಗೆ ಗೊತ್ತಾಗ್ಬಿಟ್ರೆ ನನ್ ಚರ್ಮ ಸುಲಿತಾರೆ ಎಂದೆಲ್ಲಾ ಯೋಚಿಸಿ ಕಣ್ಣು ತುಂಬಿಕೊಂಡಿತು. ‘ಏ ಹೋಗ..’ ಎನ್ನುತ್ತಾ ದೇವಸ್ತಾನದ ಕಡೆಗೆ ಹೊರಟೆ. ಯಾರು ಚೆನ್ನಾಗಿ ಕಾಣಿಸ್ತಿದಿಯ ಅಂದ್ರೂ ಎದೆ ಹೊಡೆದುಕೊಳ್ಳುತ್ತಿತ್ತು. ಜೊತೆಗೆ ಖುಷಿಯೂ..
ಮನೆಗೆ ಬಂದ ತಕ್ಷಣ ಬಿಚ್ಚಿಟ್ಟು ಹಳೇ ಬಟ್ಟೆ ಹಾಕಿಕೊಂಡಿದ್ದೆ. ಅಪ್ಪ ‘ಹೊಸಾ ಬಟ್ಟೆ ತೆಗ್ದಿಟ್ಬಿಟ್ಯಾ, ಈ ದೇಜಿ ಪರವಾಗಿಲ್ಲ, ಕಣ್ಣಲ್ಲೇ ಅಳತೆ ತಗೊಂಡ್ರೂ ಚನ್ನಾಗ್ ಹೊಲ್ದಿದಾನೆ, ಚನ್ನಾಗ್ ಕಾಣ್ತಿದ್ದೆ ಇವತ್ತು ಅಂದ್ರು.
ನಾನು ಮಾತಾಡದೆ ಸುಮ್ಮನಿದ್ದೆ. ‘ಕಣ್ಣಲ್ಲೇ ಅಳ್ತೆ ತಗೊಂಡು ಹೊಲ್ದುಕೊಡ್ತಿನಿ ಬೇಕಿದ್ರೆ, ಆಮೇಲೆ ಅಲ್ಲಿ ಸರಿ ಇಲ್ಲ, ಇಲ್ಲಿ ಸರಿ ಇಲ್ಲ ಅಂತ ಮತ್ತೆ ನನ್ನ ಬಳಿ ಬರಬೇಡಿ ಆಯ್ತಾ? ಅದರ ಬದಲು ಒಂದೇ ಬಾರಿಗೆ ಅಳತೆ ಕೊಟ್ಟು ಹೊಲಿಸ್ಕೊಳಿ. ನೋಡಿ ಎಷ್ಟು ಚಂದ ಆಗ್ತದೆ ಅಂತ. ನಾನು ಹಾಗೆ ಕೆಟ್ಟ ಮನುಷ್ಯ ಅಲ್ಲವಾ.. ನನಗೆ ನಿಮ್ಮ ವಯಸ್ಸಿನ ತಂಗಿ ಇದಾಳೆ.. ಓ ಅಲ್ಲಿ ಪರ್ಕಳದಲ್ಲಿ. ಹೆದರಬೇಡಿ ಆಯ್ತಾ...’ ವಾರದ ಹಿಂದೆ ಬಟ್ಟೆ ಹೊಲಿಯಲು ಕೊಟ್ಟು ಬರಲು ಹೋದಾಗ ಅಂದ ದೇಜಿಯ ಮಾತುಗಳು ನೆನಪಾಗುತ್ತಿದ್ದವು. ‘ಅದಕ್ಕಲ್ಲ ದೇಜಿ, ದೊಡ್ಡೋರಿಗೆ ಗೊತ್ತಾದ್ರೆ ಇಷ್ಟ ಆಗಲ್ಲ’ ಅಂತ ಅನುಮಾನಿಸಿದ್ದೆ. ‘ಓ ಎಂತದಾ.. ನಾನು ಯಾರಿಗಾದರೂ ಹೇಳೋದುಂಟಾ? ಸತ್ಯವಾಗ್ಲೂ ಯಾರಿಗೂ ಹೇಳಲ್ಲ ಮಾರಾಯ್ರೆ’ ಅಂದಿದ್ದ ಅವನ ಮಾತಿಗೆ ಒಪ್ಪಿ ಹೊಲಿಸಿಕೊಂಡಿದ್ದೆ.
ಹೊಲಿಸಲು ಕೊಟ್ಟು ಬಂದ ರಾತ್ರಿ ಕನಸು: ಅಳತೆ ಕೊಟ್ಟಿದ್ದು ಎಲ್ಲರಿಗೂ ಗೊತ್ತಾದ ಹಾಗೆ, ಅಪ್ಪ ಇದೇ ಅವಮಾನದಿಂದ ರೋಡಿನಲ್ಲಿ ತಲೆತಗ್ಗಿಸಿಕೊಂಡು ಬರುತ್ತಿರುವ ಹಾಗೆ, ನನ್ನ ಹತ್ರ ಮಾತು ಬಿಟ್ಟ ಹಾಗೆ.. ಎಚ್ಚರವಾದಾಗ ಸದ್ಯ ಕನಸು ಎನ್ನಿಸಿದರೂ ಯಾಕಾದರೂ ಅಳತೆ ಕೊಟ್ಟು ಬಂದೆನೋ ಪೇಚಾಡಿಕೊಂಡಿದ್ದೆ.

ಬರಬರುತ್ತಾ ಊರಿನ ಹುಡುಗೀರೆಲ್ಲಾ ಯಾಕೋ ಚನ್ನಾಗಿ ಕಾಣ್ತಿದಾರಲ್ಲ ಅನ್ನಿಸ್ತಿತ್ತು ನನಗೆ. ಬರೀ ನನಗೆ ಮಾತ್ರ ಹಿಂಗನ್ನಿಸ್ತಿದಿಯಾ ಅಂತ ಮೊದಮೊದಲು ಅನುಮಾನವಾದರೂ ಶ್ರೀನಿವಾಸ ಚಿಕ್ಕಪ್ಪ ಮನೆಗೆ ಬಂದಾಗ ಅಪ್ಪನ ಜೊತೆ ಮಾತಾಡುತ್ತಿದ್ದು ಕಿವಿಗೆ ಬಿದ್ದಿತ್ತು. ‘ಬರೀ ಚಿಕ್ಕಮಗಳೂರು, ಮೈಸೂರು, ಬೆಂಗಳೂರಿನ ಮಕ್ಕಳ ಇರಿಕೆ ಚನ್ನಾಗಿದೆ. ನಮ್ಮೂರಿನವರು ಹೆಂಗ್ಹ್ಯಂಗೋ ಇರ್ತಾರೆ ಅನ್ನಿಸ್ತಿತ್ತು. ಆದ್ರೆ ಇಲ್ಲೂ ಎಲ್ಲಾ ಚಿಗತ್ಕೊಂಬಿಟ್ಟಿದಾರೆ’ ಅಂದಿದ್ದರು.
ಎಲ್ಲರೂ ಅಳತೆ ಕೊಟ್ಟು ಹೊಲಿಸಿಕೊಂಡಿದ್ದಾರೆ ಅಂತ ಗೊತ್ತಾಗುತ್ತಿದ್ದರೂ ಯಾವ ಹುಡುಗಿಯ ಹತ್ರ ಕೇಳೋಣಾ ಅಂದ್ರೂ ಭಯ. ನಾನೇ ಸಿಕ್ಕಿಹಾಕಿಕೊಂಡುಬಿಟ್ರೆ ಅಂತ. ಆದರೆ ದೇಜಿ ಮೈ ಅಳತೆ ತೊಗೊಂಡು ಹೊಲಿತಾನೆ ಅಂತ ಎಲ್ಲರಿಗೂ ಗೊತ್ತಾಗಿದ್ದು ಲಕ್ಷ್ಮಿಯಿಂದ. ಅವಳದನ್ನು ತಾನು ಪ್ರೀತಿಸುತ್ತಿದ್ದ ರಾಘವನಿಗೆ ಹೇಳಿದ್ದೇ ತಪ್ಪಾಗಿ ಊರಿಗಿಡೀ ಗೊತ್ತಾಗಿತ್ತು.

ಎಲ್ಲವೂ ಇದ್ದ ಹಾಗೇ ಇದ್ದಿದ್ದರೆ ದೇಜಿ ಬಹಳ ಶ್ರೀಮಂತನಾಗಿ ಒಂದಷ್ಟು ತೋಟವನ್ನೋ ಒಂದೆರೆಡು ಮನೆಗಳನ್ನೋ ಮಾಡಿಕೊಳ್ಳುತ್ತಿದ್ದನೇನೋ? ಆದರೆ ಇದ್ದಹಾಗೆ ಇರುವುದಾದರೂ ಯಾವುದು? ನಾವೆಲ್ಲಾ ಅರಕಲಗೂಡಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಹೊತ್ತಿಗೆ, ಬೆಂಗಳೂರಿನಲ್ಲಿ ಬೇಕರಿ ಇಟ್ಟಿದ್ದ ಶೇಶಿ ಒಂದೆರೆಡು ದಿನಗಳ ಮಟ್ಟಿಗೆ ಊರಿಗೆ ಬಂದಿದ್ದ. ಬಂದವನು ಎಲ್ಲಾ ರೀತಿಯಲ್ಲೂ ತುಂಬಾ ಬದಲಾಗಿದ್ದ. ಅವನು ಹಾಕಿಕೊಂಡಿದ್ದ ಬಟ್ಟೆಗಳನ್ನು ನೋಡಿ ನಮಗೆಲ್ಲಾ ಆಶ್ಚರ್ಯ. ದೇಜಿ ಹೊಲೆಯುವುದಕ್ಕಿಂತ ಚೆನ್ನಾಗಿ ಹೊಲಿದಂತಿತ್ತು. ಎಲ್ಲಿ ಹೊಲಿಸಿಕೊಂಡ್ಯೋ, ಎಷ್ಟಾಯ್ತೋ, ಎನ್ನುವ ಹುಡುಗರ ಪ್ರಶ್ನೆಗಳಿಗೆ, ‘ಹೊಲಿಸ್ಕೊಂಡಿದ್ದಲ್ಲ, ಅಲ್ಲೆಲ್ಲಾ ಈಗ ರಡೀಮೇಡ್ ಬಟ್ಟೆ ಸಿಗತ್ತೆ. ಅಲ್ಯಾಕೆ, ಈಗ ಹಾಸನದಲ್ಲೂ ಸಿಗತ್ತೆ. ನಾವು ಬಟ್ಟೆ ತೊಗೊಂಡು ದೇಜಿ ಕೈಯಲ್ಲಿ ಹೊಲಿಸ್ಕೊಂಡ್ರೆ ನೂರು ರುಪಾಯಾದ್ರೂ ಆಗತ್ತೆ. ಅಲ್ಲಿ ಹೊಲ್ದಿದ್ ಬಟ್ಟೆ ನಿಮ್ ನಿಮ್ ಅಳ್ತೆದೇ ಅರವತ್ತಕ್ಕೋ ಎಂಭತ್ತಕ್ಕೋ ಸಿಗತ್ತೆ. ಇನ್ನು ಕಮ್ಮಿದು ಬೇಕಾದ್ರೂ ಸಿಗುತ್ತೆ’ ಅಂದ. ಇಲ್ಲಿದ್ದ ಹುಡುಗರೆಲ್ಲಾ ಹಾಸನಕ್ಕೆ ಹೋದಾಗ ಒಂದೆರೆಡು ಶರ್ಟು ತೊಗೊಬೇಕು ಅಂತ ಮಾತಾಡಿಕೊಂಡರು. ಕೆಲವೇದಿನಗಳಲ್ಲಿ ನಮ್ಮೂರ ತುಂಬಾ ರಡಿಮೇಡ್ ಬಣ್ಣದ ಶರ್ಟು ಹಾಕಿಕೊಂಡ ಹುಡುಗರು ಹುಲಿವೇಷದಂತೆ ಓಡಾಡತೊಡಗಿದರು.
ನಾವು ಹುಡುಗೀರು ಮಾತ್ರ ನಮ್ಮ ಬಟ್ಟೆ ಹೊಲಿಸಿಕೊಳ್ಳುವುದಕ್ಕೆ ದೇಜಿಯ ಬಳಿಯೇ ಹೋಗುತ್ತಿದ್ದೆವು. ನಾನು ಪಿ.ಯು.ಸಿ ಮುಗಿಸಿ ಬಿ.ಎಗೆ ಮೈಸೂರಿನಲ್ಲಿ ಸೇರಿದ ಮೇಲೆ ದೇಜಿಯ ಬಳಿ ಹೊಲಿಸಿಕೊಳ್ಳುವುದನ್ನು ಬಿಟ್ಟಿದ್ದೆ. ಮೈಸೂರಲ್ಲಿ ಸ್ವಲ್ಪ ಶ್ರೀಮಂತ ಹುಡುಗಿಯರೆಲ್ಲಾ ಚೂಡೀದಾರ್ ಹಾಕ್ತಿದ್ರು. ಬಹಳಷ್ಟು ಜನ ಲಂಗ ಬ್ಲೌಸು ಹಾಕಿಕೊಂಡು ಬರುತ್ತಿದ್ದರೂ, ಅದೂ ಸ್ವಲ್ಪ ಬೇರೆಯ ತರಹವೇ ಇದೆ, ನಾವು ಹಾಕಿಕೊಳ್ಳುವುದಕ್ಕಿಂತಾ ಚೆನ್ನಾಗಿದೆ ಅನ್ನಿಸುತ್ತಿತ್ತು. ನಾನು ಅಲ್ಲೇ ಹೊಲಿಸಿಕೊಳ್ಳಲು ಶುರು ಮಾಡಿದೆ. ಹೀಗಿರುತ್ತಾ ಜನ್ನ ನನಗೆ ಬರೆದ ಪತ್ರವೊಂದರಲ್ಲಿ, ‘ದೇಜಿಗೆ ಈಗ ವ್ಯಾಪಾರವೇ ಇಲ್ಲ. ದೇಜಿಗೆ ಮಾತ್ರ ಅಲ್ಲ, ಬಹಳಷ್ಟು ಚಿಕ್ಕ-ಪುಟ್ಟ ಅಂಗಡಿಗಳು, ಗುಡಿ ಕೈಗಾರಿಕೆಗಳು ಎಲ್ಲವೂ ಮುಚ್ಚಿಕೊಂಡು ಹೋಗುತ್ತಿವೆ. ಗಾಂಧಿ ತತ್ವಗಳಿಗೆ ಬೆಲೆಯೇ ಇಲ್ಲ, ಗಾಂಧೀಜಿ ಸ್ವಾತಂತ್ರಕ್ಕಾಗಿ ವಿದೇಶಿಗಳ ವಸ್ತುಗಳನ್ನು ಸುಟ್ಟರೆ, ಈಗ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ನಮ್ಮವರು ಗಾಂಧೀಜಿ ತತ್ವಗಳನ್ನ ಸುಡುತ್ತಿದ್ದಾರೆ.....’ ಅಂತೆಲ್ಲ ಬಹಳ ಬೇಸರದಿಂದ ಬರೆದಿದ್ದ. ಆಮೇಲೆ ನನ್ನ ಜೀವನ ಯಾವ್ಯಾವುದೋ ಹಳಿಗಳ ಮೇಲೆ ಓಡಲು ಶುರುವಾಗಿ ನಾನೇ ಎಲ್ಲೆಲ್ಲೊ ಕಳೆದು ಹೋದೆ.


‘ಫೈನಲ್ ಇಯರ್ ಗೋಪಾಲ ನಿನ್ನೇ ಗುರಾಯಿಸ್ತಿದಾನೆ ಕಣೇ’ ಅಂತ ಕಾಲೇಜು ಗೇಟು ದಾಟುತ್ತಿದ್ದವಳ ಕೈ ಚಿವುಟಿದಳು ರೇಶ್ಮ. ಅವನನ್ನು ತಿರುಗಿ ನೋಡಿದ್ದೆ. ಅಬ್ಬಾ ಅನ್ನಿಸಿತ್ತು. ಇಷ್ಟ ಆಗಿ ಹೋಗಿದ್ದ. ಮೈತುಂಬ್ಬಿಕೊಂಡ ಎತ್ತರದ ಆಕಾರ, ನಾನು ಮೆಚ್ಚುವ ನಸುಗಪ್ಪು ಬಣ್ಣ.. ಅವನ ದೇಹದಿಂದ ಯಾವುದೋ ಬೆಳಕಿನ ಸಂಚಲನವಾಗುತ್ತಿದೆ ಅನ್ನಿಸಿದ್ದು ಆ ಕ್ಷಣಕ್ಕೆ ಭ್ರಮೆ ಅಂದುಕೊಂಡಿದ್ದೆ. ಕ್ಲಾಸಿನ ಮುಂದೆ ಬಂದು ನನ್ನ ನೋಡುತ್ತಾ ಸಣ್ಣದಾಗಿ ನಗುತ್ತಾ ನಿಂತಿರುತ್ತಿದ್ದ. ನಗು ಬರುತ್ತಿದ್ದರೂ ಅವನ ಕಡೆ ನೋಡದೆ, ಪಾಠದಮನೆ ರಂಗಸಾಮಿ ಅಯ್ಯಂಗಾರ್ ಅವರ ಎರಡನೇ ಪುತ್ರಿ ಶ್ರೀದೇವಿ ಎಚ್. ಆರ್ ತನ್ನ ಪ್ರಪಂಚದ ಬಾಗಿಲನ್ನು ಅವನಿಗೆ ಮುಚ್ಚಿ ಭದ್ರವಾಗಿ ತನ್ನ ಪಾಡಿಗಿದ್ದಳು. ಅವನು ಫೈನಲ್ ಇಯರ್ ಮುಗಿಸಿ ಹೋದಮೇಲೆ, ‘ಛೆ! ಒಂದು ಸಲವಾದರೂ ಮಾತಾಡಿದ್ದರೆ ಏನಾಗೋದು?’ ಎಂದು ಹಳಿದುಕೊಂಡಿದ್ದು ಲೆಕ್ಕವಿಲ್ಲದಷ್ಟು ಸಲ. ಆದರೆ ನಾನು ಸೆಕೆಂಡ್ ಇಯರ್ ಕೊನೆಯಲ್ಲಿರುವ ಹೊತ್ತಿಗೆ, ಅವನನ್ನು ಮರೆತೇ ಬಿಟ್ಟಿದ್ದೆ ಅಥವಾ ಹಾಗೊಬ್ಬ ಇದ್ದ ಅಂತ ನೆನಪಾಗುತ್ತಿದ್ದ. ಆದರೆ ನನ್ನ ಕಾಲೇಜಿನ ನೆನಪುಗಳಲ್ಲಿ ಮಾತ್ರ ದಾಖಲಾಗುತ್ತಾನೆ ಅಂದುಕೊಂಡಿದ್ದವ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದ. ಮುಜುಗರವಿಲ್ಲದೆ ಬಂದು ಮಾತಾಡಿಸಿದವನನ್ನು ಮಾತಾಡಿಸುತ್ತಾ ನನ್ನ ಮುಜುಗರವೆಲ್ಲಾ ನೀರಾಗಿತ್ತು. ಎಲ್ಲಾ ಮಾತಾಡಿದಮೇಲೆ ‘ಸಿ. ಎ ಕಟ್ಟಿದ್ದೀನಿ. ಇನ್ನು ಮೂರ್ ವರ್ಷ ಆಗತ್ತೆ. ಅಷ್ಟರೊಳಗೆ ಯಾರನ್ನು ಒಪ್ಕೊಬೇಡ, ಪ್ಲೀಸ್. ನಾನು ಫೇಲ್ ಆದ್ರೆ ನಿನ್ ತಂಟೆಗ್ ಬರಲ್ಲ. ಅಲ್ಲಿವರ್ಗು ಕಾಯ್ತಿಯಾ? ನೀನ್ ನಂಗ್ ಇಷ್ಟ’ ಅಂದಿದ್ದ. ನಾನು ಮೊದಲು ಒಪ್ಪಲಿಲ್ಲ. ಫೈನಲ್ ಇಯರ್ ಡಿಗ್ರಿ ಮುಗಿಸಿ ಕಾಲೇಜು ಬಿಡುವ ಹೊತ್ತಿಗೆ ಮತ್ತೆ ಬಂದ ಅವನು, ‘ನಾನು ಆರ್ಟಿಕಲ್ಶಿಪ್ನಲ್ಲೇ ಸಿ.ಎ ಇಂಟರ್ ಮುಗ್ಸಿದೀನಿ. ನಂಗೆ ನಿನ್ನ ಬೇಡ್ಕೊಳಕ್ಕೆ ಇಷ್ಟ ಇಲ್ಲ, ಆದ್ರೆ ನಿನ್ ಜೊತೆ ಖುಷಿಯಾಗಿರ್ತಿನಿ ಅಂತ ಗೊತ್ತು. ಉತ್ತರ ಹೇಳಿ ಹೋಗು’ ಅಂದ. ಏನೂ ಮಾತಾಡದೆ ಬಂದ ನಾನು ಉತ್ತರ ಹೇಳಿದ್ದು ಅಪ್ಪನಿಗೆ.
‘ಅದ್ಯಾವ್ದೋ ಸ್ಮಾರ್ತ ಮುಂಡೇಮಗನ್ನ ಪ್ರೀತಿಸಿ ಬಂದಿದಾಳೆ ನಿಮ್ ಮಗ್ಳು, ಬೀದಿ ರಂಡೆ.. ಬೀದಿ ರಂಡೆ..’ ಅಂತ ಅಮ್ಮ ಕೂಗಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ. ಅಪ್ಪ ‘ಓದಿದ್ದು ಸಾಕು’ ಅಂದರು. ಹಿಂಗೆಲ್ಲಾ ಆಯಿತು ಅಂತ ಅವನಿಗೆ ಪತ್ರ ಬರೆದು ಹಾಕಿದೆ. ‘ತಲೆಕೆಡಿಸಿಕೊಳ್ಳಬೇಡ. ಬ್ಯಾಂಕ್ ಎಕ್ಸಾಂ ಕಟ್ಟು. ನಾ ಪುಸ್ತಕಗಳನ್ನು ಕಳ್ಸ್ಕೊಡ್ತಿನಿ. ಕಷ್ಟ ಆಗಲ್ಲ. ಇನ್ನೊಂದುವರೆ ವರ್ಷ ಅಷ್ಟೆ. ನಾನು ಸಿ.ಎ. ಫೈನಲ್ಸ್ ಮುಗಿಸಿದ ತಕ್ಷಣ ಮದುವೆಯಾಗೋಣ’ ಎಂದು ಸಮಾಧಾನ ಹೇಳುತ್ತಿದ್ದ. ಆ ಎರಡು ವರ್ಷಗಳು ನರಕ. ಅಮ್ಮನ ನಿರಂತರ ಗೊಣಗಾಟದ ನಡುವೆಯೂ ಸಾಹಿತ್ಯ ಓದಿಕೊಂಡಿದ್ದವಳು, ಹಠಕ್ಕಾಗಿಯೇ ಓದಿ ಪಾಸು ಮಾಡಿ ಅಕೌಂಟು ಸ್ಟಾಟಿಸ್ಟಿಕ್ಸ್ಗಳ ನಡುವೆ ಕರಗಿ ಹೋದೆ. ಆಗ ನೆಮ್ಮದಿ ತರುತ್ತಿದ್ದಿದ್ದು ಅವನ ಪತ್ರಗಳು ಮತ್ತು ಶ್ರೀನಿವಾಸ ಚಿಕ್ಕಪ್ಪನ ಸಮಾಧಾನದ ಮಾತುಗಳು. ‘ನಿನ್ನದು ಕುರುಡು ಪ್ರೀತಿ ಅಲ್ಲ ಅಂತ ಗೊತ್ತು ಮಗಳೇ. ಅವನು ಎಕ್ಸಾಮ್ ಪಾಸು ಮಾಡಲಿ, ನಾನು ನಿನ್ನಪ್ಪನನ್ನು ಒಪ್ಪಿಸುತ್ತೇನೆ’ ಅಂದಿದ್ದರು. ಅವನು ಒಂದೇ ಅಟೆಮ್ಟಿಗೆ ಸಿ.ಎ ಪಾಸು ಮಾಡಿದ.. ಅಪ್ಪನೂ ‘ಹೋಗಲಿ ಬ್ರಾಹ್ಮಣರೇ ತಾನೇ’ ಅನ್ನತೊಡಗಿದರು. ನನಗೇ ಆಶ್ಚರ್ಯವಾಗುವಂತೆ ಹೆಣ್ಣು ಕೇಳಲು ಬಂದವರಿಗೆ ಒಳ್ಳೆಯ ಸತ್ಕಾರ ಮಾಡಿ ಮದುವೆ ನಿಶ್ಚಯಿಸಿದರು. ‘ಈಗೆಲ್ಲಾ ತ್ರಿಮತಸ್ತರು ಒಂದಾಗದಿದ್ದರೆ ಆಗೋಲ್ಲ’ ಅಂತೆಲ್ಲಾ ಅಪ್ಪ, ಅವನ ತಂದೆ ಮಾತಾಡಿಕೊಳ್ಳುತ್ತಿದ್ದರೆ ಇವರ ಜಾತಿಯ ಭ್ರಮೆಗೆ ತಲೆಚಚ್ಚಿ ಕೊಳ್ಳುವ ಹಾಗಾಗುತ್ತಿತ್ತು. ಮದುವೆ ನಮ್ಮ ಇಷ್ಟದ ಪ್ರಕಾರವಾಗಿಯೇ ನಡೆಯಿತು. ಬಹಳಷ್ಟು ಜನ ಕುವೆಂಪುರವರ ಮಂತ್ರ ಮಾಂಗಲ್ಯದಿಂದ ಪ್ರಭಾವಿತರಾಗಿ ಮದುವೆಯಾದಂತೆ ನಾವೂ ಆದೆವು. ಇದೆಲ್ಲಾ ಆಗಿ ಹತ್ತು ಹನ್ನೆರೆಡು ವರ್ಷಗಳಾಗಿವೆ ಅಷ್ಟೆ. ಮೊದಲು ಹರಿಹರನ್ ಅಂಡ್ ಕೋ. ನಲ್ಲಿ ಕೆಲಸ ಮಾಡುತ್ತಿದ್ದವನು, ತನ್ನದೇ ಫರ್ಮ್ ಶುರುಮಾಡಿದ. ಅಪ್ಪ ಅಮ್ಮನಿಗೆ ಅಳಿಯ ಚಾರ್ಟೆಡ್ ಅಕೌಂಟೆಂಟ್ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ.


ತೋಟ ಸುತ್ತಿ ವಾಪಸ್ಸು ಬರುವ ದಾರಿಯಲ್ಲೇ ಜನ್ನನ ಶಾಲೆ. ಜನ್ನ ಮರದ ಟೇಬಲ್ಲಿನ ಮುಂದೆ ಕೂತು ಕೈಯಲ್ಲೊಂದು ರೀಫಿಲ್ ಹಿಡಿದುಕೊಂಡು ಪೇಪರಿನ ಮೇಲೆ ಎಂತದೋ ಬರೆಯುತ್ತಾ ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದ. ‘ನಿಂಗೆ ಪೆನ್ನಿಗೆ ಗತಿ ಇಲ್ವ? ರೀಫಿಲ್ನಲ್ಲಿ ಬರೀತಿದ್ಯಲ್ಲ’ ಚುಡಾಯಿಸುತ್ತಾ ಒಳಗೆ ಹೋದೆ. ‘ಅಯ್ಯೋ ತಕ್ಷಣಕ್ಕೆ ಏನೂ ಸಿಗಲಿಲ್ಲ ಅದಕ್ಕೇ ಈ ರೀಫಿಲ್ಲಿನಲ್ಲೇ ಲೆಕ್ಕ ಹಾಕ್ತಿದ್ದೆ’ ಅನ್ನುತ್ತಾ ನಕ್ಕ. ‘ಗಾಂಧಿ ಜಯಂತಿಯನ್ನ ವಿಜೃಂಭಣೆಯಿಂದ ಆಚರಿಸೋಣ. ಎಷ್ಟು ಖರ್ಚಾಗುತ್ತೆ ಲೆಕ್ಕ ಕೊಡಿ, ಅಂತ ಕೇಳಿದಾರೆ ಹೆಡ್ಮಾಷ್ಟ್ರು’ ಅಂದ. ಏನು ಮಾಡ್ತಾಇದಿಯಾ ಕೇಳಿದೆ ‘ಗಾಂಧಿ ಗ್ರಾಮ ಅಂತ ಒಂದು ನಾಟ್ಕ ಆಡ್ಸ್ತಿದಿನಿ, ಭಾರತದ ಹೋರಾಟದ ಕಥೆ, ಕಳೆದ ಐವತ್ತು ವರ್ಷಗಳಲ್ಲಿ ಹೇಗೆ ನಾವೆಲ್ಲಾ ಗೋಡ್ಸೆ ಆಗಿದ್ದೀವಿ ಬ್ರಿಟಿಷರಿಂದ ಪಾರಾಗುವುದಕ್ಕೆ ಅಷ್ಟೊಂದು ಹೋರಾಡಿದ ಕೆಲವೇ ವರ್ಷಗಳಲ್ಲಿ ಅಮೇರಿಕಾಕ್ಕೆ ನಮ್ಮನ್ನ ಹೇಗೆ ಮಾರಿಕೊಂಡು ಬಿಟ್ಟಿದ್ದೀವಿ ಅನ್ನೋದೆಲ್ಲಾ ಹೇಳೋಕೆ ಹೊರತಿದ್ದೀನಿ. ದುಬಾರಿ ಪ್ರೊಡಕ್ಷನ್ನು ಈ ಖಾದಿ ಜುಬ್ಬ ಖಾದಿ ಟೋಪಿ ಹೊಂದಿಸೋದೇ ಸಮಸ್ಯೆಯಾಗಿದೆ..’ ಅಂದ. ಜಗತ್ತಿನ ಎಲ್ಲಾ ಜವಬ್ದಾರಿಗಳೂ ತನ್ನ ಮೇಲಿದೆ ಎನ್ನುವ ಟೆನ್ಷನ್ನಲ್ಲಿ, ಸಂಭ್ರಮದಲ್ಲಿ ಇದ್ದ. ನನಗೆ ನಗು ಬರುತ್ತಿತ್ತು. ಸಂಜೆ ದೇಜಿ ಹತ್ರ ಹೊಲಿದು ಕೊಡ್ತೀಯಾ ಅಂತ ಕೇಳಬೇಕು ಅಂದ.
‘ದೇಜಿ ಈಗ್ಲೂ ಹೊಲೀತಾನಾ? ಅವನು ಅಂಗಡಿ ಮುಚ್ಚಿಯಾಗಿದೆ ಅಂದಿದ್ದೆ’ ಎಂದಿದ್ದಕ್ಕೆ ‘ಅಂಗ್ಡಿ ಮುಚ್ಚಿದ್ದ್ರೂ ನಾ ಕೇಳಿದ್ರೆ ಇಲ್ಲ ಅನ್ನಲ್ಲ’ ಅಂದ. ‘ಆಮೇಲೆ ಇಂಥ ಪ್ರೋಗ್ರಾಮುಗಳಿಂದಾದರೂ ಅವನಿಗೊಂದಷ್ಟು ಸಹಾಯ ಆಗಲಿ, ಉಸಿರಾಡಲೂ ತ್ರಾಣ ಇಲ್ಲದ ಇಂಥಾ ಗಾಂಧಿಯ ಮಕ್ಕಳನ್ನ ಗಾಂಧಿ ಜಯಂತಿಯಾದರೂ ಬದುಕಿಸಲಿ ಅಂತ’ ಅಂದ. ನನಗೂ ದೇಜಿಯನ್ನ ನೋಡಬೇಕೆನಿಸಿತು. ‘ನೀನು ದೇಜಿ ಹತ್ರ ಹೋದ್ರೆ ನನ್ನನ್ನೂ ಕರಿ’ ಅಂದೆ. ‘ಓಹೋ ನಿಂಗೇನು ಕೆಲ್ಸ ಅಲ್ಲಿ. ನಿಮ್ಮಂಥಾ ಜಾಗತೀಕರಣದ ಹಾಲು ಕುಡಿದು ಬೆಳೆದ ಕೂಸುಗಳು ಅಂಥವರ ಮೇಲೆ ಕರುಣೆ ತೋರಿಸೋದು ಬೇಡ.’ ಅಂದ ವ್ಯಂಗ್ಯವಾಗಿ. ‘ಸಿನಿಕನ ಥರ ಮಾತಾಡ್ಬೇಡ. ಹೋಗೋ ಮುಂಚೆ ಮನೆ ಕಡೆ ಬಾ. ಇಲ್ಲ ಅಂದ್ರೆ ನಾನೇ ಹೋಗ್ಬರ್ತಿನಿ’ ಅಂದೆ. ‘ಇಲ್ಲ ಮರಾಯ್ತಿ ಬರ್ತಿನಿ ಆರುವರೆಗೆ.’ ಅಂದು ನಕ್ಕ.
ಮನೆಗೆ ಬಂದಾಗ ಅಮ್ಮ ಹೂ ಕಟ್ಟುತ್ತಾ ಕೂತಿದ್ದಳು. ದೇಜಿಯ ಬಗ್ಗೆ ಅಮ್ಮನ ಹತ್ತಿರ ಕೇಳಿದೆ. ಅವನು ಹೊಲಿಯೋದು ಬಿಟ್ಟಿರಬೇಕು. ನಾನಂತೂ ನೋಡ್ಲಿಲ್ಲಪ್ಪ. ಅವನ ಮಗ ಓಡಿ ಹೋದ ಮೇಲೆ ಹೊರಗೆ ಬರೋದೇ ಬಿಟ್ಟಿದ್ದ ಅಂದಳು ಅಮ್ಮ. ಈ ಬೆಳವಣಿಗೆಗಳೆಲ್ಲ ನನಗೆ ಗೊತ್ತೇ ಇರಲಿಲ್ಲ.

7
ನಾನು, ಜನ್ನ ಹಾಲು ಸೊಸೈಟಿಯ ಮುಂದೆ ಬಂದು ನಿಂತಾಗ ಸರಿಯಾಗಿ ಏಳು ಗಂಟೆ. ‘ಹೇಗೂ ಅಲ್ಲೇ ಹೋಗ್ತಿರಲ್ಲ, ಹಾಗೇ ಹಾಲು ತೊಗೊಂಡು ಬಾ’ ಅಮ್ಮ ಪಾತ್ರೆ ಕೊಟ್ಟು ಕಳುಹಿಸಿದ್ದಳು. ದೇಜಿ ಮನೆಯ ಬಾಗಿಲ ಬಳಿ ‘ಪರ್ಫೆಕ್ಟ್ ಟೇಲರ್ಸ್’ ತಗಡಿನ ಬೋರ್ಡು ಬಣ್ಣಗೆಟ್ಟು ನಿಂತಿತ್ತು. ಜನ್ನ ಬಾಗಿಲು ಬಡಿದ. ಐದು ನಿಮಿಷ ಒಳಗಿನಿಂದ ಯಾವ ಚಲನೆಯೂ ಕಾಣಿಸಲಿಲ್ಲ. ನಂತರ ಅವನ ಹೆಂಡತಿ ಮನೆಯೊಳಗೆ ಬೆಳಕು ಬಂದುಬಿಟ್ಟರೆ ಅನಾಹುತವಾಗುತ್ತೆ ಎಂಬಂತೆ ಒಂದು ಚೂರೇ ಚೂರು ಬಾಗಿಲು ತೆರೆದು ಮುಖ ಹೊರಗಡೆ ಹಾಕಿದಳು. ‘ದೇಜಿ ಇಲ್ವಾ? ಒಂಚೂರ್ ಕೆಲ್ಸ ಇತ್ತು ಗಾಂಧಿಜಯಂತಿಗೆ ಬಟ್ಟೆ ಹೊಲ್ಸದಿತ್ತು’ ಅಂದ. ಅವಳಿಗೇನು ಅರ್ಥವಾಯಿತೋ ‘ಬಣ್ಣಿ’ ಎಂದು ಮಲೆಯಾಳಂಕನ್ನಡದಲ್ಲಿ ಕರೆದು ನಾವು ಒಳಗೆ ಬರುತ್ತಲೇ ಬಾಗಿಲು ಮುಚ್ಚಿದಳು. ಅವನ ಟೇಲರಿಂಗ್ ರೂಮಿಗೆ ಹೋಗಿ ಕಾಯುತ್ತಾ ಕೂತೆವು.
ದೇಜಿ ಬಾಗಿಲ ಬಳಿ ಕಾಣಿಸಿಕೊಂಡ. ಒಂದು ಸುಧೀರ್ಘ ಪ್ರಯಾಣ ಮುಗಿಸಿದವನಷ್ಟು ಸುಸ್ತಾದವನಂತೆ ಕಂಡ. ಕೂದಲು ಬಣ್ಣಗೆಟ್ಟಿದ್ದವು. ಬಾಚಿ ವರ್ಷಗಳೇ ಕಳೆದಿರಬೇಕು. ಜನ್ನ ಅವನನ್ನು ನೋಡಿದ ತಕ್ಷಣ ‘ದೇಜಿ ಹೇಗಿದ್ಯ?’ ಎಂದು ಕೇಳ್ ಅವನ ಉತ್ತರಕ್ಕೂ ಕಾಯದೆ ‘ಒಂದು ದೊಡ್ಡ ಕಾರ್ಯಕ್ರಮ ಮಾಡ್ತಿದಿವಿ ನಾಟ್ಕ ಆಡಿಸ್ತೀವಿ. ಗಾಂಧಿ ಜಯಂತಿನ ತುಂಬ ಜೋರಾಗಿ ಮಾಡ್ತಿವಿ ನನ್ಗೆ ಎಂಟು ಜೊತೆ ಖಾದಿ ಜುಬ್ಬ, ಪೈಜಾಮ, ಗಾಂಧಿ ಟೋಪಿ ಬೇಕು. ನೀನೇ ಬಟ್ಟೆ ತಂದು ಹೊಲ್ದು ಕೊಡು. ಎಷ್ಟಾಗತ್ತೆ ಹೇಳು? ಗಾಂಧಿ ಜಯಂತಿ ಸಮಿತಿಯವರು ದುಡ್ಡು ಕೊಡ್ತಾರೆ. ನಾಳೆ ಬೆಳಗ್ಗೆ ಮಕ್ಕಳನ್ನ ಕಳಿಸ್ತಿನಿ. ಅವ್ರ ಅಳ್ತೆ ತೊಗೊ..’ ಎಂದೆಲ್ಲಾ ಎಡಬಿಡದೆ ಹೇಳಲು ಶುರು ಮಾಡಿದ.
ನಾನು ದೇಜಿಯ ಟೇಲರಿಂಗ್ ಶಾಪನ್ನೇ ನೋಡುತ್ತಾ ನಿಂತಿದ್ದೆ. ಅವನು ಮೊದಲ ಸಲ ನನ್ನ ಅಳತೆ ತೆಗೆದುಕೊಳ್ಳುತ್ತಾ ನನ್ನ ಮುಜುಗರ ಕಳೆಯುತ್ತಾ ಆಡಿದ ಮಾತುಗಳು ನೆನಪಾದವು. ಯಾವತ್ತೂ ಬಟ್ಟೆ ಹೊಲಿಸಿಕೊಳ್ಳದ ನನ್ನ ಮಗಳು ಶ್ರಾವಣಿಗೆ ದೇಜಿ ಹತ್ತಿರ ಉದ್ದ ಲಂಗ ರವಕೆ ಹೊಲಿಸಿಕೊಡಬೇಕು ಅಂದುಕೊಂಡೆ.
ಜನ್ನನ ಮಾತು ಮುಗಿದಿತ್ತು, ದೇಜಿ ಮಾತಾಡದೆ ಟೇಲರಿಂಗ್ ಮೆಷಿನ್ನನ್ನು ಮುಚ್ಚಿದ ಹಳೇ ಪಂಚೆಯನ್ನು ಸರಿಸಿದ. ನೋಡಿ ಎಂಬಂತೆ ನಮ್ಮ ಮುಖವನ್ನೇ ನೋಡಿದ.
ಎಷ್ಟೋ ವರ್ಷಗಳಿಂದ ದೇಜಿ ಕೈಯಲ್ಲಿ ಏನನ್ನೂ ಹೊಲಿಸಿಕೊಂಡಿಲ್ಲವೆಂಬಂತೆ ಅದು ಕೂತಿತ್ತು. ನನ್ನ ಕಣ್ಣಿಗೆ ಯಾವುದೋ ಕಾಲದ ಮ್ಯೂಸಿಯಮ್ ಪೀಸಿನಂತೆ ಕಂಡಿತು. ಜನ್ನ ಒಂಚೂರೇ ಕಾಣಿಸುತ್ತಿದ್ದ ಅದರ ವೀಲನ್ನು ತಿರುಗಿಸಿದ. ವಿಚಿತ್ರವಾದ ಕರ್ಕಶ ಶಬ್ಧ ಹೊರಟಿತು.

(ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಸಿಕ್ಕಿದ ಕತೆ)

Saturday, September 12, 2009

ಒಬ್ಬರು ಇಷ್ಟವಾಗುವ ಹಾಗೆ ಮತ್ತೊಬ್ಬರು ಇಷ್ಟವಾಗುತ್ತಾರಾ?

ಅವನಿಗೆ ಹೇಳ್ಬಿಡ್ಲಾ? ಪ್ರಶ್ನೆಯಾದಳು ಮಗಳು. ಹದಿನೆಂಟು ವರ್ಷದ ಬೆರಗು ಕಣ್ಗಳ ತುಂಬಾ ಅದೊಂದೇ ಪ್ರಶ್ನೆ. ಅವಳು ಹೇಳುವ ಮೊದಲೇ ಇಂಥದ್ದೇನೋ ಆಗಿದೆ ಅನ್ನಿಸಿತ್ತು. ಅವಳ ಚಡಪಡಿಕೆ, ಖುಶಿ, ತನ್ನೊಳಗೆಲ್ಲಾ ಕನಸುಗಳನ್ನು ತುಂಬಿಕೊಂಡ ಮನಸ್ಸು, ಕೊನೆಗೆ ಅವಳಾಗೇ ಬಂದು ಹೇಳಿದಳು. ಅವನ್ಯಾಕೆ ಇಷ್ಟ ಅಂತ ಕೇಳಿಕೊಂಡಿದ್ದೀಯ ಕೇಳಿದೆ. ಹೂಂ ಅಂದಳು ಅನುಮಾನಿಸುತ್ತಾ. ಹೇಳು ಅಂದರೆ ‘ಉಹು ಹೀಗೆ ಅಂತ ಹೇಳಲು ಗೊತ್ತಾಗುತ್ತಿಲ್ಲ’ ಅಂತ ಒಪ್ಪಿಕೊಂಡಳು. ಇಷ್ಟಪಡಲು ನಿಜವಾಗಲೂ ಅಂಥದ್ದೊಂದು ಕಾರಣವೇನು ಬೇಕಿಲ್ಲ. ಅಂಥ ಕಾರಣಗಳು ಕಳೆದುಹೋದರೂ ಪ್ರೀತಿಸಲು ಸಾಧ್ಯವಾ ಅನ್ನುವುದು ಮುಖ್ಯ. ನಿನ್ನದು ಪ್ರೀತಿಯಾ? ಆಕರ್ಷಣೆಯಾ? ಅಂತೆಲ್ಲಾ ಕೇಳುವುದಿಲ್ಲ. ಮಗಳು ಮೋಸ ಹೋಗಿಬಿಟ್ಟರೆ ಅಂತ ತಾಯಿ ಮನಸ್ಸು ಭಯ ಪಡುವುದು ಸಹಜ. ನಿನ್ನ ತಡೆಯೋಲ್ಲ. ಯಾರಿಗೂ ಉದಾಹರಣೆಗಳನ್ನು ಕೊಟ್ಟು ಹೆದರಿಸಿದರೆ ಉಪಯೋಗವಿಲ್ಲ ಅನ್ನುವುದು ಗೊತ್ತು. ಎಲ್ಲರಿಗೂ ಅವರವರದೇ ಅನುಭವಗಳಾಗಬೇಕು, ಅನುಭವಗಳಿಂದ ಕಲಿಯಬೇಕು. ಏನೂ ಆಗೋಲ್ಲ ನಿನಗೆ. ಜಾಗ್ರತೆಯಿಂದ ಇರು. ಏನಾದರೂ ಆದರೂ ಅಮ್ಮ ಯಾವತ್ತೂ ಇರುತ್ತಾಳೆ. ಅವನಿಗೆ ಹೇಳುತ್ತೀಯೋ ಬಿಡುತ್ತೀಯೋ ಅದು ನಿನಗೆ ಬಿಟ್ಟಿದ್ದು. ನೀನು ಹೇಳದೇ ಅದು ಅವನಿಗೆ ಅರ್ಥವಾದರೆ ಇನ್ನೂ ಖುಷಿ. ಹೇಳಿದರೆ ಮನೆಗೆ ಕರೆದುಕೊಂಡು ಬಾ ಅವನಿಗಿಷ್ಟವಾದ ತಿಂಡಿ ಮಾಡಿಕೊಡ್ತೀನಿ ಎಂದು ಹೇಳಿ ಎದ್ದು ಬಂದೆ.
* * *
‘ನನ್ನ ಕಷ್ಟಗಳನ್ನ ಹೇಳಿಕೊಳ್ಳೋದರಲ್ಲಿ ನನಗೆ ನಂಬಿಕೆ ಇಲ್ಲ. ಹೇಳಿಕೊಳ್ಳೋದರಲ್ಲಿ ಮಾತ್ರವಲ್ಲ ಕೇಳೋದರಲ್ಲೂ. ಅವರ ಮಗ ಪಿ. ಯು. ಸಿ. ಯಲ್ಲಿ ಫೇಲಾದನಂತೆ, ಇವಳನ್ನು ನೋಡಿಕೊಂಡು ಹೋದ ಗಂಡು ಮೊದಲು ಒಪ್ಪಿದವನು ಆಮೇಲೆ ಬೇಡ ಅಂದ. ಉಹು ನನಗೆ ಅದರಲ್ಲೆಲ್ಲಾ ಆಸಕ್ತಿಯಿಲ್ಲ. ಹಾಗೆ ಕೇಳಿಸಿಕೊಳ್ಳುತ್ತಾ ಇದ್ದರೆ ಹೇಳಿಕೊಳ್ಳುವುದು ಅವರಿಗೆ ಒಂದು ತರಹದ ಪ್ಲೆಶರ್ ಕೊಡುತ್ತದೆ. ಅಂಥಾ ವಿಷಯಗಳಿಂದ ಏನೂ ಉಪಯೋಗವಿಲ್ಲ ಮಾತ್ರವಲ್ಲ ಆ ತರಹದಲ್ಲದಿದ್ದರೆ ಮತ್ತೊಂದು ತರಹದ ಕಷ್ಟ ಎಲ್ಲರಿಗೂ ಇದ್ದೇ ಇರುತ್ತೆ. ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿಗಳ ಕಷ್ಟವೇ ಅದು. ಅವರಿಗೆ ಯಾರ ಕಷ್ಟಗಳನ್ನು ಕೇಳಲಾಗುವುದಿಲ್ಲ ಮಾತ್ರವಲ್ಲ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದೂ ಅವರಿಗೆ ಹಿಂಸೆ. ನನ್ನ ಕಷ್ಟಗಳನ್ನು ಹೇಳಿಕೊಂಡರೆ ನಾನು ಎಲ್ಲರ ಮುಂದೆ ಪೆಥೆಟಿಕ್ ಆಗಿಬಿಡುತ್ತೇನೇನೋ ಎಂದನಿಸುತ್ತೆ. ತೇಜಸ್ವಿ ಕಾದಂಬರಿಗಳನ್ನೋ ಟಾಲ್ಸಟಾಯ್ ಕಥೆಗಳನ್ನೋ ತೆಗೆದುಕೋ ಯಾವುದೇ ಪರ್ಸನಲ್ ವಿಷಯದ ಬಗ್ಗೆ ಅಲ್ಲಿನ ಎರೆಡು ಪಾತ್ರಗಳು ತುಂಬಾ ಇಂಟಿಮೇಟಾಗಿ ಮಾತಾಡಿಕೊಳ್ಳುವುದಿಲ್ಲ. ತೇಜಸ್ವಿಯ ಜುಗಾರಿ ಕ್ರಾಸಿನಲ್ಲಿಯಾಗಲೀ, ಚಿದಂಬರ ರಹಸ್ಯದಲ್ಲಾಗಲೀ ಯಾವ ಪಾತ್ರವೂ ತಮ್ಮ ಅತ್ಯಂತ ಇಂಟಿಮೇಟ್ ತುಂಬಾ ಪರ್ಸನಲ್ ಅನ್ನುವಂತಹ ಸಂಗತಿಗಳನ್ನ ಗೆಳೆಯನೊಡನೆ ಹೇಳಿಕೊಂಡು ಗೋಳಿಡುವುದಿಲ್ಲ. ಆದರೆ ಕುವೆಂಪು ಹಾಗೆ ಬರೆಯುತ್ತಿದ್ದರು, ಡಿಕನ್ಸ್ ಬರೆಯುವ ಅಂಥ ಕ್ಷಣಗಳನ್ನ ಆಸಕ್ತಿಯಿಂದ ಕಣ್ಣು ಒದ್ದೆ ಮಾಡಿಕೊಂಡು ಓದುತ್ತೇವೆ. ನಾನು ಆ ಲೇಖಕರ ಅಥವ ಅವರ ಪಾತ್ರಗಳ ಥರ ಎಂದು ಹೇಳುತ್ತಿಲ್ಲ. ನಿನಗೆ ಆ ತರಹದ ಎ಼ಕ್ಸಾಂಪಲ್ಸ್ ಕೊಟ್ಟರೆ ಅರ್ಥವಾಗುತ್ತೆ ಅನ್ನೋದಕ್ಕೆ ಹೇಳಿದೆ’ ಅಂದ ಅವನು. ಹೌದು ಇಷ್ಟು ದಿನವಾದರೂ ಒಮ್ಮೆಯೂ ತನ್ನ ಕಷ್ಟಗಳ ಬಗ್ಗೆ ಹೇಳಿಕೊಂಡಿಲ್ಲ ಅವನು. ಬರೀ ಕಷ್ಟಗಳ ಬಗ್ಗೆ ಅಲ್ಲ ಯಾವುದರ ಬಗ್ಗೆಯೂ ಏನನ್ನೂ ಅಷ್ಟು ಹತ್ತಿರವಾಗಿ ನನಗೊಬ್ಬಳಿಗೇ ಹೇಳುತ್ತಿರುವಂತೆ ಹೇಳಿಕೊಂಡಿಲ್ಲ. ನಾನು ಕೇಳಿ ಕೇಳಿ ಹಿಂಸೆ ಮಾಡುವುದರಿಂದ ಏನನ್ನಾದರೂ ಹೇಳುತ್ತಾನೇನೋ, ಹಾಗೆ ಹೇಳುವಾಗಲೂ ತನಗೊದಗಿರುವ ಕಷ್ಟ ಕಷ್ಟವೇ ಅಲ್ಲವೆನ್ನುವ ಥರ ಲೇವಡಿ ಮಾಡುತ್ತಾ ಹೇಳಿಕೊಳ್ಳುತ್ತಾನೆ. ‘ಇನ್ನು ಮುಂದಾದರೂ, ನನ್ನ ಬಳಿಯಾದರೂ ಹೇಳಿಕೊಳ್ಳೋ’ ಎನ್ನೋಣ ಎಂದುಕೊಂಡೆ. ನನ್ನ ಬಳಿಯಾದರೂ ಅಂದರೇನು? ‘ನನ್ನ ಬಳಿಯಾದರೂ ಹೇಳಿಕೊಳ್ಳೋ’ ಅನ್ನುವ ವಾಕ್ಯದಲ್ಲಿ ನಾನು ಅವನ ಜೀವನದಲ್ಲಿ ಪ್ರಾಮುಖ್ಯತೆಯನ್ನ ಪಡಿಯಬೇಕೆಂಬ ದೂರದ ಆಸೆಯೇನಾದರೂ ಇದೆಯೇ ಎಂದು ನನ್ನ ಮೇಲೆ ನನಗೇ ಅನುಮಾನವಾಗಿ ಹೇಳಲಾರದೇ ಹೋದೆ.

ಏನೂ ಸರಿ ಇಲ್ಲದಿದ್ದಾಗಲೂ ಎಲ್ಲವೂ ಸರಿಯಿರುವಂತೆ ನಕ್ಕು ಆ ಕ್ಷಣಕ್ಕೆ ಅದೊಂದು ಕಷ್ಟವೇ ಅಲ್ಲವೆಂಬಂತೆ ನಟಿಸುವ ಕಲೆ ಅವನಿಗೆ ಸಿದ್ದಿಸಿಬಿಟ್ಟಿದೆ ಅನ್ನಿಸಿತು. ಅಥವಾ ತನ್ನ ಸ್ವಂತ ಭಾವನೆಗಳನ್ನು ವಿಮರ್ಷಿಸಲು ಎಡೆ ಕೊಡದೆ ಎಲ್ಲದನ್ನೂ ನಿರಾಕರಿಸುತ್ತಾ ಏನೂ ಆಗಿಲ್ಲವೆಂಬಂತೆ ನಟಿಸುವುದರಿಂದ ತನ್ನೊಳಗೆ, ತನ್ನ ಎದೆಯಲ್ಲಿ ನಡೆಯುತ್ತಿರುವ ಕೋಲಾಹಲಗಳನ್ನು ಮರೆಯಬಹುದು ಅನ್ನೋ ಭ್ರಮೆಯೋ? ಹಾಗಿರುವುದರಿಂದಲೇ ಯಾರೂ ಅವನ ಬಳಿ ಏನನ್ನೂ ಹೇಳಿಕೊಳ್ಳಲು ಬರುವುದಿಲ್ಲ ಹೇಳಿಕೊಳ್ಳಹೋದವರಿಗೆ ಭಾವನೆಗಳನ್ನ ಅರ್ಥಮಾಡಿಕೊಳ್ಳಲಾಗದ, ಭಾವನೆಗಳೇ ಇಲ್ಲದ ‘ಕೋಲ್ಡ್ ಮ್ಯಾನ್’ ಥರ ಕಾಣುತ್ತಾನಾ? ಆದರೆ ಅವನು ಹಾಗಲ್ಲ ಎಂದು ನನಗೆ ಗೊತ್ತು.

“ನನಗೆ ಗೊತ್ತು” ಅನ್ನುವುದು ಅಹಂಕಾರ, ನನ್ನನ್ನೇ ನಾನು, ಅವನನ್ನು ಬೇರೆಯವರಿಗಿಂತ ಚನ್ನಾಗಿ ಅರ್ಥ ಮಾಡಿಕೊಂಡಿರೋಳು ಎಂದು ಹೇಳಿಕೊಳ್ಳುವುದರ ಇನ್ನೊಂದು ರೂಪ. ಆದರೆ ಇಂಥ ಅಹಂಕಾರಕ್ಕೆ ಅರ್ಥವಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮಗೆ ತೀರ ಇಷ್ಟವಾದವರನ್ನ ಹೀಗೇ ಅರ್ಥ ಮಾಡಿಕೊಂಡಿರುತ್ತಾರಲ್ಲವ? ಅಂಥವರಲ್ಲಿ ನಾನೂ ಒಬ್ಬಳು. ಅದರಲ್ಲಿ ವಿಶೇಷವಾದರೂ ಏನು? ಆದರೆ ನಾನೇಕೆ ಅವನಿಗಾಗಿ ಇಷ್ಟೊಂದು ಹಾತೊರೆಯುತ್ತೇನೆ? ಹಂಬಲಿಸುತ್ತೇನೆ? ನನಗೇಕೆ ಅವನ ಬಗ್ಗೆ ಧಾವಂತವಾಗುತ್ತಿದೆ? ನಾನವನನ್ನು ಪ್ರೀತಿಸುತ್ತಿದ್ದೇನಾ? ಅವನಿಗೆ ನನ್ನ ಪ್ರೀತಿಸಲು ಸಾಧ್ಯವಾ? ಅವನು ಯಾರನ್ನಾದರೂ ಯಾವತ್ತಾದರೂ ಪ್ರೀತಿಸುತ್ತಾನ? ಪ್ರೀತಿಸಿದ್ದಾನ? ಪ್ರೀತಿ ಹೀಗೆ ಏಕಾಎಕಿ ಜಾಗೃತವಾಗಿಬಿಡುತ್ತದ? ಅವನಿಗೆ ಹೇಳಿಬಿಡಲಾ? ಇಷ್ಟಕ್ಕೂ ಅದು ಹೇಳಿಕೊಳ್ಳುವುದಾ? ಅರ್ಥಮಾಡಿಕೊಳ್ಳುವುದಲ್ಲವ? ಅವನು ಯಾವತ್ತಾದರೂ ಅರ್ಥ ಮಾಡಿಕೊಳ್ಳುತ್ತಾನ? ನನಗ್ಯಾಕೆ ಹೀಗೆ ಸಂಕಟವಾಗುತ್ತಿದೆ? ಅಳು ಬರುತ್ತಿದೆ? ನಾನು ಹೇಳಿಕೊಳ್ಳುವುದಿಲ್ಲ. ಪ್ರೀತಿಗೆ ಬದಲು ಪ್ರೀತಿ ಸಿಗಬೇಕಾಗಿಲ್ಲ.

ಈ ದಿನಗಳಲ್ಲಿ ಅನುಭವಿಸಿದಷ್ಟು ಸಿಟ್ಟು, ಆತಂಕ, ಅನಿಶ್ಚಿತತೆ, ಅನುಮಾನ, ನಾನು ಅವನಿಗೆ ಬೇಡವಾಗಿರುವೆನೆಂದೆನಿಸುವ ಭಾವ. ಥು.. ಯಾಕಷ್ಟು ಗೋಳು ಹೊಯ್ದುಕೊಂಡೆ? ನಿಜಕ್ಕೂ ಅಡಿಕ್ಟಾಗೋಗಿದೀನಿ. ಯಾಕ್ ಹಾಗೆ ಆಡಿದೆ? ಬೇಕಿತ್ತಾ ನನಗೆ? ನನಗವನು ಯಾವತ್ತೂ ಸಿಗೋದಿಲ್ಲ ಅಂತ ಗೊತ್ತಲ್ಲವ? ಸಿಗೋದು ಅಂದರೇನು ಎಲ್ಲಾ ಸಮಯವೂ ನನ್ನ ಜೊತೆಗೇ ಇರುವುದು, ನಾನು ಕಣ್ಣು ಬಿಟ್ಟಾಗಲೆಲ್ಲಾ ನಾನವನನ್ನು ನೋಡುವಂತಾಗುವುದು, ಯಾರ ಹೆದರಿಕೆ ಭಯಗಳಿಲ್ಲದೆ ನನ್ನ ಉಸಿರನ್ನು ಅವನ ಉಸಿರಾಗಿಸುವಂತಾಗುವುದಾ? ನಾನು ಕೂಗಿದಾಗಲೆಲ್ಲ ಬರುವನೆನ್ನ ಹುಡುಗ.. ಅಂತಿದ್ದರೆ ಅವನು ನನ್ನವನಾ? ಪ್ರೀತಿ ಅನ್ನುವುದು ‘ಹೀಗೇ’ ಅಂತ ಅದಕ್ಕೊಂದು ಭಾಷ್ಯ ಕೊಡುವುದು ಎಷ್ಟು ಕಷ್ಟ? ಹೀಗೇ ಅಂತ ವಿಶ್ಲೇಶಿಸಿ ಹೇಳಬೇಕಾದದ್ದಾದರೂ ಯಾತಕ್ಕೆ? ನನಗೆ ಜೀವನ ಪೂರ್ತಿ ‘ಪ್ರೀತಿ’ ಇಡಿಯಾಗಿ ಸಿಕ್ಕುವುದಿಲ್ಲವಾ? ಹುಚ್ಚು...

ಧಸಕ್ ಎಂದು ಎದ್ದು ಕೂತೆ. ಯಾರೋ ಹೊರಗೆಳೆದುಕೊಂಡು ಬಂದಂತೆ. ಇಷ್ಟು ವಿವರವಾಗಿ ಇಪ್ಪತ್ನಾಲ್ಕು ವರ್ಷದ ಹಿಂದೆ ನೆಡೆದ ಘಟನೆ ಯಾಕೆ ನೆನಪಾಗಬೇಕು. ಅದೆಲ್ಲಾ ಅನುಭವಗಳಿಂದ ಮತ್ತೆ ಹಾದು ಹೋದ ಹಾಗೆ? ಮಗಳು ಅವನಿಗೆ ಹೇಳಿಬಿಡುತ್ತಾಳ? ಯಾಕೋ ಮಲಗಿಯೇ ಇರೋಣ ಅನ್ನಿಸಿತು. ಓದಲು ತೆರೆದ ಪುಸ್ತಕದ ಒಂದು ಸಾಲೂ ಓದಲಾಗುತ್ತಿಲ್ಲ.


ಮದುವೆಯಾಗುತ್ತೀಯ ಅಂದ ಪ್ರೀತಿಯ ಮಾತೇ ಇಲ್ಲ. ಹಿಂಗೆಲ್ಲಾ ಕೇಳುತ್ತಾರ ಆಶ್ಚರ್ಯವಾಯಿತು. ಇಲ್ಲ ಎಂದು ಹೇಳುವುದಕ್ಕೂ ಹುಂ.. ಎಂದು ಹೇಳುವುದಕ್ಕೂ ಎರಡಕ್ಕೂ ಕಾರಣಗಳಿರಲಿಲ್ಲ. ಅಮ್ಮನನ್ನು ಕೇಳು ಅಂದೆ, ನಕ್ಕ. ಕಷ್ಟಗಳನ್ನೇನು ಕೊಡಲಿಲ್ಲ ಹುಡುಗ, ಸುಖ ಪಟ್ಟೆ ಅನ್ನಲಾ? ಸುಖ ಅಂದರೇನು? ಅದನ್ನು ಅರ್ಥೈಸುವುದಾದರೂ ಹೇಗೆ? ಹೊಟ್ಟೆ, ಬಟ್ಟೆ, ಲಗ್ಜುರಿಗಳಿಗೆ ಚಿಂತೆಯಿಲ್ಲದೆ ನೆಮ್ಮದಿಯಾಗಿರುವುದೇ ಸುಖವಾ? ಬರೀ ಅಷ್ಟಿದ್ದರೆ ನೆಮ್ಮದಿ ಬಂದು ಬಿಡುತ್ತಾ? ಹೋಗಲಿ ಅದೆಲ್ಲಿಂದಾದರೂ ಬರುವಂಥದಾ? ನಾನೇ ಕಂಡುಕೊಳ್ಳಬೇಕದದ್ದಲ್ಲವಾ? ಎಲ್ಲಾ ಇದ್ದರೂ ಏನೋ ಇಲ್ಲದಂತೆ ನನ್ನನ್ನು ಕಾಡುತ್ತಿದ್ದುದು ಕಾಡುತ್ತಿರುವುದಾದರೂ ಯಾವುದು? ಇಷ್ಟು ದಿನಗಳಾದರೂ ಮದುವೆಯಾದವನೊಂದಿಗೆ ಹಾಗಿರಲಾಗಲೇ ಇಲ್ಲವಲ್ಲ. ಇವನೊಡನೆ ಯಾವುದೇ ಭಿಡೆಗಳಿಲ್ಲದೆ ಬದುಕಲು ಬರಲೇ ಇಲ್ಲ. ಮೊದಲು ‘ಮುದ್ದಾಗಿದ್ದಾಳೆ’ ಎಂದು ನನ್ನ ಇಷ್ಟಪಟ್ಟು ಕಟ್ಟಿಕೊಂಡವನಿಗೆ, ಅವನ ವ್ಯಾವಹಾರಿಕ ಸ್ಪಂದನೆಗಳಿಗೆ ಸರಿಯಾಗಿ ಸ್ಪಂದಿಸದೆ, ನನ್ನ ಭಾವಲೋಕದಲ್ಲೇ, ಕಥೆ-ಕಾದಂಬರಿ ಆರ್ಟ್ ಸಿನೆಮಾಗಳಂಥಹ ಸಂಗತಿಗಳಲ್ಲಿ ಅವನ ಮಾತಿನಲ್ಲಿ ಹೇಳೋದಾದರೆ ‘ಕೆಲಸಕ್ಕೆ ಬಾರದ’ ವಿಷಯಗಳಲ್ಲೇ ಮುಳುಗಿ ಹೋಗಿರುತ್ತಿದ್ದ ನನ್ನನ್ನು ಕಂಡು ಮೊದ್ದು-ಮೊದ್ದು ಅನ್ನಿಸಿ, ತಪ್ಪು ಮಾಡಿದೆ ಅನ್ನಿಸಿರಬೇಕು. ಆಮೇಲಾಮೇಲೆ ದೈಹಿಕ ಅಗತ್ಯತೆಗಳು ಕಡಿಮೆಯಾಗುತ್ತಾ ಹೋದ ಹಾಗೆ ದೂರವಾಗುತ್ತಾ ಹೋದೆವು. ‘ಬೇರೆಯಾವುದಾದರೂ ಸಂಭಂದದಲ್ಲಿ ತೊಡಗುತ್ತಾನ?’ ಎಂದು ಆಸಕ್ತಿಯಿಂದ ಕಾದೆ. ಹಾಗವನು ಮಾಡಿದ್ದರೆ, ಅವನಿಗೆ ‘ನಿನ್ನ ಇನ್ನೊಂದು ಸಂಭಂದದ ಬಗ್ಗೆ ನನಗೆ ಗೊತ್ತು ಆದರೆ ನಾನು ಅದಕ್ಕೆ ಅಡ್ಡಿಯಾಗುವುದಿಲ್ಲ, ಅದಕ್ಕೂ ನನಗೂ ಸಂಭಂಧವಿಲ್ಲ, ಬೇಕಾದರೆ, ನಿನಗೆ ಸಹಾಯವಾಗುವುದಾದರೆ, ನಿನ್ನಿಂದ ದೂರ ಸರಿಯುತ್ತೇನೆ.’ ಎಂದು ಹೇಳಿ ಅವನ ಮುಂದೆ ಉದಾತ್ತವಾಗುವ ಕನಸು ಕಂಡಿದ್ದೆ. ಕೆಲವರಿಗಾದರೂ ತಮಗೆ ಯಾರಾದರೂ ಹತ್ತಿರದವರು ಮೋಸ ಮಾಡಲಿ ಎಂದು ಕಾಯ್ದು (ಅದಕ್ಕೆ ಮೋಸ ಅನ್ನಬೇಕ?) ಮೋಸ ಹೋಗುತ್ತಿದ್ದೇವೆಂದು ಗೊತ್ತಾದಾಗ ದೊಡ್ದ ರಂಪಾಟ ಮಾಡದೆ ದೊಡ್ಡ ಮಾತಿನಲ್ಲಿ ಹೇಳೋದಾದರೆ ಕ್ಷಮಿಸಿ, ಎಲ್ಲರಿಂದ ಸಿಂಪತಿಯನ್ನ ಪಡೆಯಬೇಕೆಂಬ ಸುಪ್ತ ಆಸೆಯಿರುತ್ತದೇನೋ? ನನ್ನ ದೊಡ್ಡವಳಾಗಲು ಅವನು ಬಿಡಲಿಲ್ಲ.

ಕಥೆಯಾಗಿದ್ದರೆ ಓದಿದ ಜನ ಕ್ಲೀಷೆ ಎನ್ನುತ್ತಿದ್ದರೇನೋ.. ಹಾಗೆನ್ನುವಂತೆ ಎಷ್ಟೋ ವರ್ಷಗಳ ಮೇಲೆ ಎದುರು ಸಿಕ್ಕ, ಹುಡುಗಿಯಂತೆ ತಲೆ ತಗ್ಗಿಸಿದ. ಮನೆಗೆ ಬರಲಾ ಮಾತಾಡಬೇಕು ಅಂದ. ಮನಸಿನಲ್ಲಿ ನೆಲೆಯಾದವನು ಮನೆಗೆ ಬರಲಾ ಎಂದರೆ ಬೇಡವೆನ್ನಲಾಗಲಿಲ್ಲ.. ನಾ ಕೊಟ್ಟ ಕಾಫಿಯನ್ನ ತೊಟ್ಟು ತೊಟ್ಟಾಗಿ ಹೀರುತ್ತಿದ್ದವನನ್ನು ಸರಿಯಾಗಿ ಗಮನಿಸಿದೆ.. ಕಬ್ಬಿಣದಂತಿದ್ದ ತೋಳುಗಳು, ಆಗ ಅದರಲ್ಲಿ ಕರಗಿಹೋಗಬೇಕೆನಿಸುತ್ತಿತ್ತು, ಇನ್ನೂ ಒಂದಷ್ಟು ಕೊಬ್ಬನ್ನು ಸೇರಿಸಿ ಪುಷ್ಟಿಯಾಗಿದ್ದವು. ನನಗೆ ನಿನ್ನ ಮನಸ್ಸು ಅರ್ಥ ಆಗುತ್ತಿತ್ತು, ನನ್ನ ಮನಸ್ಸೂ ಅದೇ ಆಗಿತ್ತು. ಆದರೆ ನಿನ್ನಂಥ ಹುಡುಗಿ ನನ್ನ ಜೊತೆ ಕಷ್ಟ ಪಡಬಾರದು ಎಂದು ನಿರ್ಧರಿಸಿದ್ದೆ. ಅಮ್ಮನನ್ನು ನೋಡಿದ್ದೆನಲ್ಲ, ಅಮ್ಮನಂಥವಳಿಗೆ ಅಪ್ಪನಿಗಿಂತ ಚನ್ನಾಗಿ ನೋಡಿಕೊಳ್ಳುವವರು ಸುಖದಲ್ಲಿ ಸಾಕುವವರು, ಅವಳನ್ನು ಕಷ್ಟಕ್ಕೆ ನೂಕದವರು ಸಿಗಬೇಕಿತ್ತು ಅನ್ನಿಸುತ್ತಿತ್ತು. ನಾವೇನಾದರೂ ಮದುವೆಯಾಗಿದ್ದರೆ ನನ್ನ ಮಗನಿಗೂ ಹಾಗೇ ಅನ್ನಿಸುತ್ತಿತ್ತು. ಹಾಗಾಗುವುದು ನನಗೆ ಬೇಕಿರಲಿಲ್ಲ. ಮದುವೆಯಾಗಿದ್ದರೆ ನಿನ್ನ ಕಣ್ಣಲ್ಲಿ ಈಗ ಕಾಣುವ ಪ್ರೀತಿ ಕಾಣುತ್ತಿರಲಿಲ್ಲ ಅಂದ. ಬೇರೆ ದಾರಿಯಲ್ಲಿ ಹೋಗಲು ನಿರ್ಧರಿಸಿ ಇನ್ನೆಲ್ಲೋ ಸೇರಿದ ಮೇಲೆ, ನಾವು ತುಳಿಯದ ದಾರಿಯಲ್ಲಿ ಮುಳ್ಳೇ ಇತ್ತೆಂದು ಅಂದುಕೊಳ್ಳುವುದಕ್ಕೆ ಏನನ್ನುತ್ತಾರೆ? (ಬುದ್ದಿವಂತಿಕೆ?) ಕೇಳೋಣವೆಂದುಕೊಂಡೆ, ವ್ಯರ್ಥ ಅನ್ನಿಸಿತು, ಸುಮ್ಮನಾದೆ. ಅದ್ಯಾಕೋ ಎಷ್ಟೋ ವರ್ಷಗಳಿಂದ ಹಿಡಿದಿಟ್ಟಿದ್ದನೇನೋ ಎನ್ನುವಂತೆ ನಿರುಮ್ಮಳವಾಗಿ, ಎದುರು ಕೂತ ಅವನಿಗೂ ನಿಚ್ಛಳವಾಗಿ ತಿಳಿಯುವಂತೆ ನಿಟ್ಟುಸಿರಿಟ್ಟೆ. ನನ್ನ ಇನ್ಯಾವುದೂ ಕಾಡಲು ಸಾಧ್ಯವಿಲ್ಲ ಅನ್ನಿಸಿತು. ಯಾಕೋ ಮಗಳು ನೆನಪಾದಳು. ಅಷ್ಟು ದಿನಗಳಿಂದ ‘ಇವತ್ತು ಹೇಳುತ್ತೇನೆ, ನಾಳೆ ಹೇಳುತ್ತೇನೆ’ ಅನ್ನುತ್ತಿದ್ದವಳು ಇವತ್ತು ಏನಾದರಾಗಲಿ ಹೇಳಿಯೇ ಬಿಡ್ತಿನಿ ಅಮ್ಮಾ ಅಂದಿದ್ದಳು. ಅವನು ಒಪ್ಪಿಕೊಂಡಿರುತ್ತಾನಾ? ಪ್ರಶ್ನೆಯಾಯಿತು ಮನಸ್ಸು. ಅವನು ಕಾಫಿ ಕಪ್ಪನ್ನು ಸದ್ದು ಮಾಡುತ್ತಾ ಟೇಬಲ್ಲಿನ ಮೇಲೆ ಇಟ್ಟ. ಅವನ ಮಾತುಗಳಿಗೆ ನಾನು ಉತ್ತರವನ್ನೇ ಕೊಡದೆ ಎಲ್ಲೋ ಕಳೆದು ಹೋಗಿದ್ದೆ. ನಾನೇನಾದರೂ ಅಂದಿದ್ದರೆ ಮಾತು ಬೆಳೆಯುತ್ತಿತ್ತು. ಮಾತುಗಳು ಬೆಳೆದರೆ ಏನಾಗುತ್ತದೆಂದು ಗೊತ್ತಿತ್ತು. ನನ್ನ ಗಂಡನನ್ನು ಸುಮ್ಮನೆ ಉದಾತ್ತನನ್ನಾಗಿಸುವುದು ನನಗೆ ಬೇಕಿರಲಿಲ್ಲ. ವಾದಗಳಿಂದ ಏನೂ ಪ್ರಯೋಜನವಿಲ್ಲ ವಾದ ಮಾಡುವವರು ಇಬ್ಬರೂ ಮಾತಾಡುತ್ತಾ ಹೋಗುತ್ತಾರಷ್ಟೇ ನಮ್ಮ ಅನಿಸಿಕೆ ನಂಬಿಕೆಗಳು ಯಾವರೀತಿಯಾದರೂ ಎದುರಿನವರ ಭಾವಕ್ಕೆ ತಟ್ಟಬೇಕಷ್ಟೇ. ಅದು ಮಾತಿನಿಂದಾಗುವಂಥದಲ್ಲ. ಅದೂ ಯಾವುದೋ ವಿಷಯದಲ್ಲಿ ಎದುರಿನವರು ನಮಗಿಂತಾ ಸಂಪೂರ್ಣ ಭಿನ್ನವಾದ ಅಭಿಪ್ರಾಯ ಹೊಂದಿದ್ದರೆ ಎಷ್ಟೇ ವಾದ ಮಾಡಿದರೂ ಆಗುವುದು ಪದಗಳ ವ್ಯರ್ಥ ವೆಚ್ಚ. ಹೊರಟು ನಿಂತವನು ಮನೆಗೆ ಬಾ ಅಂದ. ಸುಮ್ಮನೆ ನಕ್ಕೆ. ಅವನಿಗೆ ನಾನು ಹೋಗುವುದಿಲ್ಲವೆಂದು ಗೊತ್ತು.

ಮಗಳು ಮನೆಗೆ ಬಂದಳು ಖುಶಿಯಾಗಿದ್ದಳು. ‘ನಿನ್ನ ಹುಡುಗನಿಗೇನು ಇಷ್ಟ? ಯಾವತ್ತು ಮನೆಗೆ ಬರುತ್ತಾನೆ?’ ಕೇಳಿದೆ. ಇಲ್ಲಮ್ಮ ಅವನಿಗೆ ಈಗಾಗಲೇ ಗರ್ಲ್ ಫ್ರೆಂಡ್ ಇದಾಳಂತೆ ಅಂದಳು. ಅತ್ತಿದ್ದಾಳ ಕಣ್ನನ್ನು ಹುಡುಕಿದೆ. ಅದಕ್ಕೆಲ್ಲಾ ಅಳೋದಿಲ್ಲಮ್ಮಾ.. ಇನ್ಯಾರಾದರೂ ಅವನಷ್ಟೇ ಇಷ್ಟವಾಗುವವನನ್ನು ಹುಡುಕಿಕೊಳ್ಳುತ್ತೇನೆ ಅಂದಳು. ಒಬ್ಬರು ಇಷ್ಟವಾಗುವ ಹಾಗೆ ಮತ್ತೊಬ್ಬರು ಇಷ್ಟವಾಗುತ್ತಾರ? ಪ್ರಶ್ನೆ ನನ್ನಲ್ಲಿಯೇ ಉಳಿಯಿತು.

Saturday, July 18, 2009

ಸಾಹಿತ್ಯ ಯಾಕೆ ಬೇಕು ಎಂದು ಹೇಳಲು ಯತ್ನಿಸುತ್ತಾ...

‘ಸಾಹಿತ್ಯ ಯಾಕೆ ಬೇಕು?’ ಅನ್ನೋ ಸಾಲು ನೋಡುತ್ತಲೇ ಈ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲವಲ್ಲ ಅಂತ ನನ್ನ ಬಗ್ಗೆ ನನಗೇ ಆಶ್ಚರ್ಯವಾಯಿತು. ಸ್ಕೂಲಿಗೆ ಹೋಗುತ್ತಿದ್ದ ವಯಸ್ಸಿನಿಂದಲೂ ಸ್ಕೂಲಿಗೆ ಯಾಕೆ ಹೋಗಬೇಕು ಅಂತ ಗೊತ್ತಿತ್ತು. ಯಾಕೆ ಓದಬೇಕು ಅಂತ ಗೊತ್ತಿತ್ತು. ಅಪ್ಪ ‘ಡಾಕ್ಟರಾಗಬೇಕು ನೀನು, ಚನ್ನಾಗಿ ಓದು’ ಅನ್ನುತ್ತಿದ್ದರು. ಇವತ್ತು ಸ್ಕೂಲಿಗೆ ಹೋಗುವುದು ನಾಳೆ ಡಾಕ್ಟ್ರಾಗುವುದಕ್ಕೆ ಅಂದುಕೊಂಡಿದ್ದೆ. ಅಮ್ಮನಿಗೆ ಮನೆಕೆಲಸದಲ್ಲಿ, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದರೆ, ಈಗಲೇ ಎಲ್ಲಾ ಕಲಿತುಬಿಡು ಮುಂದೆ ನಿನಗೆ ಕಷ್ಟವಾಗುವುದಿಲ್ಲ ಅನ್ನುತ್ತಿದ್ದಳು. ಸ್ನಾನ ಮಾಡುವುದು ಕ್ಲೀನಾಗಿರುವುದಕ್ಕೆ, ಕ್ರೀಮು, ಪೌಡ್ರು ಹಚ್ಚಿಕೊಳ್ಳುವುದು ಚನ್ನಾಗಿ ಕಾಣೋದಕ್ಕೆ, ವಾಕಿಂಗು ಸೈಕ್ಲಿಂಗು ಆರೋಗ್ಯವಾಗಿರೋಕ್ಕೆ ಅಂತೆಲ್ಲಾ ಹೇಳಿಕೊಟ್ಟರು. ಆದರೆ ಮನೆಯಲ್ಲಿ ಅಷ್ಟೊಂದು ಪುಸ್ತಕಗಳನ್ನ ಅಪ್ಪ ಯಾಕೆ ಇಟ್ಟಿದ್ದರು ಅಂತ ಯಾವತ್ತೂ ಹೇಳಲಿಲ್ಲ. ಅಪ್ಪ ಅಂದ ತಕ್ಷಣ ನೆನಪಾಗುವುದು ಅವರು ಪುಸ್ತಕವೊಂದನ್ನು ಕಯ್ಯಲ್ಲಿ ಹಿಡಿದುಕೊಂಡು ಮಂಚದಮೇಲೆ ಆರಾಮಾಗಿ ಕೂತು ಓದುತ್ತಿದ್ದುದು. ಅಪ್ಪ ಯಾಕೆ ಹಾಗೆ ಓದುತ್ತಿದ್ದರು? ನಾನು ಹುಚ್ಚು ಹಿಡಿದವಳಂತೆ, ಪರೀಕ್ಷೆ ಹತ್ತಿರ ಬಂದರೂ ಬಯಾಲಜಿ, ಫ್ಹಿಸಿಕ್ಸ್ ಪುಸ್ತಕಗಳೊಳಗೆ ವೈದೇಹಿ, ಅನಂತಮೂರ್ತಿ, ಕುವೆಂಪು, ಬೈರಪ್ಪನವರ ಕಥೆ ಕಾದಂಬರಿಗಳನ್ನು ಕದ್ದಿಟ್ಟುಕೊಂಡು ಓದುತ್ತಿದ್ದುದು ಯಾಕೆ? ಲೈಬ್ರರಿಯಿಂದ ಎಲ್ಲರೂ ಸೈಕಾಲಜಿ ಪುಸ್ತಕವನ್ನೋ ಜರ್ನಲಿಸಂ ಪುಸ್ತಕವನ್ನೋ ತೆಗೆದು ಓದಿದರೆ ನಾನ್ಯಾಕೆ ಲಂಕೇಷರ ನಾಟಕಗಳನ್ನು, ಚಾರ್ಲ್ಸ್ ಡಿಕನ್ಸಿನ, ಟಾಲ್ಸ್‌ಟಾಯ್‌ನ ಕಾದಂಬರಿಗಳನ್ನು ಆರಿಸಿಕೊಂಡು ಓದುತ್ತೇನೆ? ಹೀಗೆ ನಾನ್ಯಾವತ್ತೂ ಕೇಳಿಕೊಂಡಿರಲಿಲ್ಲ.

ಆದ್ಯತೆಗಳು ಬದಲಾಗಿವೆ ಹೌದು, ಆದ್ಯತೆಗೆಳು ಬದಲಾಗಿರುವುದು ಈಗ ಮಾತ್ರವಾ? ಪ್ರತಿಯೊಂದು ತಲೆಮಾರಿನ ಆದ್ಯತೆಯೂ ತನ್ನ ಹಿಂದಿನ ತೆಲೆಮಾರಿನ ಆದ್ಯತೆಗಿಂತ ಭಿನ್ನವಾಗಿರುತ್ತದೆ. ಹಾಗಂತ ಸಾಹಿತ್ಯಕ್ಕೆ ಅದರಿಂದ ಹೊಡೆತ ಬಿದ್ದಿದೆಯಾ? ಬೆಂಗಳೂರಿನ ಜನ ಟ್ರಾಫಿಕ್ಕಿನಲ್ಲೇ ದಿನದ ಅರ್ಧ ಕಳೆದುಕೊಳ್ಳುತ್ತಾರೆ, ನನ್ನ ಕೆಲವು ಸ್ನೇಹಿತರಿಗೆ ಏನನ್ನದರೂ ಓದುವುದಕ್ಕಿಂತ ಇಂಟರ್ನೆಟ್ಟಲ್ಲಿ ಚಾಟ್ ಮಾಡುವುದು, ಸ್ನೇಹಿತರ ಜೊತೆ ಸುತ್ತಾಡುವುದು, ಬೀಚಿಗೆ ಹೋಗೋದು, ಸಿನಿಮಾಗಳಿಗೆ ಹೋಗೋದು ಇಷ್ಟ ಆಗುತ್ತೆ. ಅದು ಅವರವರ ಇಷ್ಟ, ನನಗೆ ಓದುವುದು ಹೇಗೆ ಪ್ರೀತಿಯೋ ಹಾಗೆ ಅವರಿಗೆ ಇಂಟರ್ನೆಟ್ಟು ಪ್ರೀತಿ. ನಾನು ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ಹಿಡಿದುಕೊಂಡು ಕೂತಿದ್ದರೆ ನನ್ನ ಸ್ನೇಹಿತೆ ಎಮ್ ಟಿ.ವಿ ರೋಡೀಸ್‌ನಲ್ಲಿ ಯಾರು ಗೆಲ್ಲುತ್ತಾರೆ ಅಂತ ತಲೆಕೆಡಿಸಿಕೊಳ್ಳುತ್ತಾಳೆ. ಆಗ ಎಮ್ ಟಿ.ವಿ, ಇಂಟರ್ನೆಟ್ಟು, ಇಷ್ಟೊಂದು ಟ್ರಾಫಿಕ್ಕು ಇರಲಿಲ್ಲ ಆದರೂ ಎಷ್ಟೋ ಜನ ಏನನ್ನೂ ಓದುತ್ತಿರಲಿಲ್ಲ. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇರಲಿಲ್ಲ ಅಷ್ಟೆ. ಈಗಲೂ ಅದೇ ರೀತಿ ಸಾಹಿತ್ಯದಲ್ಲಿ ಆಸಕ್ತಿ ಇರುವವರು ಓದುತ್ತಾರೆ ಇಲ್ಲದವರು ತಮ್ಮ ಆಸಕ್ತಿಗಳೆಡೆಗೆ ಹೊರಳಿಕೊಳ್ಳುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಆ ವಿಶಯಕ್ಕೆ ಜನರು ಹೆಚ್ಚಿನ ಆದ್ಯತೆ ಕೊಟ್ಟರು, ಆಗ ಅಂಥ ಸಾಹಿತ್ಯ ಬಂತು. ಕೆಲವು ದಿನಗಳ ನಂತರ, ಪ್ರಕ್ರುತಿಗೆ ಆದ್ಯತೆ ಕೊಟ್ಟರು, ಮುಂದಿನವರು ಸಮಾನತೆ ಅಂದರು, ಸ್ತ್ರೀ ಶೋಶಿಸಲ್ಪಡುತ್ತಿದ್ದಾಳೆ ಅಂತ ಗೊತ್ತಾಯಿತು, ಹೀಗೆ ಜನರ ಗಮನ ಒಂದರಿಂದ ಇನ್ನೊಂದಕ್ಕೆ ಬದಲಾಗುತ್ತಾ ಹೋಯಿತು. ಪ್ರತೀ ಬಾರಿ ಹೀಗೆ ಆದಾಗಲೂ ಅದಕ್ಕೆ ಸಮಾನಾಂತರವಾಗಿ ಸಾಹಿತ್ಯವೂ ಬದಲಾಗಿದೆ. ಈಗಿನ ಆದ್ಯತೆಗಳಿಗೆ ತಕ್ಕಂತೆ, ರಿಯಲಿಸ್ಟಿಕ್ಕಾಗಿ, ಉತ್ಪ್ರೇಕ್ಷೆಗಳಿಲ್ಲದೆ, ಇಷ್ಟವಾಗುವಂತೆ, ಪೂ ಚಂ ತೆ ಬರೆದರಲ್ಲ. ವಸುದೇಂದ್ರ, ಜೋಗಿ, ವಿವೇಕ್ ಶಾನಭಾಗ ಬರೆದುದನ್ನು ಇಷ್ಟಪಟ್ಟು ಓದುತ್ತೇವಲ್ಲ. ಚೇತನ್ ಭಗತ್ ಕಾದಂಬರಿಗಳಲ್ಲಿ ಏನೂ ಇಲ್ಲ ಅನ್ನುವವರು ಕೂಡಾ ಅದನ್ನು ಓದುತ್ತಾರೆ, ಅರವಿಂದ್ ಅಡಿಗ ‘ಹೀಗೆಲ್ಲಾ ಭಾರತದ ಸ್ಥಿತಿ ಇದೆ’ ಅಂತ ಹೇಳಿ ನಮ್ಮನ್ನು ಆಶ್ಚರ್ಯ ಪಡಿಸುತ್ತಾನೆ. ಕೋಲ್‌ರಿಜ್‌ನ ‘ಕುಬ್ಲಾ ಖಾನ್’ ಆಶ್ಚರ್ಯ್ ಪಡಿಸುವಂತೆ ಈ ಥರ ಅದೆಲ್ಲೋ ಅದ್ಯಾವತ್ತೋ ನಡೆದಿರಬಹುದು ಅಂತ ಅಂದುಕೊಳ್ಳುವಂತೆ ‘ವೈಟ್ ಟೈಗರ್’ನಲ್ಲಿ ಅವನು ಹೇಳಿರುವ ಸ್ಥಿತಿ ಭಾರತದ ಕೆಲವು ಕಡೆಗಳಲ್ಲಾದರೂ ಇದೆ ಎಂದು ಅನಿಸುತ್ತದೆ.

‘ಸಾಹಿತ್ಯದಿಂದ ಹೊಟ್ಟೆ ತುಂಬುವುದಿಲ್ಲ’ ಅಂತ ನಾನು ಸಣ್ಣವಳಿದ್ದಾಗ ಹೇಳಿದ್ದರೆ, ಬೇಡ ಒಂದು ಐದಾರು ವರ್ಷದ ಹಿಂದೆ ಹೇಳಿದ್ದರೂ ಸಹ ನನಗೆ ಈ ಸಾಲಿನ ಅರ್ಥ ತಿಳಿಯುತ್ತಿರಲಿಲ್ಲ. ನಾನು ಅಷ್ಟು ಆಸೆಯಿಂದ ಕಾದಂಬರಿ, ಕಥೆಗಳು, ಸಿಕ್ಕ ಸಿಕ್ಕ ಮ್ಯಾಗ್ಜೈನುಗಳನ್ನ ಓದುತ್ತಿರುವಾಗ, ಮುಂದೆ ನಾನೇನಾದ್ರೂ ಬರೀತಿನಿ, ಅದರಿಂದ ದುಡ್ಡು ಬರುತ್ತೆ ಅಂತ ಗೊತ್ತಿರಲಿಲ್ಲ. ಸಾಹಿತ್ಯ ಯಾಕೆ ಬೇಕು ಅಂತ ಯೋಚಿಸುವಾಗ ಕಥೆಯೋ ಕಾದಂಬರಿಯೋ ಪ್ರಭಂದವೋ ಬರೆದರೆ ಅದರಿಂದ ದುಡ್ಡು ಬರುತ್ತೆ ಅದಕ್ಕೆ ಬರೆಯುತ್ತೀನಿ ಅಂತ ಯಾರಾದರೂ ಯೋಚಿಸುತ್ತಾರ? ಸಾಹಿತ್ಯ ಸ್ರಷ್ಠಿಯಾಗುವುದು ಇನ್ನು ಬರೆಯದೇ ಇರಲು ಸಾಧ್ಯವಿಲ್ಲ ಅನ್ನೋ ಒತ್ತಡದಿಂದಲ್ಲವ, ಅದರಮೇಲಿನ ಪ್ರೀತಿ ಆಸಕ್ತಿಯಿಂದಲ್ಲವ? ಹಾಗೆ ಬರೆದದ್ದು ಮಾತ್ರ ಗೆಲ್ಲುತ್ತದೆ ಅನ್ನುವುದು ನನ್ನ ನಂಬಿಕೆ. ‘ಎನಿಥಿಂಗ್ ರಿಟನ್ ವಿದೌಟ್ ಇಂಟ್ರೆಸ್ಟ್ ಇಸ್ ಇನ್ ಜನರಲ್ ರೆಡ್ ವಿದೌಟ್ ಪ್ಲೆಶರ್’ ಅಂತ ಎಲ್ಲೋ ಓದಿದ ನೆನಪು. ಅದಲ್ಲದೆ ‘ಸಾಹಿತ್ಯ’ ಎನ್ನುವುದು ಬರೀ ಬರೆಯುವುದಕ್ಕಲ್ಲ ಓದುವುದಕ್ಕೂ ಸಂಭಂದ ಪಟ್ಟಿದೆ, ಹಾಗೆ ಓದುವುದಕ್ಕೆ ಯಾರಾದರೂ ದುಡ್ಡುಕೊಡುತ್ತಾರ? ಉಳ್ಟಾ ನಾವೇ ದುಡ್ಡು ಕೊಟ್ಟು ಖರೀದಿಸಿ ಓದಬೇಕು. ಅದಲ್ಲದೇ ಸಾಮಾನ್ಯವಾಗಿ ಈಗಿನ ಯಾವ ಸಾಹಿತಿಯೂ ಸಾಹಿತ್ಯ ತನ್ನ ಹೊಟ್ಟೆ ಹೊರೆಯುತ್ತೆ ಅಂತ ನಂಬಿಕೊಂಡಿಲ್ಲ. ಪ್ರತಿಯೊಬ್ಬರೂ ಬೇರ್ಯಾವುದೋ ಕೆಲಸದಲ್ಲಿದ್ದುಕೊಂಡು ಸಾಹಿತ್ಯವನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಈಗಲೂ ಮತ್ತೆ ಸಾಹಿತ್ಯ ಯಾಕೆ ಬೇಕು ಅಂತ ಕೇಳಿಕೊಂಡಾಗ, ಸಾಹಿತ್ಯದಿಂದ ನಮ್ಮ ತಿಳುವಳಿಕೆ ಹೆಚ್ಚುತ್ತದೆ, ಎಷ್ಟೋ ವಿಷಯಗಳು ಗೊತ್ತಾಗುತ್ತದೆ, ಜನರನ್ನ ಅವರ ಮನಸ್ಸನ್ನ ಇನ್ನೂ ಚನ್ನಾಗಿ ಅರ್ಥ ಮಾಡಿಕೊಳ್ಳಬಹುದು, ರಸಾನುಭವಕ್ಕೆ, ಸಾಮಾಜಿಕ ಉನ್ನತಿಗೆ, ಹೀಗೇ ಯೋಚಿಸುತ್ತಾ ಏನೇನನ್ನೋ ಪಟ್ಟಿ ಮಾಡುತ್ತಾ ಹೋದರೂ, ಇಂಥಾ ಯಾವ ಕಾರಣಗಳು ಗೊತ್ತಿಲ್ಲದಿದ್ದಾಗಲೂ ಪ್ರೀತಿಯಿಂದ ಆಸೆಯಿಂದ ಓದುತ್ತಿದ್ದೆನಲ್ಲಾ ಅನ್ನುವುದು ಜ್ನಾಪಕವಗುತ್ತದೆ. ಬರೆಯದೆ ಇರಲು ಸಾಧ್ಯವಿಲ್ಲ ಅನ್ನಿಸಿದಾಗ ಬರೆದೆನಲ್ಲಾ ಅನ್ನುವುದು ಹೊಳೆಯುತ್ತದೆ. ಓದಿನ ಪ್ರೀತಿಗೆ, ಓದದೇ ಇರಲಾರದ ಕಾತರತೆಗೆ, ಬರೆಯದೇ ಇರಲಾರದಂತೆ ಹೊರಳಿಸುವ ಸಂಕಟಕ್ಕೆ ನನಗೆ ಸಾಹಿತ್ಯ ಬೇಕು.

Friday, May 15, 2009

ಸಂಜಯದೃಷ್ಟಿ

ಇದ್ದಕ್ಕಿದ್ದಹಾಗೆ ನಾನು ಧೃತರಾಷ್ಟ್ರ ಅನಿಸತೊಡಗಿತು ನನಗೆ. ಸಂಜಯ ನನ್ನ ಮುಂದೆ ನನಗೆ ಬೇಕಾದ ಕಣ್ಣುಗಳನ್ನು ತೆರೆದುಕೊಳ್ಳಲು ಸಿದ್ಧನಾಗಿ ಕೂತಿದ್ದ. ಹೀಗೆ ಅನ್ನಿಸಿದ ತಕ್ಷಣ ಟೀವಿ ಹಾಕಲು ಮನಸಾಗಲೇ ಇಲ್ಲ. ಮಗಳ ಬಳಿ ಹೋದೆ ಸಂಜಯನ ಹತ್ತಾರು ಕಣ್ಣುಗಳನ್ನು ತೆರೆದುಕೊಂಡು ಧೃತರಾಷ್ಟ್ರಳಾಗಿ ಮಗಳು ಬ್ರೌಸ್ ಮಾಡುತ್ತಾ ಕೂತಿದ್ದಳು. ಭಯವಾಯಿತು.
‘ಕಿಮಕುರ್ವತ ಸಂಜಯ?’ ಅಂತ ಕುರುಡ(ದೃಷ್ಟಿಹೀನ ಇನ್ನೂ ಒಳ್ಳೆಯ ಪದವಾ?) ಧೃತರಾಷ್ಟ್ರ ಅಂದಾಗಲೆಲ್ಲಾ ಸಂಜಯನು ಯಥಾವತ್ತಾಗಿ ರೋಬೋಟಿನ ಥರ ಯುದ್ದದ ಸ್ಥಿತಿಗತಿಗಳನ್ನು ವಿವರಿಸಿದ್ದನಾ? ಅಥವಾ ಒಂದೊಂದು ಪಕ್ಷವನ್ನು ಸಮರ್ಥಿಸುವ ಪತ್ರಿಕೆಯ ಥರ, ಟೀವಿ ಚಾನಲ್ಲಿನ ಥರ ತನ್ನೆಲ್ಲಾ ಪೂರ್ವಾಗ್ರಹಗಳು, ಅನುಮಾನ, ಆತಂಕ, ಅಭೀಪ್ಸೆ, ಸಮಯಸಾಧಕತನಗಳೊಡನೆ ನೋಡಿ ಹೇಳುತ್ತಿದ್ದನಾ? ಧೃತರಾಷ್ಟ್ರನ ಮಕ್ಕಳು ಸಾಯುತ್ತಾ ಬಂದಹಾಗೆಲ್ಲಾ ಹೇಳುವುದು ಎಷ್ಟು ಕಷ್ಟವಾಗಿರಬೇಕು? ಹಾಗೆ ನೋಡಿದರೆ ಮಹಾಭಾರತವನ್ನ ಯಾರ ಕಣ್ಣಿನಿಂದ ನೋಡಬೇಕು? ಹೊರಗಿನವನಾದ ಕೃಷ್ಣನ ಚಾಣಾಕ್ಷತನದಿಂದ? ಕೊನೆಗೂ ತಣಿಯದ ದ್ರೌಪದಿಯ ರೋಷದಿಂದ? ಯಾವಾಗಲೂ ಕಡೆಗಣಿಸಲ್ಪಟ್ಟ ದುರ್ಯೋಧನನ ಅತೃಪ್ತಿಯಿಂದ? ಅಥವಾ ಯಾವುದೋ ಪೂರ್ವ ಜನ್ಮದ ಶಾಪದಂತೆ ಯಾವ ಗಂಡಸಿನ ಪ್ರೀತಿಯನ್ನೂ ಅವಳದನ್ನಾಗಿಸಿಕೊಳ್ಳಾಗದ ಅತೃಪ್ತೆ ಕುಂತಿಯ ಕಣ್ಣಿನಿಂದಲೋ? ಇಲ್ಲಾ ನಲ್ಲಪಿಳ್ಳೈ? ರನ್ನ? ಪಂಪ? ಕುಮಾರವ್ಯಾಸ? ಯಾರಿಗಾದರೂ ನನಗೂ ಅದಕ್ಕೂ ಸಂಬಂಧವಿಲ್ಲ ಹಾಗೆ ಸುಮ್ಮನೆ ನೋಡ್ತಿದಿನಿ ಅಂತ ನೋಡೋದಕ್ಕೆ ಸಾಧ್ಯವಾ? ಯಾರಿಗೆ ಹಾಗೆ ಎಲ್ಲವನ್ನೂ ನಿರ್ವಿಕಾರವಾಗಿ ಯಾರ ಪಕ್ಷವನ್ನೂ ವಹಿಸದೆ, ಬಿಟ್ಟುಕೊಡದೆ, ವೈಭವೀಕರಿಸದೆ, ಹೀಗಳೆಯದೆ ಸುಮ್ಮನೆ ನೋಡಲು ಸಾಧ್ಯವಿದೆ?


ಹಿಂಗೆಲ್ಲಾ ಕೇಳಿಕೊಂಡಮೇಲೆ ಹಾಗೆ ನೋಡಬೇಕಾದದ್ದಾದರೂ ಏನಕ್ಕೆ ಪ್ರಶ್ನೆ ಮುಡುತ್ತೆ. ಅನುಮಾನವಾಗುತ್ತಿದೆ, ನಾನೇ ಎಲ್ಲವನ್ನೂ ನೋಡಬೇಕು ಅನ್ನಿಸುತ್ತಿದೆ.ಇಷ್ಟು ವರ್ಶವೂ ಬೇರೆಯವರ ಕಣ್ಣುಗಳಿಂದ ಲೋಕವನ್ನು ನೋಡುವುದೇ ಅಭ್ಯಾಸವಾಗಿಹೋಗಿದೆ. ಅಪ್ಪ ಅಮ್ಮ ಟೀಚರಿನಿಂದ ಮೊದಲುಗೊಂಡು ಪ್ರತಿಯೊಬ್ಬರೂ ಕಣ್ಣು ತೆರೆಯಲು ಬಿಡಲೇ ಇಲ್ಲ. ಮದುವೆಯಾದಮೇಲಂತೂ ಆ ಲೋಕವೆ ಬೇರೆ. ಅವನ ಕಣ್ಗಳಿಂದ ನೋಡಲು ಖುಶಿಯಾಗುತ್ತಿತ್ತು. ಅವನು ತನ್ನ ಕಣ್ಣುಗಳಿಂದ ತೋರಿಸಿದ್ದನ್ನು ನಾನೇ ನೋಡಿದಂತೆ ನನ್ನ ಸ್ನೇಹಿತೆಯರಿಗೆಲ್ಲಾ ಹೇಳುತ್ತಿದ್ದೆ. ಅವನಾದರೂ ತನ್ನ ಕಣ್ಣುಗಳಿಂದ ನೋಡುತ್ತಾನಾ ಅಥವಾ ಅವನಿಗೂ ಧೃತರಾಷ್ಟ್ರನ ಕುರುಡುಗಣ್ಣು, ಸಂಜಯನ ಸಹಾಯವೋ? ಹಾಗೆ ನೋಡಿದರೆ ಯಾರು ಸಂಜಯ ಯಾರು ಧೃತರಾಷ್ಟ್ರ? ಪ್ರತಿಯೊಬ್ಬ ಧೃತರಾಷ್ಟ್ರನಿಗೂ ಲಕ್ಷಾಂತರ ಸಂಜಯರು. ನಿಜವಾಗಲೂ ಎಲ್ಲದನ್ನೂ ನೋಡುವವರ್ಯಾರು? ನನಗೆ ಹಾಗೆ ಎಲ್ಲದನ್ನೂ ಮೇಲಿನಿಂದ ನೋಡಲು, ನಿರ್ಧರಿಸಲು ಸಾಧ್ಯವಾ? ಬೇರೆಯವರೆಲ್ಲರ ಕಣ್ಣುಗಳಿಂದ ನೋಡಿದುದರಿಂದ ದೃಷ್ಟಿ ಮಂಜಾಗಿದೆ ಕಣ್ಣುಗಳಿಗೆ ಪೊರೆ ಬಂದಿವೆ. ಸತ್ಯ ಯಾವುದು ಸುಳ್ಳ್ಯಾವುದು ತಿಳಿಯುತ್ತಿಲ್ಲ. ಹೋಗಲಿ ನನಗೇನನ್ನಿಸುತ್ತಿದೆ ಎಂದೂ ಗೊತ್ತಾಗುತ್ತಿಲ್ಲ. ಗಾಂಧಾರಿ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಕಳಚಬೇಕು. ಧೃತರಾಷ್ಟ್ರ ಕಾಡಿನಲ್ಲಿ ಧೀರ್ಘ ತಪಸ್ಸು ಮಾಡಿಯಾದರೂ ದೃಷ್ಟಿ ಪಡೆಯಬೇಕು.


ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡು ಕೂತೆ. ಕಣ್ಣುಮುಚ್ಚಿಕೊಂಡಾಗ ಹೇಗೆ ಕಾಣುತ್ತೀನಿ ನೋಡಬೇಕೆನ್ನಿಸಿತು. ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ನೋಡಿದೆ. ಫೋಟೋ ಯಾಕೋ ನೀನು ಕಣ್ಣು ಮುಚ್ಚಿಕೊಂಡರೂ ಅಷ್ಟೇ ಕಣ್ಣುಬಿಟ್ಟಿದ್ದರೂ ಅಷ್ಟೆ ಎರೆಡೂ ಒಂದೇ! ಅಣಗಿಸಿದ ಹಾಗಾಯಿತು. ಮಗ ಕಾಲೇಜಿನಿಂದ ಬಂದ, ಬಾಗಿಲು ತೆರೆದೆ ಥೇಟ್ ಸಂಜಯನಂತೆ ಕಂಡ. ಅತ್ತೆಯ ಕಣ್ಣಲ್ಲಿ ಸಂಜಯನ ನೆರಳು. ಆಫೀಸಿನಿಂದ ಬರುತ್ತಲೇ ಇವರು ಅಂದಿದ್ದೇನು ‘ಸೇನಯೋರುಭಯೋರ್ ಮಧ್ಯೇ ರಥಂ ಸ್ಥಾಪಯಮೇಚ್ಚ್ಯುತಾ’ ಅಂತಲಾ?

{ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು :-)}

Wednesday, March 18, 2009

ನದಿಯ ಕಣ್ಣಿನಲ್ಲಿ ಕಡಲು

ನವೆಂಬರ್ 20, 2008, ಭಾನುವಾರ.
ಪ್ರದ್ಯುಮ್ನ ಬೆಳಗ್ಗೆ ಏಳುವ ಹೊತ್ತಿಗೆ ಅಮ್ಮ, ತಂಗಿ ಲಲಿತಳನ್ನು ಪೈಪಿನಲ್ಲಿ ಹೊಡೆಯುತ್ತಿದ್ದರು.

ಭಾನುವಾರವೆಂದರೆ ದ್ವೇಷಿಸುವ ಹಾಗೆ ಆಗೋಗಿದೆ ನನಗೆ. ಥೂ... ಇವರಿಬ್ಬರ ಅಬ್ಬರವನ್ನು ಸಹಿಸುವುದಾದರೂ ಹೇಗೆ? ಮನೆಯಿಂದ ಯಾವಾಗ ಹೊರಬಂದೆನೋ ಗೊತ್ತಿಲ್ಲ ಮನಸ್ಸು ತುಡಿಯುತ್ತಿದೆ. ಅಣ್ಣನಾದರೂ ಹೇಗೆ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದ? ಎರೆಡು ವರ್ಷದಿಂದ ಇದನ್ನೆಲ್ಲಾ ನೋಡಿ ನೋಡಿ ಸಹಿಸಿಕೊಳ್ಳುವುದನ್ನು ಕಲಿತಿಕೊಂಡುಬಿಟ್ಟಿದ್ದನಾ? ಇಲ್ಲ ಅಣ್ಣನ ಸ್ವಭಾವವೇ ಅಂಥದ್ದು. ಸುಮ್ಮನಿದ್ದುಬಿಡುತ್ತಾನೆ, ಎಲ್ಲವನ್ನು ನೋಡಿಕೊಂಡೂ!
ನನಗೇಕೆ ಹಾಗೆ ಸಾಧ್ಯವಾಗುವುದಿಲ್ಲ? ಆವತ್ತು ಮನೆಯಲ್ಲಿ ನೆಡೆದ ಘಟನೆಗಳು ಬೇಡವೆಂದರೂ ಕಣ್ಣಮುಂದೆ ಬರತೊಡಗಿದವು.
ಬೆಳಗ್ಗೆ ಏಳುತ್ತಲೇ ಕೇಳಿದ್ದು ಲಲಿತಾಳ ಕಿರುಚಾಟ ‘ನಾನಿದನ್ನ ತಿನ್ನಲ್ಲ ಒಂದ್ ಕೇಜಿ ಎಣ್ಣೆ ಸುರ್ದಿದಿಯ, ಇದನ್ನ ತಿಂದ್ರೆ ಆನೆ ಥರ ಊದ್ಕೊತಿನಿ. ಇಷ್ಟ್ ವರ್ಶ ಆದ್ರೂ ನಿಂಗೊಂದ್ ಉಪ್ಪಿಟ್ ಮಾಡಕ್ ಬರಲ್ಲ. ಎಲ್ಲಾ ಅಜ್ಜಿ ಕೈಲೇ ಮಾಡ್ಸಿದ್ರೆ ಹೇಗ್ ಬರತ್ತೆ ಹೇಳು? ಅಪ್ಪ ಅದ್ ಹೇಗೆ ನಿನ್ ಜೊತೆ ಸಂಸಾರ ಮಾಡ್ತಿದಾರೋ? ಅಜ್ಜಿಗೆ ಹುಶಾರ್ ತಪ್ಪಿದ್ರೆ ನೀನು ಮಾಡಿದ್ ಅಡುಗೆ ತಿನ್ನೋ ಖರ್ಮ ನಮ್ಗೆ...’
ನಿಲ್ಲುವುದೇ ಇಲ್ಲವೆನೋ ಅನ್ನಿಸಿತ್ತು. ಬಾತ್ ರೂಮಿನಿಂದ ಪೈಪ್ ತಂದ ಅಮ್ಮ ಅದರಲ್ಲೇ ಬಾರಿಸಿದ್ಧಳು. ಒಬ್ಳೇ ಮಗ್ಳು ಅಂತ ಮುದ್ದು ಮಾಡಿ ಬೆಳ್ಸಿದ್ದಕ್ಕೆ ತಲೆ ಎಲ್ಲಾ ಮಾತಾಡ್ತೀಯ ರಾಸ್ಕಲ್’
ಅಮ್ಮನ ಪೈಪಿನ ಏಟುಗಳನ್ನು ತಾಳಲಾರದೆ ತಟ್ತೆ ಬಿಸಾಡಿ ಎದ್ದು ಓಡಿದಳು ಲಲಿತ. ಯಾರಾದರೂ ಹೊರಗಿನವರು ನೋಡಿದರೆ ಅಮ್ಮ ಮಗಳೆಂದು ಯಾರೂ ನಂಬುತ್ತಿರಲಿಲ್ಲ. ನೆಡೆಯುತ್ತಿರುವುದೆಲ್ಲಾ ಯಾವುದೋ ಟಿ ವಿ ಸೀರಿಯಲ್ಲೊಂದರಲ್ಲಿ ಎಂಬಂತೆ ನೋಡುತ್ತಾ ಕುಳಿತಿದ್ದರು ಅಪ್ಪ. ಅಪ್ಪನ ನಿರ್ಭಾವುಕ ಮುಖ ಕಂಡಿತು. ನಿರ್ಭಾವುಕ ಮುಖವೂ ಅಷ್ಟೊಂದು ಸಿಟ್ಟು ತರಿಸಬಹುದೆಂಬ ಕಲ್ಪನೆಯಲ್ಲೂ ಇರಲಿಲ್ಲ.
ಕೈಗೆ ಸಿಕ್ಕಿದ ಬ್ಯಾಟ್‌ನಲ್ಲೇ ಶೋಕೇಸ್ ಗ್ಲಾಸಿಗೆ ಬೀಸಿದೆ. ಇಡೀ ಮನೆ ಒಂದು ನಿಮಿಷ ನಿಶ್ಯಬ್ಧವಾಯಿತು. ಅದುಮಿಕೊಂಡಿದ್ದ ಸಂಕಟವನ್ನ ಕಾರಿಕೊಂಡೆ. ‘ಥು ನಿಮ್ದಿಷ್ಟೇ ಆಗೋಯ್ತು ನಾನು ಮನೆ ಬಿಟ್ಟು ಹೋಗ್ತಿನಿ.’ ಬ್ಯಾಟ್ ಎಸೆದು ಹೊರಟೆ. ‘ಹೋಗು ಹೋಗು ನಾನೊಬ್ಳೇ ಸಾಯ್ತೀನಿ ಇಲ್ಲಿ. ನಂಗೆ ಇನ್ನು ಬದ್ಕೊಕ್ಕಾಗಲ್ಲ ವಿಷ ಕುಡ್ದು ಸತ್ತೋಗ್ತಿನಿ. ಎಲ್ಲಾದುಕ್ಕೂ ನಾನೇ ತಲೆಕೆಡ್ಸ್ಕೊಬೇಕು.
ಅಮ್ಮ ಕೂಗಿಕೊಳ್ಳುತ್ತಿದ್ದಳೋ ಅಳುತ್ತಿದ್ದಳೋ ಗೊತ್ತಾಗಲಿಲ್ಲ. ತಿರುಗಿಯೂ ನೋಡಬೇಕೆನ್ನಿಸದೆ ನೆಡೆದು ಬಂದೆನಲ್ಲಾ.. ಹಾಗೆ ಮಾಡಬಾರದಿತ್ತು ಅನ್ನಿಸಿತು.

ನವೆಂಬರ್ 23, 2008. ಬುಧವಾರ, ಹನುಮಜಯಂತಿ
ತಲೆಗೆ ಶಾಂಪು ಹಚ್ಚುತ್ತಿರುವಾಗ ಪ್ರದ್ಯುಮ್ನನಿಗೆ ‘ಇವತ್ತು ಸಂಜೆ ಅವಳನ್ನು ಭೇಟಿ ಮಾಡಬೇಕು.’ ಎನ್ನುವುದು ಮತ್ತೆ ನೆನಪಾಗಿ ಅಕಾರಣವಾದೊಂದು ಸುಸ್ಥು ಅವನ ಮೈಯನ್ನು ಆವರಿಸಿಕೊಂಡಿತು.
ಇಂಟರ್ನೆಟ್ಟಲ್ಲಿ ಸಿಕ್ಕಿ, ಗಾಂಧಿ ಬಜಾರಿನ ಐಸ್ ಥಂಡರಿನಲ್ಲಿ ಭೇಟಿಯಾದ ಹುಡುಗಿಯ ಮೇಲೆ ಸಣ್ಣದಾಗಿ ಶುರುವಾಗಿದ್ದ ಸೆಳೆತ ಬರೀ ಸೆಳೆತವಲ್ಲ ಅಂತ ಗೊತ್ತಾಗುತ್ತಿದ್ದ ಹಾಗೆ ನನಗೆ ಭಯವಾಯಿತು. ಹೀಗೇ ಭೇಟಿಯಾಗಿ ಮರೆತು ಬಿಡಬಹುದಾದ ಹುಡುಗಿಯಲ್ಲ ಅನ್ನುವ ಕಾರಣ ಮಾತ್ರವಲ್ಲದೆ ಆ ಹುಡುಗಿಯೂ ತನ್ನಲ್ಲಿ ಆಸಕ್ತಿ ತೋರಿಸುತ್ತಿದ್ದುದು ನೆನೆಸಿಕೊಳ್ಳುವ ಹೊತ್ತಿಗೇ ನಾನು ಅವಳಿಗೆ ಹೇಳಿದ ಸುಳ್ಳುಗಳು ನೆನಪಾಗುತ್ತಿವೆ.
ನನಗೆ ಸುಳ್ಳು ಹೇಳುವುದರಲ್ಲೇನೂ ಆಸಕ್ತಿ ಇಲ್ಲ. ಆದರೆ ಎಲ್ಲರಿಗೂ ನಿಜ ಹೇಳಿಕೊಂಡು ಬರಬೇಕಾದ ಜರೂರತ್ತಾದರೂ ಏನು? ನೀವೇನಾದರೂ ಐವತ್ತು ವಯಸ್ಸಿಗಿಂತ ಮೇಲ್ಪಟ್ಟವರಾದರೆ ಮತ್ತು ಇಂಟರ್ನೆಟ್ಟಿನ ದ್ವೇಶಿಗಳಾದರೆ ನಾ ಹೇಳಿದ ಮಾತು ಅರ್ಥವಾಗುವುದು ಕಷ್ಟ. ನೀವೇನೋ ಇಂಟರ್ನೆಟ್ಟಲ್ಲಿ ನೋಡುತ್ತಾ ಇರುತ್ತೀರಿ ಹೀಗೇ ಯಾರಾದರೂ ಮಧ್ಯದಲ್ಲಿ ಸುಮ್ಮನೆ ಬಂದು ಮಾತಾಡಿಸುತ್ತಾರೆ, ನೀವೂ ಮಾತಾಡುತ್ತೀರಿ. ಅವರು ಕೇಳುವ ಪ್ರಶ್ನೆಗಳಿಗೆಲ್ಲಾ ನಿಜವನ್ನೇ ಹೇಳಬೇಕೆಂದಿದೆಯೇನು? ಅದೂ ನನಗೇನು ಕೆಲಸ ಇಲ್ಲ ಅನ್ನೋದನ್ನ ಹೇಳಿಕೊಳ್ಳಬೇಕ? ಸುಳ್ಳು ಹೇಳಿದ್ದೆ. ಆದರೆ ಈಗ? ಈ ಬುಧವಾರ ಸಂಜೆ ಭೇಟಿಯಾಗು ನಿಂಗೇನೋ ಹೇಳಬೇಕು ಅಂದಿದ್ದಳು.
ಇವತ್ತು ಬುಧವಾರ. ಭಯವಾಗುತ್ತಿದೆ. ನಿಜ ಗೊತ್ತಾದರೆ ಅವಳಾಗಿಯೇ ದೂರ ಸರಿಯುತ್ತಾಳೆ ಅಂತ ಸಮಾಧಾನ ಪಟ್ಟುಕೊಂಡರೂ ಆ ಸಮಾಧಾನದಲ್ಲಿರುವ ಅವಳು ಬಿಟ್ಟು ಹೋಗುವಳೆಂಬ ಯೋಚನೆಯೇ ನೋವನ್ನುಂಟುಮಾಡಿ, ಸಮಾಧಾನವೇ ನೋವಾಗಿ ಮಾರ್ಪಡುವುದು ನನ್ನ ವಿಹ್ವಲಗೊಳಿಸುತ್ತಿದೆ. ಇವತ್ತು ಹೇಳಿಬಿಡುತ್ತೆನೆ ಅವಳು ನೀನು ಹೇಗಾದರೂ ಇರು ನಿನ್ನ ಜೊತೆ ಕೊಡುತ್ತೇನೆಂದರೆ ಸರಿಯಾದವಳನ್ನು ಪ್ರೀತಿಸಿದೆ ಎಂದರ್ಥ.

ನೀನು ಹೇಗಾದರೂ ಇರು ನಿನ್ನ ನಾನು ಪ್ರೀತಿಸಿದ್ದು ನಿಜ ಅದಕ್ಕೆ ನಿನ್ನ ಜೊತೇಲಿರ್ತಿನಿ ಅಂತ ಹೇಳಿ ಬಿಡಬಹುದು ಹುಡ್ಗ, ಆದರೆ ಈ ಮೊದಲೇ ನಾನು ಈ ಥರ ತಪ್ಪು ಮಾಡಿದೀನಿ. ಮದುವೆಯಾದವನನ್ನು ಪ್ರೀತಿಸಿದಾಗ ಅವನು ಮದುವೆಯಾದವನೆಂದು ಗೊತ್ತಿರಲಿಲ್ಲ, ಗೊತ್ತಾದ ಮೇಲೂ ಯಾವ ಬದಲಾವಣೆಯಿಲ್ಲದೆಯೇ ಅವನನ್ನು ಪ್ರೀತಿಸುತ್ತಿದ್ದೆ. ನನ್ನ ದೇವತೆ ನೀನು, ಲಕ್ಷಕ್ಕೊಬ್ಬಳು ನಿನ್ನಂಥವಳು, ಎಂಥಾ ತ್ಯಾಗ ನಿನ್ನದು ಅಂತೆಲ್ಲಾ ಹಾಡಿ ಹೊಗಳಿದ್ದ. ಆದರೆ ನನಗೆ ಯಾವ ಹುಡುಗಿಯಾದರೂ ಪ್ರೀತಿಸಿದವನನ್ನು ಬಿಟ್ಟು ಹೋಗಬೇಕಾದದ್ದಾದರೂ ಏಕೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿರಲಿಲ್ಲ. ಅವನು ನನಗೆ ರಾತ್ರಿಗಳಲ್ಲಿ ಸಿಗುತ್ತಿರಲಿಲ್ಲ, ಮಾತಾಡಲೂ ಕೂಡ. ಅವನನ್ನು ನಾನು ಅರ್ಥ ಮಾಡಿಕೊಂಡಂತೆ ಅವನಿಗೆ ನ್ಮನ್ನ ಅರ್ಥ ಮಾಡಿಕೊಳ್ಳಲಾಗಲಿಲ್ಲ, ನಾನು ಬೇರೆಯವರೊಡನೆ ಮಾತಾಡಿದರೂ ಸಹಿಸುತ್ತಿರಲಿಲ್ಲ. ಅವನಿಗೆ ನಾನು ಕೋಪಗೊಂಡಾಗ ಅಥವಾ ಕೋಪಗೊಳ್ಳದಿದ್ದರೂ ಹೆಂಡತಿಯಿದ್ದಳು ನನಗೆ ಉಹು.. ನಾನೊಬ್ಬಳೇ. ಬರಬರುತ್ತಾ ಅವನೇ ನನ್ನ ಉಸಿರುಉಕಟ್ಟಿಸ, ತೊಡಗಿದ ಹೆದರಿಸತೊಡಗಿದ. ನನ್ನ ಎಳೇ ಹುಡುಗಿಯ ಮನಸ್ಸು ಘಾಸಿಗೊಂಡಿತ್ತು. ನನ್ನ ಮುಗ್ಧತೆ ಜಾರಿ ಹೋಗಿತ್ತು. ಮುಗ್ಧತೆಯನ್ನು ಕಳೆದುಕೊಂಡು ಹೊರಬಂದ ಹುಡುಗಿ ಆ ಹಳೇ ಮುಗ್ಧ ಹುಡುಗಿಯ ಬಗ್ಗೆ ಮರುಕ ಪಟ್ಟುಕೊಳ್ಳುತ್ತಾಳೆ, ಅವಳನ್ನು ಪದೇ ಪದೇ ನೋಡಿ ಎಚ್ಚೆತ್ತುಕೊಳ್ಳುತ್ತಾಳೆ.
ನಾನು ಅವನಿಂದ ದೂರವಾದ ಮೇಲೆ ನಿರ್ಧರಿಸಿದ್ದು ಒಂದು. ಪ್ರೀತಿ ಇಡಿಯಾಗಿ ಸಿಕ್ಕಬೇಕು, ಮತ್ತು ಪ್ರೀತಿಸುವವನ ಯಾವುದೇ ನ್ಯೂನ್ಯತೆಯನ್ನ ಒಪ್ಪಿಕೆsಂಡು ಪ್ರೀತಿಸಬಾರದು. ಅಂಥಾ ಪ್ರೀತಿ ಹೆಚ್ಚು ದಿನ ಬದುಕುವುದಿಲ್ಲ. ನೀನು ಕೆಲಸದಲ್ಲಿಲ್ಲದಿದ್ದರೂ ನಿನ್ನ ಪ್ರೀತಿಸುತ್ತೀನಿ ಅಂತ ಇವತ್ತು ನಾನು ನಿನ್ನ ಜೊತೆ ಬಂದು ಬಿಡಬಹುದು ಆದರೆ ಸ್ವಲ್ಪ ದಿನದ ನಂತರ ಪ್ರೀತಿಯ ಮೊದಲ ಆವೇಷಗಳು ಮುಗಿದ ಮೇಲೆ ನಿನ್ನ ಆರ್ಥಿಕ ಅಸಹಾಯಕತೆ ನಿನ್ನನ್ನು ದ್ವೇಷಿಸುವಂತೆ ಮಾಡುತ್ತದೆ ನಾವಿಬ್ಬರೂ ಒಟ್ಟಿಗೆ ಇರಲಾರದಂಥಹ ಅಂಚಿಗೆ ತಂದು ನಿಲ್ಲಿಸುತ್ತದೆ. ನಿನ್ನ ಈಗ ಪ್ರೀತಿಸಿ ಮುಂದೆ ದ್ವೇಶಿಸುವ ಬದಲು ಈಗಲೇ ಕಷ್ಟಪಟ್ಟಾದರೂ ಆ ಭಾವನೆಯನ್ನ ಚಿವುಟಿಹಾಕುತ್ತೇನೆಂದು ಹೇಳಿ ಎದ್ದು ಹೋದಳು. ಇಂಥಾ ಹುಡುಗಿಯನ್ನ ನನ್ನವಳಾಗಿಸಿಕೊಳ್ಳದ ಅಸಹಾಯಕತೆ ನನ್ನದು. ಪ್ರತೀ ದಿನ ಮನೆಯಲ್ಲಿ ಹೊರಗಡೆ ಇಂಥ ಘಾಸಿಗೊಳಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಬದುಕಲು ಕಾರಣಗಳೇ ಇಲ್ಲ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ. ಸಾವಿನ ಬಾಗಿಲು ತಟ್ಟಲು ಧೈರ್ಯ ಬೇಕು.

ನವೆಂಬರ್ 25, 2008. ಶುಕ್ರವಾರ
ಕಾಫಿ ಕಪ್ಪನ್ನು ಕೈಯ್ಯಲ್ಲಿ ಹಿಡಿದು ಕೂತ ಪ್ರದ್ಯುಮ್ನ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಕಾಫಿ ಕುಡಿಯುವುದನ್ನೇ ಮರೆತ.

ಏಳು ತಿಂಗಳ ಹಿಂದೆ ಹೀಗಿರಲಿಲ್ಲ. ಅಥವ ಎಲ್ಲವೂ ಹೀಗೇ ಇದ್ದು ನನಗೆ ಗೊತ್ತಾಗುತ್ತಿರಲಿಲ್ಲವೋ? ಬೆಳಗ್ಗೆದ್ದರೆ ಕಾಲೇಜಿಗೆ, ಪ್ರಾಜೆಕ್ಟ್ ವರ್ಕಿಗೆ ಓಡುವ ತರಾತುರಿ, ಸಂಜೆ ಕಾಲೇಜು ಮುಗಿಸಿ ಅಲ್ಲಿಲ್ಲಿ ಅಲೆಯಬೇಕಾದ ಕಡೆಗಳಲ್ಲೆಲ್ಲಾ ಅಲೆದು ಮನೆ ತಲುಪುತ್ತಿದ್ದುದು ಯಾವಾಗಲೋ. ಭಾನುವಾರವೆಂದರೆ ಬರಗೆಟ್ಟವನಂತೆ ಕಾಯುತ್ತಿದ್ದೆ. ಬೆಳಗೇಳುತ್ತಲೇ ಅಜ್ಜಿಯನ್ನು ಗೋಳುಹೊಯ್ದುಕೊಳ್ಳುತ್ತಾ, ತಂಗಿಯನ್ನು ಕೀಟಲೆ ಮಾಡುತ್ತಿದ್ದವನ ಕೈಗೆ ಅಮ್ಮ ಅಶ್ವತ್ಥಾಮ, ಬಲಿರ್ವ್ಯಾಸ..... ಎನ್ನುತ್ತಾ ಹರಳೆಣ್ಣೆಯ ಬೊಟ್ಟುಗಳನ್ನು ಇಟ್ಟು ತಿಕ್ಕಿ, ಅವಳಿಗೆ ತೃಪ್ತಿಯಾಗುವಷ್ಟು ತಲೆಗೆ ಮಯ್ಯಿಗೆ ಎಣ್ಣೆ ಬಳಿದು ‘ನೋಡು ಹೆಂಗಾಗೋಗಿದೆ ತಲೆ ಕೂದ್ಲು ಕದಬೆ ಜುಂಗು’ ಎಂದು ಆತಂಕಪಟ್ಟುಕೊಂಡು ಮಧ್ಯಾನದವರೆಗೂ ‘ಎಣ್ಣೆ ಇಳೀಲಿ’ ಅಂತ ರೂಮಿನ ಟೀ.ವಿ ಮುಂದೆ ಕೂರಿಸಿ ನನ್ನ ಜೊತೆ ಮಾತಾಡುತ್ತಾ ಕಾಲ ಕಳೆದು, ಮಧ್ಯಾನ ಸುಡು ಸುಡು ನೀರಿನಲ್ಲಿ ಸ್ನಾನ ಮಾಡಿಸಿ, ‘ಹೋಗು ನಾನು ಸ್ನಾನ ಮಾಡ್ಕೊಂಡ್ ಬರ್ತಿನಿ’ ಅಂತ ಕಳುಹಿಸಿದರೆ ಮಲ್ಲಿಗೆಯಂಥಹ ಅನ್ನ, ಬಿಸಿ-ಬಿಸಿ ತಿಳಿಸಾರು ಪಲ್ಯ ಹಪ್ಪಳಗಳನ್ನ ಟೆಬಲ್ಲಿನ ಮೇಲಿಡುತ್ತಿರುವ ಅಜ್ಜಿ. ಅನ್ನ ತಿಳಿಸಾರು ಕಲಸಿಕೊಂಡು ತಿನ್ನುತ್ತಿದ್ದರೆ ಆಹಾ... ಮಧ್ಯಾನ ಗಡದ್ದಾದ ನಿದ್ದೆ, ಸಂಜೆ ಕ್ರಿಕೇಟೋ, ಶಟಲ್ ಕಾಕೋ ಆಡಲು ಗೆಳೆಯರು.
ಇಳಿ ಸಂಜೆಯ ಹೊತ್ತಿಗೆ ಮನೆಗೆ ಬಂದರೆ ಯಾವುದಾದರೂ ಇಂಗ್ಲೀಷ್ ಮೂವಿಯನ್ನು ತಂದಿರುತ್ತಿದ್ದ ಅಣ್ಣ. ಈಗ ಭಾನುವಾರಗಳೆಂದರೆ ಅಗಾಧ ಹಿಂಸೆ. ಅಪ್ಪ ತಂಗಿ ಇರುತ್ತಾರಲ್ಲ.. ಅಪ್ಪ ಎದುರಿಗಿದ್ದರೆ ಇನ್ನೂ ಅಪ್ಪನ ಅನ್ನ ತಿನ್ನುತ್ತಿದ್ದೇನೆ ಅಂತ ಮನಸ್ಸು ಚುಚ್ಚುತ್ತಿರುತ್ತೆ, ಇದರ ಜೊತೆಗೆ ತಂಗಿಯ, ಅಮ್ಮನ ಕಿತ್ತಾಟ. ಇವಳು ಮೆಡಿಕಲ್ ಸೇರೋ ಮೊದಲು ಹೀಗಿರಲಿಲ್ಲ. ಅದ್ಯಾಕೆ ಹೀಗಾದಳೋ?’
ತನ್ನ ಕಾಲೇಜಿನ ದಿನಗಳು ನೆನಪಾಗುತ್ತಿವೆ. ‘ನೀನು ಇಷ್ಟು ಚನ್ನಾಗಿರೋದನ್ನ ನೋಡೇ ನಿನ್ನ ಸೆಲೆಕ್ಟ್ ಮಾಡ್ಕೊಂಡ್ ಹೋಗ್ತಾರೆ ಅಂತಿದ್ದ ಹುಡುಗರೆಲ್ಲಾ ಸೆಲೆಕ್ಟಾಗಿ ಹೋದರೂ ನಾನು ಯಾವ ಇಂಟರ್ವ್ಯೂವಿನಲ್ಲೂ ಸೆಲೆಕ್ಟಾಗಲಿಲ್ಲ. ಬಂದವರೆಲ್ಲಾ ೭೦ ಎಂಡ್ ಅಬವ್ ಇದ್ದವರನ್ನು ಮಾತ್ರ ಆರಿಸಿಕೊಂಡು ಹೋದರು. ನಾನು ಇನ್ನಷ್ಟು ಗಮನವಿಟ್ಟು ಓದಬೇಕಿತ್ತು. ಈಗ ಎಷ್ಟು ಯೋಚಿಸಿದರೂ ಪ್ರಯೋಜನವಿಲ್ಲ. ನಾನು ಮಾಡಿರುವ ನಿರ್ಧಾರವೇ ಸರಿ.


ನವೆಂಬರ್ 27, 2008, ಭಾನುವಾರ
ಮಧ್ಯಾನ ಮೂರು ಘಂಟೆ. ಸ್ನೇಹಿತನ ಮನೆಯ ಬಾತ್ರೂಮಿನಲ್ಲಿ ವಿಷದ ಬಾಟಲಿಯನ್ನು ಮುಂದಿಟ್ಟುಕೊಂಡು ಕೂತ ಪ್ರದ್ಯುಮ್ನ ತನ್ನನ್ನು ಸಾಯಲೇಬೇಕಾದಂಥ ಪರಿಸ್ಥಿತಿಗೆ ನೂಕಿದ ಕಾರಣಗಳನ್ನೂ. ತಾನು ಸತ್ತ ನಂತರ ಆಗಬಹುದಾದ ಘಟನೆಗಳನ್ನು ಪಟ್ಟಿಮಾಡುತ್ತಾ ಪೋಲೀಸರಿಗೊಂದು ಪತ್ರ ಬರೆಯತೊಡಗಿದ.
ಈ ಪತ್ರವನ್ನು ಮೊದಲು ಓದುವ ಪೊಲೀಸರೇ, ಆನಂತರ ಓದುವ ತೀರ್ಥರೂಪರೇ, ಓದೋಲ್ಲ ಎಂದು ನಿರಾಕರಿಸಬಹುದಾದ ಅಮ್ಮ,, ಓದಲು ಬೋರಾಗಿ ಮುದುರಿ ಎಸೆಯುವ ಅಣ್ಣ..

ಈ ಪತ್ರವನ್ನ ನಾನು ನನ್ನ ಸಾವಿಗೆ ಯಾರೂ ಕಾರಣರಲ್ಲ ಯಾರಿಗೂ ಹಿಂಸೆ ಕೊಡಬೇಡಿ. ನನ್ನ ಸ್ವ ಇಚ್ಛೆಯಿಂದ ನಾನು ಸಾಯುತ್ತಿದ್ದೇನೆ ಎಂದು ತಿಳಿಸುವುದಕ್ಕೆ ಬರೆಯುತ್ತಿಲ್ಲ. ಆತ್ಮ ಹತ್ಯೆ ಅನ್ನುವುದು ಆಕ್ಷಣದ ನಿರ್ಧಾರವಲ್ಲ ಅದು ಆ ಕ್ಷಣದ ಧೈರ್ಯ ಮಾತ್ರ ನಿರ್ಧಾರ ರೂಪುಗೊಳ್ಳಲು ದೊಡ್ಡ ದೊಡ್ಡಕಾರಣಗಳು ಬೇಕಾದರೆ ಅದು ಕಾರ್ಯರೂಪಕ್ಕೆ ಬರಲು ಅತ್ಯಂತ ಕ್ಷುಲ್ಲಕ ಕಾರಣ ಸಾಕು. ಇದೆಲ್ಲಾ ಆಗುವ ಹೊತ್ತಿಗೆ ಸಾಯಬೇಕೆಂದು ನಿರ್ಧರಿಸಿರುವವನ ಮನಸಿನಲ್ಲಿ ವ್ಯಕ್ತಿತ್ವದಲ್ಲ ಆಗುವ ಮಾರ್ಪಾಡುಗಳು ಅನೇಕ. ಇದೆಲ್ಲಾ ನಿಮಗೆ ಗೊತ್ತಿರುವಂಥದ್ದೇ ಆದರೂ ಹೇಳಬೇಕೆನ್ನಿಸಿತು. ನಿಮಗೆ ನಾನು ನನ್ನ ಕಥೆಯನ್ನ ಹೇಳಿ ತಲೆ ಚಿಟ್ಟು ಹಿಡಿಸುವುದಿಲ್ಲ. ನನ್ನ ಸಾವಿಗೆ ಕಾರಣವಾದವರ ಪಟ್ಟಿಯನ್ನ ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಸಾಧ್ಯವಾದರೆ ಅವರನ್ನೆಲ್ಲಾ ಶಿಕ್ಷೆಗೆ ಒಳಪಡಿಸಿ.

ಸಿಕ್ಕಸಿಕ್ಕವರಿಗೆಲ್ಲಾ ಮನಬಂದಂತೆ ಸಾಲಕೊಟ್ಟು ವಾಪಸ್ಸು ಪಡೆಯಲಾರದೆ ದಿವಾಳಿಯಾಗಿ, ಶೇರು ಹಣದಲ್ಲಿ ನಮ್ಮದೇಶದ ಲಕ್ಷಾಂತ ಜನರ ಕೋಟಿಗಟ್ಟಲೆ ಹಣವನ್ನ ಮುಳುಗಿಸಿ, ಸಾವಿರಾರು ಇಂಜಿನಿಯರುಗಳನ್ನು ಕೆಲ್ಸದಿಂದ ತೆಗೆದುಹಾಕುವಂತೆ ಮಾಡಿ, ನಿರುದ್ಯೋಗಿಗಳನ್ನಾಗಿಸಿದ ಅಮೇರಿಕಾದ ಪ್ರೈವೇಟ್ ಬ್ಯಾಂಕುಗಳನ್ನ, ಪ್ರತಿಯೊಂದಕ್ಕೂ ಅಮೇರಿಕಾ ಅಮೇರಿಕಾ ಎಂದು ಭಾರತವನ್ನ ಭಾರತದ ಆರ್ಥಿಕತೆಯನ್ನ ಅಮೇರಿಕಾದ ಬಾಲಂಗೋಚಿಯಾಗಿಸಿರುವ ಭಾರತದ ಆರ್ಥಿಕ ನೀತಿಯನ್ನ, ಬೆಳಗ್ಗೆ ಮನೆಯಿಂದ ಹೊರಹೋದರೆ ಸಂಜೆ ಮನೆಗೆ ಬರುತ್ತೇವೋ ಇಲ್ಲವೋ ಎಂದು ತಿಳಿಯದೆ ದಿನವೂ ಭಯದಲ್ಲಿ ಸಾಯುವಂತೆ ಮಾಡಿರುವ ಟೆರೆರಿಸ್ಟಗಳನ್ನ, ಅವರನ್ನು ಮಟ್ಟಹಾಕದೆ ಮೊಸಳೆ ಕಣ್ಣೀರು ಸುರಿಸುವ ನಮ್ಮ ಸರಕಾರವನ್ನ, ಇವರಲ್ಲಿ ಯಾರನ್ನಾದರೂ ಶಿಕ್ಷಿಸಲು ಸಾಧ್ಯವ ಹೇಳಿ? ಹ್ಮ್.. ಮ್‌ಮ್‌ಮ್.. ಖಂಡಿತ ಸಾಧ್ಯವಿಲ್ಲ ನನಗೆ ಗೊತ್ತು.

ಬರೀ ಇದಿಷ್ಟೇ ಅಲ್ಲ ಇನ್ನೂ ಹೇಳುತ್ತೇನೆ ಕೇಳಿ. ಇಷ್ಟು ದಿನ ಬ್ಯಾಂಕುಗಳ ಸರದಿಯಾಯಿತು ಇನ್ನು ಕ್ರೆಡಿಟ್ ಕಾರ್ಡುಗಳ ಸರದಿ. ಎಲ್ಲರೂ ಸಿಕ್ಕಿಸಿಕ್ಕ್ದಂಗೆ ಕ್ರೆಡಿಟ್ ಕಾರ್ಡುಗಳನ್ನ ಉಜ್ಜಿ ಬೇಕಾದಷ್ಟು ತೀರಿಸಲಾರದಷ್ಟು ಸಾಲ ಮಾಡಿದ್ದಾರೆ. ಅವರೆಲ್ಲರೂ ಕೈಯೆತ್ತಿದರೆ ಭಾರತ ಮುಳುಗಿದಂತೆಯೇ. ಆಮೇಲೆ ಮತ್ತೊಂದಷ್ಟು ಜನ ನಿಮಗೆ ಈ ರೀತಿಯ ಪತ್ರಗಳನ್ನ ಬರೆದಿಟ್ಟು ಸಾಯುತ್ತಾರೆ.

ನಮ್ಮಣ್ಣನಂಥವರಿಗಾದರೆ ಏನೂ ತೊಂದರೆ ಇಲ್ಲ ಚನ್ನಾಗಿ ಓದಿಕೊಂಡಿದ್ದರೂ ಮೊದಲೇ ಬುದ್ದಿ ಓಡಿಸಿ ಕೊಡಗಿನ ಬಳಿಯಲ್ಲಿ ಒಂದಿಷ್ಟು ತೋಟವನ್ನ ತೆಗೆದುಕೊಂಡು ನೆಮ್ಮದಿಯಾಗಿದ್ದಾನೆ. ಅವನಂತೆ ಆಗಲೇ ಬುದ್ದಿ ಓಡಿಸಿದ್ದರೆ ನನಗೀ ಸ್ಥಿತಿ ಬರುತ್ತಲೇ ಇರಲಿಲ್ಲವೇನೋ..

ನನ್ನ ಫ಼್ರಸ್ಟ್ರೇಷನ್‌ಗೆ ನನ್ನದೇ ಆದ ಚಿಕ್ಕ ಚಿಕ್ಕ ಕಾರಣಗಳಿರಬಹುದು. ಬರೀ ಅದಷ್ಟೇ ಕಾರಣಗಳಾಗಿದ್ದರೆ ನಾನಿವತ್ತು ಸಾಯುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ಅವನದೇ ಆದ ಸಣ್ಣ ಪುಟ್ಟ ತೊಂದರೆಗಳು ಕಷ್ಟಗಳು ಇರುತ್ತವೆ ಆದರೆ ಎಲ್ಲರೂ ಯಾಕೆ ಸಾಯುವುದಿಲ್ಲ ಹೇಳಿ? ಯಾಕೆಂದರೆ ಅವರಿಗೆ ಅವರವರ ಚಿಕ್ಕ ಪುಟ್ಟ ಕಷ್ಟಗಳನ್ನ ನಿವಾರಿಸಿಕೊಳ್ಳಲು ತೊಂದರೆಗಳಿಂದ ಹೊರಬರಲು ತಿಳಿದಿರುತ್ತದೆ. ಆದರೆ ಈ ತೊಂದರೆಗಳನ್ನು ನನ್ನಿಂದ ಸರಿಪಡಿಸಲು ಸಾಧ್ಯವಿಲ್ಲ ನನ್ನ ಅಳವನ್ನ ಮಿರಿದ ಕಷ್ತಗಳು ಇವು ಎಂದು ತಿಳಿದಾಗ ಅದನ್ನು ಸರಿಪಡಿಸಬೆಕಾದವರ ಮೇಲೆ ಭರವಸೆ ಇಟ್ಟು ಸುಮ್ಮನಾಗುತ್ತಾನೆ. ನನ್ನ ನಂಬಿಕೆ ಭರವಸೆಗಳು ನುಚ್ಚುನೂರಾಗಿವೆ. ನಮ್ಮಂಥ ಲಕ್ಷಾಂತರ ಜನರ ನಂಬಿಕೆಗಳ ಗೋರಿಯಮೇಲೆ ಸರಕಾರಗಳು ಎನೂ ಆಗಿಲ್ಲವೆಂಬಂತೆ ನೆಮ್ಮದಿಯಾಗಿ ಸೀಟು ಭದ್ರಪಡಿಸಿಕೊಳ್ಳುತ್ತಿವೆ. ಯಾರನ್ನ ನಂಬುವುದು ಯಾರಲ್ಲಿ ಭರವಸೆ ಇಡುವುದು ಗೊತ್ತಾಗುತ್ತಿಲ್ಲ.

ನವೆಂಬರ್ 27, 2008, ಭಾನುವಾರ. ಮುಸ್ಸಂಜೆ.
ತ್ರವನ್ನು ಬರೆದು ಮುಗಿಸಿದ ಪ್ರದ್ಯುಮ್ನ ತನ್ನ ಮೊಬೈಲ್ ಕಡೆ ಗಮನ ಹರಿಸಿದಾಗ ಅಲ್ಲಿ ಹದಿನೈದು ಮೆಸೇಜು ಮೂವತ್ತು ಮಿಸ್ ಕಾಲುಗಳಿದ್ದವು. ಮೆಸೇಜುಗಳನ್ನ ಒಂದೊಂದಾಗಿ ಓದತೊಡಗಿದ
ಯಾಕೋ ಫೋನ್ ತೆಗೀತಿಲ್ಲ. ಸುರೇಶಣ್ಣ ಸತ್ತೋಗಿದ್ದಾನೆ ಕಣೋ.. ಫೋನ್ ತಗೊಳ್ಳೋ
ಅಮ್ಮ ಆಳ್ತಿದ್ದಾಳೆ, ಬೇಗ ಬಾರೋ
ಯುವರ್ ಬ್ರದರ್ ಕಮಿಟೆಡ್ ಸೂಸೈಡ್ ಇನ್ ಕಾಫಿ ಎಸ್ಟೇಟ್ ಹೌಸ್.

ಎಲ್ಲಿದ್ದೀಯೋ
..

ವೇರ್ ಆರ್ ಯು? ಸ್ಟಾರ್ಟ್ ಇಮ್ಮಿಡಿಯೆಟ್ಲಿ..

ಪ್ರದ್ಯುಮ್ನ ತಾನು ಬರೆದಿಟ್ಟ ಪತ್ರವನ್ನು ಸುಮ್ಮನೆ ನೋಡಿದ. ಪತ್ರದ ಕೊನೆಯಲ್ಲಿ ತಾನು ಮಾಡಿದ ಸಹಿ ಯಾಕೋ ಅಣ್ಣನ ಸಹಿಯಂತೆ ಕಾಣುತ್ತಿದೆಯಲ್ಲ ಅನ್ನಿಸಿತು.
ಮತ್ತೆ ಫೋನ್ ಹೊಡಕೊಳ್ಳತೊಡಗಿತು. ಎತ್ತಿಕೊಂಡು ಬಂದೆ ಅಂತಷ್ಟೇ ಹೇಳಿ ಪೋನ್ ಕಟ್ ಮಾಡಿದ.
(ಕನ್ನಡಪ್ರಭದಲ್ಲಿ ಪ್ರಿಂಟಾಗಿತ್ತು ಕಣ್ರೀ)

Monday, February 16, 2009

ಲವ್ ಅಟ್ ಫಸ್ಟ್ ರೀಡ್..

Soft eyes ಶಿಶಿರನಿಗೆ,

ಲವ್ ಅಟ್ ಫಸ್ಟ್ ಸೈಟ್ ನಲ್ಲಿ ನಂಬಿಕೆಯಿದೆಯಾ ಅಂತ ನಿನ್ನಂಥವನನ್ನು ಕೇಳಿದರೆ ಅದಕ್ಕಿಂತ ಹುಚ್ಚುತನ ಬೇರೊಂದಿಲ್ಲ ಹುಡುಗಾ. ಅದರಲ್ಲೂ ಹಾಗೆ ನಿನ್ನ ಬಯಸಿ ಬಯಸಿ ಅರ್ಥ ಮಾಡಿಕೊಂಡ ನಾನಂತೂ ಅಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಲೇ ಬಾರದು. ಆದರೆ ಲವ್ ಅಟ್ ಫಸ್ಟ್ ರೀಡ್ ನಲ್ಲಿ ನಂಬಿಕೆ ಇದೆಯೇನೋ ಅಂತ ಕೇಳಿದರೆ ನಗಬಹುದು ನೀನು. ಆದರೂ ನಂಬು ನನ್ನ.

ತೀರಾ ಹತ್ತಿರಾಗುವ ಮೊದಲೇ ನಾನೆಷ್ಟು ಜನರನ್ನು ದೂರ ಮಾಡಿಲ್ಲ. ಫೋನಿನಲ್ಲಿ ಮಾತಾಡುತ್ತಾ ಬುದ್ದಿವಂತನೆನಿಸುತ್ತಿದ್ದ ಕರೀ ಹುಡುಗನನ್ನು ಭೇಟಿಯಾದಾಗ ಎಲ್ಲದಕ್ಕೂ ನೀ ಹೇಳಿದಂತೆ ಅನ್ನತೊಡಗಿದಾಗ ಈ ಹುಡುಗ ಭೈರಪ್ಪನವರ ಸಾಕ್ಷಿಯ ಅಪ್ಪಾಜಪ್ಪನ ಥರದವನಿರಬಹುದು ಎನ್ನಿಸಿ, 'ಐ ಕಾಂಟ್ ಲವ್ ಯು' ಎಂದು ನನ್ನಿಂದ ಹೇಳಿಸಿಕೊಂಡವನಿಂದ ಹಿಡಿದು ಮೊನ್ನೆ ಮೊನ್ನೆ ಅವನಿಗೆ ಭಾವನೆಗಳೇ ಅರ್ಥ ಆಗಲ್ಲ ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿ, ತಾನು ಹೇಳಿದ್ದೇ ನೆಡೆಯಬೇಕೆನ್ನುವ ದಾಟು ಕಾದಂಬರಿಯ ವೆಂಕಟೇಶನ ಥರ, ಬುದ್ದಿವಂತ ಸರಿ ಆದರೆ ನನಗೆ ಹತ್ತಿರವಾಗಲಾರ ಎಂದು ಬಿಟ್ಟುಬಂದ ಹುಡುಗನವರೆಗೂ, ಅದೆಷ್ಟು ಜನ! ತುಂಬ ಮೊದ್ದ ಆಲನ ಹಳ್ಳಿಯವರ ಪರಸಂಗದ ಗೆಂಡೆ ತಿಮ್ಮನ ಥರ, ಇನ್ನೊಬ್ಬನ ಮಡಿ, ದೇವರು, ದಿಂಡರು, ಪೂಜೆ, ಪುನಸ್ಕಾರ, ಸಂಸ್ಕಾರದ ಪ್ರಾಣೆಷಾಚಾರ್ಯರ ರೀತಿ, ಚಾಕ್ಲೇಟ್ ಕಂಪನಿಯೊಂದರ ಸಿ. ಯಿ. ಓದು ಉದರಿಂಗ್ ಹೈಟ್ಸ್‌ನ ಹೀತ್ ಕ್ಲಿಫ್ ಥರಹದ ಪೈಶಾಚಿಕ ಪ್ರೀತಿಯ ನೆನಪು ತರಿಸಿದರೆ, ಇಷ್ಟವಾದ ಹುಡುಗನ ಅಲೌಕಿಕ ಆಸಕ್ತಿಯು ಮುಕ್ತದ ಸ್ವಾಮಿಜಿಯ ನೆನಪು ತರಿಸಿ ಹೆದರಿಸಿತ್ತು. ಇಂಗ್ಲಾಂಡಿನಿಂದ ಬಂದ ಹುಡುಗ ನೋಟದಲ್ಲಿ 'ದಿ ಕಂಪನಿ ಆಫ್ ವುಮೆನ್'ನ ಮೋಹನ್‌ನನ ಛಾಯೆ ಕಂಡು ಬೇಡವೆನಿಸಿ ಯಾವ ಹುಡುಗನೂ ಯಾವುದೇ ರೀತಿಯಲ್ಲೂ ನಿನ್ನ ಥರ ಅನ್ನಿಸದೆ ಹೊಂದಿಕೆಯಾಗಲಾರದೆ ಹೋದರು. 'ಮುಚ್ಚಿದ ಬಾಗಿಲ ಮುಂದೆ ಭಿಕ್ಷೆ ಬೇಡಿದರು'. ಹೋಗಲಿ ಪರವಾಗಿಲ್ಲ ಇವನು ಸರಿಯಾಗಬಹುದು ಪ್ರಪೋಸು ಮಾಡಲಾ ಅಂದುಕೊಳ್ಳುತ್ತಿರುವಾಗಲೇ ಕೆಲವರು ಅವರೇ ಪ್ರಪೋಸ್ ಮಾಡಿ ನನ್ನ ನಿರೀಕ್ಷೆಯನ್ನ ಹುಸಿ ಮಾಡಿದ್ದರು. ನದಿಯ ಕಾಲುಬುಡದೆಡೆಗೆ ತೆವಳಿಕೊಂಡು ಬರುವ ಸಮುದ್ರವನ್ನ ಪ್ರೀತಿಸುವುದಾದರೂ ಹೇಗೆ?'ಎಷ್ಟೇ ದೂರದಿಂದಲಾದರೂ ಸರಿ ಮಹಾನದಿ ತನ್ನೆಡೆಗೆ ಧುಮ್ಮಿಕ್ಕಿ ಹರಿದು ಬರಬೇಕೇ ಹೊರತು, ಸಮುದ್ರವೇ ತೆವಳಿಕೊಂಡು ನದಿಯ ಮನೆಬಾಗಿಲಿಗೆ ಹೋಗಲೊಲ್ಲದು.'ಈ ನಿನ್ನ ಮಾತುಗಳು ಪ್ರತಿಯೊಬ್ಬ ಹುಡುಗ ಬಂದು ಪ್ರಪೋಸ್ ಮಾಡಿದಾಗಲೂ ನೆನಪಾಗುತ್ತಿತ್ತೋ. ಇಲ್ಲಿಯವರೆಗೂ ಬರೋಬ್ಬರಿ ಹದಿನಾಲ್ಕು ಜನರನ್ನ ನಿನ್ನ ಕಾರಣದಿಂದಾಗಿ ರಿಜೆಕ್ಟ್ ಮಾಡಿದೀನಿ.

ಒಮ್ಮೆಯಾದರೂ ನಿನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ ನೀನು, ಅವಡುಗಚ್ಚಿಕೊಂಡು ಎಂಥಾ ಪರಿಸ್ಥಿತಿಯಲ್ಲೂ ಸರಿಯಾಗಿ ಯೋಚಿಸುತ್ತೀಯ. ಹಾಗಿರಲು ಹೇಗೆ ಸಾಧ್ಯ ನಿಂಗೆ. ಯಾರ ಬಳಿಯಾದರೂ ನಿನ್ನ ಸಂಕಟಗಳನ್ನು ಹಂಚಿಕೊಳ್ಳಬೇಕು ಅನಿಸುತ್ತಿರಲಿಲ್ಲವೇನೋ? ನಿನ್ನ ಆತಂಕ ಸಂಕಟಗಳಿಗೆಲ್ಲಾ ಕಿವಿಯಾಗಬೇಕು ಅನ್ನಿಸುತ್ತಿತ್ತು ನನಗೆ. ಯಾರನ್ನಾದರೂ ಹಾಗೇ ಅವರಿರುವಂತೆಯೇ ಒಪ್ಪಿಕೊಳ್ಳುವುದನ್ನ, ಏನನ್ನಾದರೂ ಸಾಧಿಸಬೇಕಾದರೆ ರೂಢಿಸಿಕೊಳ್ಳಬೇಕಾದ ಧೃಡತೆಯನ್ನ ಸಂಕಲ್ಪವನ್ನ ಕಲಿಸಿಕೊಟ್ಟವನೇ ನೀನು. ನನ್ನ ವ್ಯಕ್ತಿತ್ವವದಲ್ಲಿ ನಿನ್ನ ಪ್ರಭಾವ ಎಷ್ಟಿದೆಯೆಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನಿನಗೆ. ನೀನೇ ಹೇಳಿದ ಮಾತು- ಸ್ಪರ್ಧೆಯಲ್ಲಿ ಪ್ರೀತಿ ಇರಬೇಕು. ಗೆದ್ದ ಗೆಲುವಿನಲ್ಲಿ ದುಷ್ಟ ಸಂತೋಷ ಇರಬಾರದು.

ಕೇಳು ಹುಡ್ಗಾ, 'ಮಹಾನದಿ ಸಮುದ್ರದೆಡೆಗೆ ಹರಿಯಬೇಕು, ಸಮುದ್ರ ನದಿಯೆಡೆಗೆ ತೆವಳಿಕೊಂಡು ಹೋಗಬಾರದು' ಎಲ್ಲಾ ಸರಿ. ಆದರೆ ನದಿ ಕೂಡಾ ಸಮುದ್ರವನ್ನ ನಿನ್ನೊಳಗೆ ಇಳಿಯಲಾ ಎಂದು ಕೇಳುವುದಿಲ್ಲ. ಸಮುದ್ರ ಬಾ ಅನ್ನುವುದೂ ಇಲ್ಲ ಆದರೆ ನದಿಯನ್ನ ತನ್ನೊಳಗೆ ಕರಗಿಸಿಕೊಳ್ಳಲು ಎಲ್ಲಾ ಸಿಧ್ದತೆ ಮಾಡಿಕೊಂಡು ಕಾಯುತ್ತದಲ್ಲಾ, ಹಾಗೆ ಅವನು ಅರಳಿಕೊಳ್ಳಬೇಕು, ನಾನು ಅವನೆಡೆಗೆ ಹರಿದ ಸದ್ದಿಗೆ ಅವನು ಮಯ್ಯೆಲ್ಲಾ ಕಿವಿಯಾಗಿಸಿಕೊಂಡು ಕಾಯಬೇಕು. ಹುಡುಗ ಮಾತ್ರ ಅಲ್ಲ ಹುಡುಗಿಯೂ ನಿನ್ನ ಪ್ರೀತಿಸುತ್ತೇನೆ ಎಂದು ಇಷ್ಟವಾದ ಹುಡುಗನ ಬಳಿ ಹೇಳಿಕೊಳ್ಳಬಾರದು.ಇಷ್ಟಕ್ಕೂ ಪ್ರೀತಿ ಹೇಳಿಕೊಳ್ಳುವುದಲ್ಲ. ಅರ್ಥ ಮಾಡಿಕೊಳ್ಳುವುದು. ನಾನು ನನ್ನ ವ್ಯಕ್ತಿತ್ವವನ್ನು ಮಡಿಚಿಟ್ಟು ಯಾರಿಗೂ ಶರಣಾಗತಳಾಗುವುದಿಲ್ಲ. .`ಯಾವ ಮನುಷ್ಯ ಯಾವ ಸ್ತರದಲ್ಲಿ ನಿಂತು ಯಾರನ್ನು ಪ್ರೀತಿಸಬಾರದು' ಅನ್ನೋದನ್ನು ತಿಳ್ಕೋಬೇಕು ಅಂದಿದ್ದೆ. ತಿಳ್ಕೊಂಡಿದ್ದೀನಿ ಅಂದ್ಕೊಂಡಿದ್ದೀನಿ. ಅರ್ಥ ಮಾಡಿಕೊಳ್ಳುತ್ತೀಯಾ ಹುಡುಗಾ? ಅರ್ಥ ಮಾಡಿಕೊಳ್ಳಲಾಗದಿದ್ದರೂ ನೀ ಹಿಂಗ ನನ್ನ ನೋಡಬ್ಯಾಡ ನನ್ನ.

(ರವಿ ಬೆಳೆಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯ ನಾಯಕ ಶಿಶಿರ ಇಷ್ಟ ನಂಗೆ. ಅವನಿಗೆ ಬರೆದ ಪತ್ರ ಇದು, ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು)